ತೆರೆಮೇಲೆ ರವಿಶಂಕರ್ ಗುರೂಜಿ ಕಥೆ; ಪಾತ್ರಕ್ಕಾಗಿ ತಯಾರಿ ಆರಂಭಿಸಿದ ನಟ
ಈಗಾಗಲೇ ಸಾಕಷ್ಟು ಬಯೋಪಿಕ್ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿದೆ. ಮಹಾನ್ ನಾಯಕರ ಜೀವನಾಧರಿತ ಸಿನಿಮಾಗಳನ್ನು ಬಾಲಿವುಡ್ನಲ್ಲಿ ಹೆಚ್ಚ ತೆರೆಗೆ ತರಲಾಗತ್ತಿದೆ. ಕ್ರೀಡಾಪಟುಗಳು, ರಾಜಕೀಯ ಮುಖಂಡರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರ ಜೀವನಚರಿತ್ರೆ ಸಿನಿಮಾ ರೂಪ ಪಡೆದಿದೆ. ಇದೀಗ ರವಿಶಂಕರ್ ಗುರೂಜಿ ಕಥೆ ಸಿನಿಮಾ ಆಗ್ತಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ರವಿಶಂಕರ್ ಗುರೂಜಿ ಕತೆಯನ್ನು ತೆರೆಗೆ ತರುವ ಪ್ರಯತ್ನ ಶುರುವಾಗಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಹಿಂದಿ ಸೇರಿದಂತೆ ವಿದೇಶಿ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡುವ ಪ್ರಯತ್ನ ನಡೀತಿದೆ.

ಭಾರತೀಯ ಧರ್ಮ ಗುರು ಮತ್ತು ಆಧ್ಯಾತ್ಮಿಕ ನಾಯಕ ರವಿಶಂಕರ್ ಗುರೂಜಿ ದೇಶ ವಿದೇಶಗಳಲ್ಲಿ ಅನುಯಾಯಿಗಳನ್ನು ಹೊಂದಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಅವರ ಆಶ್ರಮ ಇದೆ. ರವಿಶಂಕರ್ ಗುರೂಜಿ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ 180 ದೇಶಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದೆ. ಅವರು ಅಂತರಾಷ್ಟ್ರೀಯ ಶಾಂತಿ ರಾಯಭಾರಿಯಾಗಿ ಗುರ್ತಿಸಿಕೊಂಡಿದ್ದಾರೆ.
ಸದ್ಯ 'ವೈಟ್' ಎಂಬ ಹೆಸರಿನಲ್ಲಿಸಿದ್ಧಾರ್ಥ್ ಆನಂದ್ ಮತ್ತು ಮಹಾವೀರ್ ಜೈನ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಬಾಲಿವುಡ್ ನಟ ವಿಕ್ರಾಂತ್ ಮೆಸ್ಸಿ ಚಿತ್ರದಲ್ಲಿ ರವಿಶಂಕರ್ ಗುರೂಜಿ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿಲ್ಲ. ಆದರೆ ತೆರೆಮರೆಯಲ್ಲಿ ಇಂತಹ ಪ್ರಯತ್ನ ನಡೀತಿದೆ. ಈಗಾಗಲೇ ರವಿಶಂಕರ್ ಗುರೂಜಿ ಅವರನ್ನು ನಟ ವಿಕ್ರಾಂತ್ ಮೆಸ್ಸಿ ಭೇಟಿ ಮಾಡಿದ್ದಾರೆ. ಅವರ ಪಾತ್ರದಲ್ಲಿ ನಟಿಸೋಕೆ ಬೇಕಾದ ತಯಾರಿ ಆರಂಭಿಸಿದ್ದಾರೆ ಎನ್ನಲಾಗ್ತಿದೆ. ಪಾತ್ರಕ್ಕಾಗಿ ತಮ್ಮ ತಲೆ ಕೂದಲು ಹಾಗೂ ಗಡ್ಡ ಬೆಳೆಸುತ್ತಿದ್ದಾರೆ ಎಂದು ಪಿಂಕ್ವಿಲ್ಲಾ ವೆಬ್ಸೈಟ್ ವರದಿ ಮಾಡಿದೆ.
'ವೈಟ್' ಚಿತ್ರಕ್ಕೆ ಮಾಂಟೂ ಬಸ್ಸಿ ಆಕ್ಷನ್ ಕಟ್ ಹೇಳುತ್ತಾರೆ. ಇದೊಂದು ಅಂತರಾಷ್ಟ್ರೀಯ ಥ್ರಿಲ್ಲರ್ ಸಿನಿಮಾ ಎನ್ನಲಾಗ್ತಿದೆ. ಕೊಲಂಬಿಯಾದ 52 ವರ್ಷಗಳ ಸಿವಿಲ್ ವಾರ್ ಅನ್ನು ಪರಿಹರಿಸುವಲ್ಲಿ ರವಿ ಶಂಕರ್ ಗುರೂಜಿ ಪ್ರಮುಖ ಪಾತ್ರ ವಹಿಸಿದ್ದನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ನಿರ್ಮಾಣವಾಗಲಿದೆ. '12th ಫೇಲ್' ಹಾಗೂ 'ಸೆಕ್ಟರ್ 36' ಸಿನಿಮಾಗಳಲ್ಲಿ ನಟಿಸಿ ಮೆಸ್ಸಿ ಮೋಡಿ ಮಾಡಿದ್ದರು. ಕೆಲ ದಿನಗಳ ಹಿಂದೆ ಅವರು ಚಿತ್ರರಂಗಕ್ಕೆ ಗುಡ್ಬೈ ಹೇಳುತ್ತಾರೆ ಎನ್ನಲಾಗಿತ್ತು. ಬಳಿಕ ಅದು ಸುಳ್ಳು ಎಂದು ಸ್ಪಷ್ಟನೆ ಕೊಟ್ಟಿದ್ದರು.

