ಮಾಯಾವತಿ ಬಗ್ಗೆ ಅಶ್ಲೀಲ ಹಾಸ್ಯ: ಕಾಮಿಡಿಯನ್ ವೀರ್ದಾಸ್ ವಿರುದ್ಧ ದೂರು
ಉತ್ತರ ಪ್ರದೇಶ ಮಾಜಿ ಸಿಎಂ, ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಕುರಿತಂತೆ ನಟ, ಸ್ಟ್ಯಾಂಡಪ್ ಕಮಿಡಿಯನ್ ವೀರ್ ದಾಸ್ ಮಾಡಿರುವ ಹಾಸ್ಯ ವಿವಾದಕ್ಕೆ ಗುರಿಯಾಗಿದೆ.
ವೀರ್ ದಾಸ್ ಈ ಹಿಂದೆ ನೀಡಿದ್ದ ಸ್ಟ್ಯಾಂಡಪ್ ಕಾಮಿಡಿ ಶೋ ಒಂದರಲ್ಲಿ ಮಾಯಾವತಿ ಬಗ್ಗೆ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಅದರ ಆಧಾರದಲ್ಲಿ ಭೀಮ್ ಆರ್ಮಿ ಮುಖ್ಯ ಕಾರ್ಯದರ್ಶಿ ಕಂಶಿಕ್ ಸಿಂಗ್, ವೀರ್ ದಾಸ್ ವಿರುದ್ಧ ದೂರು ದಾಖಲಿಸಿದ್ದಾರೆ.
ಮಾಯಾವತಿ ವಿರುದ್ಧ ಅಶ್ಲೀಲ, ಅಪಮಾನಕಾರ, ಹೀಗಳೆಯುವ ರೀತಿಯ ಮಾತುಗಳನ್ನು ವೀರ್ ದಾಸ್ ಬಹಿರಂಗ ಸಭೆಯಲ್ಲಿ ಆಡಿದ್ದು ವೀರ್ ದಾಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಂಶಿಕ್ ಸಿಂಗ್ ಒತ್ತಾಯಿಸಿದ್ದಾರೆ. ಮಾಯವಾತಿಯ ವ್ಯಕ್ತಿತ್ವ ಹಾಗೂ ಅವರ ಹೆಣ್ತನವನ್ನು ಸಾರ್ವಜನಿಕವಾಗಿ ಅಪಮಾನಿಸುವ ಪ್ರಯತ್ನವನ್ನು ವೀರ್ ದಾಸ್ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಪರಿಶಿಷ್ಟ ಜಾತಿಯ ನಾಯಕಿಗೆ ಅಪಮಾನ ಮಾಡಬೇಕೆಂದೇ ವೀರ್ ದಾಸ್ ಹಾಗೆ ಮಾತನಾಡಿದ್ದು, ವಿಡಿಯೋವನ್ನು ಅದೇ ಉದ್ದೇಶಕ್ಕಾಗಿ ವೈರಲ್ ಮಾಡಲಾಗಿದೆ ಎಂದು ಕಂಶಿಕ್ ಸಿಂಗ್ ಆರೋಪಿಸಿದ್ದಾರೆ. ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ವೀರ್ ದಾಸ್ ಅನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮಾಯಾವತಿ ಬಗ್ಗೆ ವೀರ್ ದಾಸ್ ಅಶ್ಲೀಲವಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ''ಮಾಯಾವತಿ ನೋಡಲು ಗಂಡಸಿನಂತಿದ್ದಾರೆ ಎಂದು ನನಗೆ ಆಕೆಯ ಮೇಲೆ ದ್ವೇಷವಿಲ್ಲ, ಆಕೆ ಉತ್ತರ ಪ್ರದೇಶ ಆಕ್ಸೆಂಟ್ನಲ್ಲಿ ಮಾತನಾಡುವ ಪೆಂಗ್ವಿನ್ನಂತೆ ಕಾಣುತ್ತಾರೆ ಎಂಬುದಕ್ಕೆ ನನಗೆ ಬೇಸರವಿಲ್ಲ. ಆದರೆ ಆಕೆ ನೋಟಿನ ಹಾರ ಹಾಕಿಕೊಂಡರು ಎಂಬುದು ನನ್ನ ಬೇಸರಕ್ಕೆ ಕಾರಣ'' ಎಂದಿದ್ದಾರೆ ವೀರ್ ದಾಸ್.
