ಜೂಹಿ, ವಿವೇಕ್, ಮಾಳವಿಕಾ: ನಿತ್ಯಾನಂದನ ಆಶ್ರಮಕ್ಕೆ ಹೋಗುತ್ತಿದ್ದ ತಾರೆಯರ ಕಥೆ ಒಂದಾ ಎರಡಾ?
ನಟ ಅಶೋಕ್ ಕುಮಾರ್ ನನ್ನ ಇಬ್ಬರು ಹೆಣ್ಣು ಮಕ್ಕಳು ನಿತ್ಯಾನಂದನ ಆಶ್ರಮದಲ್ಲಿದ್ದಾರೆ ಎಂದು ಹೇಳಿದ ವಿಚಾರ ಭಾರೀ ಸದ್ದು ಮಾಡುತ್ತಿದೆ. ರಂಜಿತಾ ಜೊತೆ ನಿತ್ಯಾನಂದ ರಾಸಲೀಲೆ ನಡೆಸಿದ್ದಾರೆ ಎಂದು ಹೇಳಲಾಗಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಶ್ರಮದ ಚಿತ್ರಣವೇ ಬದಲಾಗಿತ್ತು. ಅದಕ್ಕೂ ಮುನ್ನ ಉದ್ಯಮಿಗಳು, ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು.
ನಿತ್ಯಾನಂದ ರಾಸಲೀಲೆ ವಿಡಿಯೋ ಬಹಿರಂಗವಾದ ನಂತರ ಕೂಡ ಕೆಲ ತಾರೆಯರು ಆಶ್ರಮಕ್ಕೆ ಹೋಗುವುದನ್ನು ಬಿಟ್ಟಿರಲಿಲ್ಲ. ಸ್ಯಾಂಡಲ್ವುಡ್ ತಾರೆಯರ ಜೊತೆ ಬಾಲಿವುಡ್ ತಾರೆಯರು ಕೂಡ ಈ ಲಿಸ್ಟ್ನಲ್ಲಿ ಇದ್ದರು. ಅಷ್ಟೆಲ್ಲಾ ರಾದ್ಧಾಂತದ ನಂತರ ಕೂಡ ನಟಿ ಜೂಹಿ ಚಾವ್ಲಾ ಆಶ್ರಮದಲ್ಲಿ ನಡೆದ ನಿತ್ಯಾನಂದನ 34ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ನಿತ್ಯಾನಂದ ಪಾದಪೂಜೆ ಮಾಡಿ ಆಶೀರ್ವಾದ ಪಡೆದಿದ್ದರು.

ಸದ್ಯ ದಕ್ಷಿಣ ಅಮೆರಿಕದ ಈಕ್ವೆಡಾರ್ ದೇಶದ ದ್ವೀಪವೊಂದನ್ನು ಖರೀದಿಸಿರುವ ನಿತ್ಯಾನಂದ ಭಕ್ತರ ಜೊತೆ ಅಲ್ಲಿ ಬೀಡುಬಿಟ್ಟಿದ್ದಾನೆ. ತನ್ನ ದೇಶಕ್ಕೆ 'ಕೈಲಾಸ' ಎಂದು ಹೆಸರಿಟ್ಟು ಪ್ರತ್ಯೇಕ ಧ್ವಜ, ಲಾಂಛನ, ಪ್ರತ್ಯೇಕ ಪಾಸ್ಪೋರ್ಟ್ ಸಿದ್ಧಪಡಿಸಿಕೊಂಡಿದ್ದಾನೆ. ನಟಿ ರಂಜಿತಾ ಸೇರಿದಂತೆ ಸಾಕಷ್ಟು ಭಕ್ತರು ಅಲ್ಲೇ ಇದ್ದಾರೆ ಎನ್ನಲಾಗುತ್ತದೆ. ಇನ್ನು ದೊಡ್ಡ ದೊಡ್ಡ ತಾರೆಯರು ನಿತ್ಯಾನಂದನ ಭಕ್ತರು ಆಗಿದ್ದು ಹೇಗೆ ಎನ್ನುವ ಅನುಮಾನ ಮೂಡುವುದು ಸಹಜ. ಒಬ್ಬೊಬ್ಬರದ್ದು ಒಂದೊಂದು ಕಥೆ.
ಕೋಮಾಗೆ ಹೋಗಿದ್ದ ಜೂಹಿ ಸಹೋದರ
ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಸ್ವಾಮಿ ನಿತ್ಯಾನಂದನ ಪರಮ ಭಕ್ತೆ. ಒಮ್ಮೆ ಆಕೆಯ ಸಹೋದರನೊಬ್ಬ ಕೋಮಾ ಹಂತದಲ್ಲಿದ್ದ ಸಮಯದಲ್ಲಿ ಜೂಹಿ ಆಶ್ರಮಕ್ಕೆ ಭೇಟಿ ನೀಡಿ ನಿತ್ಯಾನಂದನ ಆಶೀರ್ವಾದ ಪಡೆದಿದ್ದರು. ಬಳಿಕ ಆಕೆಯ ಸಹೋದರ ಗುಣಮುಖನಾಗಿದ್ದನಂತೆ. ಅಲ್ಲಿಂದ ಮುಂದೆ ಬಿಡದಿ ಆಶ್ರಮಕ್ಕೂ ಜೂಹಿ ಚಾವ್ಲಾಗೂ ಅವಿನಾಭಾವ ಸಂಬಂಧ ಏರ್ಪಟ್ಟಿತ್ತು ಎನ್ನಲಾಗುತ್ತದೆ. 2011ರಲ್ಲಿ ಬಿಡದಿ ಆಶ್ರಮದಲ್ಲಿ ನಡೆದ ಆನಂದೋತ್ಸವದಲ್ಲಿ ಜೂಹಿ ಭಾಗಿ ಆಗಿದ್ದರು.

