40 ಕೋಟಿ ಆಫರ್ ಎಡಗಾಲಲ್ಲಿ ಒದ್ದ ಸುನಿಲ್ ಶೆಟ್ಟಿ ; ಬಾಲಿವುಡ್ಗೆ ಮಾದರಿಯಾದ ಅಣ್ಣಾ
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು.ಈ ಕಾರಣಕ್ಕೆ ಸಮಾಜಕ್ಕೆ ಉಪಕಾರಿಯಾಗದ ಅನೇಕರು, ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ. ಯಾರಾದರೂ ಹಾಳಾಗಿ ಹೋಗಲಿ...
ನಾವು ನಮ್ಮ ಮನೆಯವರು ಚೆನ್ನಾಗಿದ್ದರೆ ಸಾಕು ಎಂದು ತಪ್ಪು ಸಂದೇಶವನ್ನ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಆದರೆ ಇವರ ಈ ಜಾಹೀರಾತುಗಳಿಂದ ಆಗುವ ಪರಿಣಾಮ ದೊಡ್ಡದು ಮತ್ತು ಗಾಢವಾದದ್ದು. ಯಾಕೆಂದರೆ ಸಿನಿಮಾ ತಾರೆಯರನ್ನ ದೇವರೆಂದು ಪೂಜಿಸುವವರ ಸಂಖ್ಯೆ ನಮ್ಮಲ್ಲಿ ತುಸು ಹೆಚ್ಚೇ ಇದೆ. ಇನ್ನೂ.. ತಮ್ಮ ನೆಚ್ಚಿನ ತಾರೆಯರ ಹಾವ-ಭಾವ ಅವರ ಜೀವನ ಶೈಲಿಯನ್ನ ಅನುಸರಿಸುವವರು ಕೂಡ ಇದ್ದಾರೆ.

ಆದರೆ ಇದ್ಯಾವುದನ್ನು ಅರಿಯದೇ ದಿನನಿತ್ಯ ಜನರನ್ನು ತಪ್ಪು ದಾರಿಗೆ ಎಳೆಯುವಂತಹ ಜಾಹೀರಾತಿನಲ್ಲಿ ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್, ಕಿಚ್ಚ ಸುದೀಪ್, ಸೇರಿ ಚಿತ್ರರಂಗದ ಹಲವಾರು ತಾರೆಯರು ಪಾನ್ ಮಸಾಲಾದಿಂದ ಹಿಡಿದು ರಮ್ಮಿ ಸರ್ಕಲ್ನವರೆಗೆ ಮನುಷ್ಯರನ್ನು ದಾರಿ ತಪ್ಪಿಸುವ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ಪನ್ನಗಳಿಗೆ ರಾಯಭಾರಿಯಾಗಿ ಭರ್ಜರಿ ಪ್ರಚಾರವನ್ನೂ ಮಾಡಿದ್ದಾರೆ.
ಹಾಗಂಥ ಎಲ್ಲರೂ ಈ ಸಾಲಿಗೆ ಸೇರುವುದಿಲ್ಲ. ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಈ ಕಾಲದಲ್ಲಿ ಕೆಲವರಲ್ಲಿ ಸಾಮಾಜಿಕ ಪ್ರಜ್ಞೆ.. ಮನುಜ ಸೂಕ್ಷ್ಮತೆ..ಮತ್ತು ಸಂವೇದನೆ ಜೀವಂತವಾಗಿರುತ್ತೆ. ಉದಾಹರಣೆಗೆ ಸುನೀಲ್ ಶೆಟ್ಟಿ.
ಹೌದು, ಸುನಿಲ್ ಶೆಟ್ಟಿ .. ಬಾಲಿವುಡ್ನ ಸ್ಟಾರ್. 1992ರಲ್ಲಿ ''ಬಲ್ವಾನ್'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸುನಿಲ್ ಶೆಟ್ಟಿ ಇಂದು ಕೋಟ್ಯಂತರ ಆಸ್ತಿಯ ಒಡೆಯ. ಒಂದು ವರದಿಯ ಪ್ರಕಾರ ಇವರ ತಿಂಗಳ ಸಂಪಾದನೆಯೇ 50 ಲಕ್ಷದ ಮೇಲಿದೆ.
