ಪ್ರೀತಿ, ಮೋಸ ,ನಂಬಿಕೆ ದ್ರೋಹ ; ಬೆಚ್ಚಿಬೀಳಿಸುವ ಸತ್ಯ - ಉದಿತ್ ನಾರಾಯಣ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೊದಲ ಪತ್ನಿ
ಪ್ರತಿಯೊಂದು ಮೋಸ ಶುರುವಾಗುವುದೇ ನಂಬಿಕೆಯಿಂದ. ನಂಬಿಕೆ ಅನ್ನೋದು ಇಲ್ಲದಿದ್ದರೆ ಮೋಸಕ್ಕೆ ಜಾಗ ಇರುತ್ತಿರಲಿಲ್ಲ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ನಂಬಿಸಿ ಬೆನ್ನಿಗೆ ಚೂರಿ ಹಾಕುವರ ಸಂಖ್ಯೆ ತುಸು ಹೆಚ್ಚೇ ಇದೆ. ಅದು ಸ್ನೇಹವೇ ಇರಬಹುದು.. ಪ್ರೀತಿಯೇ ಇರಬಹುದು.. ಅಥವಾ ದಾಂಪತ್ಯದ ಜೀವನವೇ ಆಗಿರಬಹುದು.
ಇಲ್ಲಿ ಕೀರ್ತಿ ಮತ್ತು ಪ್ರಸಿದ್ದಿಯ ಬೆಳಕಿನಲ್ಲಿ ಮಿಂಚುವ ವ್ಯಕ್ತಿಗಳ ಜೀವನದ ಇನ್ನೊಂದು ಮಜಲು ಕತ್ತಲೆಯಿಂದ ಕೂಡಿರುತ್ತದೆ. ಪ್ರೀತಿ ಮತ್ತು ವಿಶ್ವಾಸ ದಾಂಪತ್ಯದ ಅಡಿಪಾಯ. ಆದರೆ ಅದೇ ಅಡಿಪಾಯವನ್ನು ನಂಬಿಕೆಯ ಹೆಸರಿನಲ್ಲಿ ಇಲ್ಲಿ ಹಲವರು ಅಲ್ಲಾಡಿಸುತ್ತಾರೆ. ಪ್ರೀತಿಯ ಮಹಲ್ನ್ನು ತಮ್ಮ ಕೈಯಾರೆ ಕೆಡವುತ್ತಾರೆ. ದ್ರೋಹ ಎಸಗುತ್ತಾರೆ. ಆ ಪೈಕಿ ಉದಿತ್ ನಾರಾಯಣ್ ಕೂಡ ಒಬ್ಬರು ಎನ್ನುವುದೇ ಸದ್ಯದ ಆಶ್ಚರ್ಯಕರ ವಿಚಾರ.

ಹೌದು, ತನ್ನ ಚಿನ್ನದ ಕಂಠದಿಂದನೇ ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಹೆಸರುವಾಸಿಯಾದವರು ಉದಿತ್ ನಾರಾಯಣ್. ಕಳೆದ ಮೂರುವರೆ ದಶಕಗಳಿಂದ ಒಂದಕ್ಕಿಂತ ಒಂದು ಸುಮಧುರ ಹಾಡುಗಳಿಗೆ ಧ್ವನಿಯಾದವರು ಇವರು.
ಕೇವಲ ಹಿಂದಿ ಮಾತ್ರವಲ್ಲ 36 ಭಾಷೆಯಲ್ಲಿ ಇವರ ಕಂಠ ಕುಣಿದಿದೆ. ಬಿಬಿಸಿಯ ಟಾಪ್ 40 ಹಿಂದಿ ಹಾಡುಗಳಲ್ಲಿ ಇವರದ್ದೇ 21 ಹಾಡುಗಳಿವೆ. ಇಂಥಾ ಉದಿತ್ ನಾರಾಯಣ್ ವಿರುದ್ಧ ಇವರ ಮೊದಲ ಪತ್ನಿ ರಂಜನಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನ್ನ ಅನುಮತಿ ಇಲ್ಲದೆ ಗರ್ಭಕೋಶ ತೆಗೆದು ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಹೌದು, ರಂಜನಾ ನಾರಾಯಣ್ ಝಾ.. ಹಲವು ವರ್ಷಗಳಿಂದ ತಮ್ಮನ್ನು ತಾವು ಉದಿತ್ ನಾರಾಯಣ್ ಅವರ ಪತ್ನಿ ಎಂದು ಹೇಳಿಕೊಲ್ಳುತ್ತಿರುವ ಬಿಹಾರದ ಮಹಿಳೆ. ರಂಜನಾ ಖುದ್ದು ಹಿಂದೆ ಮತ್ತು ಈಗ ಇನ್ನೊಮ್ಮೆ ಹೇಳಿದಂತೆ ರಂಜನಾ ಝಾ 1984ರ ಡಿಸೆಂಬರ್ನಲ್ಲಿ ಹಿಂದೂ ಸಂಪ್ರದಾಯದಂತೆ ಉದಿತ್ ನಾರಾಯಣ್ ಅವರೊಂದಿಗೆ ರಂಜನಾ ಅವರ ಮದುವೆಯಾಗಿತ್ತು.
