ವರುಣ್ ಧವನ್ ನಂಬ್ಕೊಂಡು 27 ಕೋಟಿ ಕಳ್ಕೊಂಡೆ, ಒಂದು ಫೋನ್ ಮಾಡಿ ವಿಚಾರಿಸಲಿಲ್ಲ ; ಅಪ್ಪ-ಮಗನ ವಿರುದ್ದ ಗುಡುಗಿದ ರಕುಲ್ ಪ್ರೀತ್ ಮಾವ
ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ. ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಬಡ್ಡಿ ಕಟ್ಟದಿದ್ದರೆ ಯಾರೂ ಬಿಡೋದಿಲ್ಲ.
ಕ್ರೆಡಿಟ್ಟು, ಇಂಟರೆಸ್ಟುಗಳ ವಿಚಾರವಿರಲಿ, ಇಷ್ಟೆಲ್ಲಾ ಖರ್ಚು ಮಾಡಿ ನಮ್ಮ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ. ಎಲ್ಲೆಲ್ಲಿಂದಾ ತಂದು ಸುರಿದಿದ್ದಾರೋ.? ಅವರ ಕಷ್ಟ ಏನು ಅಂತಾ ಯಾವ ಹೀರೋ-ಹೀರೋಯಿನ್ ಕೂಡಾ ಕೇಳುವುದಿಲ್ಲ. ಕೊರೋನಾನಾದರೂ ಇರಲಿ, ಕಾಲರಾವಾದರೂ ಬರಲಿ, ದುಡ್ಡು ಮಡಗಿದ ಮೇಲೆಯೇ ಸಿನಿಮಾ ಅನ್ನುವ ಮನಸ್ಥಿತಿಯೇ ಬಹುತೇಕರದ್ದು.

ಹೀಗಾಗಿ ಕಷ್ಟಾನೋ-ಸುಖಾನೋ ಸ್ಟಾರ್ಗಳು ಮುಂದಿಡುವ ಬೇಡಿಕೆಯನ್ನೆಲ್ಲ ಪೂರೈಸಿ ಸಿನಿಮಾ ಮಾಡಲು ಅನೇಕ ನಿರ್ಮಾಪಕರು ಮುಂದಾಗುತ್ತಾರೆ. ಸಿನಿಮಾ ನಿರ್ಮಾಣವನ್ನು ಕೂಡ ಮಾಡುತ್ತಾರೆ.
ಆದರೆ ಹೀಗೆ ನಿರ್ಮಾಣವಾದ ಸಿನಿಮಾ ಸೋತ ಮೇಲಾದರೂ ನಿರ್ಮಾಪಕರ ಕಷ್ಟವನ್ನ ಈ ಸ್ಟಾರ್ ಗಳು ಕೇಳ್ತಾರಾ ಅಂದರೆ ಅದೂ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ವರುಣ್ ಧವನ್ ವಿರುದ್ಧ ಬಾಲಿವುಡ್ನ ಖ್ಯಾತ ನಿರ್ಮಾಪಕ ಮತ್ತು ರಕುಲ್ ಪ್ರೀತ್ ಸಿಂಗ್ ಅವರ ಮಾವ ವಶು ಭಗ್ನಾನಿ ಕಿಡಿ ಕಾರಿದ್ದಾರೆ.
ಹೌದು, ವರುಣ್ ಧವನ್ ಸದ್ಯ ಚಿತ್ರವೊಂದನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು ''ಹೈ ಜವಾನಿ ತೋ ಇಷ್ಕ್ ಹೋನಾ ಹೈ''. ವರುಣ್ ಧವನ್ ತಂದೆ ಮತ್ತು ಬಾಲಿವುಡ್ನ ಹಿರಿಯ ನಿರ್ದೇಶಕ ಡೇವಿಡ್ ಧವನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಇನ್ನೇನು ಈ ಜೂನ್ 4ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಆದರೆ ಹೀಗೆ ಬಿಡುಗಡೆಯಾಗುತ್ತಿರುವ ಚಿತ್ರ ಈಗ ವಿವಾದಕ್ಕೆ ಸಿಲುಕಿದೆ. ಇದಕ್ಕೆ ಕಾರಣ ಚಿತ್ರದ ಹಾಡು. ಡೇವಿಡ್ ಧವನ್ ತಮ್ಮ 1999ರ ಬ್ಲಾಕ್ ಬಸ್ಟರ್ ಸಿನಿಮಾ ''ಬಿವಿ ನಂ 1'' ಚಿತ್ರದ ''ಚುನರಿ ಚುನರಿ'' ಹಾಡನ್ನು ತಮ್ಮ ಈ ಹೊಸ ಚಿತ್ರದಲ್ಲಿ ಬಳಿಸಿಕೊಂಡಿದ್ದಾರೆ. ಡೇವಿಡ್ ಧವನ್ ಅವರ ಈ ನಡೆಯಿಂದ ''ಬಿವಿ ನಂ 1'' ಚಿತ್ರಕ್ಕೆ ಹಣದ ಹೂಡಿದ್ದ ನಿರ್ಮಾಪಕ ವಶು ಭಗ್ನಾನಿ ಅವರ ಪಿತ್ತ ನೆತ್ತಿಗೇರಿದೆ.

