ಯಶ್ ಅಭಿಮಾನಿಗಳಿಗೆ ಮತ್ತೊಂದು ಆಘಾತ ; 'ರಾಮಾಯಣ' ಮೇಲೆ ಯುದ್ಧದ ಕರಿನೆರಳು
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದಿಂದ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹಲವರು ವಾದ ಮಾಡಬಹುದು. ಆದರೆ, ವಾಸ್ತವದಲ್ಲಿ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷ ಭಾರತದ ಆರ್ಥಿಕತೆಗೆ ಅಪಾಯವನ್ನುಂಟು ಮಾಡುತ್ತಿದೆ. ಪ್ರತೀಕಾರದ ಸ್ವರೂಪ ಪಡೆದಿರುವ ಸಂಘರ್ಷ ಮಧ್ಯಪ್ರಾಚ್ಯ ಹಾಗೂ ಕೊಲ್ಲಿಯ 14 ದೇಶಗಳಿಗೆ ವಿಸ್ತರಿಸಿದೆ. ದಾಳಿ, ಪ್ರತಿದಾಳಿಯಲ್ಲಿ ಸಾವಿನ ಸಂಖ್ಯೆ 1,350ರ ಗಡಿ ದಾಟಿದೆ.
ಇನ್ನೂ ಕೇವಲ ಭಾರತದ ಆರ್ಥಿಕತೆಯ ಮೇಲೆ ಮಾತ್ರ ಈ ಯುದ್ಧ ಪರಿಣಾಮ ಬೀರುತ್ತಿಲ್ಲ. ಬದಲಿಗೆ ಮನರಂಜನಾ ಕ್ಷೇತ್ರ ಕೂಡ ಯುದ್ಧದ ಕರಿನೆರಳಿಂದ ನಲಗುತ್ತಿದೆ. ಇದಕ್ಕೆ ಒಂದು ಉದಾಹರಣೆ ಎಂಬಂತೆ ಕನ್ನಡಿಗರ ರಾಕಿ ಯಶ್ ತಮ್ಮ "ಟಾಕ್ಸಿಕ್" ಚಿತ್ರವನ್ನು ಮುಂದೂಡಿದ್ದಾರೆ. ಮುಂದೂಡಲಯ ಯುದ್ಧವೇ ಕಾರಣ ಎನ್ನುವುದನ್ನು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಯಶ್ ಅವರ ಈ ಹೇಳಿಕೆಯಿಂದ ರಾಕಿ ಸೈನ್ಯಕ್ಕೆ ನಿರಾಸೆಯಾಗಿದೆ.

ಹೀಗಿರುವಾಗ ಇದೀಗ ಯಶ್ ಅಭಿಮಾನಿಗಳಿಗೆ ಮತ್ತೊಮ್ಮೆ ಆಘಾತವನ್ನು ನೀಡುವಂತಹ ಸುದ್ದಿಯೊಂದು ಚಾಲ್ತಿಯಲ್ಲಿದೆ. ಯಶ್ ಸಹ ನಿರ್ಮಾಣದ ''ರಾಮಾಯಣ'' ಚಿತ್ರದ ಮೇಲೂ ಕೂಡ ಯುದ್ಧದ ಕರಿನೆರಳಲು ಬಿದ್ದಿದೆ ಎನ್ನುವ ಸುದ್ದಿ ಸದ್ಯ ಮುಂಬೈನೆಲ್ಲೆಡೆ ಗುಲ್ಲಾಗಿದೆ.
ಹೌದು ಅಸಲಿಗೆ ಈ ರಾಮನವಮಿಯ ಪ್ರಯುಕ್ತ ಮಾರ್ಚ್ 26ರಂದು ಮುಂಬೈನ ಗೇಟ್ ವೇ ಆಫ್ ಇಂಡಿಯಾದಲ್ಲಿ "ರಾಮಾಯಣ" ಚಿತ್ರದ ಅದ್ದೂರಿ ಸಮಾರಂಭ ನಡೆಯಬೇಕಿತ್ತು. "ರಾಮಾಯಣ"ದ ಚಿತ್ರಣದ ಚಿಕ್ಕ ಸ್ಯಾಂಪಲ್ ಕಣ್ತುಂಬಿಕೊಳ್ಳುವ ಸೌಭಾಗ್ಯ ಎಲ್ಲರಿಗೆ ಸಿಗಬೇಕಿತ್ತು. ರೀಲ್ ರಾಮ, ಸೀತೆ, ಮತ್ತು ರಾವಣನ ದರ್ಶನ ಪಡೆದು ಅಖಂಡ ಭಾರತದ ಪುನೀತವಾಗಬೇಕಿತ್ತು.
ಆದರೆ.. ಅಸಂಖ್ಯಾತ.. ಅಗಣಿತ.. ಯಶ್ ಅವರ ಅಭಿಮಾನಿಗಳ ಭಾವನೆಗಳಿಗಿಂತ ವ್ಯವಹಾರ ಮುಖ್ಯ.ಇದಕ್ಕೆ ಪುರಾವೆ ಎನ್ನುವಂತೆ ಸದ್ಯ ''ರಾಮಾಯಣ'' ಚಿತ್ರದ ಈ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
ಈ ಕುರಿತು ''ಮಿಡ್ ಡೇ'' ವರದಿಯನ್ನು ಮಾಡಿದ್ದು ಆ ಪ್ರಕಾರ ಈ ಕಾರ್ಯಕ್ರಮವನ್ನು ಚಿತ್ರದ ಪ್ರಮುಖ ನಿರ್ಮಾಪಕ ನಮಿತ್ ಮಲ್ಹೋತ್ರಾ ಈಗ ಇಸ್ರೇಲ್ ಮತ್ತು ಇರಾನ್ ಯುದ್ದದ ಹಿನ್ನೆಲೆ ಮುಂದೂಡಿದ್ದಾರೆ.