ಆದರೆ, 1985ರಲ್ಲಿ ಉದಿತ್ ನಾರಾಯಣ್ ಕನಸೆಂಬ ಕುದುರೆಯ ಬೆನ್ನೇರಿ ಮುಂಬೈಗೆ ವಲಸೆ ಹೋದರು. ಚಿತ್ರರಂಗದಲ್ಲಿ ಅವಕಾಶ ಪಡೆದರು. ಖ್ಯಾತಿಯ ಶಿಖರಕ್ಕೇರುತ್ತಲೇ ರಂಜನಾ ಅವರನ್ನು ಮರೆತ ಉದಿತ್ ನಾರಾಯಣ್ ಆ ನಂತರ ದೀಪಾ ಅವರನ್ನು ಮದುವೆಯಾದರು. ರಂಜನಾ ಖುದ್ದು ಹೇಳುವಂತೆ ದೀಪಾ ಜೊತೆ ಉದಿತ್ ನಾರಾಯಣ್ ಮದುವೆಯಾಗಿರುವ ವಿಚಾರ ಇವರಿಗೆ ಗೊತ್ತಾಗಿದ್ದು ಮಾಧ್ಯಮಗಳ ಮೂಲಕವೇ.

ಕೀರ್ತಿಯ ಅಮಲಿನಲ್ಲಿ ನನ್ನ ಅಸ್ತಿತ್ವವನ್ನೇ ಉದಿತ್ ನಾರಾಯಣ್ ಅಳಿಸಿ ಹಾಕಿದರು ಎನ್ನುವ ವಾದ ಮಾಡುತ್ತಾ ಬಂದಿರುವ ರಂಜನಾ ಝಾ, ಎರಡನೇ ಮದುವೆ ಕುರಿತು ಉದಿತ್ ನಾರಾಯಣ್ ಅವರನ್ನು ನಾನು ಪ್ರಶ್ನಿಸಿದಾಗಲೆಲ್ಲ ಅವರು ಎರಡನೇ ಮದುವೆ ವಿಚಾರ ನಿರಾಕರಿಸಿದರು, ನನಗೆ ತಪ್ಪು ಮಾಹಿತಿ ನೀಡಿದರು ಎಂದು ಹೇಳಿದ್ದಾರೆ. ಸದ್ಯ ದಾಖಲು ಮಾಡಿರುವ ದೂರಿನಲ್ಲಿ ಕೂಡ ಈ ವಿಚಾರ ಉಲ್ಲೇಖಿಸಿದ್ದಾರೆ.
ಇನ್ನೂ ತಮ್ಮ ಈ ದೂರಿನಲ್ಲಿ ರಂಜನಾ ಇನ್ನೊಂದು ಬೆಚ್ಚಿ ಬೀಳಿಸುವಂತಹ ವಿಚಾರವನ್ನು ಕೂಡ ಉಲ್ಲೇಖ ಮಾಡಿದ್ದಾರೆ. ಅದು, 1996ರ ಘಟನೆ. ಆ ಪ್ರಕಾರ ಉದಿತ್ ನಾರಾಯಣ್ ಮತ್ತು ಅವರ ಸಹೋದರರು ದೆಹಲಿಯ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಯ ನೆಪದಲ್ಲಿ ರಂಜನಾ ಅವರನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿ ರಂಜನಾಗೆ ತಿಳಿಯದಂತೆ, ಅವರ ಒಪ್ಪಿಗೆಯಿಲ್ಲದೆ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆ (Hysterectomy) ಮಾಡಿಸಿದ್ದರು. ಈ ಸಂಚಿನಲ್ಲಿ ಉದಿತ್ ನಾರಾಯಣ್ ಅವರ ಎರಡನೇ ಪತ್ನಿ ದೀಪಾ ನಾರಾಯಣ್ ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಕೂಡ ರಂಜನಾ ಮಾಡಿದ್ದಾರೆ.
