Vivek Agnihotri: "ರಾತ್ರಿ ಚೆನ್ನಾಗಿ ಕುಡಿದು ಬೆಳಗೆದ್ದು ನಾನು ದೇವ್ರು ಅಂದ್ರೆ ಯಾರು ನಂಬಲ್ಲ"
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಆದರೆ ಸಿನಿಮಾ ಸಾಕಷ್ಟು ಕಾರಣಗಳಿಂದ ವಿವಾದ ಸೃಷ್ಟಿಸಿತ್ತು. ಬಾಕ್ಸಾಫೀಸ್ನಲ್ಲೂ ಮುಗ್ಗರಿಸಿತ್ತು. ಈ ಸಿನಿಮಾ ಬಗ್ಗೆ ಟೀಕೆಗಳು ಇನ್ನು ನಿಂತಿಲ್ಲ. ಇದೀಗ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪರೋಕ್ಷವಾಗಿ ಪ್ರಭಾಸ್ನ ಕುಟುಕಿದ್ದಾರೆ. ಈ ಬಗ್ಗೆ ಪ್ರಭಾಸ್ ಅಭಿಮಾನಿಗಳು ಗರಂ ಆಗಿದ್ದಾರೆ.
ರಾಮಾಯಣ ಕಾವ್ಯ ಆಧರಿಸಿ ಓಂ ರಾವುತ್ 'ಆದಿಪುರುಷ್' ಸಿನಿಮಾ ಕಟ್ಟಿಕೊಟ್ಟಿದ್ದರು. ಆದರೆ ಚಿತ್ರದ ಪಾತ್ರಗಳನ್ನು ಚಿತ್ರಿಸಿದ ಪರಿ ಹಿಂದೂಗಳ ಬೇಸರಕ್ಕೆ ಕಾರಣವಾಗಿತ್ತು. ಅನಾದಿ ಕಾಲದಿಂದಲೂ ರಾಮಾಯಣವನ್ನು ರಾಮ, ಸೀತೆ, ಲಕ್ಷ್ಮಣ, ರಾವಣ, ಆಂಜನೇಯನ್ನು ದೇವರೆಂದು ಪೂಜಿಸಿಕೊಂಡು ಬರಲಾಗುತ್ತಿದೆ. ಕಾವ್ಯ, ನಾಟಕ, ಸಿನಿಮಾಗಳಲ್ಲಿ ನೋಡಿ ರಾಮಾಯಣ ಕೇಳಿ ಆ ಪಾತ್ರಗಳ ಚಿತ್ರಣ ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆದರೆ ಆ ಪಾತ್ರಗಳನ್ನು ತಮಗಿಷ್ಟ ಬಂದರಂತೆ ಅನುಚಿತವಾಗಿ 'ಆದಿಪುರುಷ್' ಚಿತ್ರದಲ್ಲಿ ತೋರಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ಕೋರ್ಟ್ಗಳಲ್ಲಿ ಪಿಟಿಷನ್ ದಾಖಲಾಗಿತ್ತು.

ಅಲಹಾಬಾದ್ ಕೋರ್ಟ್ ಕೂಡ 'ಆದಿಪುರುಷ್' ಚಿತ್ರತಂಡಕ್ಕೆ ಛೀಮಾರಿ ಹಾಕಿತ್ತು. ಕ್ರಿಯೇಟಿವ್ ಲಿಬರ್ಟಿ ಹೆಸರಿನಲ್ಲಿ ಮನಸ್ಸಿಗೆ ಬಂದಂತೆ ಸಿನಿಮಾ ಮಾಡೋದಲ್ಲ ಎಂದು ಕುಟುಕಿತ್ತು. ಜೂನ್ 16ಕ್ಕೆ ರಿಲೀಸ್ ಆಗಿದ್ದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಮೊದಲೆರಡು ದಿನ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬಿದ್ದರು. ನಂತರ ಸುಮ್ಮನಾದರು. ಒಂದೇ ಮಾತಲ್ಲಿ ಹೇಳ್ಬೇಕು ಅಂದರೆ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪಲಿಲ್ಲ. ಇದೀಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ 'ಆದಿಪುರುಷ್' ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
'ಸಲಾರ್' ನಾನ್ಸೆನ್ಸ್ ಸಿನಿಮಾ
'ಸಲಾರ್' ಟೀಸರ್ ರಿಲೀಸ್ ಬೆನ್ನಲ್ಲೇ ಪ್ರಭಾಸ್ ನಿಜವಾದ ನಟ ಅಲ್ಲ ಎನ್ನುವ ಅರ್ಥದಲ್ಲಿ ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದರು. ಪ್ರಭಾಸ್ ನಟನೇ ಅಲ್ಲ ಎಂದಿದ್ದ ವಿವೇಕ್, 'ಸಲಾರ್' ನಾನ್ಸೆನ್ಸ್ ಸಿನಿಮಾ ಎಂದಿದ್ದರು. ಆ ಸಂಗತಿ ತಣ್ಣಗಾಗುವ ಮುನ್ನ ಪ್ರಭಾಸ್ ಮತ್ತು 'ಆದಿಪುರುಷ್' ಸಿನಿಮಾ ಬಗ್ಗೆ ವಿವೇಕ್ ಪರೋಕ್ಷವಾಗಿ ವಾಗ್ದಾಳಿ ನಡೆಸಿ ನಡೆಸಿದ್ದಾರೆ.