ಈಗಾಗಲೇ ಕೊಲಂಬಿಯಾದಲ್ಲಿ ರವಿಶಂಕರ್ ಗುರೂಜಿ ಜೀವನಾಧರಿತ ಸಿನಿಮಾ ಕೆಲಸ ಆರಂಭವಾಗಿದೆ. ಜುಲೈನಿಂದ ಚಿತ್ರೀಕರಣ ಆರಂಭಿಸಲು ತೀರ್ಮಾನಿಸಲಾಗಿದೆ. ಮಹಾವೀರ್ ಜೈನ್ ಫಿಲ್ಮ್ಸ್ ಜೊತೆ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಲಿವೆ. ಜಾಹೀರಾತುಗಳನ್ನು ನಿರ್ದೇಶಿಸಿ ಗೆದ್ದಿರುವ ಮಾಂಟೂ ಬಸ್ಸಿ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ.
ಮುಂದಿನ ವರ್ಷವೇ 'ವೈಟ್' ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಹಿಂದಿ, ಇಂಗ್ಲೀಷ್ ಜೊತೆಗೆ ಸ್ಪ್ಯಾನಿಷ್ ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಬಳಿಕ ವಿದೇಶದ ಹಲವು ಭಾಷೆಗಳಿಗೆ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಆಧುನಿಕ ಜಗತ್ತಿನಲ್ಲಿ ಶಾಂತಿಗಾಗಿ ಪ್ರಾಚೀನ ಭಾರತೀಯ ಜ್ಞಾನವು ಹೇಗೆ ಕೊಡುಗೆ ನೀಡಿದೆ ಎಂಬುದನ್ನು ಈ ಸಿನಿಮಾ ಮೂಲಕ ಹೇಳಲು ಚಿತ್ರತಂಡ ಹೊರಟಿದೆ.
'ಲುಟೇರ' ಚಿತ್ರದ ಮೂಲಕ ವಿಕ್ರಾಂತ್ ಮೆಸ್ಸಿ ಬಾಲಿವುಡ್ ಪ್ರವೇಶಿಸಿದ್ದರು. 'ಹಸೀನ್ ದುಲ್ರೂಬಾ', 'ಫೊರೆನ್ಸಿಕ್', 'ಲವ್ ಹಾಸ್ಟೆಲ್', 'ಕಾರ್ಗೊ' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಕಳೆದ ವರ್ಷ ಬಂದಿದ್ದ 'ದಿ ಸಬರ್ಮತಿ ರಿಪೋರ್ಟ್' ಚಿತ್ರದಲ್ಲೂ ನಟಿಸಿದ್ದರು. 'ಅರ್ಜುನ್ ಉಸ್ತಾರ', 'ಆಂಖೋ ಕಿ ಗುಸ್ತಾಖಿಯಾನ್', 'ಯಾರ್ ಜಿಗ್ರಿ' ಹೀಗೆ ಒಂದಷ್ಟು ಚಿತ್ರಗಳು ಅವರ ಕೈಯಲ್ಲಿದೆ. ಅದೆಲ್ಲದರ ಜೊತೆಗೆ 'ವೈಟ್' ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.


Click it and Unblock the Notifications











