'ಕಾಂತಾರ' ಸಿನಿಮಾ ಬಗ್ಗೆ ಟ್ವೀಟ್ ಮಾಡಿ ವಿವೇಕ್ ಒಬೆರಾಯ್ ಎಡವಟ್ಟು; ಕನ್ನಡಿಗರ ಆಕ್ರೋಶ
ಮಾತು ಆಡಿದ್ರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.. ಅದರಲ್ಲೂ ಸಿನಿಮಾ ತಾರೆಯರು ಮಾತನಾಡುವಾಗ ಎಚ್ಚರವಾಗಿರಬೇಕು. ಹಿಂದು ಮುಂದು ಗೊತ್ತಿಲ್ಲದೇ ಮಾತನಾಡಿ ಬಳಿಕ ಪೇಚಿಗೆ ಸಿಲುಕುತ್ತಾರೆ. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಸೆಲೆಬ್ರೆಟಿಗಳ ಪ್ರತಿ ನಡೆ, ನುಡಿ ಬಗ್ಗೆ ನೆಟ್ಟಿಗರು ಕಣ್ಣಿಟ್ಟಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬರೆಯುವ ಪದಗಳು, ಹಾಕುವ ಫೋಟೊ, ವೀಡಿಯೋ ಎಲ್ಲವನ್ನು ಗಮನಿಸುತ್ತಿರುತ್ತಾರೆ.
ಹಿಂದಿ ಚಿತ್ರರಂಗದಲ್ಲಿ ದಿಢೀರ್ ಹೀರೊ ಆಗಿ ಗೆದ್ದು ಬಳಿಕ ಸೋಲಿನ ಸುಳಿಗೆ ಸಿಲುಕಿದವರು ನಟ ವಿವೇಕ್ ಒಬೆರಾಯ್. ಸದ್ಯ ಪೋಷಕ ಪಾತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. 'ರಾಮಾಯಣ' ಚಿತ್ರದಲ್ಲಿ ಕೂಡ ಯಶ್ ಎದುರು ಬಣ್ಣ ಹಚ್ಚಿದ್ದಾರೆ. ದಿ.ಜೀವರಾಜ್ ಆಳ್ವ ಪುತ್ರಿ ಪ್ರಿಯಾಂಕಾ ಆಳ್ವ ಕೈಹಿಡಿದು ವಿವೇಕ್ ಕರ್ನಾಟಕ ಅಳಿಯ ಎನಿಸಿಕೊಂಡಿದ್ದಾರೆ. ಸದ್ಯ 'ಕಾಂತಾರ' ಸಿನಿಮಾ ಬಗ್ಗೆ ವಿವೇಕ್ ಮಾಡಿರುವ ಟ್ವೀಟ್ ವೈರಲ್ ಆಗ್ತಿದೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸರಣಿ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಕಳೆದ ವರ್ಷ ಚಾಪ್ಟರ್-1 ತೆರೆಗೆ ಬಂದು ಸಿನಿರಸಿಕರ ಮನಗೆದ್ದಿತ್ತು. ಈ ಬಾರಿ ಆಸ್ಕರ್ ಪ್ತಶಸ್ತಿ ರೇಸ್ನಲ್ಲಿ 'ಕಾಂತಾರ'-1 ಕಾಣಿಸಿಕೊಂಡಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ಮಹಾವತಾರ ನರಸಿಂಹ ಹಾಗೂ 'ಕಾಂತಾರ- 1' ಚಿತ್ರಗಳು ಆಸ್ಕರ್ ಸಾಮಾನ್ಯ ಪ್ರವೇಶ ಪಟ್ಟಿ ಮೂಲಕ ರೇಸ್ನಲ್ಲಿ ಸ್ಥಾನ ಪಡೆದಿದೆ. ಈ ಬಗ್ಗೆ ನಟ ವಿವೇಕ್ ಒಬೆರಾಯ್ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
'ಕಾಂತಾರ-1' ಚಿತ್ರವನ್ನು ಹಾಡಿ ಹೊಗಳಿದ ವಿವೇಕ್ ಒಂದು ಎಡವಟ್ಟು ಮಾಡಿದ್ದಾರೆ. ಗೊತ್ತಿದ್ದು ಮಾಡಿದ್ರೋ ಗೊಲ್ಲಿಲ್ಲದೇ ತಪ್ಪಾಯ್ತೋ ಗೊತ್ತಿಲ್ಲ. ಆದರೆ ಅದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಕ್ಕೂ ತೆಲುಗಿಗೂ ವ್ಯತ್ಯಾಸ ಗೊತ್ತಿಲ್ವಾ? 'ಕಾಂತಾರ- 1' ಯಾವ ಭಾಷೆ ಸಿನಿಮಾ ಎನ್ನುವುದು ಗೊತ್ತಿಲ್ಲದೇ ಇದ್ದ ಮೇಲೆ ಮಾತನಾಡಬಾರದು ಎಂದು ವಿವೇಕ್ ಒಬೆರಾಯ್ಗೆ ಕ್ಲಾಸ್ ತಗೊಂಡಿದ್ದಾರೆ. ತಪ್ಪಿನ ಅರಿವಾಗಿ ವಿವೇಕ್ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಆದರೆ ಆ ಟ್ವೀಟ್ ಸ್ಕ್ರೀನ್ ಶಾಟ್ ವೈರಲ್ ಆಗ್ತಿದೆ.