ಕೂಲ್ ಡ್ಯೂಡ್ ಸ್ವಾಮಿ ಎನ್ನುತ್ತಿದ್ದ ವಿವೇಕ್
ಬಿಟೌನ್ ನಟ ವಿವೇಕ್ ಒಬೆರಾಯ್ ಕೂಡ ನಿತ್ಯಾನಂದ ಆಶ್ರಮಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಒಮ್ಮೆ ಸೋದರ ಸಂಬಂಧಿಯೊಬ್ಬರ ಜೊತೆ ವಿವೇಕ್ ಒಬೆರಾಯ್ ಬಿಡದಿ ಆಶ್ರಮಕ್ಕೆ ಭೇಟಿ ನೀಡಿದ್ದರಂತೆ. ಮೊದಲ ಭೇಟಿಯಲ್ಲೇ ನಿತ್ಯಾನಂದ ಆತ್ಮೀಯ ಸ್ನೇಹಿತರಾಗಿಬಿಟ್ಟಿದ್ದರು ಎಂದು ವಿವೇಕ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆ ನಂತರ ಕೂಡ ವಿವೇಕ್ ಹಲವು ಬಾರಿ ನಿತ್ಯಾನಂದನನ್ನು ಭೇಟಿ ಮಾಡಿದ್ದರು.
ನಿತ್ಯಾನಂದ ಭಕ್ತೆಯಾದ ನಟಿ ಕೌಸಲ್ಯ?
2010ಕ್ಕೂ ಮುನ್ನ ಬಹಳ ಖ್ಯಾತಿ ಗಳಿಸಿದ್ದ ನಿತ್ಯಾನಂದನ ಆಶ್ರಮ ನಂತರ ಕುಖ್ಯಾತಿ ಗಳಿಸಿತ್ತು. ಆಶ್ರಮದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ವರದಿಯಾದ ಬಳಿಕ ಕೂಡ ಕೆಲ ತಾರೆಯರು ನಿತ್ಯಾನಂದನ ಭಕ್ತರಾಗಿದ್ದರು. ಬೆಂಗಳೂರು ಮೂಲದ ಬಹುಭಾಷಾ ನಟಿ ಕೌಸಲ್ಯ ಕೂಡ ನಿತ್ಯಾನಂದನ ಆಶ್ರಮ ಸೇರಿದ್ದಾಗಿ ವರದಿ ಆಗಿತ್ತು. ಒಮ್ಮೆ ಹಿಮ್ಮಡಿ ನೋವಿನಿಂದ ಬಳಲುತ್ತಿದ್ದ ನಟಿ ಸ್ನೇಹಿತರ ಸೂಚನೆಯಂತೆ ನಿತ್ಯಾನಂದನ ಆಶ್ರಮದಲ್ಲಿ ಹೋಗಿ ಚಿಕಿತ್ಸೆ ಪಡೆದಿದ್ದರಂತೆ. ಗುಣಮುಖರಾಗುತ್ತಿದ್ದಂತೆ ಆತನ ಅನುಯಾಯಿ ಆಗಿಬಿಟ್ಟರು ಎಂದು ವರದಿ ಆಗಿತ್ತು. 'ಗಾಂಧಿನಗರ', 'ಬದ್ರಿ' ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲಿ ಕೌಸಲ್ಯ ನಟಿಸಿದ್ದಾರೆ.
ತಾರೆಯರನ್ನು ಕರೆಸಿ ಪ್ರಚಾರ
ನಿತ್ಯಾನಂದ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗ ಆದಮೇಲೂ ನಟಿ ಮಾಳವಿಕಾ ಅವಿನಾಶ್, ಆತನ ಸಂದರ್ಶನ ಮಾಡಿದ್ದರು. ಜೀ ವಾಹಿನಿಯ 'ಬದುಕು ಜಟಕಾಬಂಡಿ' ಕಾರ್ಯಕ್ರಮದಲ್ಲಿ ನಿತ್ಯಾನಂದ ಭಾಗಿ ಆಗಿದ್ದ. ಇನ್ನು ಆತನ ಆಶ್ರಮ ಕುಖ್ಯಾತಿ ಪಡೆಯುವುದಕ್ಕು ಮುನ್ನ ನಟ ವಿಷ್ಣುವರ್ಧನ್, ಮಾಳವಿಕ ಅವಿನಾಶ್, ಯಡಿಯೂರಪ್ಪ, ಗುಜರಾತ್ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ, ಡಿ. ಕೆ. ಶಿವಕುಮಾರ್, ಕಾಲಿವುಡ್ ಮತ್ತು ಟಾಲಿವುಡ್ ಸ್ಟಾರ್ ಕಲಾವಿದರನ್ನು ತನ್ನ ಆಶ್ರಮಕ್ಕೆ ಆಹ್ವಾನಿಸಿ ನಿತ್ಯಾನಂದ ಪ್ರಚಾರ ಪಡೆದುಕೊಂಡಿದ್ದ.


Click it and Unblock the Notifications