ನೀವು ಮಾಡಿದ್ದೆಲ್ಲ ಸರಿಯಲ್ಲ
ಈ ಟೈಮ್ಸ್ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿವೇಕ್ ಅಗ್ನಿಹೋತ್ರಿ ಮಾತನಾಡಿದ್ದಾರೆ. 'ಆದಿಪುರುಷ್' ಸಿನಿಮಾ ಸೋಲಿಗೆ ಕಾರಣ ಏನು ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಏನು ಮಾಡಿದರು ನಡೆಯುತ್ತದೆ ಎಂದು ನೀವು ನಂಬದಿರುವುದನ್ನು ಧಾರ್ಮಿಕ ವಿಚಾರದಲ್ಲಿ ಮಾಡಿದರೆ ತಪ್ಪಾಗುತ್ತದೆ. ಮೊದಲಿಗೆ ನಿಮಗೆ ಇತಿಹಾಸ, ಪುರಾಣಗಳ ಬಗ್ಗೆ 100ರಷ್ಟು ನಂಬಿಕೆ ಇರಬೇಕು. ಇಲ್ಲದಿದ್ದರೆ ಭಾರತದಲ್ಲಿ ಇದೆಲ್ಲಾ ನಡೆಯುತ್ತದೆ ಎಂದು ನನಗೆ ಅನ್ನಿಸುವುದಿಲ್ಲ.

'ಆದಿಪುರುಷ್' ಬಗ್ಗೆ ವಿವೇಕ್ ಟೀಕೆ
"ಮಹಾಭಾರತ ಅಥವಾ ರಾಮಾಯಣದಂತಹ ಸಿನಿಮಾಗಳಿಗೆ ಸ್ಟಾರ್ ನಟರನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಪ್ರಯೋಜನವಿಲ್ಲ. ಚಿತ್ರತಂಡ ಸಿನಿಮಾ ಪೂರ್ಣಗೊಳಿಸುವಲ್ಲಿ ಯಶಸ್ವಿ ಆದರೂ ಫಲಿತಾಂಶ 'ಆದಿಪುರುಷ್' ಸಿನಿಮಾ ರೀತಿ ಇರುತ್ತದೆ. ಒಂದು ಕಥೆ ಐದು ಸಾವಿರ ವರ್ಷಗಳಿಂದ ಮುಂದುವರೆದುಕೊಂಡು ಬಂದಿದೆ ಅಂದರೆ ಅದಕ್ಕೆ ಕಾರಣವಿದೆ.
ಜನ ಮೂರ್ಖರಲ್ಲ
"ರಾಮಾಯಣದಂತಹ ಕಥೆಗಳಲ್ಲಿ ಯಾರಾದರೂ ದೇವರ ಪಾತ್ರದಲ್ಲಿ ನಟಿಸಿದ ಮಾತ್ರಕ್ಕೆ ಅವರು ದೇವರಾಗಿಬಿಡುವುದಿಲ್ಲ. ರಾತ್ರಿಯೆಲ್ಲಾ ಕುಡಿದು ಬೆಳಗ್ಗೆ ನಾನೇ ದೇವರು ಎಂದರೆ ಯಾರು ನಂಬುವುದಿಲ್ಲ. ಜನ ಏನು ಅಷ್ಟು ಮೂರ್ಖರಲ್ಲ" ಎಂದು ವಿವೇಕ್ ಪರೋಕ್ಷಗಾಗಿ ಪ್ರಭಾಸ್ಗೆ ತಿವಿದಿದ್ದಾರೆ. ಸದ್ಯ ಬಾಲಿವುಡ್ ನಿರ್ದೇಶಕ ಹೇಳಿಕೆಗೆ ಪ್ರಭಾಸ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