ತುಳುನಾಡಿನ ದೈವಿಕ ಶಕ್ತಿಗಳಿಂದ ಸಂರಕ್ಷಿಸಲ್ಪಟ್ಟ ಪವಿತ್ರ ಆಚರಣೆಯಾಗಿದ್ದ ಭೂತಕೋಲ, ಇಂದು ಜಾಗತಿಕ ಮಟ್ಟದಲ್ಲಿ ಪ್ರಜ್ವಲಿಸುತ್ತಿದೆ. ಗಡಿಗಳನ್ನು ಮೀರಿ ಇಂದು ವಿಶ್ವದಾದ್ಯಂತ ಸದ್ದು ಮಾಡ್ತಿದೆ. 98ನೇ ಅಕಾಡೆಮಿ ಪ್ರಶಸ್ತಿ(ಆಸ್ಕರ್)ಗಳಲ್ಲಿ ಅತ್ಯುತ್ತಮ ಚಿತ್ರ ಸ್ಪರ್ಧೆಗೆ ಅರ್ಹತೆ ಪಡೆದ ನನ್ನ ಸಹೋದರ ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆಗಳು. ಇದು ಬರೀ ನಾಮಿನೇಷನ್ ಅಲ್ಲ. ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರತಿಧ್ವನಿಸುವ ನಮ್ಮ ಪೂರ್ವಜರ ಘರ್ಜನೆಯಾಗಿದೆ. ನಮ್ಮ ಭಾರತದ ಅಪ್ಪಟ ಸಂಸ್ಕೃತಿಯನ್ನು ನೀವು ಜಾಗತಿಕ ಮಟ್ಟದಲ್ಲಿ ಕೊಂಡೊಯ್ದಿದ್ದೀರಿ. ನಮ್ಮ ಮಣ್ಣಿನ ಸೊಗಡು ಇಂದು ಸಿನಿಮಾ ಇತಿಹಾಸದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ" ಎಂದು ವಿವೇಕ್ ಒಬೆರಾಯ್ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
ಇಲ್ಲಿವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಕೊನೆಗೆ ಬರೆದ ಒಂದು ವಾಕ್ಯ ಈಗ ಚರ್ಚೆಗೆ ಗ್ರಾಸವಾಗಿದೆ. "ಆಸ್ಕರ್ ಪ್ರಶಸ್ತಿಯನ್ನು ನಾವು ಮನೆಗೆ ತರುತ್ತಿದ್ದೇವೆ"(Oscars ni intiki teeskostunnam) ಎಂದು ತೆಲುಗು ಭಾಷೆಯಲ್ಲಿ ವಿವೇಕ್ ಒಬೆರಾಯ್ ಬರೆದುಕೊಂಡಿದ್ದಾರೆ. ಅಂದರೆ ವಿವೇಕ್ ಒಬೆರಾಯ್ ಪ್ರಕಾರ 'ಕಾಂತಾರ'-1 ತೆಲುಗು ಸಿನಿಮಾನಾ? 'ಕಾಂತಾರ-1' ಯಾವ ಭಾಷೆ ಸಿನಿಮಾ ಎನ್ನುವುದು ಗೊತ್ತಿಲ್ಲದೇ ಇಷ್ಟು ಉದ್ದ ಟ್ವೀಟ್ ಮಾಡಿದ್ರಾ? ಅವರಿಗೆ ಕನ್ನಡ ಹಾಗೂ ತೆಲುಗು ಭಾಷೆಗಳಿಗೆ ವ್ಯತ್ಯಾಸವೇ ಗೊತ್ತಿಲ್ವಾ? ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡದ 'ಕಾಂತಾರ' ಸರಣಿ ಸಿನಿಮಾ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿತ್ತು. ಎಲ್ಲಾ ಕಡೆ ಒಳ್ಳೆ ರೆಸ್ಪಾನ್ಸ್ ಪಡೆದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆದರೆ ಕನ್ನಡ ಚಿತ್ರವನ್ನು ತೆಲುಗು ಚಿತ್ರ ಎನ್ನುವಂತೆ ಭಾವಿಸಿ ವಿವೇಕ್ ಒಬೆರಾಯ್ ಟ್ವೀಟ್ ಮಾಡಿದ್ದಾರೆ. ಸಿನಿಮಾ ಬಗ್ಗೆ ಸರಿಯಾಗಿ ಗೊತ್ತಿಲ್ಲ ಅಂದಮೇಲೆ ಈ ತೋರ್ಪಡಿಕೆಯ ಪ್ರಶಂಸೆ ಯಾಕೆ ಎಂದು ಕನ್ನಡಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವಿವೇಕ್ ತಾವೇ ತಮ್ಮ ಟ್ವಿಟ್ಟರ್ ಅಕೌಂಟ್ ಹ್ಯಾಂಡಲ್ ಮಾಡ್ತಾರಾ? ಅಥವಾ ಬೇರೆ ಯಾರಾದರೂ ಹ್ಯಾಂಡಲ್ ಮಾಡ್ತಾರಾ? ಎಂದು ಪ್ರಶ್ನಿಸುತ್ತಿದ್ದಾರೆ.


Click it and Unblock the Notifications











