ಸ್ಮೃತಿ ಮಂಧಾನ-ಸಂಗೀತ ನಿರ್ದೇಶಕ ಪಲಾಶ್ ಮದುವೆ ರದ್ದು ; ಭಾವುಕ ಪತ್ರ ಹಂಚಿಕೊಂಡ ಟೀಮ್ ಇಂಡಿಯಾ ಉಪನಾಯಕಿ
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು..?
ಎಂಬುದು ಹೃದಯವಂತರ ಪ್ರಶ್ನೆ. ಈ ಪ್ರಶ್ನೆಗೆ ಲವ್ ಗುರುಗಳು ಇನ್ನು ಉತ್ತರವನ್ನು ಹುಡುಕದೇ ಇದ್ದರೂ ಕೂಡ ಹಲವರು ಈ ಪ್ರೀತಿಯ ಬೆಂಕಿಯಲ್ಲಿ ಬಿದ್ದು ಬೆಂದಿದ್ದಾರೆ. ನೊಂದು ಕಣ್ಣೀರು ಹಾಕಿದ್ದಾರೆ. ಆ ಪೈಕಿ ಸ್ಮೃತಿ ಮಂಧಾನ ಕೂಡ ಒಬ್ಬರು.

ಹೌದು, ಎಲ್ಲರಿಗೆ ಗೊತ್ತಿರುವಂತೆ ಎಲ್ಲವೂ ಅಂದುಕೊಂಡತೆ ಆಗಿದ್ದರೆ ನವೆಂಬರ್ 23ರಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅತ್ಯಮೂಲ್ಯ ರತ್ನ ಸ್ಮ್ರತಿ ಮಂಧಾನ ಗ್ರಹಸ್ಥಾಶ್ರಮಕ್ಕೆ ಕಾಲಿಡಬೇಕಿತ್ತು. ಬಾಲಿವುಡ್ನ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆ ಸಪ್ತಪದಿ ತುಳಿಯಬೇಕಿತ್ತು. ಸಂಭ್ರಮದ ಈ ದಿನಕ್ಕೆ ಸಾಂಗ್ಲಿ ಜಿಲ್ಲೆಯ ಸಮ್ದೋಲ್ನಲ್ಲಿರುವ ಸ್ಮೃತಿ ಮಂಧಾನ ಅವರ ಫಾರ್ಮ್ ಹೌಸ್ ಕೂಡ ಸಾಕ್ಷಿಯಾಗಲು ಸಿದ್ಧವಾಗಿತ್ತು.
ಅರಿಶಿಣ ಶಾಸ್ತ್ರ... ಮೆಹಂದಿ ಶಾಸ್ತ್ರ.. ಸಂಗೀತ್ ಕಾರ್ಯಕ್ರಮ... ಹೀಗೆ ಕಳೆದ ಕೆಲ ದಿನಗಳಿಂದ ಸ್ಮೃತಿ ಮಂದಾನ ಮನೆಯಲ್ಲಿ ಸಂಭ್ರಮದ ವಾತಾವರಣ ಕೂಡ ನಿರ್ಮಾಣವಾಗಿತ್ತು. ಆದರೆ.. ಇನ್ನೇನು ಮದುವೆಯಾಗಬೇಕು, ಅಷ್ಟರಲ್ಲಿ ಮದುವೆ ನಿಂತು ಹೋಯ್ತು.
ಸ್ಮೃತಿ ಮಂಧಾನ ಅವರ ತಂದೆಯ ಆರೋಗ್ಯದಲ್ಲಿ ಏಕಾಏಕಿ ಏರುಪೇರಾದ ಹಿನ್ನೆಲೆ ಮದುವೆಯನ್ನು ಮುಂದೂಡಲಾಗಿದೆ ಎಂದು ಆರಂಭದಲ್ಲಿ ಹೇಳಲಾದರು ಕೂಡ ಆ ನಂತರ ನಾನಾ ತಿರುವನ್ನು ಸ್ಮೃತಿ ಮತ್ತು ಪಲಾಶ್ ಮದುವೆ ವಿಚಾರ ಪಡೆಯಿತು.
