ಅಮೀರ್ ಖಾನ್ ಸಿನಿಮಾದಿಂದ ಹೊರಬಂದಿದ್ದಕ್ಕೆ ನಿಜ ಕಾರಣ ಕೊಟ್ಟ ವಿಜಯ್ ಸೇತುಪತಿ
ದಕ್ಷಿಣ ಭಾರತದ ಅತ್ಯಂತ ಪ್ರತಿಭಾವಂತ ನಟ ವಿಜಯ್ ಸೇತುಪತಿ 'ಮುಂಬೈಕರ್' ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದಾರೆ. ಆದರೆ ಇದು ಅವರ ಬಾಲಿವುಡ್ನ ಮೊದಲ ಸಿನಿಮಾ ಆಗಿರಲಿಲ್ಲ. ಅಮೀರ್ ಖಾನ್ ಜೊತೆಗೆ ನಟಿಸುವ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡುವ ಅವಕಾಶ ವಿಜಯ್ ಗೆ ಸಿಕ್ಕಿತ್ತು. ಆದರೆ ಆ ಸಿನಿಮಾದಿಂದ ಹೊರಬಂದರು ವಿಜಯ್ ಸೇತುಪತಿ.
ಅಮೀರ್ ಖಾನ್ ನಟಿಸುತ್ತಿರುವ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ಅಮೀರ್ ಖಾನ್ ಗೆಳೆಯನ ಪಾತ್ರದಲ್ಲಿ ನಟಿಸುವ ಅವಕಾಶ ವಿಜಯ್ ಸೇತುಪತಿಗೆ ದೊರಕಿತ್ತು. ಆದರೆ ವಿಜಯ್ ಸೇತುಪತಿ ಆ ಸಿನಿಮಾದಿಂದ ಹೊರಬಂದರು.
ವಿಜಯ್ ಸೇತುಪತಿಗೆ ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಹೇಳಲಾಗಿತ್ತು, ಆದರೆ ವಿಜಯ್ ಗೆ ಅದು ಸಾಧ್ಯವಾಗಲಿಲ್ಲ, ಹಾಗಾಗಿ ಅವರನ್ನು ಸಿನಿಮಾ ದಿಂದ ಕೈಬಿಡಲಾಯಿತು ಎನ್ನುವ ಸುದ್ದಿ ಹರಿದಾಡುತ್ತಿತ್ತು, ಆದರೆ ನಿಜ ಅದಲ್ಲ ಎಂದಿರುವ ವಿಜಯ್ ಸೇತುಪತಿ, 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಿಂದ ತಾವೇಕೆ ಹೊರಬಂದದ್ದೆಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಿಜಯ್ ಸೇತುಪತಿಗೆ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಕತೆ ಹೇಳಲು ಸ್ವತಃ ಅಮೀರ್ ಖಾನ್ ತಮಿಳುನಾಡಿಗೆ ಬಂದಿದ್ದರಂತೆ, ಅದೂ ಸಹ ವಿಜಯ್ ಚಿತ್ರೀಕರಣದಲ್ಲಿದ್ದ ಗ್ರಾಮೀಣ ಪ್ರದೇಶಕ್ಕೆ ಬಂದು ಎರಡು ದಿನ ಅಲ್ಲಿಯೇ ಇದ್ದು ವಿಜಯ್ ಸೇತುಪತಿಗೆ ಕತೆ ಹೇಳಿದ್ದರಂತೆ ಅಮೀರ್ ಖಾಣ್ ಹಾಗೂ ನಿರ್ದೇಶಕ ಅದ್ವೈತ್ ಚಂದನ್.