ಅಮೆರಿಕಾ-ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾದ ಉದ್ವಿಗ್ನತೆಯಿಂದ ಕಾರ್ಯಕ್ರಮಕ್ಕೆ ಈಗಾಗಲೇ ಹಲವರಿಗೆ ಆಮಂತ್ರಣ ಪತ್ರಿಕೆ ನೀಡಿದ್ದರೂ ಕೂಡ ಕಾರ್ಯಕ್ರಮಕ್ಕೆ ಈಗ ಸೂಕ್ತ ಸಮಯವಲ್ಲ ಎನ್ನುವ ನಿರ್ಧಾರಕ್ಕೆ ನಮಿತ್ ಮಲ್ಹೋತ್ರಾ ಬಂದಿದ್ದು, "ರಾಮಾಯಣ" ಚಿತ್ರದ ಪ್ರಚಾರಕ್ಕೆ ಕೂಡ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ ಎಂದು "ಮಿಡ್ ಡೇ" ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇನ್ನೂ ಹಾಲಿವುಡ್ನ 'ಲಾರ್ಡ್ ಆಫ್ ದಿ ರಿಂಗ್ಸ್' ಅಥವಾ 'ಡ್ಯೂನ್' ಮಾದರಿಯಲ್ಲಿ ನಮ್ಮ ನೆಲದ ''ರಾಮಾಯಣ''ವನ್ನು ಕೊಂಡೊಯ್ಯಬೇಕು ಎನ್ನುವುದು ನಮಿತ್ ಮಲ್ಹೋತ್ರಾ ಅವರ ಆಶಯ. ಕೇವಲ ಮೊದಲ ಭಾಗಕ್ಕೆ 800 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನೀರಿನಂತೆ ಸುರಿಯಲಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರಿಗೆ ಗೊತ್ತಿರುವಂತೆ ಬದಲಾದ ಈ ಕಾಲದಲ್ಲಿ ಸದ್ಯ ಸಿನಿಮಾ ಮಾಡುವುದಷ್ಟೇ ಮುಖ್ಯವಲ್ಲ. ಪ್ರಚಾರ ಕೂಡ ಮುಖ್ಯ. ಈ ಹಿನ್ನೆಲೆ ಯುದ್ಧದ ಆತಂಕ ಕಡಿಮೆಯಾದ ನಂತರ ಅಂದರೆ ಮೇ ತಿಂಗಳಾಂತ್ಯದಲ್ಲಿ ''ರಾಮಾಯಣ'' ಚಿತ್ರದ ಅದ್ಧೂರಿ ಕಾರ್ಯಕ್ರಮವನ್ನು ಇನ್ನೊಮ್ಮೆ ಆಯೋಜನೆ ಮಾಡುವ ಯೋಚನೆಯನ್ನು ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾಡಿದ್ದಾರೆ ಎಂದು ಸಿನಿಮಾ ವಿಶ್ಲೇಷಕರು ಮತ್ತು ಟ್ರೇಡ್ ಪಂಡಿತರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಆಗಲೇ ಹೇಳಿದಂತೆ ''ರಾಮಾಯಣ'' ಕೇವಲ ಭಾರತಕ್ಕೆ ಸೀಮಿತವಾದ ಸಿನಿಮಾ ಅಲ್ಲ. ಹಾಲಿವುಡ್ನ ಹೊಡೆದುರುಳಿಸುವ ದಿಸೆಯಲ್ಲಿ ಮಾಡಲಾದ ಪ್ರಯತ್ನ. ಇನ್ನೂ ಭಾರತೀಯ ಚಿತ್ರರಂಗದ ಮಾರುಕಟ್ಟೆ ಇಂದು ವ್ಯಾಪಕವಾಗಿ ಬೆಳೆದಿದೆ. ಅದರಲ್ಲಿಯೂ ಶೇ. 15-20 ರಷ್ಟು ಮಧ್ಯಪ್ರಾಚ್ಯದಿಂದಲೇ ಹಣ ಹರಿದು ಬರುತ್ತದೆ. ಸಹಜವಾಗಿ ಅಲ್ಲಿನ ಪರಿಸ್ಥಿತಿ ಸರಿಯಿಲ್ಲದಿದ್ದರೆ ಸಿನಿಮಾದ ಓಪನಿಂಗ್ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನಮಿತ್ ಮಲ್ಹೋತ್ರಾ ''ರಾಮಾಯಣ''ದ ಅದ್ದೂರಿ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲು ಇದು ಕೂಡ ಪ್ರಮುಖ ಕಾರಣ ಎನ್ನುವ ಮಾತು ಸದ್ಯ ಬಲವಾಗಿ ಕೇಳಿ ಬರುತ್ತಿದೆ.


Click it and Unblock the Notifications