''ಮಹಿಳೆಯ ಎದೆಯ ಭಾಗವನ್ನು ನೋಟುಗಳಿಂದ ಮುಚ್ಚಬಾರದು, ಮಹಿಳೆಯರ ಎದೆಯ ಭಾಗವನ್ನು ಚಾಕ್ಲೆಟ್ ಸಾಸ್ನಿಂದ, ವಿಪ್ ಕ್ರೀಮ್ನಿಂದ ತುಂಬಿರಬೇಕು. ಚಂಡೀಘಡದ ಯುವತಿ ಮಾವಿನ ಕಾಯಿ ಉಪ್ಪಿನ ಕಾಯನ್ನು ಎದೆಯ ಮೇಲೆ ಬಳಿದುಕೊಂಡಿದ್ದರೆ ಅದೂ ಸಹ ನನಗೆ ಇಷ್ಟವಾಗುತ್ತದೆ'' ಎಂದು ತಮ್ಮ ಕಾಮನೆಗಳ ಬಗ್ಗೆ ಹೇಳಿದ್ದಾರೆ ವೀರ್ ದಾಸ್.
ವೀರ್ದಾಸ್ರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದು ತೀವ್ರ ವಿರೋಧವನ್ನು ಎದುರಿಸುತ್ತಿದೆ. ಕೆಲವು ದಿನಗಳ ಹಿಂದಷ್ಟೆ ವೀರ್ ದಾಸ್ ಅಮೆರಿಕದ ಕೆನಡಿ ಸೆಂಟರ್ನಲ್ಲಿ ಮಾಡಿದ್ದ ಸ್ಟ್ಯಾಂಡಪ್ ಶೋ ಸಹ ತೀವ್ರ ವಿರೋಧಕ್ಕೆ ಕಾರಣವಾಗಿತ್ತು, ವಿದೇಶಿ ನೆಲದಲ್ಲಿ ವೀರ್ ದಾಸ್ ಭಾರತದ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು, ದೂರು ಸಹ ದಾಖಲಾಗಿತ್ತು. ನಟಿ ಕಂಗನಾ ರನೌತ್ ಸಹ ಇಂಥ ಅಪರಾಧಿಗಳ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕು ಎಂದು ಒತ್ತಾಯಿಸಿದ್ದರು.
ಕೆನಡಿ ಸೆಂಟರ್ನಲ್ಲಿ ಟು ಇಂಡಿಯಾ ಹೆಸರಿನ ಶೋ ನೀಡಿದ್ದ ವೀರ್ ದಾಸ್, ಶೋ ನಲ್ಲಿ ಮಾತನಾಡುತ್ತಾ, ''ನಮ್ಮಲ್ಲಿ ಎರಡು ಭಾರತ ಇದೆ, ಬೆಳಗಿನ ಸಮಯ ನಾವು ಮಹಿಳೆಯನ್ನು ಪೂಜಿಸುತ್ತೇವೆ, ರಾತ್ರಿ ಆದ ಕೂಡಲೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುತ್ತೇವೆ, ಮಕ್ಕಳು ಮಾಸ್ಕ್ ಹಾಕಿಕೊಂಡು ಪರಸ್ಪರ ಕೈಹಿಡಿದುಕೊಳ್ಳುತ್ತಾರೆ, ಆದರೆ ರಾಜಕಾರಣಿಗಳು ಮಾಸ್ಕ್ ಇಲ್ಲದೆ ಪರಸ್ಪರ ಅಪ್ಪಿಕೊಳ್ಳುತ್ತಾರೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಇನ್ನೂ ಹಲವು ಧರ್ಮದ ಜನರು ಇಲ್ಲಿದ್ದಾರೆ ಆದರೆ ಎಲ್ಲರೂ ಆಕಾಶದತ್ತ ನೋಡಿದರೆ ಕಾಣುವುದು ಏರಿರುವ ಪೆಟ್ರೋಲ್ ಬೆಲೆಯಷ್ಟೆ. ನನ್ನ ಭಾರತದಲ್ಲಿ ಸಸ್ಯಹಾರಿಗಳೆಂದು ಎದೆ ತಟ್ಟಿಕೊಳ್ಳುತ್ತೇವೆ, ಆದರೆ ಅದೇ ತರಕಾರಿ ಬೆಳೆವ ರೈತರ ಮೇಲೆ ವಾಹನ ಹತ್ತಿಸುತ್ತೇವೆ'' ಎಂದಿದ್ದರು. ವೀರ್ ದಾಸ್ರ ಮಾತುಗಳಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ವೀರ್ ದಾಸ್ ತಮ್ಮ ಮಾತುಗಳು ಸರಿಯಾಗಿಯೇ ಇವೆಯೆಂದು ಸ್ಪಷ್ಟನೆ ನೀಡಿದ್ದರು.


Click it and Unblock the Notifications











