ಚಿತ್ರಮಂದಿರದಲ್ಲಿಯೇ ನಿರ್ಮಾಪಕನಿಗೆ 'ಚಪ್ಪಲಿ'ಯಲ್ಲಿ ಹೊಡೆದ ನಟಿ..!
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ನಂಬಿಸಿ ಕತ್ತು ಕುಯ್ಯುತ್ತಾರೆ.ಇದಕ್ಕೆ ಭಾರತೀಯ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳು ಕೂಡ ಇವೆ.
ಚಿತ್ರರಂಗವನ್ನು ಅರೆದು ಕುಡಿದವರಂತೆ ಇಲ್ಲಿ ಅನೇಕರು ವೆರೈಟಿ ವೆರೈಟಿ ವೇಷವನ್ನು ಹಾಕಿಕೊಂಡು ಓಡಾಡುತ್ತಾರೆ. ನನಗೆ ಅವರು ಗೊತ್ತು .. ಇವರು ಗೊತ್ತು ಎಂದು ಪುಂಗಿ ಊದಿ ಇಲ್ಲ ಸಲ್ಲದ ಆಸೆಗಳನ್ನು ತೋರಿಸಿ ಬಣ್ಣದ ಲೋಕದಲ್ಲಿ ಮಿಂಚಬೇಕೆಂಬ ಆಸೆಯಲ್ಲಿ ಬಂದವರಿಗೆ ನಾಮ ತೀಡಿ ಕೈಗೆ ಸಿಗದಂತೆ ಕಣ್ಮರೆಯಾಗುತ್ತಾರೆ.

ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಬಾಲಿವುಡ್ನ ನಿರ್ಮಾಪಕ ಕರಣ್ ಸಿಂಗ್ ಚೌಹಾಣ್ ವಿರುದ್ದ ರೂಪದರ್ಶಿ ಮತ್ತು ನಟಿಯಾಗಿ ಗುರುತಿಸಿಕೊಂಡಿರುವ ರುಚಿ ಗುಜ್ಜರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಸಾಲದಕ್ಕೆ ತಮ್ಮನ್ನು ವಂಚಿಸಿದ ನಿರ್ಮಾಪಕನಿಗೆ ಚಪ್ಪಲಿ ಸೇವೆಯನ್ನು ಮಾಡಿದ್ದಾರೆ.
ಹೌದು, ಅಸಲಿಗೆ ಕರಣ್ ಸಿಂಗ್ ಚೌಹಾಣ್ ಸಹ ನಿರ್ಮಾಣದ ''ಸೋಲಾಂಗ್ ವ್ಯಾಲಿ'' ಚಿತ್ರ ನಿನ್ನೆ [ಜುಲೈ 25 ] ಬಿಡುಗಡೆಯಾಗಿದೆ. ಈ ಹಿನ್ನೆಲೆ.. ತಮ್ಮ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ತಿರುವ ಪ್ರತಿಕ್ರಿಯೆಯನ್ನು ತಿಳಿಯಲು ಕರಣ್ ಸಿಂಗ್ ಚೌಹಾಣ್ ತಮ್ಮ ಮತ್ತೊಬ್ಬ ಸಹ ನಿರ್ಮಾಪಕ ಮತ್ತು ಚಿತ್ರದ ನಿರ್ದೇಶಕ ಮನ್ ಸಿಂಗ್ ಜೊತೆ ಮುಂಬೈನ ಮಲ್ಟಿಪ್ಲೆಕ್ಸ್ಗೆ ಹೋಗಿದ್ದರು.
ಈ ವಿಚಾರವನ್ನು ತಿಳಿದ ರುಚಿ ಗುಜ್ಜರ್ ತಮ್ಮ ಹಣವನ್ನು ಹೇಗಾದರೂ ಮಾಡಿ ಮರಳಿ ಪಡೆಯುವ ಉದ್ದೇಶದಿಂದ ನಿರ್ಮಾಪಕನ ವಿರುದ್ಧ ಆ ಮಲ್ಟಿಪ್ಲೆಕ್ಸ್ನಲ್ಲಿ ಪ್ರತಿಭಟನೆ ಮಾಡಲು ಹೋಗಿದ್ದರು. ''ಸೋಲಾಂಗ್ ವ್ಯಾಲಿ'' ಪೋಸ್ಟರ್ಗೆ ಮಸಿ ಬಳೆದಿರುವುದು.. ಕತ್ತೆಯ ಮೇಲೆ ನಿರ್ಮಾಪಕರನ್ನು ಕೂರಿಸಿರುವುದು ವಿಡಿಯೋದಲ್ಲಿ ನೋಡಬಹುದು.
ಇದೇ ಸಮಯದಲ್ಲಿ ರುಚಿ ಗುಜ್ಜರ್ ಮತ್ತು ಮನ್ ಸಿಂಗ್ ನಡುವೆ ವಾದ ಶುರುವಾಗಿದೆ. ಈ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಂಡ ರುಚಿ ಗುಜ್ಜರ್ ಅಲ್ಲಿಯೇ ಮನ್ ಸಿಂಗ್ ಅವರ ಮೈಚಳಿ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಕರಣ್ ಸಿಂಗ್ ಚೌಹಾಣ ಮೇಲೀನ ಕೋಪದಿಂದ ಮನ್ ಸಿಂಗ್ ಅವರಿಗೆ ಮೆಟ್ಟುಮೆಟ್ಟಲ್ಲಿ ಹೊಡೆಯುವ ಪ್ರಯತ್ನ ಮಾಡಿದ್ದಾರೆ.