ಮುಂಬೈನಲ್ಲಿ 20 ಕೋಟಿಯ ಭವ್ಯವಾದ ಬಂಗಲೆಯಲ್ಲಿ ವಾಸ ಮಾಡುವ ಸುನಿಲ್ ಶೆಟ್ಟಿ ಖಂಡಾಲಾದಲ್ಲಿ ಜಹಾನ್ ಎಂಬ ಹೆಸರಿನ ಫಾರ್ಮೌಸ್ನ ಕೂಡ ಹೊಂದಿದ್ದಾರೆ. ಇನ್ನು ಕೇವಲ ಸಿನಿಮಾ ಮಾತ್ರವಲ್ಲದೇ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೂಡ ಹಣ ಹೂಡಿರುವ ಸುನಿಲ್ ಶೆಟ್ಟಿ ಎಸ್2 ರಿಯಲ್ಟಿ & ಡೆವಲಪರ್ಸ್ ಎಂಬ ಸಂಸ್ಥೆಯ ನಿರ್ದೇಶಕ ಕೂಡ ಹೌದು. ಇಷ್ಟೇ ಅಲ್ಲ ಮುಂಬೈನ ಹಲವಾರು ಕಡೆ ಇವರ ಒಡೆತನದ ಬಟ್ಟೆ ಅಂಗಡಿಗಳಿವೆ. ರೆಸ್ಟೋರೆಂಟ್ಗಳಿವೆ.

ತಮ್ಮ ಮೂರುವರೆ ದಶಕದ ವೃತ್ತಿ ಬದುಕಿನಲ್ಲಿ ಹತ್ತು ಹಲವು ಪಾತ್ರಗಳನ್ನು ಸುನೀಲ್ ಶೆಟ್ಟಿ ಮಾಡಿದ್ದಾರೆ. ''ಮೊಹರಾ''.. ''ದಿಲ್ವಾಲೆ''.. ''ಗೋಪಿ ಕಿಶನ್''.. ''ದಢ್ಕನ್''.. ''ಕೃಷ್ಣಾ.. ''ಹೇರಾ ಪೇರಿ''.. ''ಬಾರ್ಡರ್''.. ಹೀಗೆ ಹಲವಾರು ಅವಿಸ್ಮರಣಿಯ ಚಿತ್ರಗಳನ್ನು ನೀಡಿದ್ದಾರೆ.
ಇಂಥಾ ಸುನೀಲ್ ಶೆಟ್ಟಿ ನಾನು ಸಾವನ್ನು ಮಾರುವುದಿಲ್ಲ ಎಂದು ಹೇಳಿದ್ದಾರೆ. ದುಡ್ಡಿಗಿಂತ ನನಗೆ ನನ್ನ ಮೌಲ್ಯ ಮುಖ್ಯ ಎಂದು ಹೇಳಿದ್ದಾರೆ. ಈ ಕುರಿತು ''ಪೀಪಿಂಗ್ ಮೂನ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸುನಿಲ್ ಶೆಟ್ಟಿ ಹಿಂದೊಮ್ಮೆ ಕೆಲಸ ಇಲ್ಲದೇ ತಾವು ಖಾಲಿ ಕುಂತಿದ್ದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಆ ಸಮಯದಲ್ಲಿ ತಂಬಾಕು ಸಂಬಂಧಿತ ಬ್ರ್ಯಾಂಡ್ನ ಜಾಹೀರಾತು ನನ್ನ ಬಳಿ ಬಂದಿತ್ತು ಎಂದು ಹೇಳಿರುವ ಸುನಿಲ್ ಶೆಟ್ಟಿ ಆ ಜಾಹೀರಾತಿಗಾಗಿ ಅವರು ನನಗೆ 40 ಕೋಟಿ ಹಣ ಕೊಡಲು ಸಿದ್ಧರಿದ್ದರು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ನನಗೆ ಹಣದ ಅವಶ್ಯಕತೆ ಇತ್ತು, ಹಾಗಂಥ ನನ್ನನ್ನೂ ನಾನು ಮಾರಿಕೊಳ್ಳಲಾರೆ ಎಂದು ಹೇಳಿರುವ ಸುನಿಲ್ ಶೆಟ್ಟಿ ನಾನು ಸಾರಾಸಗಟವಾಗಿ ಆ ಆಫರ್ನ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.