ಹೀಗಾಗಿಯೇ ಪತ್ರಿಕಾಗೋಷ್ಠಿಯನ್ನು ಮಾಡಿರುವ ವಶು ಭಗ್ನಾನಿ, ತಂದೆ ಮತ್ತು ಮಗನ ವಿರುದ್ಧ ಹರಿಹಾಯ್ದಿದ್ದಾರೆ. ಈ ಕುರಿತು ತಮ್ಮ ಅಸಮಾಧಾನ ಹೊರ ಹಾಕಿರುವ ವಶು ಭಗ್ನಾನಿ, ನಾನು ವರುಣ್ ಧವನ್ ಮತ್ತು ಡೇವಿಡ್ ಧವನ್ ನಂಬಿಕೊಂಡು ''ಕೂಲಿ ನಂ 1'' ಚಿತ್ರವನ್ನು ಮತ್ತೆ ನಿರ್ಮಾಣ ಮಾಡಿದೆ. ಆದರೆ, ಆ ಚಿತ್ರದಲ್ಲಿ 27 ಕೋಟಿ ಹಣ ಕಳ್ಕೊಂಡೆ ಎಂದು ಹೇಳಿದ್ದಾರೆ.
2020ರಲ್ಲಿ ಬಂದ ''ಕೂಲಿ ನಂ 1'' ಚಿತ್ರಕ್ಕೆ ನಾನು ಹೆಸರಿಗೆ ಮಾತ್ರ ನಿರ್ಮಾಪಕನಾಗಿದ್ದೆ ಎಂದು ಹೇಳಿರುವ ವಶು ಭಗ್ನಾನಿ, ಚಿತ್ರದ ಸಂಪೂರ್ಣ ಖರ್ಚು-ವೆಚ್ಚದ ಲೆಕ್ಕ ಎಲ್ಲವೂ ಹಾಕಿದ್ದು ನೋಡಿಕೊಂಡಿದ್ದು ಡೇವಿಡ್ ಧವನ್ ಎಂದು ಹೇಳಿದ್ದಾರೆ. ಇದಲ್ಲದೇ ಆ ಚಿತ್ರಕ್ಕೆ ನಾನು 70 ಕೋಟಿಯನ್ನು ಅವರಿಗೆ ಸಂಭಾವನೆಯನ್ನಾಗಿ ನೀಡಿದ್ದೇ, ಅದು ಅವರ ಯೋಗ್ಯತೆಗೆ ಮೀರಿದ ಹಣವಾಗಿತ್ತು ಎಂದು ಆಕ್ರೋಶ ಹೊರ ಹಾಕಿದ್ದಾರೆ.
''ಕೂಲಿ ನಂ 1'' ಚಿತ್ರದಲ್ಲಿ 27 ಕೋಟಿ ಕಳೆದುಕೊಂಡರು ಕೂಡ, ಆ ಚಿತ್ರದ ನಾಯಕ ವರುಣ್ ಧವನ್ ಒಂದೇ ಒಂದು ದಿನ ನನಗೆ ಕರೆ ಮಾಡಿ ನನ್ನ ಯೋಗ ಕ್ಷೇಮ ವಿಚಾರಿಸಲಿಲ್ಲ, ನನ್ನಿಂದ ನಿರ್ಮಾಪಕರಿಗೆ ನಷ್ಟವಾಗಿದೆ ಅವರು ಹೇಗೆ ಇದನ್ನು ನಿಭಾಯಿಸುತ್ತಾರೆ ಎನ್ನುವ ಯೋಚನೆ ಕೂಡ ಮಾಡಲಿಲ್ಲ ಎಂದು ತಮ್ಮ ಬೇಸರವನ್ನು ವಶು ಭಗ್ನಾನಿ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ''ಕೂಲಿ ನಂ 1'' ಸೋತ ಹಿನ್ನೆಲೆ ನಮ್ಮದೇ ''ಬಿವಿ ನಂ 1'' ಚಿತ್ರವನ್ನು ರಿಮೇಕ್ ಮಾಡುವಂತೆ ಡೇವಿಡ್ ಧವನ್ ಅವರಿಗೆ ಹೇಳಿದೆ, ಆಗ ನಿಮಗೆ ಆಗಿರುವ ನಷ್ಟವನ್ನು ಭವಿಷ್ಯದಲ್ಲಿ ನಾವು ಸರಿಪಡಿಸುತ್ತೇವೆ. ''ಬಿವಿ ನಂ 1'' ಆರಂಭಿಸೋಣ" ಎಂದು ಡೇವಿಡ್ ಧವನ್ ನನಗೆ ಭರವಸೆ ನೀಡಿದ್ದರು ಎಂದು ಹೇಳಿರುವ ವಶು ಭಗ್ನಾನಿ ಆರು ತಿಂಗಳು ಆ ಚಿತ್ರಕ್ಕೆ ಕೆಲಸ ಮಾಡಲಾಯ್ತು, ಆದರೆ ಒಂದು ದಿನ ಇದ್ದಕ್ಕಿದ್ದಂತೆ ಬಂದು ಚಿತ್ರಕಥೆ ರೆಡಿಯಾಗಿಲ್ಲ ಅಂದ್ಬಿಟ್ಟರು ಎಂದಿದ್ದಾರೆ. ಸೃಜನಾತ್ಮಕ ಕೆಲಸವಾದ ಹಿನ್ನೆಲೆ ನಾನು ಆತುರ ಪಡುವುದು ಬೇಡ ಎಂದು ಒತ್ತಡ ಹೇರದೆ ಸುಮ್ಮನಾದೆ ಎಂದಿದ್ದಾರೆ.
ಮುಂದುವರೆದು ಮೂರು ತಿಂಗಳ ನಂತರ, ರಮೇಶ್ ತೌರಾನಿ ಮತ್ತು ಡೇವಿಡ್ ಧವನ್ ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ ಎಂದು ನನಗೆ ಗೊತ್ತಾಯ್ತು, ನನಗೆ ತುಂಬಾ ಬೇಸರವಾಯಿತು ಎಂದು ಹೇಳಿರುವ ವಶು ಭಗ್ನಾನಿ, ಈಗ ನೋಡಿದರೆ ನನ್ನ ಚಿತ್ರದ ಹಾಡನ್ನು ನನ್ನ ಒಪ್ಪಿಗೆ ಇಲ್ಲದೇ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ನಾನು ಹಾಡು ನೋಡಿದ ಕೂಡಲೇ ಡೇವಿಡ್ ಧವನ್ಗೆ ಕರೆ ಮಾಡಿ, ನೀವು ಇದನ್ನು ಹೇಗೆ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದೆ ಎಂದಿದ್ದಾರೆ.
"ಬಿವಿ ನಂ 1'' ಚಿತ್ರದ ಆಡಿಯೋ ಹಕ್ಕುಗಳನ್ನು ಟಿಪ್ಸ್ಗೆ ಮಾರಾಟ ಮಾಡಲಾಗಿತ್ತು ಎಂದು ಹೇಳಿರುವ ವಶು ಭಗ್ನಾನಿ, ಡೇವಿಡ್ ಧವನ್ ನಮ್ಮ ಚಿತ್ರದ ಹಾಡುಗಳನ್ನು ತಮ್ಮ ಮಗನ ಚಿತ್ರದಲ್ಲಿ, ಅದರಲ್ಲಿಯೂ ರಮೇಶ್ ತೌರಾನಿ ನಿರ್ಮಾಣದಲ್ಲಿ ಹೇಗೆ ಬಳಸಲು ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ.
ಉದ್ಯಮದಲ್ಲಿ ನೈತಿಕತೆ ಇರಬೇಕು ಎಂದು ಹೇಳಿರುವ ವಶು ಭಗ್ನಾನಿ, ರಮೇಶ್ ತೌರಾನಿ ನಿಮಗೆ ಹಣ ನೀಡಿರಬಹುದು, ಆದರೆ ಕನಿಷ್ಠಪಕ್ಷ ಅವರು ಕರೆ ಮಾಡಿ, ನಾನು ನನ್ನ ಮಗನ ಚಿತ್ರಕ್ಕಾಗಿ ಅದೇ ಹಾಡನ್ನು ಬಳಸುತ್ತಿದ್ದೇನೆ. ನಿಮಗೆ ಆಕ್ಷೇಪಣೆ ಇಲ್ಲ ಎಂದು ಆಶಿಸುತ್ತೇನೆ. ದಯವಿಟ್ಟು ಬೆಂಬಲಿಸಿ ಎಂದು ನನಗೆ ಕೇಳಬೇಕಿತ್ತು ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.


Click it and Unblock the Notifications