ಆಸ್ಕರ್ ಅಂಗಳಕ್ಕೆ ಲಾಪತಾ ಲೇಡೀಸ್, ಭುಗಿಲೆದ್ದ ಆಕ್ರೋಶ ; ಅದರ ಬದಲು ಈ ಚಿತ್ರವನ್ನಾದರೂ ಕಳಿಸಬಾರದಿತ್ತಾ..?
ಆಸ್ಕರ್ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ. ಆಸ್ಕರ್ ಪಡೆಯುವುದು ವಿಶ್ವದ ಹಲವು ನಿರ್ದೇಶಕರ ಜೀವಮಾನದ ಆಸೆ. ಆದರೆ ಆಸ್ಕರ್ ಪ್ರಶಸ್ತಿ ದೊರೆಯುವುದು ಇರಲಿ, ಪ್ರಶಸ್ತಿಗೆ ನಾಮ ನಿರ್ದೇಶನವಾದರೆ ಸಾಕು ಸಿನಿಮಾ ಹಾಗೂ ಸಾಕ್ಷ್ಯ ಚಿತ್ರತಂಡಕ್ಕೆ ಅದು ದೊಡ್ಡ ವಿಚಾರ. ಹೀಗಿರುವಾಗ ಪ್ರಶಸ್ತಿ ಪಡೆಯುವ ಯೋಗ್ಯತೆ ಮತ್ತು ಅರ್ಹತೆ ಇರುವ ಚಿತ್ರಗಳನ್ನು ಕಳುಹಿಸದೇ, ಜನಾಭಿಪ್ರಾಯವನ್ನು ಕೇಳದೇ, ತಮಗೆ ಇಷ್ಟ ಬಂದ ಚಿತ್ರವನ್ನು ಕಳುಹಿಸಿದರೆ ಹೇಗೆ..? ಭಾರತಕ್ಕೆ ಆಸ್ಕರ್ ಸಿಗುವುದಾದರೂ ಹೇಗೆ..? ಎನ್ನುವ ಪ್ರಶ್ನೆ ಸದ್ಯಕ್ಕೆ ಎದ್ದಿದೆ.
ಹೌದು, ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಇಂದು 29 ಚಿತ್ರಗಳನ್ನು ಅಳೆದು ತೂಗಿ ಆ ಪೈಕಿ ಅಮೀರ್ ಖಾನ್ ನಿರ್ಮಾಣದ 'ಲಾಪತಾ ಲೇಡೀಸ್' ಚಿತ್ರವನ್ನು ಆಸ್ಕರ್ಗೆ ಕಳುಹಿಸಿದೆ. ಸಹಜವಾಗಿ ಈ ಸುದ್ದಿ ಕೇಳಿ ಬಾಲಿವುಡ್ ಕೇಕೆ ಹಾಕಿದೆ. ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರ ಮೊಗದಲ್ಲಿ ಕೂಡ ಮಂದಹಾಸ ಮೂಡಿದೆ. ಆದರೆ, ಇದೇ ಸಮಯದಲ್ಲಿ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನದ ಅಲೆ ಎದ್ದಿದೆ. ಲಾಪತಾ ಲೇಡೀಸ್ ಚಿತ್ರಕ್ಕಿಂತ ಆಸ್ಕರ್ ಅಂಗಳಕ್ಕೆ ತಲುಪುವ ಅರ್ಹತೆ ''ಆಲ್ ವಿ ಇಮ್ಯಾಜಿನ್ ಆಸ್ ಲೈಟ್'' ಚಿತ್ರಕ್ಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದಲ್ಲಿ ಅಸಮರ್ಥರು ತುಂಬಿ ತುಳುಕುತ್ತಿರುವಾಗ ಈ ತರಹದ ತಪ್ಪುಗಳಾಗುತ್ತವೆ ಎಂಬ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.

