ಚಿತ್ರರಂಗಕ್ಕೆ ನಾನ್ಯಾವಾಗ ಗುಡ್ ಬೈ ಹೇಳಿದೆ, ಮೋದಿ ಭೇಟಿಯಾದ ಬೆನ್ನಲ್ಲೇ ಉಲ್ಟಾ ಹೊಡೆದ ವಿಕ್ರಾಂತ್ ಮೆಸ್ಸಿ...!
ಚಿತ್ರರಂಗದ ಮೇಲಿನ ಸೆಳೆತ, ಕಲಾವಿದನಾಗಬೇಕೆನ್ನುವ ಬಯಕೆ, ಯಾರನ್ನು ಎಲ್ಲಿಗೆ ಬೇಕಾದರೂ ತಂದು ನಿಲ್ಲಿಸಬಹುದು. ಇದಕ್ಕೆ ವಿಕ್ರಾಂತ್ ಮೆಸ್ಸಿ ಅತ್ಯುತ್ತಮ ಉದಾಹರಣೆ. ಕಿರುತೆರೆಯಲ್ಲಿ ಒಂದಾದ ಮೇಲೊಂದು ಧಾರಾವಾಹಿಗಳನ್ನು ಮಾಡುತ್ತಾ ಬೆಳ್ಳಿತೆರೆಯಲ್ಲಿ ಮಿಂಚಬೇಕೆಂಬ ಕನಸು ಕಂಡಿದ್ದ ವಿಕ್ರಾಂತ್ ಆ ನಂತರ ತಮ್ಮ ಈ ಕನಸನ್ನು ನನಸಾಗಿಸಿಕೊಂಡರು.
ಮಿರ್ಜಾಪರ್, ಸೆಕ್ಟರ್ 36, ಚಪಾಕ್, ಹಸೀನ್ ದಿಲ್ರುಬಾ, ಹೀಗೆ ಅನೇಕ ಚಿತ್ರ ಮತ್ತು ವೆಬ್ ಸರಣಿ ಮೂಲಕ ಜನಮನ ಗೆದ್ದರು. ಅದರಲ್ಲಿಯೂ ವಿಧು ವಿನೋದ್ ಚೋಪ್ರಾ ನಿರ್ದೇಶನದ 12th ಫೇಲ್ ವಿಕ್ರಾಂತ್ ಮೆಸ್ಸಿಗೆ ಜಗದ್ವಿಖ್ಯಾತಿಯನ್ನು ತಂದು ಕೊಡ್ತು. ಇಂಥಾ ವಿಕ್ರಾಂತ್ ಮೆಸ್ಸಿ ಮೊನ್ನೆ ಚಿತ್ರರಂಗದಿಂದ ನಿವೃತ್ತಿಯಾಗುತ್ತಿರುವುದಾಗಿ ಹೇಳಿದ್ದರು.
ಕಳೆದ ಕೆಲವು ವರ್ಷಗಳು ಅದ್ಭುತವಾಗಿದ್ದವು ಎಂದಿರುವ ವಿಕ್ರಾಂತ್, ನಿಮ್ಮ ಅಪಾರ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು. ಆದರೆ ನಾನು ಮುಂದುವರಿಯುತ್ತಾ ಹೋದಂತೆ ಮನೆಗೆ ಹಿಂತಿರುಗಲು ಇದು ಸಮಯ ಎಂದು ನಾನು ಅರಿತುಕೊಂಡೆ. ಮುಂಬರುವ 2025 ರಲ್ಲಿ ನಾವು ಕೊನೆಯ ಬಾರಿಗೆ ಪರಸ್ಪರ ಭೇಟಿಯಾಗುತ್ತೇವೆ. ಕೊನೆಯ ಎರಡು ಸಿನಿಮಾಗಳು ಅನೇಕ ನೆನಪುಗಳು.. ಮತ್ತೊಮ್ಮೆ ಧನ್ಯವಾದಗಳು, ನಾನು ಶಾಶ್ವತವಾಗಿ ಕೃತಜ್ಞರಾಗಿರುತ್ತೇನೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಮೂಲಕ ಅನೇಕರನ್ನು ಅಚ್ಚರಿಗೆ ದೂಡಿದ್ದರು. ಅಭಿಮಾನಿಗಳಿಗೆ ಆಘಾತವನ್ನು ನೀಡಿದ್ದರು. ಆದರೆ ಈಗ ವಿಕ್ರಾಂತ್ ಮೆಸ್ಸಿ ಉಲ್ಟಾ ಹೊಡೆದಿದ್ದಾರೆ. ನಾನ್ಯಾವಾಗ ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದೇನೆ ಎಂದು ಪ್ರಶ್ನೆ ಮಾಡಿದ್ದಾರೆ.
