ಹುಲಿ 'ಅವನಿ'ಯ ಕೊಂದ ಶೂಟರ್ನಿಂದ 'ಶೇರ್ನಿ' ಸಿನಿಮಾ ವಿರುದ್ಧ ದೂರು
ವಿದ್ಯಾ ಬಾಲನ್ ನಟನೆಯ 'ಶೇರ್ನಿ' ಸಿನಿಮಾ ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಪ್ರಶಂಸೆಗಳನ್ನು ಪಡೆದಿದೆ.
ನರಭಕ್ಷಕ ಹೆಣ್ಣು ಹುಲಿಯನ್ನು ಕೊಲ್ಲುವ ಕತೆಯುಳ್ಳ ಸಿನಿಮಾ ಇದಾಗಿದ್ದು ನಟಿ ವಿದ್ಯಾ ಬಾಲನ್ ಅರಣ್ಯ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಅರಣ್ಯದ ಮೇಲೆ ಮಾನವನ ಅತಿಕ್ರಮಣ, ಹುಲಿ ಸಂರಕ್ಷಣೆ, ವನ್ಯ ಜೀವಿ ಸಂರಕ್ಷಣೆ ಇನ್ನಿತರ ಸಂದೇಶಗಳನ್ನು ಸಿನಿಮಾವು ಹುಲಿ ಕೊಲ್ಲುವ ಕತೆಯ ಮೂಲಕ ಹೇಳಿದೆ.
'ಶೇರ್ನಿ' ಸಿನಿಮಾವು 2018 ರಲ್ಲಿ ಮಹಾರಾಷ್ಟ್ರದಲ್ಲಿ ಕೊಲ್ಲಲ್ಪಟ್ಟ ಹೆಣ್ಣು ಹುಲಿ ಅವನಿಯ ಘಟನೆಗಳಿಂದ ಪ್ರೇರೇಪಣೆಗೊಂಡ ಸಿನಿಮಾ ಆಗಿದೆ. ಆದರೆ ಈಗ ಹುಲಿ ಅವನಿಯನ್ನು ಕೊಂದಿದ್ದ ಶೂಟರ್ ಅಸ್ಗರ್ ಅಲಿ ಖಾನ್ ಸಿನಿಮಾ ವಿರುದ್ಧ ದೂರು ನೀಡಲು ಮುಂದಾಗಿದ್ದು, "ಶೇರ್ನಿ ಸಿನಿಮಾದಲ್ಲಿ ಸತ್ಯಗಳನ್ನು ತಿರುಚಲಾಗಿದೆ'' ಎಂದು ಆರೋಪಿಸಿದ್ದಾರೆ.
''ಸಿನಿಮಾದಲ್ಲಿ ನಮ್ಮನ್ನು (ಹುಲಿ ಅವನಿಯ ಕೊಂದ ತಂಡ) ಹುಲಿ ಕೊಂದು ಖುಷಿಪಟ್ಟವರು ಎಂಬಂತೆ ಚಿತ್ರಿಸಲಾಗಿದೆ. ಆದರೆ ನಿಜವಾಗಿಯೂ ಅಲ್ಲಿ ಆಗಿದ್ದ ಘಟನೆಗಳು ಬೇರೆ'' ಎಂದಿದ್ದಾರೆ ಅಸ್ಗರ್. ಹೈದರಾಬಾದ್ ಮೂಲದ ಅಸ್ಗರ್ ತಂದೆ, ತಾತ ಸಹ ಹುಲಿ ಬೇಟೆಯಾಡುತ್ತಿದ್ದರು.

ಹಲವಾರು ಹೋಲಿಕೆಗಳಿವೆ: ಅಸ್ಗರ್
''ಅವನಿ ಪ್ರಕರಣಕ್ಕೂ ಸಿನಿಮಾಕ್ಕೂ ಒಂದೊ-ಎರಡೊ ಹೋಲಿಕೆ ಮಾತ್ರವೇ ಇದ್ದಿದ್ದರೆ ಅದು ಕಾಕತಾಳೀಯ ಎನ್ನಬಹುದಿತ್ತು. ಆದರೆ 'ಶೇರ್ನಿ' ಸಿನಿಮಾಕ್ಕೂ ಅವನಿ ಪ್ರಕರಣಕ್ಕೂ ಸಾಕಷ್ಟು ಹೋಲಿಕೆಗಳಿವೆ. ಆ ಹುಲಿ(ಅವನಿ)ಗೂ ಎರಡು ಮರಿಗಳಿದ್ದವು, ಸಿನಿಮಾದಲ್ಲಿನ ಹೆಣ್ಣು ಹುಲಿಗೂ ಎರಡು ಮರಿಗಳಿವೆ. ಅವನಿ ಬೇಟೆ ತಂಡದಲ್ಲೂ ಮಹಿಳಾ ಅರಣ್ಯ ಅಧಿಕಾರಿ ಇದ್ದರು, ಸಿನಿಮಾದಲ್ಲಿಯೂ ಮಹಿಳಾ ಅಧಿಕಾರಿ ಪಾತ್ರವಿದೆ. ಅವನಿಯನ್ನು ಸೆಳೆಯಲು ಮತ್ತೊಂದು (ಗಂಡು) ಹುಲಿಯ ಮೂತ್ರ ಬಳಸಲಾಗಿತ್ತು, ಸಿನಿಮಾದಲ್ಲಿಯೂ ಹಾಗೆಯೇ ತೋರಿಸಲಾಗಿದೆ. ಇನ್ನೂ ಹಲವು ಹೋಲಿಕೆಗಳು 'ಶೇರ್ನಿ' ಸಿನಿಮಾದಲ್ಲಿದೆ'' ಎಂದಿದ್ದಾರೆ ಅಸ್ಗರ್.