ನಿಮಗೆ ಗೊತ್ತಿರಲಿ.. ಪಾಯಲ್ ಕಪಾಡಿಯಾ ನಿರ್ದೇಶನದ ''ಆಲ್ ವಿ ಇಮ್ಯಾಜಿನ್ ಆಸ್ ಲೈಟ್'' ಚಿತ್ರ 2024ರ ಕಾನ್ ಚಲನಚಿತ್ರೋತ್ಸವದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದೇ ವರ್ಷ ಸಿಡ್ನಿಯಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಕೂಡ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಯನ್ನು ಈ ಚಿತ್ರ ಪಡೆದಿದೆ. ಚಿಕ್ಯಾಗೋ ಇಂಟರ್ನ್ಯಾಷನಲ್ ಚಲನಚಿತ್ರೋತ್ಸವಕ್ಕೆ ಕೂಡ ''ಆಲ್ ವಿ ಇಮ್ಯಾಜಿನ್ ಆಸ್ ಲೈಟ್'' ಚಿತ್ರ ಆಯ್ಕೆಯಾಗಿದೆ. ಇನ್ನೂ.. ಈ ಚಿತ್ರವನ್ನು ನೋಡಿರುವ ಅಂತರಾಷ್ಟ್ರೀಯ ವಿಮರ್ಷಕರು ಈ ಚಿತ್ರಕ್ಕೆ ಮನ ಸೋತಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಪಾಯಲ್ ಕಪಾಡಿಯಾ ಚಿತ್ರವನ್ನು ಹೆಣೆದ ರೀತಿಯನ್ನೂ ಮನಸಾರೆ ಕೊಂಡಾಡಿದ್ಧಾರೆ. ಅಲ್ಲಿನ ಪ್ರೇಕ್ಷಕರು ಕೂಡ ಈ ಚಿತ್ರವನ್ನು ಕಣ್ತುಂಬಿಕೊಂಡು ಮೆಚ್ಚಿಕೊಂಡಿದ್ದಾರೆ.
ಆದರೂ ಕೂಡ ''ಆಲ್ ವಿ ಇಮ್ಯಾಜಿನ್ ಆಸ್ ಲೈಟ್'' ಚಿತ್ರಕ್ಕೆ ಮಣೆ ಹಾಕದ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ''ಲಾಪತಾ ಲೇಡೀಸ್'' ಚಿತ್ರಕ್ಕೆ ಬೆಲೆ ನೀಡಿದೆ. ''ಆಲ್ ವಿ ಇಮ್ಯಾಜಿನ್ ಆಸ್ ಲೈಟ್'' ಬದಲು ''ಲಾಪತಾ ಲೇಡೀಸ್'' ಚಿತ್ರವನ್ನು ಆಸ್ಕರ್ಗೆ ಕಳುಹಿಸಿದೆ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ಅನೇಕ ಚಿತ್ರಪ್ರೇಮಿಗಳು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದಲ್ಲಿರುವ ಹದಿಮೂರು ಸದಸ್ಯರಿಗೆ ತಪರಾಕಿ ಹಾಕುತ್ತಿದ್ದಾರೆ. ''ಆಲ್ ವಿ ಇಮ್ಯಾಜಿನ್ ಆಸ್ ಲೈಟ್'' ಚಿತ್ರವನ್ನು ಆಸ್ಕರ್ಗೆ ಕಳುಹಿಸಿದ್ದರೆ ಕೊನೆ ಪಕ್ಷ ಭರವಸೆಯನ್ನಾದರು ಇಡಬಹುದಿತ್ತು ಆದರೆ ''ಲಾಪತಾ ಲೇಡೀಸ್'' ಚಿತ್ರವನ್ನು ಕಳುಹಿಸುವ ಮೂಲಕ ಆಸ್ಕರ್ ಕನಸನ್ನು ಆರಂಭದಲ್ಲಿಯೇ ಇವೆರೆಲ್ಲ ಚಿವುಟಿದ್ದಾರೆ ಎನ್ನುವ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ, ಆಸ್ಕರ್ ಅಂಗಳಕ್ಕೆ ತಲುಪಬೇಕಾದರೆ ಹಣವನ್ನು ನೀರಿನಂತೆ ಖರ್ಚು ಮಾಡಬೇಕೆನ್ನುವ ಮಾತು ಇದೆ. ಇದಕ್ಕೆ ಪೂರಕವಾಗಿ ಆರ್.ಆರ್.ಆರ್ ಚಿತ್ರ ಅಲ್ಲಿಯವರೆಗೆ ತಲುಪಲು ರಾಜಮೌಳಿ ಮತ್ತು ತಂಡ 80 ಕೋಟಿ ಹಣ ಸುರಿದಿತ್ತು ಎಂದು ವರದಿ ಕೂಡ ಹಿಂದೆ ಮಾಡಲಾಗಿದೆ. ಇಷ್ಟೊಂದು ಹಣ ಖರ್ಚು ಮಾಡಬೇಕಾದ ಹಿನ್ನೆಲೆ ಎಲ್ಲ ನಿರ್ಮಾಪಕರಿಗೆ ಈ ಪ್ರಯಾಣ ಪ್ರಯಾಸದಾಯಕವಾದದ್ದು ಅನ್ನುವ ಅಭಿಪ್ರಾಯ ಕೂಡ ಚಿತ್ರರಂಗದಲ್ಲಿ ಇದೆ. ಕೇವಲ ದುಡ್ಡಿನ ಕಾರಣಕ್ಕೆ ನಮ್ಮ ಅನೇಕ ಚಿತ್ರಗಳು ಅಲ್ಲಿಯವರೆಗೆ ಹೋಗಲ್ಲ ಎನ್ನುವ ಮಾತು ಇದೆ.