ಹೌದು, ಈ ಕುರಿತು ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿಕ್ರಾಂತ್ ಮೆಸ್ಸಿ ಚಿತ್ರರಂಗದಿಂದ ನಾನು ನಿವೃತ್ತಿಯಾಗುತ್ತಿಲ್ಲ ಬದಲಿಗೆ ಕೇವಲ ಒಂದು ವಿರಾಮವನ್ನು ಪಡೆಯುತ್ತಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ. ನನ್ನ ಹೇಳಿಕೆಯನ್ನು ಜನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ನಿರಂತರವಾದ ಕೆಲಸದಿಂದ ನಾನು ದಣಿದಿದ್ದೇನೆ, ನನ್ನ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತಿದೆ ಈ ಕಾರಣಕ್ಕೆ ನಾನು ಕೆಲ ಕಾಲ ವಿಶ್ರಾಂತಿ ಪಡೆಯಲು ನಿರ್ಧಾರ ಮಾಡಿದ್ದೇನೆ ಎಂದಿರುವ ವಿಕ್ರಾಂತ್ ಮೆಸ್ಸಿ ನನಗೆ ನನ್ನ ಮನೆ ನೆನಪಾಗುತ್ತಿದೆ ಅಷ್ಟೇ ಎಂದಿದ್ದಾರೆ. ನಾನು ನಿವೃತ್ತಿ ಪಡೆಯುತ್ತಿಲ್ಲ ಎಂದು ಪುನರುಚ್ಚಿಸಿದ್ದಾರೆ.

ಅಂದ್ಹಾಗೇ ಕೆಲ ದಿನಗಳ ಹಿಂದೆ ವಿಕ್ರಾಂತ್ ಮೆಸ್ಸಿ ಅಭಿನಯದ 2002ರ ಗೋಧ್ರಾ ಘಟನೆಯನ್ನು ಆಧರಿಸಿದ ದಿ ಸಾಬರಮತಿ ರಿಪೋರ್ಟ್ ಚಿತ್ರ ತೆರೆಗೆ ಬಂದಿತ್ತು. ಈ ಚಿತ್ರದ ಬಿಡುಗಡೆಯ ಸಮಯದಲ್ಲಿ ಬೆದರಿಕೆ ಕರೆಗಳು ವಿಕ್ರಾಂತ್ ಮೆಸ್ಸಿಗೆ ಬಂದಿದ್ದವು. ಈ ಕುರಿತು ಆಗ ಮಾತನಾಡಿದ್ದ ವಿಕ್ರಾಂತ್ ನಿರಂತರವಾಗಿ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದರು. ನನ್ನ 09 ತಿಂಗಳ ಮಗುವನ್ನು ಬಿಡುತ್ತಿಲ್ಲ ಮಗುವನ್ನು ಕೂಡ ಕೊಲೆ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದರು. ನಾವು ಕಲಾವಿದರು ನಮಗೆ ಕಥೆ ಹೇಳುವುದಕ್ಕೆ ಮಾತ್ರ ಬರುತ್ತೆ ಆ ಕೆಲಸವನ್ನಷ್ಟೇ ನಾವು ಮಾಡುತ್ತಿದ್ದೇವೆ ಎಂದಿದ್ದರು. ಈ ಹಿನ್ನೆಲೆ ವಿಕ್ರಾಂತಿ ಮೆಸ್ಸಿ ಚಿತ್ರರಂಗದಿಂದ ದೂರವಾಗಲು ಇದೇ ಪ್ರಮುಖ ಕಾರಣ ಇರಬಹುದೆಂದು ಅನೇಕರು ಅಂದುಕೊಂಡಿದ್ದರು.
ಆದರೆ, ವಿಕ್ರಾಂತ್ ಮೆಸ್ಸಿ ನಿವೃತ್ತಿಯ ಕುರಿತು ಮಾತನಾಡಿದ ನಂತರ ಸೋಮವಾರ ಈ ಚಿತ್ರವನ್ನು ಸಂಸತ್ತಿನ ಬಾಲಯೋಗಿ ಆಡಿಟೋರಿಯಂನಲ್ಲಿ ಭಾರತದ ನರೇಂದ್ರ ಮೋದಿ ತಮ್ಮ ಸಂಸದರೊಂದಿಗೆ ಕಣ್ತುಂಬಿಕೊಂಡಿದ್ದಾರೆ. ವಿಕ್ರಾಂತ್ ಮೆಸ್ಸಿ ಅಭಿನಯ ಮತ್ತು ಚಿತ್ರತಂಡದ ಪ್ರಯತ್ನವನ್ನು ಹೊಗಳಿದ್ದಾರೆ. ಮೋದಿ ಚಿತ್ರವನ್ನು ನೋಡಿದ ನಂತರ ವಿಕ್ರಾಂತಿ ಮೆಸ್ಸಿ ನಿವೃತ್ತಿಯ ವಿಚಾರದಲ್ಲಿ ಉಲ್ಟಾ ಹೊಡೆದಿದ್ದಾರೆ. ಹೀಗಾಗಿಯೇ ಈಗ ಅನೇಕರು ವಿಕ್ರಾಂತ್ ಮೆಸ್ಸಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ದಿ ಸಾಬರಮತಿ ರಿಪೋರ್ಟ್ ಚಿತ್ರದ ಪ್ರಚಾರಕ್ಕೆ ಈ ನಿವೃತ್ತಿಯ ನಾಟಕವನ್ನೆಲ್ಲ ಆಡಬೇಕಿತ್ತಾ ಎಂದು ಪ್ರಶ್ನೆಯನ್ನು ಮಾಡುತ್ತಿದ್ದಾರೆ.


Click it and Unblock the Notifications