ಸತ್ಯವನ್ನು ತಿರುಚಿರುವುದು ನ್ಯಾಯಾಲಯದ ನಿಂದನೆ ಅಸ್ಗರ್
''ನಾವು ಮೋಜಿಗಾಗಿ ಹುಲಿ ಅವನಿಯನ್ನು ಕೊಂದೆವು ಎಂಬಂತೆ ಚಿತ್ರಿಸಲಾಗಿದೆ. ಈ ರೀತಿ ಚಿತ್ರಿಸಿರುವುದರಿಂದ ನಮ್ಮ ಮಾನಹಾನಿ ಮಾಡಿದಂತಾಗಿದೆ. ಅವನಿ ಪ್ರಕರಣ ಸೂಕ್ಷ್ಮ ಪ್ರಕರಣವಾಗಿದ್ದು ಅದರ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ರೀತಿ ನಿಜಗಳನ್ನು ತಿರುಚುವುದು ನ್ಯಾಯಾಲಯದ ನಿಂದನೆ ಆಗುತ್ತದೆ'' ಎಂದಿದ್ದಾರೆ ಅಸ್ಗರ್.

ನಿರ್ದೇಶಕರಿಗೆ ನೊಟೀಸ್ ನೀಡಿದ್ದಾರೆ
ಅಸ್ಗರ್ ಅಲಿ ಈಗಾಗಲೇ ಸಿನಿಮಾದ ನಿರ್ದೇಶಕರಿಗೆ ನೊಟೀಸ್ ನೀಡಿದ್ದಾರೆ. ಆದರೆ ನಿರ್ದೇಶಕನ ಉತ್ತರ ತೃಪ್ತಿದಾಯಕ ಆಗಿರಲಿಲ್ಲವಾದ್ದರಿಂದ ದೂರು ನೀಡಲು ಸಿದ್ಧತೆ ಆರಂಭಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಿನಿಮಾ ನಿರ್ಮಾಣ ಸಂಸ್ಥೆ ಅಬುಂಧನಿತ ಎಂಟರ್ಟೈನ್ಮೆಂಟ್ , ''ಶೇರ್ನಿ' ಸಿನಿಮಾವು ಕಾಲ್ಪನಿಕ ಕತೆಯಾಗಿದ್ದು ನಿಜ ಘಟನೆಗಳ ಮೇಲೆ ಆಧಾರವಾಗಿಲ್ಲ'' ಎಂದಿದೆ.
Recommended Video

ನವೆಂಬರ್ 2, 2018 ರಂದು ಶೂಟ್ ಮಾಡಿ ಕೊಲ್ಲಲಾಯಿತು
2016 ರ ಸಮಯದಲ್ಲಿ ಮಹಾರಾಷ್ಟ್ರದ ಯವತಮಾಲ ಪ್ರದೇಶದಲ್ಲಿ ಹುಲಿ ಅವನಿ ತನ್ನ ಎರಡು ಮರಿಗಳೊಂದಿಗೆ ಇತ್ತು. ಹುಲಿ ಅವನಿಯು 14 ಮಂದಿಯನ್ನು ತಿಂದು ಹಾಕಿದೆ ಎಂಬ ಆರೋಪ ಕೇಳಿಬಂತು. ಅರಣ್ಯ ಇಲಾಖೆಯು ಅವನಿಯನ್ನು ನರಭಕ್ಷಕ ಎಂದು ಘೋಷಿಸಿ ಅದನ್ನು ಕೊಲ್ಲಲು ತಂಡ ಮಾಡಿಕೊಂಡು ಆ ತಂಡದಲ್ಲಿ ಅರಣ್ಯ ಇಲಾಖೆಗೆ ಸೇರದ ಅಸ್ಗರ್ ಅಲಿ ಖಾನ್ ಅನ್ನು ಸೇರಿಸಿಕೊಂಡಿತು. 2018ರ ನವೆಂಬರ್ 02 ರಂದು ಅವನಿಯನ್ನು ಕೊಲ್ಲಲಾಯಿತು. ಅವನಿಯನ್ನು ಕೊಂದ ಪ್ರಕರಣ ದೇಶದಾದ್ಯಂತ ತೀವ್ರ ಚರ್ಚೆಗೆ, ಟೀಕೆಗೆ ಕಾರಣವಾಗಿತ್ತು.


Click it and Unblock the Notifications