ನಿಮಗೇನು ಅನ್ಸುತ್ತೆ ನಾನು ನಿಮ್ಮ ಆಮಿಷಕ್ಕೆ ಬಲಿಯಾಗುತ್ತೀನಾ..? ಎಂದು ಪ್ರಶ್ನೆಯನ್ನು ನಾನು ಅವರಿಗೆ ಕೇಳಿದ್ದೇ ಎಂದಿರುವ ಸುನೀಲ್ ಶೆಟ್ಟಿ ನಾನು ಯಾವತ್ತು ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ನನ್ನ ಮಕ್ಕಳಾದ ಅಹಾನ್ ಮತ್ತು ಅತಿಯಾಗೆ ನಾನು ಯಾವತ್ತು ಕಳಂಕ ತರಲಾರೆ, ನನ್ನ ಮಕ್ಕಳಿಗೆ ಮಾದರಿ ವ್ಯಕ್ತಿಯಾಗುವುದೇ ನನ್ನ ಉದ್ದೇಶ ಮತ್ತು ಗುರಿ ಎಂದು ಹೇಳಿದ್ದಾರೆ. ಅದೇ ಕೊನೆ ಆ ನಂತರ ಮತ್ತೆ ಯಾರು ಪಾನ್ ಮಸಾಲಾ, ಗುಟ್ಕಾ ಜಾಹೀರಾತಿನ ಆಫರ್ ತೆಗೆದುಕೊಂಡು ನನ್ನ ಬಳಿ ಬರಲಿಲ್ಲ, ಅವರಿಗೆ ಆ ಧೈರ್ಯ ಇಲ್ಲ ಎಂದು ಕೂಡ ಹೇಳಿದ್ದಾರೆ.
ಇದೇ ಸಮಯದಲ್ಲಿ ತಮ್ಮ ಕಷ್ಟದ ದಿನಗಳನ್ನು ಕೂಡ ನೆನೆದಿರುವ ಸುನಿಲ್ ಶೆಟ್ಟಿ 2017ರಲ್ಲಿ ನನ್ನ ತಂದೆ ತೀರಿಕೊಂಡಾಗ ನಾನು ಮಾನಸಿಕ ಆಘಾತಕ್ಕೊಳಗಾಗಿದ್ದೇ, ಚಿತ್ರರಂಗದಿಂದ ದೂರವಾದೆ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ನನಗೆ ಅವಕಾಶಗಳು ಇಲ್ಲದಿದ್ದರೂ.. ಚಿತ್ರರಂಗ ನನ್ನನ್ನೂ ದೂರ ಮಾಡಿದ್ದರೂ.. ಮಾಧ್ಯಮದವರು ನನ್ನನ್ನು ಜೀವಂತವಾಗಿ ಇಟ್ಟಿದ್ದರು ಎಂದು ಹೇಳಿದ್ದಾರೆ. ಕಷ್ಟದ ಸಮಯದಲ್ಲಿ ಕೂಡ ಅಭಿಮಾನಿಗಳು ಮತ್ತು ನನ್ನ ಹಿತೈಷಿಗಳು ನನ್ನ ಕೈ ಬಿಡಲಿಲ್ಲ ಎಂದು ಭಾವುಕರಾಗಿದ್ದಾರೆ. ಜನರು ತಮಗೆ ನೀಡುವ ಗೌರವ ಮತ್ತು ಪ್ರೀತಿ ಹಣಕ್ಕಿಂತ ಮೀಗಿಲಾದದ್ದು ಎಂದು ಕೂಡ ಹೇಳಿದ್ದಾರೆ.


Click it and Unblock the Notifications