'ಕತೆ ಹೇಳಲು ನನ್ನನ್ನು ಹುಡುಕಿಕೊಂಡು ಹಳ್ಳಿಗೆ ಬಂದಿದ್ದರು ಅಮೀರ್ ಖಾನ್'
'ಅಮೀರ್ ಖಾನ್ ಗೆ ಸಿನಿಮಾ ಎಂದರೆ ಬಹಳಾ ಪ್ರೀತಿ. ಅವರು ಅಲ್ಲಿಂದ ನನಗೆ ಕತೆ ಹೇಳಲು ಬಂದಿದ್ದರು. ಅವರು ಅದ್ಭುತವಾಗಿ ಕತೆ ಹೇಳುತ್ತಾರೆ. ಅವರಿಗೆ ಸಿನಿಮಾದ ಬಗ್ಗೆ ಇರುವ ಪ್ರೀತಿ, ಶ್ರದ್ಧೆ ಕಂಡು ನನಗೆ ಆಶ್ಚರ್ಯವಾಯಿತು' ಎಂದಿದ್ದಾರೆ ವಿಜಯ್ ಸೇತುಪತಿ.

ಸಿನಿಮಾದಿಂದ ಹೊರಬರಲು ಕೊರೊನಾ ಕಾರಣ: ವಿಜಯ್
'ಸಿನಿಮಾದಿಂದ ಹೊರಬರಲು ಕಾರಣ ಕೊರೊನಾ. ನನಗೆ ಲಾಲ್ ಸಿಂಗ್ ಛಡ್ಡಾ ಸಿನಿಮಾದಲ್ಲಿ ನಟಿಸುವ ಆಸೆ ಬಹಳವಾಗಿ ಇತ್ತು. ಆದರೆ ಕೊರೊನಾ ದಿಂದ ಅದು ಸಾಧ್ಯವಾಗಲಿಲ್ಲ. ತೆಲುಗಿನ ಐದು, ತಮಿಳಿನ ಆರು ಸಿನಿಮಾಗಳು ಒಪ್ಪಿಕೊಂಡಿದ್ದೆ ಲಾಕ್ಡೌನ್ ಕಾರಣದಿಂದ ಅವನ್ನು ಪೂರ್ಣಗೊಳಿಸಲಾಗಿರಲಿಲ್ಲ, ಹೀಗಾಗಿ ಲಾಲ್ ಸಿಂಗ್ ಛಡ್ಡಾ ಸಿನಿಮಾಕ್ಕೆ ಸಮಯ ಹೊಂದಿಸಲು ಆಗಲಿಲ್ಲ' ಎಂದಿದ್ದಾರೆ ವಿಜಯ್ ಸೇತುಪತಿ.

ನನ್ನ ದೇಹತೂಕ ಸರಿಯಾಗಿದೆ: ವಿಜಯ್ ಸೇತುಪತಿ
'ನನ್ನ ದೇಹತೂಕ ಕಡಿಮೆ ಮಾಡಿಕೊಳ್ಳಲಿಲ್ಲ, ಅದಕ್ಕೆ ಸಿನಿಮಾದಿಂದ ಹೊರಗೆ ಬಂದೆ ಎಂಬುದು ಸುಳ್ಳು. ನನ್ನ ದೇಹತೂಕ ನನಗೆ ಸರಿಯಾಗಿದೆ. ನಾನು ನನ್ನ ತೂಕದ ಬಗ್ಗೆ ಕಂಫರ್ಟ್ ಆಗಿದ್ದೇನೆ. ನನ್ನ ದೇಹಕ್ಕೆ ಮನಸ್ಸು, ಮನಸ್ಸಿಗೆ ತಕ್ಕಂತೆ ದೇಹವಿದೆ' ಎಂದಿದ್ದಾರೆ ವಿಜಯ್ ಸೇತುಪತಿ.
Recommended Video

ಫಾರೆಸ್ಟ್ ಗಂಫ್ ಸಿನಿಮಾದ ಹಿಂದಿ ರೂಪಾಂತರ
'ಲಾಲ್ ಸಿಂಗ್ ಛಡ್ಡಾ' ಸಿನಿಮಾವು ಇಂಗ್ಲಿಷ್ನ 'ಫಾರೆಸ್ಟ್ ಗಂಫ್' ಸಿನಿಮಾದ ರೀಮೇಕ್. ಸಿನಿಮಾದಲ್ಲಿ ಕರೀನಾ ಕಪೂರ್ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಚಿತ್ರಕತೆ ಬರೆದಿರುವುದು ನಟ ಅತುಲ್ ಕುಲಕರ್ಣಿ, ಸಂಗೀತ ನೀಡಿರುವುದು ಪ್ರೀತಂ.


Click it and Unblock the Notifications