ನನ್ನ ಗರ್ಭಕೋಶ ತೆಗೆದುಹಾಕಲಾಗಿದೆ ಎಂಬ ವಿಚಾರ ನನಗೆ ಗೊತ್ತಾಗಲು ಹಲವು ವರ್ಷಗಳೇ ಬೇಕಾದವು ಎಂದು ಹೇಳಿರುವ ರಂಜನಾ, ವರ್ಷಗಳ ನಂತರ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ನನಗೆ ನನ್ನ ಗರ್ಭಕೋಶ ತೆಗೆದು ಹಾಕಿರುವ ವಿಚಾರ ಗೊತ್ತಾಯ್ತು ಎಂದಿದ್ದಾರೆ. ಈ ಸತ್ಯ ತಿಳಿದು ನಾನು ಬೆಚ್ಚಿ ಬಿದ್ದೆ ಎಂದು ಹೇಳಿದ್ದಾರೆ. ಮಾಧ್ಯಮದವರ ಮುಂದೆ ಬಿಕ್ಕಿದ್ದಾರೆ.
ಮುಂದುವರೆದು 2006ರಲ್ಲಿ ನಾನು ಮುಂಬೈಗೆ ಹೋದಾಗ, ಉದಿತ್ ನಾರಾಯಣ್ ಮತ್ತು ಅವರ ಎರಡನೇ ಪತ್ನಿ ದೀಪಾ ತಮ್ಮನ್ನು ನಿಂದಿಸಿದರು ಎಂದು ದೂರಿನಲ್ಲಿ ಉಲ್ಲೇಖ ಮಾಡಿರುವ ರಂಜನಾ ನನ್ನನ್ನೂ ಮನೆಯೊಳಗೆ ಕೂಡ ಸೇರಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಆ ನಂತರ ನೇಪಾಳದಲ್ಲಿರುವ ತಮ್ಮ ಅತ್ತೆಯ ಮನೆಗೆ ಹೋದಾಗಲೂ ಕೂಡ ಅಲ್ಲಿಯೂ ಅವಮಾನ ಮಾಡಿ ಮನೆಯಿಂದ ಹೊರ ಹಾಕಲಾಯ್ತು ಎಂದು ಹೇಳಿರುವ ರಂಜನಾ ಅಂದಿನಿಂದ ನಾನು ನನ್ನ ತವರು ಮನೆಯಲ್ಲಿ ವಾಸ ಮಾಡುತ್ತಿದ್ದೇನೆ ಎಂದಿದ್ದಾರೆ.
ಈ ಹಿಂದೆ ಸುಪೌಲ್ನ ಕೌಟುಂಬಿಕ ನ್ಯಾಯಾಲಯ ಮತ್ತು ಮಹಿಳಾ ಆಯೋಗವನ್ನು ನಾನು ಸಂಪರ್ಕಿಸಿದ್ದೆ ಎಂದು ರಂಜನಾ ಹೇಳಿದ್ದು, ಉದಿತ್ ತಮ್ಮನ್ನು ಪತ್ನಿಯಾಗಿ ಸ್ವೀಕರಿಸಿ, ರಾಜಿ-ಸಂಧಾನ ಒಪ್ಪಂದವನ್ನೂ ಕೂಡ ಮಾಡಿಕೊಂಡಿದ್ದರು. ಆದರೆ, ತಮ್ಮ ಮಾತುಗಳಿಗೆ ಅವರು ಬದ್ದರಾಗಲಿಲ್ಲ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಾನು ನಿರಂತರವಾಗಿ ಅನಾರೋಗ್ಯಕ್ಕೀಡಾಗುತ್ತಿದ್ದೇನೆ ಎಂದು ಹೇಳಿರುವ ರಂಜನಾ, ನನಗೆ ಈಗ ಉದಿತ್ ನಾರಾಯಣ್ ಅವರ ಬೆಂಬಲ ಮತ್ತು ಸಹಾಯದ ಅವಶ್ಯಕತೆ ಇದೆ, ಆದರೆ.. ಅವರು ಮಾತ್ರ ಸಂಬಂಧ ಇಲ್ಲದಂತೆ ಇದ್ದಾರೆ ಎಂದು ಹೇಳಿದ್ದಾರೆ. ಇತ್ತೀಚಿಗೆ ಮತ್ತೆ ಹಳ್ಳಿಗೆ ಬಂದು ನೆರವಾಗುವ ಭರವಸೆ ನೀಡಿದರು ಆದರೆ ಅದು ಕೇವಲ ಭರವಸೆಯಾಗಿಯೇ ಉಳಿದಿದೆ ಎಂದಿದ್ದಾರೆ.
