ನಿತೇಶ್ ತಿವಾರಿ 'ರಾಮಾಯಣ'ದಲ್ಲಿ ಯಶ್ ಸಹೋದರನಾಗಿ ನಟಿಸ್ತಾರಾ ವಿಜಯ್ ಸೇತುಪತಿ?
ಕಳೆದ ಬಾರಿ ರಾಮಾಯಣವನ್ನು ತೆರೆ ಮೇಲೆ ತಂದು ಜನರಿಂದ ಸಕತ್ ಆಗಿ ಉಗಿಸಿಕೊಂಡಿದ್ದ ಬಾಲಿವುಡ್ ಈ ಬಾರಿ ಆ ತಪ್ಪನ್ನು ಮಾಡದಂತೆ ಇರಲು ಹಲವು ಮುಂಜಾಗ್ರತೆ ತೆಗೆದುಕೊಳ್ಳುತ್ತಿದೆ. ಅದರಲ್ಲೂ ಪಾತ್ರಗಳ ಆಯ್ಕೆಯಲ್ಲಿ ಹೆಚ್ಚು ಸಮಯ ಮೀಸಲಿಡುತ್ತಿದೆ. ಈಗಾಗಲೇ ರಾಮ, ಸೀರೆ, ರಾವಣನ ಪಾತ್ರಕ್ಕೆ ಘಟಾನುಘಟಿಗಳು ಆಯ್ಕೆಯಾಗಿದ್ದು, ಈಗ ವಿಭೀಷಣನ ಪಾತ್ರಕ್ಕೆ ಮತ್ತೊಬ್ಬ ಸೌತ್ ಸ್ಟಾರ್ಗೆ ನಿತೇಶ್ ತಿವಾರಿ ಗಾಳ ಹಾಕುತ್ತಿದ್ದಾರೆ.
ನಿತೇಶ್ ತಿವಾರಿಯವರ 'ರಾಮಾಯಣ'ಕ್ಕೆ ರಣಬೀರ್ ಕಪೂರ್ ಭಗವಾನ್ ರಾಮನಾಗಿ ನಟಿಸಿದ್ದರೆ, ಸೀತಾದೇವಿ ಪಾತ್ರಕ್ಕೆ ಸಾಯಿ ಪಲ್ಲವಿ ಮತ್ತು ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಆಯ್ಕೆ ಮಾಡಿದ್ದಾರೆ. ಭಗವಾನ್ ಹನುಮಾನ್ ಪಾತ್ರ ಮಾಡಲು ಸನ್ನಿ ಡಿಯೋಲ್ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯಿದೆ. ಇದರ ಬೆನ್ನಲ್ಲೆ ರಾವಣನ ಸಹೋದರನ ಪಾತ್ರದಲ್ಲಿ ನಟ ನಟಿಸಲು ವಿಜಯ್ ಸೇತುಪತಿ ಅವರ ಜೊತೆಗೆ ಮಾತುಕತೆ ನಡೆಯುತ್ತಿದೆ.

ವಿಭೀಷಣನ ಪಾತ್ರದಲ್ಲಿ ನಟ ವಿಜಯ್ ಸೇತುಪತಿ
ಮೂಲಗಳ ಪ್ರಕಾರ, ರಾಮಾಯಣದಲ್ಲಿ ರಾವಣನ ಸಹೋದರ ವಿಭೀಷಣನ ಪಾತ್ರವನ್ನು ಮಾಡಲು ನಿರ್ದೇಶಕ ನಿತೇಶ್ ತಿವಾರಿ ಅವರು ವಿಜಯ್ ಸೇತುಪತಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ರಾಮಾಯಣದಲ್ಲಿ ದಕ್ಷಿಣದ ಮತ್ತೋಬ್ಬ ಸ್ಟಾರ್ ನಟ ಕಾಣಿಸಿಕೊಳ್ಳಲಿದ್ದಾರೆ.
"ನಿತೇಶ್ ತಿವಾರಿ ಅವರು ಇತ್ತೀಚೆಗೆ ವಿಜಯ್ ಸೇತುಪತಿ ಅವರನ್ನು ಭೇಟಿ ಮಾಡಿದ್ದಾರೆ. ಸ್ಕ್ರಿಪ್ಟ್ ಮತ್ತು ತಾವು ಸೃಷ್ಠಿ ಮಾಡಲು ಹೊರಟ ರಾಮಾಯಣವನ್ನು ಅವರ ಮುಂದಿಟ್ಟಿದ್ದಾರೆ. ವಿಜಯ್ ಸೇತುಪತಿ ನಿರೂಪಣೆ ಮತ್ತು ದೃಶ್ಯಗಳಿಂದ ಮಾರುಹೋಗಿದ್ದು, ಚಿತ್ರದಲ್ಲಿ ಆಸಕ್ತಿಯನ್ನು ತೋರಿಸಿದ್ದಾರೆ" ಎಂದು ಮೂಲಗಳನ್ನು ಉಲ್ಲೇಖಿಸಿ ಪಿಂಕ್ವಿಲ್ಲಾ ವರದಿ ಮಾಡಿದೆ.

