ಹಣ ಖಾಲಿಯಾಯ್ತು ; 60 ಲಕ್ಷ, 80 ಲಕ್ಷ, 1 ಕೋಟಿ - 'ಧುರಂಧರ್'ನ ಕಂದಹಾರ್ ಪ್ಲೇನ್ ಹೈಜ್ಯಾಕರ್ ಗೆ ಸಿಕ್ಕ ಸಂಭಾವನೆ ಎಷ್ಟು?
ಸೆಲೆಬ್ರೆಟಿಗಳು ಸಂಭಾವನೆ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಸಾಕಷ್ಟು ಮಂದಿ ಸಂಭಾವನೆ ವಿಚಾರವನ್ನು ಎಲ್ಲಿಯೂ ಯಾರ ಬಳಿಯೂ ಶೇರ್ ಮಾಡುವುದಿಲ್ಲ, ವ್ಯಾವಹಾರಿಕವಾಗಿ ಇದು ಒಪ್ಪಬೇಕಾದ ವಿಚಾರ ಕೂಡ. ಆದರೆ ಕೆಲವರು ತಮ್ಮ ಸಂಭಾವನೆಯನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಸಿಗಬೇಕಾದ ಸಂಭಾವನೆ ಸಿಗುತ್ತಿದೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ.
ಹೀಗಾಗಿಯೇ ಸಂಭಾವನೆ ವಿಚಾರದಲ್ಲಿ ಕೆಲ ನಟ ಮತ್ತು ನಟಿಯರ ಸುತ್ತ ಕುತೂಹಲ ಇರುತ್ತೆ. ಸಂಭಾವನೆ ಎಷ್ಟಿರಬಹುದು ಎಂದು ತಿಳಿದುಕೊಳ್ಳುವ ಜಿಜ್ಞಾಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾನೇ ಹೋಗುತ್ತೆ. ಉದಾಹರಣೆಗೆ ''ಧುರಂಧರ್ 2'' ಚಿತ್ರದ ಸುತ್ತ ಮುತ್ತ ನಡೆಯುತ್ತಿರುವ ಚರ್ಚೆಯನ್ನೇ ತೆಗೆದುಕೊಳ್ಳಿ.

ಹೌದು, ''ಧುರಂಧರ್ 2'' ಸದ್ಯದ ಸುನಾಮಿ. ಬಾಕ್ಸಾಫೀಸ್ನಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿರುವ ಈ ಚಿತ್ರಕ್ಕೆ ರಣ್ವೀರ್ ಸಿಂಗ್ ಅವರಿಂದ ಹಿಡಿದು ಅಕ್ಷಯ್ ಖನ್ನಾವರೆಗೆ.. ಸಂಜಯ್ ದತ್ ಅವರಿಂದ ಹಿಡಿದು ಅರ್ಜುನ್ ರಾಂಪಾಲ್ವರೆಗೆ.. ಯಾರು ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಎನ್ನುವ ವಿಚಾರ ಕಳೆದ ಕೆಲ ದಿನಗಳಿಂದ ಚರ್ಚೆಯಲ್ಲಿದೆ. ಈ ಚರ್ಚೆಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಮಾತು. ಒಬ್ಬೊಬ್ಬರದ್ದು ಒಂದೊಂದು ತರ್ಕ.
ಹೀಗಿರುವಾಗ ಇದೀಗ ''ಧುರಂಧರ್'' ಚಿತ್ರದ ಮತ್ತೊಬ್ಬ ಪ್ರಮುಖ ಪಾತ್ರಧಾರಿ ವಿವೇಕ್ ಸಿನ್ಹಾ ಅವರ ಸಂಭಾವನೆಯ ಕುರಿತು ಹಲವರಿಗೆ ಪ್ರಶ್ನೆ ಕಾಡಲು ಶುರುವಾಗಿದೆ.
