ನೋಟ್ ಬ್ಯಾನ್ ಸತ್ಯ ತಿಳ್ಕೋಳ್ಳಿ ; ಧುರಂದರ್ 2 ವಿರುದ್ಧ ಕಿಡಿ ಕಾರಿದ ಸಂಗೀತ ನಿರ್ದೇಶಕ
ಬಾಲಿವುಡ್ ಅಂಗಳದಲ್ಲಿ ಈಗ ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೆಂಜ್' ಸಿನಿಮಾದ್ದೇ ಹವಾ. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಈಗಾಗಲೇ ವಿಶ್ವದಾದ್ಯಂತ 500 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿರುವ ಈ ಚಿತ್ರದ ಬಗ್ಗೆ ಈಗ ಹೊಸ ವಿವಾದವೊಂದು ಶುರುವಾಗಿದೆ.
ಗಾಯಕ ವಿಶಾಲ್ ದದ್ಲಾನಿ ಅವರು ಮಾಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಅವರು ನೇರವಾಗಿ ಚಿತ್ರದ ಹೆಸರನ್ನು ಎಲ್ಲೂ ಬಳಸಿಲ್ಲ. ಆದರೆ ಅವರು ಹಾಕಿರುವ ಪೋಸ್ಟ್ ಗಳು 'ಧುರಂಧರ್ 2' ಚಿತ್ರವನ್ನೇ ಗುರಿಯಾಗಿಸಿಕೊಂಡಿವೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ವಿಶಾಲ್ ದದ್ಲಾನಿ ತಮ್ಮ ಪೋಸ್ಟ್ ನಲ್ಲಿ ಕೆಲವು ಕಟು ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಸಿನಿಮಾ ಎನ್ನುವುದು ಕೇವಲ ಮನರಂಜನೆಗಾಗಿ ಇರಲಿ ಎಂದು ಅವರು ಹೇಳಿದ್ದಾರೆ. ಇದೀಗ ಈ ವಿಚಾರ ಸಿನಿಮಾ ಪ್ರೇಮಿಗಳ ನಡುವೆ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ.
ಸತ್ಯಗಳನ್ನು ಸರಿಯಾದ ಕಡೆ ಹುಡುಕಿ ಎಂದ ವಿಶಾಲ್...
ವಿಶಾಲ್ ದದ್ಲಾನಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ 2016ರ ನೋಟು ರದ್ದತಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. "ಹೊಸ ಸುಳ್ಳುಗಳು ಹರಡುತ್ತಿವೆ, ಸತ್ಯ ಯಾವಾಗಲೂ ಸತ್ಯವೇ ಆಗಿರುತ್ತದೆ" ಎಂದು ಅವರು ಬರೆದುಕೊಂಡಿದ್ದಾರೆ. ಸಿನಿಮಾವನ್ನು ಕೇವಲ ಮಜಾ ಮಾಡಲು ನೋಡಿ, ಆದರೆ ಮಾಹಿತಿಯನ್ನು ಮಾತ್ರ ಉತ್ತಮ ಮೂಲಗಳಿಂದ ಪಡೆದುಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ.
ಸಿನಿಮಾದ ಹಾಡನ್ನೇ ಬಳಸಿ ಟಾಂಗ್ ಕೊಟ್ಟ ಗಾಯಕ
ಇಷ್ಟೆಲ್ಲಾ ಚರ್ಚೆ ನಡೆಯಲು ಕಾರಣ ವಿಶಾಲ್ ದದ್ಲಾನಿ ಅವರು ಆರಿಸಿಕೊಂಡ ಹಿನ್ನೆಲೆ ಸಂಗೀತ. ಅವರು ಈ ಪೋಸ್ಟ್ ಹಾಕುವಾಗ 'ಧುರಂಧರ್ 2' ಚಿತ್ರದ ಹಾಡನ್ನೇ ಬಳಸಿದ್ದಾರೆ. ಇದರಿಂದಾಗಿ ಅವರು ರಣವೀರ್ ಸಿಂಗ್ ಚಿತ್ರದ ಬಗ್ಗೆಯೇ ಈ ಮಾತುಗಳನ್ನು ಹೇಳುತ್ತಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಖಾತ್ರಿಯಾಗಿದೆ. ನೋಟು ರದ್ದತಿಯ ನಂತರದ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಅವರು ಕೆಲ ಟಿಪ್ಪಣಿಗಳನ್ನು ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿರುವ ಆ 'ಆಪರೇಷನ್ ಗ್ರೀನ್ ಲೀಫ್' ಏನು?
