ನನ್ನ ತಂದೆ ನನ್ನ ಬಾಲ್ಯವನ್ನೇ ನೋಡಲಿಲ್ಲ, ನೋವು ಹೊರಹಾಕಿದ ಸ್ಟಾರ್ ನಟನ ಮಗಳು...!
ಉಳ್ಳವರು, ಬಡವರು, ವಿದ್ಯಾವಂತರು, ಅವಿದ್ಯಾವಂತರು, ಯಾರೇ ಆಗಲಿ ತಮ್ಮ ಮಕ್ಕಳು ಒಳ್ಳೆ ರೀತಿಯಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ತಾವು ಅನುಭವಿಸಿದ ಕಷ್ಟ ಅವರು ಅನುಭವಿಸಬಾರದು ಎಂದು ಬಯಸುತ್ತಾರೆ. ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹಗಲಿರುಳೂ ಅವರ ಭವಿಷ್ಯವನ್ನೇ ಗಮನದಲ್ಲಿಟ್ಕೊಂಡು ಬೆವರು ಸುರಿಸುತ್ತಾರೆ.
ಆದರೆ ಜೀವನದ ಈ ಜಂಜಾಟ, ಕೆಲಸದ ಒತ್ತಡದಿಂದ ಅನೇಕರಿಗೆ ಅವರ ಮಕ್ಕಳು ಎದೆಯೆತ್ತರಕ್ಕೆ ಬೆಳೆದಿದ್ದು ಗೊತ್ತೇ ಆಗುವುದಿಲ್ಲ. ಮಕ್ಕಳ ಬೆಳವಣಿಗೆಯನ್ನು ಅವರು ಕಣ್ತುಂಬಿಕೊಳ್ಳುವುದೇ ಇಲ್ಲ. ಮಕ್ಕಳಿಗೆ ಬಾಲ್ಯದಲ್ಲಿ ತಂದೆ ಅಥವಾ ತಾಯಿಯಿಂದ ಸಿಗಬೇಕಿದ್ದ ಪ್ರೀತಿ ಸಿಗುವುದಿಲ್ಲ. ಉದಾಹರಣೆಗೆ ಬಾಲಿವುಡ್ನ ಸ್ಟಾರ್ ಗೋವಿಂದ ಅವರ ಮಗಳು ಟೀನಾ.

ಹೌದು, ಬಾಲಿವುಡ್ ಬಬಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟೀನಾ ಅಹುಜಾ ನನ್ನ ಬಾಲ್ಯದ ದಿನಗಳನ್ನು ನನ್ನ ತಂದೆ ಯಾವತ್ತೂ ನೋಡಲೇ ಇಲ್ಲ ಎಂದು ಹೇಳಿದ್ದಾರೆ. ನನ್ನ ಆರೈಕೆಯೆಲ್ಲವನ್ನು ಮಾಡಿರುವುದು ನನ್ನ ತಾಯಿಯೇ ಎಂದಿರುವ ಟೀನಾ ನನ್ನ ತಂದೆ ಒಂದೇ ಒಂದು ದಿನ ಕೂಡ ನನ್ನ ಶಾಲೆಗೆ ಬರಲಿಲ್ಲ ಎಂದು ಹೇಳಿದ್ದಾರೆ. ಆಗೆಲ್ಲ ಶಾಲೆಗೆ ಊಟ ನೀಡಲು, ನನ್ನನ್ನೂ ಶಾಲೆಗೆ ಬಿಡಲು ನನ್ನ ತಾಯಿ ಮಾತ್ರ ಬರುತ್ತಿದ್ದರು ಎಂದಿರುವ ಟೀನಾ ನಾನು ಚಿಕ್ಕವಳಿದ್ದಾಗ ನನ್ನ ತಂದೆ ಹೈದರಾಬಾದ್ನಲ್ಲಿರುತ್ತಿದ್ದರು. ಇಲ್ಲದಿದ್ದರೆ ಸ್ವಿಜರ್ಲ್ಯಾಂಡ್ನಲ್ಲಿ ಇರುತ್ತಿದ್ದರು ಎಂದು ಹೇಳಿದ್ದಾರೆ.
ಅವರ ಜೊತೆ ಕಾರ್ಯಕ್ರಮಗಳಿಗೆ ತೆರಳಲು ನಾನು ಶುರು ಮಾಡಿದಾಗಲೇ ನನ್ನ ತಂದೆಯನ್ನು ನಾನು ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದು ಎಂದಿರುವ ಟೀನಾ ನನ್ನ ತಂದೆಯ ಕಾರಣಕ್ಕೆ ನನಗೆ ಮೊದಲಿಂದ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ ಎಂದು ಕೂಡ ಹೇಳಿದ್ದಾರೆ. ಅಂದ್ಹಾಗೇ ಗೋವಿಂದ 90ರ ದಶಕದಲ್ಲಿ ಖ್ಯಾತಿಯ ಶಿಖರಕ್ಕೇರಿದ್ದರು. ಆ ಕಾಲದಲ್ಲಿ ಗೋವಿಂದಗೆ ಬೇಡಿಕೆ ಹೇಗಿತ್ತು ಅಂದರೆ ಒಂದು ದಿನದಲ್ಲಿ ಗೋವಿಂದ ನಾಲ್ಕೈದು ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದರು. ಗಂಟೆಗಳಿಗೆ ಅನುಗುಣವಾಗಿ ತಮ್ಮ ಕಾಲ್ ಶೀಟ್ ಕೊಡುತ್ತಿದ್ದರು.