ವಿಜಯ್ ಸೇತುಪತಿ ಅವರು ರಾಮಾಯಣದ ತಂಡದೊಂದಿಗೆ ಲಾಜಿಸ್ಟಿಕ್ಸ್ ಮತ್ತು ಹಣಕಾಸುಗಳನ್ನು ಲೆಕ್ಕಾಚಾರ ಮಾಡುತ್ತಿರುವುದರಿಂದ ಇನ್ನೂ ಪ್ರಾಜೆಕ್ಟ್ಗೆ ಸಹಿ ಹಾಕಿಲ್ಲ. ಆಸಕ್ತಿ ತೋರಿಸಿರುವ ಕಾರಣ ಅವರು ರಾಮಾಯಣದಲ್ಲಿ ನಟ ಯಶ್ ಸಹೋದರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಖಚಿತವಾಗಿದೆ.
ನಿತೀಶ್ ತಿವಾರಿ ರಾಮಾಯಣ
ರಾಮಾಯಣದ ಕುರಿತು ಮಾತನಾಡುವುದಾದರೆ, ಈ ಚಿತ್ರವು ಮಾರ್ಚ್ 2024 ರಲ್ಲಿ ಪ್ರಾರಂಭವಾಗಲಿದೆ. ನಟ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದು, ನಟ ಯಶ್ ರಾವಣನ ಪಾತ್ರ ಮಾಡಲಿದ್ದಾರೆ. ನಟಿ ಲಾರಾದತ್ತ ಕೈಕೆಯಿ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರ ಭಾಗವನ್ನು ಮೇ ಅಂತ್ಯದವರೆಗೆ ಚಿತ್ರೀಕರಿಸಲಾಗುತ್ತದೆ.
"ರಾವಣನ ಪಾತ್ರವನ್ನು ನಿರ್ವಹಿಸುವ ಯಶ್, ಜೂನ್ ಅಥವಾ ಜುಲೈ 2024 ರಲ್ಲಿ ರಾಮಾಯಣದ ಸೆಟ್ಗಳಿಗೆ ಬರುತ್ತಾರೆ. 15 ದಿನಗಳಲ್ಲಿ ತಮ್ಮ ಭಾಗದ ಚಿತ್ರೀಕರಣ ಪೂರ್ಣಗೊಳಿಸುತ್ತಾರೆ" ಎಂದು ಮೂಲವು ಸೇರಿಸಿದೆ. ಜುಲೈ ವೇಳೆಗೆ ಮೊದಲ ಭಾಗ ತಯಾರಾಗಲಿದ್ದು, ನಂತರ ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸಕ್ಕೆ ಒಂದೂವರೆ ವರ್ಷ ಮೀಸಲಿಡಲಾಗುತ್ತದೆ.
ರಾಮಾಯಣಕ್ಕೆ ವಿಎಫ್ಎಕ್ಸ್ಗೆ 500 ದಿನ!
ಇನ್ನು, ರಾಮಾಯಣವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತರಲು ಇದರ ವಿಎಫ್ಎಕ್ಸ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದನ್ನು ಪರಿಪೂರ್ಣಗೊಳಿಸಲು ಸುಮಾರು 500 ದಿನಗಳು ಬೇಕಾಗುತ್ತದೆ ಎಂದು ತಂಡ ಮಾಹಿತಿ ನೀಡಿದೆ. ಇದು ಕೇವಲ ರಾಮಾಯಣವನ್ನು ತೆರೆ ಮೇಲೆ ತರುವುದು ಮಾತ್ರವಲ್ಲ, ಭಾರತೀಯ ಚಿತ್ರರಂಗಕ್ಕೆ ಪರಂಪರೆಯನ್ನು ಸೃಷ್ಟಿಸುವ ಜಾಗತಿಕ ಯೋಜನೆಯಾಗಿದೆ ಎನ್ನಲಾಗಿದೆ.


Click it and Unblock the Notifications











