Vivek Agnihotri: ರಾಧೆ ಶ್ಯಾಮ್ ರೀತಿಯೇ ಸಲಾರ್ ಸಹ ಸೋಲುತ್ತೆ ಎಂದ ದ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ!
ಕಳೆದ ವರ್ಷದ ಮಾರ್ಚ್ ತಿಂಗಳ 11ರಂದು ಬಾಲಿವುಡ್ ಹಾಗೂ ಟಾಲಿವುಡ್ ಚಿತ್ರರಂಗಗಳಿಂದ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾಗಿದ್ದವು. ಹೌದು, ಹಿಂದಿಯ ಚರ್ಚಾಸ್ಪದ ಸಿನಿಮಾವಾಗಿದ್ದ ದ ಕಾಶ್ಮೀರ್ ಫೈಲ್ಸ್ ಹಾಗೂ ತೆಲುಗಿನ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಚಿತ್ರಗಳು ಒಂದೇ ದಿನ ಬಿಡುಗಡೆಗೊಂಡಿದ್ದವು. ಮೊದಲಿಗೆ ದೈತ್ಯ ರಾಧೆ ಶ್ಯಾಮ್ ಎದುರು ಬಿಡುಗಡೆಯಾದ ದ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಪ್ರಭಾಸ್ ಚಿತ್ರಕ್ಕೆ ಪೈಪೋಟಿ ಎಂದು ಯಾರೂ ಸಹ ಪರಿಗಣಿಸಿರಲಿಲ್ಲ.
ಆದರೆ ನಂತರದ ದಿನಗಳಲ್ಲಿ ದ ಕಾಶ್ಮೀರ್ ಫೈಲ್ಸ್ ಚಿತ್ರ ಬಿಡುಗಡೆಯಾಗಿ ಪಡೆದುಕೊಂಡ ಭರ್ಜರಿ ಓಪನಿಂಗ್, ಮಾಡಿದ ಕಲೆಕ್ಷನ್ ರಾಧೆ ಶ್ಯಾಮ್ ಚಿತ್ರವನ್ನು ಹೀನಾಯವಾಗಿ ಸೋಲಿಸಿ ವಿನ್ನರ್ ಆಗಿ ಹೊರಹೊಮ್ಮಿತ್ತು. ಕೇವಲ 20 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ದ ಕಾಶ್ಮೀರ್ ಫೈಲ್ಸ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಬರೋಬ್ಬರಿ 340 ಕೋಟಿ ಗಳಿಸಿ ದಿಗ್ವಿಜಯ ಸಾಧಿಸಿತ್ತು.

ಇತ್ತ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಹೈಪ್ ಹುಟ್ಟುಹಾಕಿದ್ದ ರಾಧೆ ಶ್ಯಾಮ್ ಚಿತ್ರ 350 ಕೋಟಿ ವೆಚ್ಚದಲ್ಲಿ ತಯಾರಾಗಿ ಕೇವಲ 214 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡುವುದರ ಮೂಲಕ ಮಕಾಡೆ ಮಲಗಿತ್ತು. ಪ್ರಭಾಸ್ ಸ್ಟಾರ್ಡಂ ಹಾಗೂ ಚಿತ್ರದ ಮೇಲಿದ್ದ ಹೈಪ್ ಇಷ್ಟು ಕಲೆಕ್ಷನ್ ಮಾಡಲು ಸಹಕರಿಸಿದರೆ, ಚಿತ್ರದ ಕಥೆ ಕ್ಲಿಕ್ ಆಗದ ಕಾರಣ ಸಿನಿಮಾ ತೆಲುಗು ಚಿತ್ರರಂಗದ ಇತಿಹಾಸದಲ್ಲಿ ದೊಡ್ಡ ನಷ್ಟ ಕಂಡ ಚಿತ್ರಗಳ ಪಟ್ಟಿಯನ್ನು ಸೇರಿತು.