ಸದ್ಯ ರುಚಿ ಗುಜ್ಜರ್ ಅವರ ಈ ನಡೆ ಕ್ಯಾಮರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ. ಅಂದ್ಹಾಗೇ ಕರಣ್ ಸಿಂಗ್ ಚೌಹಾಣ್ ಈ ಹಿಂದೆ ಧಾರಾವಾಹಿಯನ್ನು ಮಾಡುವ ಮಾತನ್ನು ರುಚಿ ಗುಜ್ಜರ್ ಅವರಿಗೆ ನೀಡಿದ್ದರು. ''ಸೋನಿ'' ವಾಹಿನಿಯಲ್ಲಿ ಧಾರಾವಾಹಿ ಪ್ರಸಾರವಾಗಲಿದೆ ಎಂದು ರುಚಿ ಅವರನ್ನು ನಂಬಿಸಿ ನೀವು ನಮ್ಮ ಜೊತೆ ಧಾರಾವಾಹಿಗೆ ಹಣ ಹೂಡಿ ಸಹ ನಿರ್ಮಾಪಕಿಯಾಗಿ ಎಂದು ಹೇಳಿದ್ದರು.
ಕರಣ್ ಸಿಂಗ್ ಚೌಹಾಣ್ ಮಾತುಗಳಿಗೆ ಮರುಳಾದ ರುಚಿ ಗುಜ್ಜರ್ ಜುಲೈ 2023 ರಿಂದ ಜನವರಿ 2024ರ ನಡುವೆ ತಮ್ಮ ಸಂಸ್ಥೆಯಾದ ಎಸ್ ಆರ್ ಈವೆಂಟ್ ಮತ್ತು ಎಂಟರ್ಟೈನ್ಮೆಂಟ್ಸ್ದಿಂದ ಕರಣ್ ಸಿಂಗ್ ಚೌಹಾಣ್ ಕೇಳಿದಾಗೆಲ್ಲ ಹಣ ಕಳುಹಿಸಿದ್ದಾರೆ. ಹೆಚ್ಚು ಕಡಿಮೆ 24 ಲಕ್ಷ ಹಣವನ್ನು ನೀಡಿದ್ದಾರೆ. ಆದರೆ ಧಾರಾವಾಹಿ ಶುರುವಾಗಲೇ ಇಲ್ಲ. ಸುಳಿವು ಕೂಡ ಸಿಗಲಿಲ್ಲ.
ಹೀಗಾಗಿ ಅನುಮಾನಗೊಂಡು ವಿಚಾರಿಸಲು ಶುರು ಮಾಡಿದಾಗ ಕರಣ್ ಸಿಂಗ್ ಚೌಹಾಣ್ ಬೆದರಿಕೆಯನ್ನು ಹಾಕಲು ಶುರು ಮಾಡಿದ್ದರು. ಇದೇ ವೇಳೆ ತಮ್ಮಿಂದ ಪಡೆದ ಹಣವನ್ನು ಕರಣ್ ಸಿಂಗ್ ಚೌಹಾಣ್ ''ಸೋಲಾಂಗ್ ವ್ಯಾಲಿ'' ಚಿತ್ರಕ್ಕೆ ಹೂಡಿದ್ದಾರೆ ಎನ್ನುವ ವಿಚಾರ ಕೂಡ ರುಚಿ ಗುಜ್ಜರ್ಗೆ ಗೊತ್ತಾಗಿತ್ತು.
ಈ ಎಲ್ಲ ವಿಚಾರಗಳನ್ನು ಹಲ್ಲೆ ನಡೆಸುವ ಮುನ್ನ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ರುಚಿ ಉಲ್ಲೇಖಿಸಿದ್ದಾರೆ. ಸದ್ಯ ರುಚಿ ನೀಡಿದ ದೂರನ್ನು ಸ್ವೀಕರಿಸಿರುವ ಮುಂಬೈ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 318(4), 352 ಮತ್ತು 351(2) ರ ಅಡಿಯಲ್ಲಿ ಕರಣ್ ಸಿಂಗ್ ಚೌಹಾಣ್ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ.
ಇನ್ನುಳಿದಂತೆ ಈ ರುಚಿ ಗುಜ್ಜರ್ ಬೇರೆ ಯಾರು ಬದಲಿಗೆ ಕೆಲ ದಿನಗಳ ಹಿಂದೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನವನ್ನು ಪ್ರದರ್ಶನವನ್ನು ಮಾಡಿದ್ದ ನಟಿ. ಈ ವರ್ಷದ ''ಕಾನ್ ಫಿಲ್ಮ್ ಫೆಸ್ಟಿವಲ್''ನಲ್ಲಿ ದುಬಾರಿ ಲೆಹೆಂಗಾ ಧರಿಸಿ ಯುವರಾಣಿಯಂತೆ ರೆಡ್ ಕಾರ್ಪೆಟ್ನಲ್ಲಿ ಮಿಂಚಿದ್ದ ರುಚಿ, ಪಿಎಂ ನರೇಂದ್ರ ಮೋದಿ ಅವರ ಫೋಟೋವಿರುವ ನೆಕ್ಲೆಸ್ನಲ್ಲಿ ಕಂಗೊಳಿಸಿದ್ದರು. ಈ ಮೂಲಕ ಮೋದಿ ಅವರಿಗೆ ನಟಿ ವಿಶೇಷವಾಗಿ ಗೌರವ ಸೂಚಿಸಿದ್ದರು.


Click it and Unblock the Notifications











