'ಸರ್ಫ್' ಜಾಹೀರಾತಿನ 'ಲಲಿತಾ' ಇನ್ನಿಲ್ಲ. 'ಉಡಾನ್' ಖ್ಯಾತಿಯ ನಟಿಯ ನಿಧನಕ್ಕೆ ಗಣ್ಯರ ಕಂಬನಿ.. !
'90ರ ದಶಕದ ಬಾಲಿವುಡ್ ನ ಖ್ಯಾತ ನಟಿ ಕವಿತಾ ಚೌಧರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ದೂರದರ್ಶನದ ಅತ್ಯಂತ ಜನಪ್ರಿಯ ಸರಣಿ 'ಉಡಾನ್'ನಲ್ಲಿ ಐಪಿಎಸ್ ಅಧಿಕಾರಿ ಕಲ್ಯಾಣಿ ಸಿಂಗ್ ಪಾತ್ರದಲ್ಲಿ ಕವಿತಾ ಅಪಾರ ಜನಪ್ರಿಯತೆ ಗಳಿಸಿದ್ದರು. 67ರ ಪ್ರಾಯದ ಕವಿತಾ ಚೌಧರಿ ನಿಧನದ ಸುದ್ದಿಯಿಂದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ ಕವಿತಾ ಚೌಧರಿ
ಕಳೆದ ಮೂರ್ನಾಲ್ಕು ದಿನಗಳಿಂದ ಕಡಿಮೆ ರಕ್ತದೊತ್ತಡದ ಕಾರಣದಿಂದ ಕವಿತಾ ಚೌಧರಿ ಅವರನ್ನ ಅಮೃತಸರದ ಪಾರ್ವತಿ ದೇವಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆ ನಂತರ ಆರೋಗ್ಯ ಸ್ಥಿತಿ ಗಂಭೀರವಾಯಿತು ಎಂದು ಮಾಹಿತಿಯನ್ನ ನೀಡಿರುವ ಕವಿತಾ ಚೌಧರಿ ಅವರ ಸೋದರಳಿಯ ಅಜಯ್ ಸಾಯಲ್ ರಾತ್ರಿ 8.30ಕ್ಕೆ ಕವಿತಾ ಕೊನೆಯುಸಿರೆಳೆದರು ಎಂಬ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಇಂದು ಶಿವಪುರಿ ಅಮೃತಸರದಲ್ಲಿ ನಟಿಯ ಅಂತಿಮ ವಿಧಿಗಳನ್ನು ನಡೆಸಲಾಗಿದೆ.

'ಉಡಾನ್' ಧಾರಾವಾಹಿಯಿಂದ ಕವಿತಾ ಚೌಧರಿಗೆ ಮನ್ನಣೆ
ಮಹಿಳಾ ಸಬಲೀಕರಣದ ಪ್ರಗತಿಪರ ಕಾರ್ಯಕ್ರಮವಾದ ಉಡಾನ್ ನ ಪ್ರಮುಖವಾದ ಭಾಗವಾಗಿದ್ದರು ಕವಿತಾ ಚೌಧರಿ. 'ಉಡಾನ್' ಧಾರಾವಾಹಿಯಲ್ಲಿ ಐಪಿಎಸ್ ಅಧಿಕಾರಿ ಕಲ್ಯಾಣಿ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ಕವಿತಾ, ಕಿರಣ್ ಬೇಡಿ ನಂತರ ಎರಡನೇ ಐಪಿಎಸ್ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರ ಜೀವನ ಕಥೆಯನ್ನ ಆಧರಿಸಿದ್ದ ಧಾರಾವಾಹಿಯಲ್ಲಿ ಕಾಂಚನ್ ಅವರ ಪಾತ್ರ ನಿರ್ವಹಿಸಿದ್ದರು. ವಿಶೇಷ ಅಂದರೆ ಕಾಂಚನ್ ಬೇರೆ ಯಾರು ಅಲ್ಲ ಬದಲಿಗೆ ಕವಿತಾ ಅವರ ಸ್ವಂತ ಸಹೋದರಿಯಾಗಿದ್ದರು
ಶೇಖರ್ ಕಪೂರ್ ಸಹ ನಟಿಸಿದ್ದ ʻಉಡಾನ್ʼ, ಐಪಿಎಸ್ ಅಧಿಕಾರಿಯಾಗಲು ಬಯಸುವ ಮಹಿಳೆಯ ಹೋರಾಟದ ಸುತ್ತ ಕಥೆ ಹೊಂದಿತ್ತು. ನಂತರ ತಮ್ಮ ವೃತ್ತಿಜೀವನದಲ್ಲಿ ಕವಿತಾ ಅವರು 'ಯುವರ್ ಆನರ್' ಮತ್ತು 'ಐಪಿಎಸ್ ಡೈರೀಸ್' ನಂತಹ ಕಾರ್ಯಕ್ರಮಗಳನ್ನು ನಿರ್ಮಿಸಿದರು.

ಸರ್ಫ್ ಜಾಹೀರಾತುಗಳಿಂದ ಜನಪ್ರಿಯತೆಯನ್ನೂ ಪಡೆದಿದ್ದ ಕವಿತಾ
ಕವಿತಾ ಅವರು 1980 ಮತ್ತು 1990 ರ ದಶಕದಲ್ಲಿ ಪ್ರಸಿದ್ಧವಾದ ಸರ್ಫ್ ಡಿಟರ್ಜೆಂಟ್ ಪೌಡರ್ ಜಾಹೀರಾತುಗಳಲ್ಲಿ ಲಲಿತಾಜಿ ಪಾತ್ರದಲ್ಲಿ ಹೆಸರುವಾಸಿಯಾಗಿದ್ದರು. ಕವಿತಾ ಅವರ ನಿಧನಕ್ಕೆ ಹಿಂದಿ ಉದ್ಯಮದ ಅನೇಕರು ಕಣ್ಣೀರಿಟ್ಟಿದ್ದಾರೆ. ಗಣ್ಯರು ಸಂತಾಪವನ್ನ ಸೂಚಿಸಿದ್ದಾರೆ.


Click it and Unblock the Notifications