ದಿನ ಕಳೆದಂತೆ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ದ ಕಾಶ್ಮೀರ್ ಫೈಲ್ಸ್ ಚಿತ್ರ ರಾಧೆ ಶ್ಯಾಮ್ ತೆರೆಕಂಡಿದ್ದ ಚಿತ್ರಮಂದಿರಗಳನ್ನು ಕಸಿದುಕೊಂಡಿತ್ತು. ಒಂದೆಡೆ ತನ್ನ ಕಥೆಯ ವಿಚಾರಕ್ಕೆ ಸೋತಿದ್ದ ರಾಧೆ ಶ್ಯಾಮ್ಗೆ ತನ್ನ ಜತೆ ಬಿಡುಗಡೆಯಾದ ದ ಕಾಶ್ಮೀರ್ ಫೈಲ್ಸ್ ಚಿತ್ರದ ಗೆಲುವು ಮತ್ತಷ್ಟು ಹಿನ್ನಡೆಯನ್ನು ಮಾಡಿದ್ದು ಸುಳ್ಳಲ್ಲ.
ಇದೇ ವಿಷಯದ ಕುರಿತು ಇದೀಗ ದ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಂದರ್ಶನವೊಂದರೆಲ್ಲಿ ಮಾತನಾಡಿದ್ದು ತನ್ನ ಕಾಶ್ಮೀರ್ ಫೈಲ್ಸ್ ಚಿತ್ರದ ಎದುರು ರಾಧೆ ಶ್ಯಾಮ್ ಸೋತ ರೀತಿಯೇ ತನ್ನ ಮುಂದಿನ ಚಿತ್ರ 'ದ ವಾಕ್ಸಿನ್ ವಾರ್' ಸಹ ಎದುರು ಪ್ರಭಾಸ್ ನಟನೆಯ ಮುಂದಿನ ಸಿನಿಮಾ ಸಲಾರ್ ಸಹ ಸೋಲಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಸಲಾರ್ ಸಿನಿಮಾ ಇದೇ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದ್ದು, ದ ವ್ಯಾಕ್ಸಿನ್ ವಾರ್' ಚಿತ್ರವನ್ನೂ ಸಹ ಅದೇ ದಿನದಂದು ಬಿಡುಗಡೆ ಮಾಡಲಿದ್ದೇವೆ ಎಂಬುದನ್ನು ವಿವೇಕ್ ಅಗ್ನಿಹೋತ್ರಿ ಪರೋಕ್ಷವಾಗಿ ತಿಳಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಕಾಮೆಂಟ್ಗೆ ಸಿನಿ ರಸಿಕರ ವ್ಯಂಗ್ಯ:
ಇನ್ನು ವಿವೇಕ್ ಅಗ್ನಿಹೋತ್ರಿ ಅವರ ಈ ಕಾಮೆಂಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಈ ಕಾಮೆಂಟ್ ಕುರಿತು ತುಸು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಕಳೆದ ಬಾರಿಯ ಹಾಗೆ ನಿಮ್ಮ ಸಿನಿಮಾ ಹಿಟ್ ಆಗುತ್ತೆ ಎಂಬುದನ್ನು ಈಗಲೇ ಹೇಳಬೇಡಿ, ಅತಿಯಾದ ವಿಶ್ವಾಸ ಬೇಡ ಎಂದು ಕೆಲವರು ಕುಟುಕಿದರೆ, ಇನ್ನೂ ಕೆಲವರು ಈ ಬಾರಿ ನೀವು ಬರಲು ನಿರ್ಧರಿಸುವುದು ಡೈನೋಸರ್ ಎದುರು, ತುಸು ಎಚ್ಚರಿಕೆಯಿಂದ ಇರಿ, ನಿಮ್ಮ ಚಿತ್ರ ಸಲಾರ್ ಎಂಬ ದೈತ್ಯ ಡೈನೋಸರ್ಗೆ ನಿಮ್ಮ ಯಾವುದೇ ವ್ಯಾಕ್ಸಿನ್ ಸಹ ತಾಕುವುದಿಲ್ಲ ಎಂದಿದ್ದಾರೆ. ಪ್ರಶಾಂತ್ ನೀಲ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನು ಹೊಂದಿರುವ ಸಿನಿ ರಸಿಕರು ವಿವೇಕ್ ಅಗ್ನಿಹೋತ್ರಿ ಕಾಮೆಂಟ್ ಅನ್ನು ತಳ್ಳಿಹಾಕಿದ್ದಾರೆ.


Click it and Unblock the Notifications