ಇನ್ನೂ ಸುನಿತಾ ಅವರನ್ನು ಗೋವಿಂದಾ ಮದ್ವೆಯಾಗಿದ್ದು 1987ರಲ್ಲಾದರೂ ತಮ್ಮ ಸ್ಟಾರ್ಡಮ್ಗೆ ಮದುವೆಯ ವಿಚಾರದಿಂದ ಪೆಟ್ಟಾಗಬಹುದೆಂದು ಅಂದುಕೊಂಡ ಗೋವಿಂದ ಒಂದು ವರ್ಷ ತಾವು ಮದುವೆಯಾದ ವಿಚಾರವನ್ನೇ ಮುಚ್ಚಿಟ್ಟಿದ್ದರು. ಇಷ್ಟೇ ಅಲ್ಲದೇ 1989ರಲ್ಲಿ ಈಗ ಮನದ ನೋವನ್ನು ಹೊರ ಹಾಕಿರುವ ಟೀನಾ ಹುಟ್ಟಿದಾಗಲೂ ಕೂಡ ಗೋವಿಂದ ಮಗಳ ಮುಖವನ್ನು ನೋಡಲು ಬಂದಿರಲಿಲ್ಲ. ಬದಲಿಗೆ ಮಗಳು ಹುಟ್ಟಿದ ದಿನ ನಾಲ್ಕು ಚಿತ್ರಗಳ ಚಿತ್ರೀಕರಣದಲ್ಲಿ ಏಕಕಾಲಕ್ಕೆ ಭಾಗಿಯಾಗಿದ್ದರು ಗೋವಿಂದ. ಕೇವಲ ಫೋನ್ನಲ್ಲಿಯೇ ಸುನಿತಾ ಅವರ ಆರೋಗ್ಯವನ್ನು ಗೋವಿಂದ ವಿಚಾರಿಸುತ್ತಿದ್ದರು. ಆಗ ಗೋವಿಂದ ಪತ್ನಿ ಸುನಿತಾ ಅವರ ಬಳಿ ಇದ್ದಿದ್ದು ಕೇವಲ ಗೋವಿಂದ ಅವರ ತಾಯಿ ಮಾತ್ರ. ಖುದ್ದು ಗೋವಿಂದ ಅವರ ಪತ್ನಿ ಸುನಿತಾ ಈ ವಿಚಾರವನ್ನು ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಮನೆ, ಮಡದಿ ಮತ್ತು ಮಕ್ಕಳಿಗಾಗಿ ತಮ್ಮ ಜೀವನವನ್ನೇ ಗೋವಿಂದ ಮುಡಿಪಾಗಿ ಇಟ್ಟಿದ್ದರು ಎಂದು ಹೇಳುತ್ತಾ ಭಾವುಕರಾಗಿದ್ದರು.
ಇಂಥಾ ಗೋವಿಂದ ಎಲ್ಲಿ ಮೈಮರೆತರೋ ಗೊತ್ತಿಲ್ಲ. ಆ ನಂತರ ತನ್ನ ನಡಾವಳಿ ಹಾಗೂ ದುರಂಹಕಾರಗಳಿಂದ ತನ್ನ ಕಾಲ ಮೇಲೆ ತಾವೇ ಚಪ್ಪಡಿ ಕಲ್ಲು ಎಳೆದುಕೊಂಡರು. ಆ ಕಾಲದಲ್ಲಿಯೇ ಸೂಪರ್ ಸ್ಟಾರ್ ಪಟ್ಟವನ್ನ ಅಲಂಕರಿಸಿ ಆ ನಂತರ ಹೇಳ ಹೆಸರಿಲ್ಲದಂತೆ ಬಾಲಿವುಡ್ನಿಂದ ಕಣ್ಮರೆ'ಯಾದರು. ಸದ್ಯ ಗೋವಿಂದ ಬಳಿ ಹೇಳಿಕೊಳ್ಳುವಂತಹ ಕೆಲಸ ಇಲ್ಲ. ತನ್ನ ತಂದೆ ತನ್ನ ಬಾಲ್ಯದಲ್ಲಿ ತನ್ನ ಜೊತೆಯಲ್ಲಿ ಇರಲಿಲ್ಲ ಎಂದು ನೊಂದುಕೊಂಡ ಮಗಳು ಟೀನಾಗೆ ಕೂಡ ಬಣ್ಣದ ಪ್ರಪಂಚ ಕೈಹಿಡಿಯಲಿಲ್ಲ. ನಾಯಕಿಯಾಗಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು ನಸೀಬು ಖುಲಾಯಿಸಲಿಲ್ಲ.


Click it and Unblock the Notifications