ಹೌದು, ವಿವೇಕ್ ಸಿನ್ಹಾ ... ''ಧುರಂಧರ್'' ಚಿತ್ರವನ್ನು ನೀವು ನೋಡಿದ್ದರೆ ಇವರನ್ನು ಮರೆಯಲು ಸಾಧ್ಯ ಇಲ್ಲ.ಈ ಚಿತ್ರದಲ್ಲಿ ಜಹೂರ್ ಮಿಸ್ತ್ರಿ ಪಾತ್ರವನ್ನು ಇವರು ನಿರ್ವಹಿಸಿದ್ದಾರೆ. ಪಾತ್ರ ಚಿಕ್ಕದಾದರೂ ಆ ಪಾತ್ರವನ್ನು ಚೊಕ್ಕದಾಗಿ ನಿರ್ವಹಿಸಿದವರು ಇವರು.
ದೊರೆತ ಕೆಲವೇ ಕೆಲ ಸೆಕೆಂಡ್ಗಳ ಸ್ಕ್ರೀನ್ ಟೈಮ್ನ್ನೂ ಸದುಪಯೋಗ ಪಡಿಸಿಕೊಂಡ ವಿವೇಕ್ ಸಿನ್ಹಾ ''ಧುರಂಧರ್'' ಚಿತ್ರದಲ್ಲಿ ಸಂಭಾಷಣೆಯೊಂದನ್ನು ಹೇಳಿದ್ದಾರೆ. ''ಹಿಂದೂಗಳು ಹೆದರು ಪುಕ್ಕಲರು'' ಎನ್ನುವ ಡೈಲಾಗ್ ಅದು.

ಈ ಡೈಲಾಗ್ನ ಆದಿತ್ಯ ಧರ್ ತಮ್ಮ ''ಧುರಂಧರ್ 2'' ಚಿತ್ರದ ಟ್ರೇಲರ್ ನಲ್ಲಿ ತೋರಿಸಿದ್ದರು. ಟ್ರೇಲರ್ ನ ಆರಂಭದಿಂದಲೇ ಈ ಡೈಲಾಗ್ ತೋರಿಸಿದ್ದರು. ಟ್ರೇಲರ್ ಬಿಡುಗಡೆಯಾಗಿದ್ದೇ ತಡ, ವಿವೇಕ್ ಸಿನ್ಹಾ ನೆಮ್ಮದಿಗೆ ಕೊಳ್ಳಿ ಬಿದ್ದಿದೆ. ಯಾಕೆಂದರೆ ಹಲವರು ಇವರನ್ನು ನಿಜಕ್ಕೂ ಪಾಕಿಸ್ತಾನದ ಪ್ರಜೆ ಎಂದುಕೊಂಡಿದ್ದಾರೆ. ನಿಜವಾದ ಭಯೋತ್ಪಾದಕ ಎಂದುಕೊಂಡಿದ್ದಾರೆ. ಇವರ ಮೇಲೆ ಸೈಬರ್ ದಾಳಿಯನ್ನು ಕೂಡ ಹಲವರು ಮಾಡುತ್ತಲೇ ಇದ್ಧಾರೆ.
ಇದರಿಂದ ಬೇಸತ್ತು ಖುದ್ದು ವಿವೇಕ್ ಸಿನ್ಹಾ ಈಗಾಗಲೇ ಸ್ಪಷ್ಟೀಕರಣವನ್ನು ಕೂಡ ನೀಡಿದ್ದಾರೆ. ನಾನು ಹಿಂದೂ ನನ್ನನ್ನೂ ದ್ವೇಷಿಸಬೇಡಿ ಎಂದು ಅಲವತ್ತುಕೊಂಡಿದ್ಧಾರೆ. ಆದರೂ ಕೂಡ ಹಲವರಿಗೆ ಇನ್ನು ಇರುವ ಅನುಮಾನ ದೂರವಾಗಿಲ್ಲ. ಈಗಲೂ ಕೂಡ ವಿವೇಕ್ ಸಿನ್ಹಾ ಅವರ ವಿರುದ್ಧ ಹಲವರು ಕಿಡಿ ಕಾರುತ್ತಲೇ ಇದ್ದಾರೆ.