ಇನ್ನೂ ಇಷ್ಟು ವರ್ಷಗಳಾದ ನಂತರ ಈಗ ದೂರು ನೀಡುತ್ತಿರುವುದು ಯಾಕೆ..? ಇದರ ಹಿಂದಿನ ಉದ್ದೇಶವೇನು..? ಎನ್ನುವ ಪ್ರಶ್ನೆಗಳಿಗೆ ಕೂಡ ರಂಜನಾ ಉತ್ತರ ನೀಡಿದ್ದು ನನಗಾದ ವಂಚನೆಯ ಸಂಪೂರ್ಣ ವಿವರ ನನಗೆ ಗೊತ್ತಾಗಿದ್ದು ತೀರಾ ಇತ್ತೀಚೆಗಷ್ಟೇ ಎಂದು ಹೇಳಿದ್ದಾರೆ. 2025ರಲ್ಲಿಯೇ ಸುಪೌಲ್ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ದೂರು ಸಲ್ಲಿಸಲಾಗಿದ್ದು, ಈ ಹಿನ್ನೆಲೆ ಉದಿತ್ ನಾರಾಯಣ್ ಅವರು ಹಣಕಾಸಿನ ನೆರವು ನೀಡುತ್ತಿದ್ದರಾದರೂ ತನಗೆ ಬೇಕಾಗಿರುವುದು ಹಣವಲ್ಲ, ಬದಲಿಗೆ ತನಗಾದ ಅನ್ಯಾಯಕ್ಕೆ ನ್ಯಾಯ ಬೇಕು ಎಂದು ಹೇಳಿದ್ದಾರೆ.
''ಎನ್ಡಿಟಿವಿ'' ವರದಿಯ ಪ್ರಕಾರ, ರಂಜನಾ ಮಂಗಳವಾರ ತಮ್ಮ ವಕೀಲ ಕರುಣಾಕಾಂತ್ ಝಾ ಅವರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ಸಲ್ಲಿಸಿದ್ದು ತಮ್ಮ ದೂರಿನಲ್ಲಿ, ಉದಿತ್ ನಾರಾಯಣ್, ಅವರ ಇಬ್ಬರು ಸಹೋದರರಾದ ಸಂಜಯ್ ಕುಮಾರ್ ಝಾ ಮತ್ತು ಲಲಿತ್ ನಾರಾಯಣ್ ಝಾ ಅವರ ವಿರುದ್ಧ ರಂಜನಾ ದೂರು ನೀಡಿದ್ದಾರೆ. ಉದಿತ್ ನಾರಾಯನ್ ಎರಡನೇ ಪತ್ನಿ ದೀಪಾ ನಾರಾಯಣ್ ಕೂಡ ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುಪೌಲ್ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಅಂಜು ತಿವಾರಿ ಕೂಡ ದೂರು ದಾಖಲಾಗಿರುವ ವಿಚಾರ ಖಚಿತ ಪಡಿಸಿದ್ದು, ಗಂಭೀರ ಪ್ರಕರಣ ಆಗಿರುವುದರಿಂದ ಪ್ರಾಥಮಿಕ ತನಿಖೆ ಆರಂಭವಾಗಿದೆ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಉದಿತ್ ನಾರಾಯನ್ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ


Click it and Unblock the Notifications











