'ಪ್ರಭಾಸ್' ಚಿತ್ರದಿಂದ ಈ 'ನಾಯಕಿ'ಯನ್ನು ಹೇಳದೇ ಕೇಳದೇ ಹೊರ ದಬ್ಬಿದ್ದೇಕೆ..? ಅವತ್ತೇನಾಗಿತ್ತು..?
ಒಂದಿಲ್ಲೊಂದು ವಿಚಾರದಿಂದ ಸದಾ ಸುದ್ದಿಯಾಗುವ ನಾಯಕಿಯರಲ್ಲಿ ರಾಕುಲ್ ಪ್ರೀತ್ ಸಿಂಗ್ ಕೂಡಾ ಒಬ್ಬರು. ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ರಾಕುಲ್ ಪ್ರೀತ್ ಸಿಂಗ್ ಇಲ್ಲಿಯವರೆಗೆ ಹಲವಾರು ಪಾತ್ರಗಳನ್ನು ಸಲೀಸಾಗಿ ನಿರ್ವಹಿಸಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.
ಆದರೂ ಕೂಡ ಇವರ ವೃತ್ತಿಜೀವನದ ಗ್ರಾಫ್ ಆರಕ್ಕೇರಲಿಲ್ಲ. ಮೂರಕ್ಕೆ ಇಳಿಯಲಿಲ್ಲ. ಇದಕ್ಕೆ ಕಾರಣ ಹತ್ತು ಹಲವು ಇರಬಹುದಾದರೂ ಸದ್ಯಕ್ಕೆ ರಾಕುಲ್ ಪ್ರೀತ್ ಸಿಂಗ್ ನಾನು ಸ್ವಜನಪಕ್ಷಪಾತಕ್ಕೆ ಬಲಿಯಾದ ನಾಯಕಿ ಎಂದು ಅವಲತ್ತುಕೊಂಡಿದ್ದಾರೆ. ಅವರು ಅವರೇ ಎಲ್ಲರೂ ಬೆಳೆದರೆ ಬಡವರ ಮಕ್ಕಳು ಬೆಳೆಯಲು ಹೇಗೆ ಸಾಧ್ಯ ಎಂದಿದ್ದಾರೆ.

ಹೌದು. ರಣ್ವೀರ್ ಅಲ್ಲಾಬಾಡಿಯಾ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಕುಲ್ ಪ್ರೀತ್ ಸಿಂಗ್ ಹಾಗೇ ನೋಡಿದರೆ ಪ್ರಭಾಸ್ ಅಭಿನಯದ ಚಿತ್ರದ ಮೂಲಕ ನಾನು ಚಿತ್ರರಂಗವನ್ನು ಪ್ರವೇಶ ಮಾಡಬೇಕಿತ್ತು ಅಂದಿದ್ದಾರೆ. ಆ ಚಿತ್ರಕ್ಕೆ ನಾಲ್ಕು ದಿನಗಳ ಕಾಲ ನಾವು ಚಿತ್ರದ ಚಿತ್ರೀಕರಣವನ್ನೂ ಕೂಡ ಮಾಡಿದ್ದೇವು ಎಂದಿರುವ ರಾಕುಲ್, ನಾಲ್ಕು ದಿನಗಳ ಚಿತ್ರೀಕರಣದ ನಂತರ ನಾನು ದೆಹಲಿಗೆ ತೆರಳಿದ್ದೆ, ಆ ಸಮಯದಲ್ಲಿ ನನ್ನನ್ನು ಒಂದು ಮಾತು ಕೇಳದೇ ನಾಯಕಿಯನ್ನು ನಿರ್ಮಾಪಕರು ಬದಲಿಸಿದ್ದರು ಎಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ಕೂಡ ರಾಕುಲ್ ಹೇಳಿದ್ದಾರೆ.
ಪ್ರಭಾಸ್ ಜೊತೆ ಅಭಿನಯಿಸುತ್ತಿದ್ದ ಆ ಚಿತ್ರ ತುಂಬಾ ದೊಡ್ಡ ಚಿತ್ರವಾಗಿತ್ತು. ಈ ಹಿನ್ನೆಲೆ ಹೊಸಬರನ್ನು ಹಾಕಿಕೊಳ್ಳುವ ಬದಲು ನಾಲ್ಕು ಜನಕ್ಕೆ ಗೊತ್ತಿರುವ ನಾಯಕಿಯನ್ನು ಹಾಕಿಕೊಂಡರೆ ವ್ಯಾಪಾರದ ದೃಷ್ಟಿಯಿಂದ ಒಳ್ಳೇಯದಾಗುತ್ತೆ ಎಂದು ನಿರ್ಮಾಪಕರು ನನ್ನನ್ನು ಚಿತ್ರದಿಂದ ತೆಗೆದರು ಎಂದು ಹೇಳಿದ್ದಾರೆ. ನನ್ನನ್ನೂ ಚಿತ್ರದಿಂದ ಹೇಳದೇ ಕೇಳದೇ ತೆಗೆದಿದ್ದಕ್ಕೆ ನನಗೇನೂ ಆಗ ಬೇಸರವಾಗಿರಲಿಲ್ಲ, ಯಾಕೆಂದರೆ ಚಿತ್ರರಂಗ ನನಗೆ ಸಂಪೂರ್ಣ ಹೊಸದಾಗಿತ್ತು. ಈ ಕಾರಣಕ್ಕೆ ಇಲ್ಲಿ ಇದೆಲ್ಲವೂ ಮಾಮೂಲು ಇರಬೇಕೆಂದು ಅಂದುಕೊಂಡು ಮನಸಿಗೆ ಹಚ್ಚಿಕೊಳ್ಳಲಿಲ್ಲ ಎಂದಿರುವ ರಾಕುಲ್ ಆಗ ನಾನು ತುಂಬಾನೇ ಮುಗ್ದೆಯಾಗಿದ್ದೆ ಎಂದು ಹೇಳಿದ್ದಾರೆ. ಆದರೂ ಕೆಲ ದಿನ ಉರುಳಿದ ನಂತರ ಈ ಬೆಳವಣಿಗೆಯಿಂದ ನನಗೆ ಆಕ್ಟಿಂಗ್ ಬರಲ್ಲ ಎಂದು ಯಾರಾದರೂ ಅಂದುಕೊಂಡರೆ ಏನು ಗತಿ ಎನ್ನುವ ಆತಂಕ ಆ ನಂತರ ನನ್ನನ್ನೂ ಕಾಡಲು ಶುರು ಮಾಡಿತ್ತು ಎಂದಿದ್ದಾರೆ.