ಇನ್ನೂ ಅಮೀರ್ ಖಾನ್ಗೆ ಇದೆಲ್ಲವೂ ಚೆನ್ನಾಗಿ ಗೊತ್ತಿದೆ. ಹಿಂದೆ ಆಸ್ಕರ್ ಅನುಭವ ಅಮೀರ್ ಬೆನ್ನಿಗಿದೆ. ಈ ಕಾರಣಕ್ಕೆ ಲಾಪತಾ ಲೇಡೀಸ್ ಚಿತ್ರವನ್ನು ಅಮೀರ್ ಖಾನ್ ಕೊನೆಯವರೆಗೆ ಕರೆದೊಯ್ಯಬಹುದು, ಬೇಕಾದ ದುಡ್ಡು ಖರ್ಚು ಮಾಡಬಹುದು, ಹೀಗಾಗಿಯೇ ಲಾಪತಾ ಲೇಡೀಸ್ ಆಸ್ಕರ್ಗೆ ಅತ್ಯುತ್ತಮವಾದ ಆಯ್ಕೆ ಎನ್ನುವ ವಾದವನ್ನು ಒಂದು ವರ್ಗ ಮಾಡುತ್ತಿದೆ. ಆದರೆ, 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಚಿತ್ರದ ಹಿಂದೆ ಇರುವ ನಿರ್ಮಾಣ ಸಂಸ್ಥೆ ಕೂಡ ಸಾಮಾನ್ಯವಾದದ್ದಲ್ಲ. ಫ್ರೆಂಚ್ ಮೂಲದ ಪೆರಿಟ್ ಚೋಸ್ ಎಂಬ ಸಂಸ್ಥೆಯ ಮೂಲಕ ಥಾಮಸ್ ಹಕೀಮ್ ಮತ್ತು ಜೂಲಿಯನ್ ಗ್ರಾಫ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಭಾರತದ ವಿತರಣೆ ಹಕ್ಕನ್ನು ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ ಒಡೆತನದ ಸ್ಪಿರಿಟ್ ಮೀಡಿಯಾ ಖರೀದಿಸಿದೆ. ಹೇಗೆ ನೋಡಿದರೂ ಕಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನು ಗೆಲ್ಲಿಸಿಕೊಂಡು ಬಂದ ತಂಡಕ್ಕೆ, ಆಸ್ಕರ್ ಪ್ರಯಾಣ ಕಷ್ಟಕರವಾಗುವುದಿಲ್ಲ. ಆದರೂ ಲಾಪತಾ ಲೇಡೀಸ್ ಚಿತ್ರವನ್ನು ಕಳುಹಿಸಿದ್ದು ಎಷ್ಟು ಸರಿ ಎನ್ನುವ ವಾದವನ್ನು ಇನ್ನೊಂದು ವರ್ಗ ಮಾಡುತ್ತಿದೆ.
ಒಟ್ನಲ್ಲಿ ಆಸ್ಕರ್ ವಿಚಾರದಲ್ಲಿ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಮತ್ತು ಲಾಪತಾ ಲೇಡೀಸ್ ಇವೆರಡರಲ್ಲಿ ಯಾವುದು ಶ್ರೇಷ್ಠ ಎನ್ನುವ ಚರ್ಚೆ ಈಗ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











