ರಣಬೀರ್-ವಿಕ್ಕಿ 'ಲವ್ & ವಾರ್' ಸೆಟ್ನಲ್ಲಿ ದುರಂತ ; ಬಡ ಕಾರ್ಮಿಕ ಸಾವು, ₹40 ಲಕ್ಷ ಪರಿಹಾರ ಕೊಡಲು ಮುಂದಾದ ಬನ್ಸಾಲಿ
ಸಿನಿಮಾ ಮಾಡುವುದು ಸುಲಭ ಅಲ್ಲ. ಈ ಪ್ರಕ್ರಿಯೆಯಲ್ಲಿ ಹಲವು ಕಷ್ಟಗಳಿರುತ್ತವೆ. ನಷ್ಟಗಳಿರುತ್ತವೆ. ಕೆಲ ಒಮ್ಮೆ ಪ್ರಾಣವನ್ನು ಕೂಡ ಇಲ್ಲಿ ಅನೇಕರು ಪಣಕ್ಕಿಡುತ್ತಾರೆ. ಆದರೆ ಎರಡು ಅಥವಾ ಮೂರು ಗಂಟೆಯ ಚಿತ್ರವನ್ನು ನೋಡುವ ಪ್ರೇಕ್ಷಕರಿಗೆ ಇದರ ಅರಿವು ಆಗುವುದೇ ಇಲ್ಲ.
ಹೌದು..ಚಿತ್ರದ ಚಿತ್ರೀಕರಣ ನಡೆಯುವಾಗ ಎಷ್ಟೇ ಮುಂಜಾಗ್ರತೆ ವಹಿಸಿದರು ಕೂಡ ಕೆಲ ಒಮ್ಮೆ ನಡೆಯಬಾರದ ದುರಂತ ನಡೆದು ಹೋಗುತ್ತೆ. ಇದಕ್ಕೆ ಕನ್ನಡದ ''ಲಾಕಪ್ ಡೆತ್'' ಚಿತ್ರದಿಂದ ಹಿಡಿದು ''ಮಾಸ್ತಿಗುಡಿ''ಯವರೆಗೆ ''ಕೂಲಿ'' ಚಿತ್ರದಿಂದ ಹಿಡಿದು ಶಂಕರ್ ನಿರ್ದೇಶನದ ''ಇಂಡಿಯನ್ 2'' ವರೆಗೆ ಹಲವು ಉದಾಹರಣೆಗಳು ಸಿಗುತ್ತವೆ.

ದುರಂತ ಅಂದರೆ ತಂತ್ರಜ್ಞಾನ ಎಷ್ಟೇ ಬದಲಾದರೂ ಕೂಡ ಈ ಸಾವು- ನೋವನ್ನು ತಪ್ಪಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಬಾಲಿವುಡ್ನಲ್ಲಿ ಅವಘಡವೊಂದು ಸಂಭವಿಸಿದೆ. ಈ ಅನಾಹುತದದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಹೌದು, ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಆ ಚಿತ್ರದ ಹೆಸರು ''ಲವ್ & ವಾರ್''. ರಣಬೀರ್ ಕಪೂರ್, ವಿಕ್ಕಿ ಕೌಶಲ್, ಆಲಿಯಾ ಭಟ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಸದ್ಯ ಮುಂಬೈನ ಫಿಲ್ಮ್ ಸಿಟಿಯಲ್ಲಿ ಈ ಚಿತ್ರದ ಚಿತ್ರೀಕರಣದ ತಯಾರಿಯನ್ನು ಮಾಡಲಾಗುತ್ತಿತ್ತು. ಅದ್ದೂರಿ ಸೆಟ್ ನಿರ್ಮಾಣ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ಸೆಟ್ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಧಾರಿ ಯಾದವ್ ಅವರಿಗೆ ಕರೆಂಟ್ ಶಾಕ್ ಹೊಡೆದಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಿ ಚಂದ್ರಧಾರಿ ಯಾದವ್ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಮೃತ ದುರ್ದೈವಿ ಕಾರ್ಮಿಕ ಚಂದ್ರಧಾರಿ ಯಾದವ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಇಡೀ ಕುಟುಂಬದ ಹೊಣೆ ಇವರ ಮೇಲೆಯೇ ಇತ್ತು. ಆದರೆ. ಇದೀಗ ಮನೆಯ ಆಧಾರ ಸ್ತಂಭವೆ ಇಲ್ಲದಂತಾಗಿದೆ. ಕುಟುಂಬದ ಭವಿಷ್ಯ ಅನಿಶ್ಚತತೆಯಲ್ಲಿ ಮುಳುಗಿದೆ.
ಈ ದುರಂತದ ನಂತರ ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದ್ದು, ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ 40 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ, ''ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ ಫೆಡರೇಶನ್''(FWICE) ತನ್ನ ಅಸಮಾಧಾನ ವ್ಯಕ್ತಪಡಿಸಿದೆ. ಮೃತ ಚಂದ್ರಧಾರಿ ಯಾದವ್ ಅವರ ಮಕ್ಕಳು ಇನ್ನು ಚಿಕ್ಕವರು. ಈ ಹಿನ್ನೆಲೆ ಅವರ ಶಿಕ್ಷಣ ಮತ್ತು ಸೂಕ್ತ ಜೀವನೋಪಾಯಕ್ಕೆ ಅನುಕೂಲವಾಗುವಂತೆ 50 ಲಕ್ಷ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದೆ.
ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ''ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ ಫೆಡರೇಶನ್''(FWICE) ಅಧ್ಯಕ್ಷ ಬಿ.ಎನ್.ತಿವಾರಿ ಚಂದ್ರಧಾರಿ ಯಾದವ್ ತುಂಬಾನೇ ಜಾಣ ಮತ್ತು ಶ್ರಮ ಜೀವಿಯಾಗಿದ್ದರು, ಅವರ ಅಕಾಲಿಕ ನಿಧನ ಚಿತ್ರರಂಗದ ಕಾರ್ಮಿಕರ ವಲಯಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ. ಅವರ ಇಬ್ಬರ ಮಕ್ಕಳ ವಿದ್ಯಾಭ್ಯಾಸಕ್ಕೆ ನಿರ್ಮಾಣ ಸಂಸ್ಥೆ ಆಸರೆಯಾಗಬೇಕು ಎಂದು ಹೇಳಿರುವ ತಿವಾರಿ ಚಿತ್ರೀಕರಣದ ಸ್ಥಳಗಳಲ್ಲಿ ಕಾರ್ಮಿಕರ ಸುರಕ್ಷತೆಗೆ ಆದ್ಯತೆಯನ್ನು ಕೊಡಬೇಕು ಎಂದು ಹೇಳಿದ್ದಾರೆ.
ಒಟ್ನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡುವ ನಿರ್ಮಾಣ ಸಂಸ್ಥೆಗಳು ಕಾರ್ಮಿಕರ ಸುರಕ್ಷತೆಯ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಮಾತು ಮೇಲಿಂದ ಮೇಲೆ ಸಾಬೀತಾಗುತ್ತಲೇ ಇದೆ. ಇನ್ನಾದರೂ ತೆರೆಯ ಹಿಂದಿನ ತಂತ್ರಜ್ಞರ ಪ್ರಾಣಕ್ಕೆ ಬೆಲೆಯನ್ನು ಚಿತ್ರರಂಗ ಕೊಡುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications