ಪವಿತ್ರ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಿರುತೆರೆ ನಟಿಗೆ ಕಿರುಕುಳ
ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೇ ಮಾತನಾಡುವುದರಲ್ಲಿ ಮಹಿಕಾ ಶರ್ಮಾ ಎತ್ತಿದ ಕೈ. ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮೇಲಿನ ಕ್ರಶ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡು ಟೀಕೆಗೆ ಗುರಿಯಾಗಿದ್ದಾಕೆ ಕಿರುತೆರೆ ನಟಿ ಮಹಿಕಾ ಶರ್ಮಾ.
''ನೀಲಿ ಚಿತ್ರಗಳ ರಾಜ ಡ್ಯಾನಿ ಡಿ ಸಿನಿಮಾದಲ್ಲಿ ಅಭಿನಯ ಮಾಡುವೆ'' ಅಂತ ಹೇಳಿ ಟ್ರೋಲ್ ಆಗಿದ್ದ ಮಹಿಕಾ ಶರ್ಮಾ ಇಂದು ಮತ್ತೆ ಸುದ್ದಿಯಲ್ಲಿದ್ದಾರೆ. ಪುರಿ ಜಗನ್ನಾಥ ದೇವಾಲಯದಲ್ಲಿನ ಪವಿತ್ರ ರಥಯಾತ್ರೆ ಸಂದರ್ಭದಲ್ಲಿ ತಾವು ಕಿರುಕುಳಕ್ಕೊಳಗಾದ ಬಗ್ಗೆ ನಟಿ ಮಹಿಕಾ ಶರ್ಮಾ ಇನ್ಸ್ಟಾಗ್ರಾಮ್ ನಲ್ಲಿ ಬಹಿರಂಗ ಪಡಿಸಿದ್ದಾರೆ.
ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ಕೊಟ್ಟು, ದೇವರ ದರ್ಶನ ಮಾಡಬೇಕು ಅಂತಿದ್ದರು ಮಹಿಕಾ ಶರ್ಮಾ. ಆದ್ರೆ, ಕಿಡಿಗೇಡಿಗಳ ವರ್ತನೆಯಿಂದ ಮನನೊಂದು ದೇವರ ದರ್ಶನ ಪಡೆಯದೇ ವಾಪಸ್ ತೆರಳಿದ್ದಾರೆ. ಅಷ್ಟಕ್ಕೂ, ಏನಿದು ಘಟನೆ ಅಂದ್ರಾ.? ಸಂಪೂರ್ಣ ವಿವರ ಇಲ್ಲಿದೆ. ಓದಿರಿ...

ದೇವರಿಗೆ ಪೂಜೆ ಸಲ್ಲಿಸದೇ ಹಾಗೇ ಬಂದೆ.!
''ಅಲ್ಲಿಯವರೆಗೂ ಹೋಗಿ ದೇವರ ದರ್ಶನ ಪಡೆಯದೇ, ದೇವರಿಗೆ ಪೂಜೆ ಸಲ್ಲಿಸದೇ ಹಾಗೆ ಬಂದಿದ್ದಕ್ಕೆ ಈಗಲೂ ನನಗೆ ಬೇಸರ ಇದೆ. ಅಷ್ಟರಮಟ್ಟಿಗೆ ಆ ಕಿಡಿಗೇಡಿಗಳು ನನ್ನ ಮನಸ್ಸಿನಲ್ಲಿ ಅಸುರಕ್ಷತೆಯ ಭಾವ ಮೂಡಿಸಿದರು. ಆ ಕಿರಾತಕರಿಗೆ ಜಗನ್ನಾಥನೇ ಸರಿಯಾದ ಬುದ್ಧಿ ಕಲಿಸುತ್ತಾನೆ'' ಎಂದು ಮಹಿಕಾ ಶರ್ಮಾ ಹೇಳಿದ್ದಾರೆ.

ದೇವಸ್ಥಾನದ ಹೊರಗೆ ನಡೆದ ಘಟನೆ
''ದೇವಸ್ಥಾನದ ಹೊರಗೆ ನಡೆದ ಘಟನೆ ಇದು. ಕಾರಿನಿಂದ ಕೆಳಗೆ ಇಳಿದು 20-25 ನಿಮಿಷ ನಡೆಯಬೇಕಿತ್ತು. ನಾನು ನನ್ನ ಸ್ನೇಹಿತರು ನಡೆದುಕೊಂಡು ಹೋಗುತ್ತಿದ್ದಾಗ, ಬೇರೆ ರಾಜ್ಯದ ಕೆಲ ಹುಡುಗರು ನನ್ನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಲು ಆರಂಭಿಸಿದರು'' - ಮಹಿಕಾ ಶರ್ಮಾ, ನಟಿ

ಹತ್ತಿರ ಬಂದು ತಳ್ಳಿದರು
''ಅವರು ಬಳಸಿದ ಪದಗಳನ್ನು ನಾನು ಹೇಳಲು ಸಾಧ್ಯವಿಲ್ಲ. ಮಾತನಾಡಿದ್ದು ಸಾಲದೇ ಹತ್ತಿರ ಬಂದು ತಳ್ಳಿದರು. ಸಾಲದಕ್ಕೆ ನನ್ನ ಫೋಟೋಗಳನ್ನ ಕ್ಲಿಕ್ ಮಾಡಿಕೊಂಡರು. ತಕ್ಷಣ ಅಕ್ಕ-ಪಕ್ಕದಲ್ಲಿದ್ದವರು ನನ್ನ ಸಹಾಯಕ್ಕೆ ಬಂದು ಅವರು ನನ್ನನ್ನು ಕ್ಷಮೆ ಕೇಳುವಂತೆ ಮಾಡಿದರು'' - ಮಹಿಕಾ ಶರ್ಮಾ, ನಟಿ

ರಥಯಾತ್ರೆಯ ಸಡಗರ ಹಾಳು ಮಾಡಲು ಇಷ್ಟ ಇರಲಿಲ್ಲ
''ನನ್ನ ಮನಸ್ಸಿಗೆ ಬೇಸರ ಆದ ಕಾರಣ, ಅಲ್ಲಿಂದ ವಾಪಸ್ ಬಂದೆ. ಸೆಕ್ಯೂರಿಟಿ ಆಫೀಸರ್ ಬಳಿ ದೂರು ಕೊಡಿ ಅಂತ ಹಲವರು ಹೇಳಿದರು. ಆದ್ರೆ, ರಥಯಾತ್ರೆಯ ಸಡಗರವನ್ನ ಹಾಳು ಮಾಡುವುದು ನನಗೆ ಇಷ್ಟ ಇರಲಿಲ್ಲ. ಅಲ್ಲಿನ ನನ್ನ ಅನುಭವ ಕರಾಳವಾಗಿತ್ತು. ಆ ಜಗನ್ನಾಥ ಅವರಿಗೆ ಸರಿಯಾದ ಬುದ್ದಿ ಕಲಿಸಲಿ'' - ಮಹಿಕಾ ಶರ್ಮಾ, ನಟಿ


Click it and Unblock the Notifications











