'ವಿಕ್ರಾಂತ್ ರೋಣ'ನ ಹೆಗಲ ಮೇಲೆ ಸಲ್ಮಾನ್ ಖಾನ್ ಕೈ: ಮುಂಬೈನಲ್ಲಿ ತಾರಾ ಮೇಳ
ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಷ್ಟೆ ಬಾಕಿ ಇದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ಗಳು ಇಂದಿನಿಂದ ಆರಂಭವಾಗಿದೆ. ಅದೂ ಭಾರತೀಯ ಚಿತ್ರರಂಗದ ಹೃದಯವೆಂದು ಕರೆಯಲಾಗುವ ಮುಂಬೈನಲ್ಲಿ.
ಮುಂಬೈನಲ್ಲಿ ಇಂದು 'ವಿಕ್ರಾಂತ್ ರೋಣ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಲ್ಮಾನ್ ಖಾನ್ ಧಾವಿಸಿ ಸುದೀಪ್ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಸಲ್ಮಾನ್ ಖಾನ್ ಮಾತ್ರವೇ ಅಲ್ಲದೆ ಬಾಲಿವುಡ್ನ ತಾರಾ ನಟ ಹಾಗೂ ಸಲ್ಮಾನ್ ಖಾನ್ರ ಆತ್ಮೀಯ ಗೆಳೆಯ ರಿತೇಶ್ ದೇಶ್ಮುಖ್ ಹಾಗೂ ಅವರ ಪತ್ನಿ, ನಟಿ ಜೆನಿಲಿಯಾ ದೇಶ್ಮುಖ್ ಸಹ ಕಾರ್ಯಕ್ರಮಕ್ಕೆ ಆಗಮಿಸಿ ಸಿನಿಮಾಕ್ಕೆ ಶುಭ ಕೋರಿದ್ದಾರೆ.

ಸಿನಿಮಾವನ್ನು ಮೆಚ್ಚಿಕೊಂಡ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ತಮ್ಮ ಎಂದಿನ ಧಾಟಿಯಲ್ಲಿ ವೇದಿಕೆ ಮೇಲಿದ್ದವರ ಕಾಲೆಳೆಯುತ್ತಾ, ತಮಾಷೆ ಮಾಡುತ್ತಾ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಸಿನಿಮಾವನ್ನು ತಾವು ಈಗಾಗಲೇ ನೋಡಿದ್ದು ಸಿನಿಮಾ ಅದ್ಭುತವಾಗಿದೆ, ಸಿನಿಮಾವು ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಬಹಳ ಇಷ್ಟವಾಗುತ್ತದೆ. ಮಗುವಿನ ಕತೆಯ ಜೊತೆಗೆ ಕುಟುಂಬದ ಕತೆಯೂ ಅಡಕವಾಗಿದೆ ಅದ್ಭುತವಾಗಿ ಈ ಸಿನಿಮಾವನ್ನು ಸುದೀಪ್ ಹಾಗೂ ತಂಡ ಮಾಡಿದ್ದಾರೆ ಎಂದಿದ್ದಾರೆ.

ನೀತಾ ಅಶೋಕ್ಗೆ ತಮಾಷೆ ಮಾಡಿದ ಸಲ್ಮಾನ್ ಖಾನ್
ಸಿನಿಮಾದ ನಾಯಕಿಯಲ್ಲೊಬ್ಬರಾದ ನೀತಾ ಅಶೋಕ್, ಸಲ್ಮಾನ್ ಖಾನ್ ಅನ್ನು ಹೊಗಳಿದಾಗ ತಮಾಷೆ ಮಾಡಿದ ಸಲ್ಮಾನ್ ಖಾನ್, ''ನಾನು ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದೇನೆ. ದಕ್ಷಿಣದ ಸಿನಿಮಾಗಳು ಬಾಲಿವುಡ್ನಲ್ಲಿ ಬಹಳ ಚೆನ್ನಾಗಿ ಪ್ರದರ್ಶನ ಕಾಣುತ್ತಿವೆ. ಸಿನಿಮಾ ಚೆನ್ನಾಗಿರುವುದಕ್ಕೇ ನಾನು ಪ್ರೆಸೆಂಟ್ ಮಾಡುತ್ತಿದ್ದೇನೆ. ಸಿನಿಮಾ ಲಾಭವಾಗಬೇಕು, ನಷ್ಟವಾದರೆ ನನಗೆ ಇಷ್ಟವಾಗುವುದಿಲ್ಲ. ಈ ವಿಷಯವೆಲ್ಲ ನಿಮಗೆ ಗೊತ್ತಿದೆ ತಾನೆ ಹಾಗಿದ್ದರೆ ಹೆದರಿಕೆ ಏಕೆ'' ಎಂದರು. ಸಲ್ಮಾನ್ ಮಾತಿನಿಂದ ಖುಷಿಯಾದರು ನೀತಾ.