ಸಿನಿಮಾದ ದ್ವಿತೀಯಾರ್ಧದಲ್ಲಿ ನೋಟು ಅಮಾನ್ಯೀಕರಣದ ಬಗ್ಗೆ ಒಂದು ವಿಶೇಷ ಕಥೆಯಿದೆ. ಅದರಲ್ಲಿ 'ಆಪರೇಷನ್ ಗ್ರೀನ್ ಲೀಫ್' ಎಂಬ ಕಾಲ್ಪನಿಕ ರಹಸ್ಯ ಕಾರ್ಯಾಚರಣೆಯನ್ನು ತೋರಿಸಲಾಗಿದೆ. ಭಯೋತ್ಪಾದಕರಿಗೆ ಹಣ ತಲುಪದಂತೆ ತಡೆಯಲು ಈ ನೀತಿ ಜಾರಿಗೆ ತರಲಾಯಿತು ಎಂಬಂತೆ ಚಿತ್ರದಲ್ಲಿ ಬಿಂಬಿಸಲಾಗಿದೆ. ಇದೇ ವಿಚಾರ ಈಗ ವಿಶಾಲ್ ದದ್ಲಾನಿ ಅವರ ಕೆಂಗಣ್ಣಿಗೆ ಗುರಿಯಾಗಿದೆ.

ಸಿನಿಮಾದ ಸೃಜನಶೀಲ ಸ್ವಾತಂತ್ರ್ಯ ಮತ್ತು ಜನರ ವಿರೋಧ...
ಸಿನಿಮಾದಲ್ಲಿ ಕಥೆಯ ಓಟಕ್ಕಾಗಿ ಕೆಲವು ಕಾಲ್ಪನಿಕ ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಾಮಾನ್ಯ. ಆದರೆ 'ಧುರಂಧರ್ 2' ಚಿತ್ರದಲ್ಲಿ ನೋಟು ಅಮಾನ್ಯೀಕರಣದಂತಹ ಗಂಭೀರ ವಿಷಯವನ್ನು ಮರುರೂಪಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ದೇಶದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಿದ ಈ ನಿರ್ಧಾರವನ್ನು ಬೇಹುಗಾರಿಕೆ ಆಟದಂತೆ ತೋರಿಸಿರುವುದು ಕೆಲವರಿಗೆ ಸರಿ ಎನಿಸಿಲ್ಲ.
ವಿಶಾಲ್ ದದ್ಲಾನಿ ಅವರ ಈ ಪರೋಕ್ಷ ಕಿಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ಎರಡು ಬಣಗಳನ್ನು ಸೃಷ್ಟಿಸಿದೆ. ಸಿನಿಮಾ ಕೇವಲ ಎಂಟರ್ಟೈನ್ಮೆಂಟ್ ಆಗಿರಬೇಕಾ ಅಥವಾ ಇತಿಹಾಸವನ್ನು ಸರಿಯಾಗಿ ಬಿಂಬಿಸಬೇಕಾ ಎನ್ನುವ ಪ್ರಶ್ನೆ ಈಗ ಗಾಂಧಿನಗರದಿಂದ ಬಾಲಿವುಡ್ ವರೆಗೆ ಕೇಳಿಬರುತ್ತಿದೆ.
500 ಕೋಟಿ ಕ್ಲಬ್ ಸೇರಿದ 'ಧುರಂಧರ್ 2'...
ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸುನಾಮಿ ಎಬ್ಬಿಸಿದೆ. ರಣವೀರ್ ಸಿಂಗ್ ರಹಸ್ಯ ಏಜೆಂಟ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಸಂಜಯ್ ದತ್, ಆರ್ ಮಾಧವನ್, ಅರ್ಜುನ್ ರಾಂಪಾಲ್ ಅವರಂತಹ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿದ್ದಾರೆ. ವಾಣಿಜ್ಯಿಕವಾಗಿ ಸಿನಿಮಾ ಗೆದ್ದಿದ್ದರೂ, ಐತಿಹಾಸಿಕ ವಿಚಾರಗಳನ್ನು ಚಿತ್ರದಲ್ಲಿ ತೋರಿಸಿರುವ ರೀತಿ ಈಗ ಪರ-ವಿರೋಧದ ಚರ್ಚೆಗೆ ಹಾದಿ ಮಾಡಿಕೊಟ್ಟಿದೆ.


Click it and Unblock the Notifications