ಮದುವೆ ಮುಂದೂಡಿದ ಬೆನ್ನಲ್ಲೇ ತಮ್ಮ ಮದುವೆಯ ಸಂಭ್ರಮಾಚರಣೆಯ ಫೋಟೊ ಮತ್ತು ವಿಡಿಯೋಗಳನ್ನು ಸ್ಮೃತಿ ಮಂಧಾನ ಏಕಾಏಕಿ ಡಿಲೀಟ್ ಮಾಡಿದರು. ನಿಶ್ಚಿತಾರ್ಥದ ವಿಡಿಯೋ... ಫೋಟೊ.. ಮದುವೆ ಸಮಾರಂಭದ ಚಿತ್ರಣ.. ಎಲ್ಲವನ್ನೂ ಸ್ಮೃತಿ ತೆಗೆದು ಹಾಕಿದ್ದರು. ಇಷ್ಟೇ ಅಲ್ಲ ಶ್ರೇಯಾಂಕ ಪಾಟೀಲ್, ಜೆಮಿಯಾ, ಸೇರಿ ಸ್ಮೃತಿ ಮಂಧಾನ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ್ದ ಬೇರೆ ಆಟಗಾರ್ತಿಯರು ಕೂಡ ತಮ್ಮ ಖಾತೆಗಳಿಂದ ಫೋಟೊ ಮತ್ತು ವಿಡಿಯೋ ಡಿಲೀಟ್ ಮಾಡಿದ್ದರು.

ಅಚ್ಚರಿಯ ಬೆಳವಣಿಗೆಯಲ್ಲಿ ಮೇರಿ ಡಿಕೋಸ್ಟಾ ಎಂಬ ಮಹಿಳೆ ಪಲಾಶ್ ಮುಚ್ಚಲ್ ತಮ್ಮ ಜೊತೆ ನಡೆಸಿದ್ದ ಸಂಭಾಷಣೆಯ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಂಡರು. ಸ್ಮೃತಿ ಮಂಧಾನ ಅವರ ಹಿಂದೆ ಬೀಳುವುದಕ್ಕಿಂತ ಮೊದಲು ಪಲಾಶ್ ಮುಚ್ಚಲ್ಗೆ ಜೈಹಿಂದ್ ಕಾಲೇಜ್ನ ವಿದ್ಯಾರ್ಥಿಯಾಗಿದ್ದ ಬಿರ್ವಾ ಶಾ ಅವರ ಜೊತೆ ಕೂಡ ಪಲಾಶ್ ಮದುವೆ ಮುರಿದು ಬಿದ್ದಿತ್ತು ಎನ್ನುವ ವಿಚಾರ ಕೂಡ ಜಗಜ್ಜಾಹೀರಾಯ್ತು.
ಇನ್ನೂ ಇದರ ನಡುವೆ ಮದುವೆಯ ಹಿಂದಿನ ದಿನ ಸಂಗೀತ್ ಪಾರ್ಟಿಯಲ್ಲಿ ಪಲಾಶ್ ಮತ್ತು ಸ್ಮೃತಿ ನಡುವೆ ಭಿನ್ನಾಭಿಪ್ರಾಯ ಮೂಡಿದಂತೆ ಭಾಸವಾಗುವ ವಿಡಿಯೋ ಕೂಡ ವೈರಲ್ ಆಗಿತ್ತು. ಇದೆಲ್ಲವನ್ನು ಕಂಡು ಸೋಶಿಯಲ್ ಮೀಡಿಯಾದಲ್ಲಿ ಹಲವರು ತಮ್ಮದೇ ಆದ ಥಿಯರಿಗಳನ್ನು ಮಂಡಿಸಲು ಶುರು ಮಾಡಿದರು. ದೇಶವ್ಯಾಪಿ ಸ್ಮೃತಿ ಮಂಧಾನ ಬೇಡದ ಕಾರಣದಿಂದ ಚರ್ಚೆಯಾದರು.