ರಿತೇಶ್, ಜೆನಿಲಿಯಾ, ಜಾಕ್ವೆಲಿನ್ ಪರ್ನಾಂಡೀಸ್
ಸುದೀಪ್ರ ಆತ್ಮೀಯ ಗೆಳೆಯರಾಗಿರುವ ರಿತೇಶ್ ದೇಶ್ಮುಖ್, ಜೆನಿಲಿಯಾ ಸಹ ಮಾತನಾಡಿ ಸುದೀಪ್ ಗೆಳೆತನವನ್ನು ನೆನಪಿಸಿಕೊಳ್ಳುವ ಜೊತೆಗೆ ಸಿನಿಮಾಕ್ಕೆ ಶುಭ ಹಾರೈಸಿದರು. ನಟಿ ಜಾಕ್ವೆಲಿನ್ ಫರ್ನಾಂಡೀಸ್ ಸಹ ಸಿನಿಮಾಕ್ಕೆ ಶುಭ ಕೋರಿದರು. ಸಹ ನಿರ್ಮಾಪಕ ಅಲಂಕಾರ್ ಪಾಂಡಿಯನ್ ಮಾತನಾಡಿ, ಒಂದೊಳ್ಳೆ ಸಿನಿಮಾವನ್ನು ಮಾಡಿದ್ದೇವೆ, ಆದರೆ ಸಿನಿಮಾ ಇಷ್ಟೇ ಹಣ ಗಳಿಸಬೇಕು ಎಂಬ ಲೆಕ್ಕಾಚಾರವನ್ನೇನು ಹಾಕಿಲ್ಲ. ಲಾಭಕ್ಕಾಗಿಯೇ ಸಿನಿಮಾ ಮಾಡಿದ್ದೇವೆ, ಎಷ್ಟು ಬಂದರೂ ನಮಗೆ ಒಳ್ಳೆಯದ್ದೇ ಆದರೆ ಒಳ್ಳೆಯ ಸಿನಿಮಾ ಮಾಡಿದ್ದೇವೆಂಬ ತೃಪ್ತಿಯಂತೂ ಇದೆ'' ಎಂದಿದ್ದಾರೆ.

ವೇದಿಕೆ ಏರಿದ ಚಿತ್ರತಂಡ
ಸಿನಿಮಾದ ಮೇಕಿಂಗ್, ಮುಂಬೈನಲ್ಲಿ ತಮಗೆ ಸಿಕ್ಕ ಸ್ವಾಗತ, ಸಲ್ಮಾನ್ ಖಾನ್ ಗೆಳೆತನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸುದೀಪ್ ವೇದಿಕೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ 'ವಿಕ್ರಾಂತ್ ರೋಣ' ನಿರ್ದೇಶಕ ಅನೂಪ್ ಭಂಡಾರಿ, ನಟ ನಿರೂಪ್ ಭಂಡಾರಿ, ಡ್ಯಾನ್ಸ್ ಮಾಸ್ಟರ್ ಜಾನಿ ಇನ್ನೂ ಕೆಲವರಿದ್ದರು. ಕಾರ್ಯಕ್ರಮದ ಬಳಿಕ ಇಡೀ ಚಿತ್ರತಂಡ ಫೋಟೊಕ್ಕೆ ಫೋಸು ನೀಡಿತು. ಸುದೀಪ್ ಪತ್ನಿ ಪ್ರಿಯಾ ಸಹ ವೇದಿಕೆ ಏರಿ ತಂಡದೊಂದಿಗೆ ಸೇರಿಕೊಂಡರು.


Click it and Unblock the Notifications











