ಅದಾನಿ ಬಂದರಿನ ಡ್ರಗ್ಸ್, ರೈತರ ಹತ್ಯೆ ಮರೆಮಾಚಲು ಆರ್ಯನ್ ನನ್ನು ಟಾರ್ಗೆಟ್ ಮಾಡಲಾಗಿದೆ: ವಿಶಾಲ್ ದದ್ಲಾನಿ
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಎನ್ ಸಿ ಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಶಾರುಖ್ ಪುತ್ರನ ಡ್ರಗ್ಸ್ ಪ್ರಕರಣ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ. ಶಾರುಖ್ ಪುತ್ರನಿಗೆ ಕೆಲವರು ಛೀಮಾರಿ ಹಾಕುತ್ತಿದ್ದರೆ, ಇನ್ನೂ ಕೆಲವರು ಬೆಂಬಲಕ್ಕೆ ನಿಂತಿದ್ದಾರೆ. ಸಲ್ಮಾನ್ ಖಾನ್, ಹೃತಿಕ್ ರೋಷನ್ ಸೇರಿದಂತೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಶಾರುಖ್ ಗೆ ಬೆಂಬಲ ಸೂಚಿಸಿದ್ದಾರೆ.
ಈಗ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕ ವಿಶಾಲ್ ದದ್ಲಾನಿ ಅವರು ಶಾರುಖ್ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೇ, ಆರ್ಯನ್ ಖಾನ್ ಬಂಧನ ಒಂದು ಸಂಚು ಎಂದು ಕಿಡಿ ಕಾರಿದ್ದಾರೆ. ಶಾರುಖ್ ಖಾನ್ ಜೊತೆ ಕೆಲಸ ಮಾಡಿದ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಈಗ ಅವರ ಪರ ನಿಂತಿದ್ದಾರೆ. ಈ ನಡುವೆ ಜನಪ್ರಿಯ ಗಾಯಕ ಮತ್ತು ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶಾರುಖ್ ಪುತ್ರನನ್ನು ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಸಿದ್ದರ ಹಿಂದೆ ದೊಡ್ಡ ಹುನ್ನಾರ ಇದೆ ಎಂದು ದದ್ಲಾನಿ ಆರೋಪಿಸಿದ್ದಾರೆ.
"ಅದಾನಿ ಬಂದರಿನಲ್ಲಿ ಸಿಕ್ಕಿದ್ದ 3000 ಕೆ ಜಿ ತಾಲಿಬಾನಿ ಡ್ರಗ್ಸ್ ಮತ್ತು ಬಿಜೆಪಿ ಶಾಸಕನ ಮಗನ ರೈತರ ಹತ್ಯೆ ಪ್ರಕರಣವನ್ನು ಮರೆಮಾಚಲು ಶಾರುಖ್ ಖಾನ್ ಮತ್ತು ಅವರ ಕುಟುಂಬವನ್ನು ಟಾರ್ಗೆಟ್ ಮಾಡಲಾಗಿದೆ" ಎಂದು ವಿಶಾಲ್ ದದ್ಲಾನಿ ನೇರವಾಗಿ ಆರೋಪ ಮಾಡಿದ್ದಾರೆ.

"ಕಳೆದ 30 ವರ್ಷದಲ್ಲಿ ಶಾರುಖ್ ಖಾನ್ ಜೊತೆ ಕೆಲಸ ಮಾಡಿದವರಲ್ಲಿ ಎಷ್ಟು ಜನರು ಈಗ ಅವರ ಪರವಾಗಿ ಇದ್ದೀರಿ" ಎನ್ನುವ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ದದ್ಲಾನಿ ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.
ಅಕ್ಟೋಬರ್ 8ರಂದು ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿದೆ. 23 ವರ್ಷದ ಆರ್ಯನ್ ಪರ ಖ್ಯಾತ ವಕೀಲ ಸತೀಶ್ ಮಾನೆಶಿಂಧೆ ವಾದ ಮಂಡಿಸಿದರು. ಆರ್ಯನ್ ಖಾನ್ ಸೇರಿದಂತೆ 8 ಜನರಿಗೆ ನ್ಯಾಯಾಂಗ ಬಂಧನ ವಧಿಸಲಾಗಿದೆ. ಪ್ರಕರಣದ 8 ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಸೆಷನ್ ಕೋರ್ಟ್ ಮೊರೆ ಹೋಗಲು ಆರ್ಯನ್ ಖಾನ್ ಪರ ವಕೀಲರು ಈಗ ಚಿಂತನೆ ನಡೆಸಿದ್ದಾರೆ.


Click it and Unblock the Notifications