ಇದರ ನಡುವೆ ಈಗ ಹಲವರು ವಿವೇಕ್ ಸಿನ್ಹಾ ಅವರಿಗೆ ಸಿಕ್ಕಿರಬಹುದಾದ ಸಂಭಾವನೆಯ ಕುರಿತು ತಲೆ ಕೆಡಿಸಿಕೊಂಡಿದ್ದಾರೆ. 60 ಲಕ್ಷ, 80 ಲಕ್ಷ, 1 ಕೋಟಿಯವರೆಗೆ ಸಂಭಾವನೆ ಸಿಕ್ಕಿರಬಹುದು ಎಂದೆಲ್ಲಾ ಚರ್ಚೆ ಮಾಡುತ್ತಿದ್ಧಾರೆ.
ತಮ್ಮ ಸಂಭಾವನೆಯ ಕುರಿತು ನಡೆಯುತ್ತಿರುವ ಈ ಚರ್ಚೆಯನ್ನು ಸದ್ಯ ವಿವೇಕ್ ಸಿನ್ಹಾ ಕೂಡ ಗಮನಿಸಿದ್ದು, ತಾವೇ ತಮ್ಮ ಸಂಭಾವನೆಯ ಕುರಿತು ಉತ್ತರವನ್ನು ಕೂಡ ನೀಡಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿರುವ ವಿವೇಕ್ ಸಿನ್ಹಾ ಅಣ್ತಮ್ಮಂದಿರಾ ಆ ದೇವರಾಣೆಗೂ ನೀವು ಅಂದುಕೊಂಡಷ್ಟು ಹಣ ನನಗೆ ಸಿಕ್ಕಿಲ್ಲ ಎಂದು ಹೇಳಿದ್ಧಾರೆ.
ನನ್ನ ಸಂಭಾವನೆಯ ಕುರಿತು ಸುಖಾಸುಮ್ಮನೆ ನಿಮ್ಮ ಇಷ್ಟಾನುಸಾರ ಚರ್ಚೆ ಮಾಡಬೇಡಿ ಎಂದು ಹೇಳಿರುವ ವಿವೇಕ್ ಸಿನ್ಹಾ, ''ಧುರಂಧರ್''ನಿಂದ ನನಗೆ ಹಣ ಸಿಕ್ಕಿದೆ, ಒಳ್ಳೆಯ ಹಣ ಸಿಕ್ಕಿದೆ, ನಾನು ಅಂದುಕೊಂಡಷ್ಟೇ ಹಣ ನನಗೆ ಸಿಕ್ಕಿದೆ ಎಂದು ಹೇಳಿದ್ದಾರೆ. ಆದರೆ ನೀವು ಚರ್ಚೆ ಮಾಡುತ್ತಿರುವಷ್ಟು ಹಣ ನನಗೆ ಸಿಕ್ಕಿಲ್ಲ ಎಂದಿದ್ದಾರೆ.
ನಾನು ಮುಂಬೈನಲ್ಲಿ ವಾಸ ಮಾಡುತ್ತಿದ್ದೇನೆ, ಇಲ್ಲಿ ಖರ್ಚು ತುಂಬಾ ಇದೆ. ಹೀಗಾಗಿ ''ಧುರಂಧರ್''ದಿಂದ ಬಂದ ಎಲ್ಲ ಹಣ ಸದ್ಯ ಖಾಲಿಯಾಗಿದೆ ಎಂದು ಕೂಡ ವಿವೇಕ್ ಸಿನ್ಹಾ ತಮ್ಮ ಈ ವಿಡಿಯೋದಲ್ಲಿ ಹೇಳಿದ್ದಾರೆ.


Click it and Unblock the Notifications