ಈಗ ಮದುವೆ ನಿಂತ 15 ದಿನಗಳ ನಂತರ ಸ್ಮೃತಿ ಮಂಧಾನ ತಮ್ಮ ಮನದ ಮಾತುಗಳಿಗೆ ಅಕ್ಷರದ ರೂಪ ನೀಡಿದ್ದಾರೆ. ಭಾವುಕವಾದ ಪತ್ರವನ್ನು ಹಂಚಿಕೊಂಡಿದ್ದಾರೆ. ಮದುವೆ ರದ್ದಾಗಿರುವ ವಿಚಾರವನ್ನು ಕೂಡ ತಿಳಿಸಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪತ್ರ ಹಂಚಿಕೊಂಡಿರುವ ಸ್ಮೃತಿ ಮಂಧಾನ ಕಳೆದ ಕೆಲವು ವಾರಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಈ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ನಾನು ತುಂಬಾ ಖಾಸಗಿ ವ್ಯಕ್ತಿ, ಹಾಗೆಯೇ ಇರಲು ಬಯಸುತ್ತೇನೆ. ಆದರೆ ಮದುವೆ ರದ್ದಾಗಿದೆ ಎಂಬುದನ್ನು ನಾನು ಸ್ಪಷ್ಟಪಡಿಸಬೇಕಿದೆ ಎಂದು ಹೇಳಿದ್ದಾರೆ.

ನಾನು ಈ ವಿಷಯಕ್ಕೆ ಇಲ್ಲಿಗೆ ಮುಕ್ತಾಯ ಹಾಡಲು ಬಯಸುತ್ತೇನೆ ಎಂದು ಹೇಳಿರುವ ಸ್ಮೃತಿ ಮಂಧಾನ ನೀವೆಲ್ಲರೂ ಕೂಡ ಈ ಕುರಿತು ಚರ್ಚೆ ಮಾಡುವುದನ್ನು ನಿಲ್ಲಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ದಯವಿಟ್ಟು ಈ ಸಮಯದಲ್ಲಿ ನಮ್ಮ ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸಿ ಮತ್ತು ನಮ್ಮದೇ ಆದ ರೀತಿಯಲ್ಲಿ ಇದರಿಂದ ಹೊರಬರಲು ನಮಗೆ ಅವಕಾಶ ಮಾಡಿ ಕೊಡಿ ಎಂದು ಕೂಡ ಸ್ಮೃತಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಮುಂದುವರೆದು ನಮ್ಮೆಲ್ಲರನ್ನೂ ಒಂದು ಉನ್ನತ ಉದ್ದೇಶವು ಮುನ್ನಡೆಸುತ್ತದೆ ಎಂದು ನಾನು ನಂಬುತ್ತೇನೆ ಎಂದು ಹೇಳಿರುವ ಸ್ಮೃತಿ ಮಂಧಾನ ನನಗೆ ಅದು ಯಾವಾಗಲೂ ನನ್ನ ದೇಶವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸುವುದಾಗಿದೆ. ಸಾಧ್ಯವಾದಷ್ಟು ಕಾಲ ಭಾರತಕ್ಕಾಗಿ ಆಟವಾಡಿ ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸುತ್ತೇನೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ನನ್ನ ಗಮನ ಯಾವಾಗಲೂ ನನ್ನ ಗುರಿಯತ್ತ ಇರುತ್ತದೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ಈಗ ಮುಂದೆ ಸಾಗುವ ಸಮಯ ಎಂದು ಹೇಳಿದ್ದಾರೆ.
ಕೇವಲ ಸ್ಮೃತಿ ಮಂಧಾನ ಮಾತ್ರ ಅಲ್ಲ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಕೂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಸಂಬಂಧ ಮುರಿದು ಬಿದ್ದಿರುವ ಕುರಿತು ಪತ್ರವನ್ನು ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಇಬ್ಬರು ಪರಸ್ಪರ ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದಾರೆ.



Click it and Unblock the Notifications