ಇದೊಂದೇ ಚಿತ್ರ ಅಲ್ಲ ಈ ತರಹದ ಅನುಭವ ನನಗೆ ಇನ್ನೊಮ್ಮೆ ಆಗಿತ್ತು, ಆದರೆ ಆಗ ನಾವು ಚಿತ್ರೀಕರಣಕ್ಕೆ ತೆರಳಿರಲಿಲ್ಲ. ಕೇವಲ ಚಿತ್ರವನ್ನು ಒಪ್ಪಿಕೊಂಡಿದ್ದೇ ಅಷ್ಟೇ ಎಂದು ಹೇಳಿದ್ದಾರೆ. ಎಮ್.ಎಸ್.ಧೋನಿ ಜೀವನಾಧಾರಿತ ಚಿತ್ರದಲ್ಲಿ ನಾನು ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಬೇಕಿತ್ತು, ಆದರೆ ದುರಾದೃಷ್ಟ ಆ ಚಿತ್ರ ಕೂಡ ನನ್ನ ಕೈತಪ್ಪಿ ಹೋಯಿತು ಎಂದು ಕೂಡ ರಾಕುಲ್ ಭಾವುಕರಾಗಿದ್ದಾರೆ.
ಎಮ್.ಎಸ್.ಧೋನಿ ಚಿತ್ರದ ಅವಕಾಶ ಬಂದಾಗ ನಾನು ಒಪ್ಪಿಕೊಂಡಿದ್ದೇ, ಆದರೆ ಆ ನಂತರ ಚಿತ್ರದ ಚಿತ್ರೀಕರಣ ಒಂದು ತಿಂಗಳು ತಡವಾಯಿತು. ಈ ಕಡೆ ಅದೇ ಸಮಯದಲ್ಲಿ ನಾನು ರಾಮ್ ಚರಣ್ ತೇಜಾ ಮತ್ತು ಜ್ಯೂ.ಎನ್.ಟಿ.ಆರ್ ಜೊತೆ ಸಿನಿಮಾಗಳನ್ನು ಮಾಡುತ್ತಿದ್ದೆ, ನಾನು ಅಭಿನಯಿಸಿದ್ದ ಬ್ರೂಸ್ ಲೀ ಸಿನಿಮಾ ತೆರೆಗೆ ಬರುವ ಹಂತದಲ್ಲಿತ್ತು. ಈ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಬೇರೆ ಬಾಕಿ ಇತ್ತು. ಹೀಗಾಗಿ ಬಂದಿದ್ದ ಸುವರ್ಣ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ ಎಂದಿರುವ ರಾಕುಲ್ ಆ ನಂತರ ಆ ಪಾತ್ರವನ್ನು ದಿಶಾ ಪಠಾಣಿ ಮಾಡಿದರು ಎಂದು ಹೇಳಿದ್ದಾರೆ. ಈ ಅವಕಾಶ ಕೈ ತಪ್ಪಿದ್ದೇಕೆ ನಾನು ಆಗ ತುಂಬಾನೇ ಕಣ್ಣೀರು ಹಾಕಿದ್ದೆ ಎಂದು ಕೂಡ ರಾಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಸ್ವಜನಪಕ್ಷಪಾತದ ಪರವಾಗಿ ಮಾತನಾಡಿರುವ ರಾಕುಲ್ ಪ್ರೀತ್ ಸಿಂಗ್ ನನ್ನ ತಂದೆ ಆರ್ಮಿಯಲ್ಲಿದ್ದರು, ನನಗೂ ಕೂಡ ಆರ್ಮಿ ಸೇರಬೇಕೆಂಬ ಹಂಬಲ ಇತ್ತು. ನಾನು ನನ್ನ ತಂದೆಯ ಬಳಿ ಈ ಕುರಿತು ಹೇಳಿದ್ದರೆ ಅವರು ಕೂಡ ಖಂಡಿತ ಸಹಾಯ ಮಾಡುತ್ತಿದ್ದರು, ಸಿನಿಮಾ ಕೂಡ ಇದೇ ರೀತಿ ಅವರ ಅವರ ಮಕ್ಕಳನ್ನು ಅವರು ಅವರು ಬೆಳೆಸುತ್ತಾರೆ ಅದರಲ್ಲಿ ತಪ್ಪೇನ್ ಇಲ್ಲ ಎಂದು ಹೇಳಿದ್ದಾರೆ.


Click it and Unblock the Notifications











