ಮುಸ್ಲಿಮರು ನನ್ನ ಕಾಫಿರ್ ಅಂತಾರೆ, ಹಿಂದೂಗಳು ನನ್ನ ಜಿಹಾದಿ ಎನ್ನುತ್ತಾರೆ- ಜಾವೇದ್ ಅಖ್ತರ್..!
ಸಿನಿಮಾ ಮಂದಿ ಅದರಲ್ಲಿಯೂ ನಟ- ನಟಿಯರು ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ. ಆದರೆ.. ಪ್ರಸಿದ್ದ ಚಿತ್ರಕಥೆಗಾರ ಮತ್ತು ಚಿತ್ರ ಸಾಹಿತಿ ಜಾವೇದ್ ಅಖ್ತರ್ ಇದಕ್ಕೆ ತದ್ವಿರುದ್ದ. ಸಮಾಜದ ಆಗು-ಹೋಗುಗಳ ಬಗ್ಗೆ ಮೊದಲಿಂದ
ಧ್ವನಿ ಎತ್ತುತ್ತಾ, ಕಳೆದ ಹತ್ತು ವರ್ಷಗಳಿಂದ ಬಲಪಂಥೀಯವರ ಕೆಂಗಣ್ಣಿಗೆ ಗುರಿಯಾಗ್ತಾನೇ ಬಂದ ಜಾವೇದ್ ಅಖ್ತರ್ ಅವರಿಗೆ ಅನೇಕರು ಪಾಕಿಸ್ತಾನಕ್ಕೆ ಹೋಗುವಂತೆ ಸಲಹೆಯನ್ನು ಇಲ್ಲಿಯವರೆಗೆ ನೀಡಿದ್ದಾರೆ. ಜಾವೇದ್ ಅಖ್ತರ್ ಮಾತನಾಡಿದಾಗೆಲ್ಲ ಪಾಕಿಸ್ತಾನದ ಪ್ರಜೆ ಎಂದು ಕಿಡಿ ಕಾರಿದ್ದಾರೆ.

ಆದರೆ. ಜಾವೇದ್ ಅಖ್ತರ್ ಇವರ ಯಾರ ಮಾತುಗಳನ್ನು ಕೂಡ ಕೇಳಿಸಿಕೊಂಡಿಲ್ಲ. ತಮ್ಮ ಬಗ್ಗೆ ವ್ಯಕ್ತವಾಗುವ ವಿರೋಧಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ತಮ್ಮ ಕೆಲಸವನ್ನು ತಾವು ಮಾಡುತ್ತಾ ಬಂದಿದ್ದಾರೆ. ಸಮಯ ಸಿಕ್ಕಾಗ ಸಂದರ್ಭ ಎದುರಾದಾಗ ಭಾರತದ ಮೇಲಿನ ತಮ್ಮ ದೇಶಾಭಿಮಾನದ ಪ್ರದರ್ಶನವನ್ನು ಮಾಡಿದ್ದಾರೆ.
ಇಂಥಾ ಜಾವೇದ್ ಅಖ್ತರ್ ಇದೀಗ ಪಾಕಿಸ್ತಾನದ ಬಗ್ಗೆ ಮಾತನಾಡಿದ್ದಾರೆ. ಪಾಕಿಸ್ತಾನ ಮತ್ತು ನರಕ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಾದರೆ ತಮ್ಮ ಆಯ್ಕೆ ಯಾವುದು ಎಂದು ಹೇಳಿದ್ದಾರೆ.
ಹೌದು, ಮುಂಬೈನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಜಾವೇದ್ ಅಖ್ತರ್ ಕೆಲವರು ನನ್ನ ರಾಜಕೀಯ ನಿಲುವುಗಳನ್ನು ಒಪ್ಪುವುದಿಲ್ಲ, ಆಗಾಗ ಇವರೆಲ್ಲ ನನಗೆ ಪಾಕಿಸ್ತಾನಕ್ಕೆ ಹೋಗುವಂತೆ ಬೆದರಿಕೆ ಹಾಕುತ್ತಾರೆ ಆದರೆ ನಾನು ಪಾಕಿಸ್ತಾನಕ್ಕೆ ಹೋಗಲು ಇಷ್ಟಪಡುವುದಿಲ್ಲ ಬದಲಿಗೆ ನರಕಕ್ಕೆ ಹೋಗಲು ನಾನು ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ. ನರಕ ಪಾಕಿಸ್ತಾನಕ್ಕಿಂತ ಚೆನ್ನಾಗಿದೆ ಎಂದು ಹೇಳಿದ್ದಾರೆ.
ನನ್ನನ್ನು ಒಂದು ಕಡೆ ಕೆಲವರು ಕಾಫಿರ್ ಎನ್ನುತ್ತಾರೆ. ಮತ್ತೊಂದು ಕಡೆ ನೀನು ನರಕಕ್ಕೆ ಹೋಗುತ್ತೀಯಾ ಎಂದು ಹೇಳುತ್ತಾರೆ. ಇನ್ನೂ ಕೆಲವರು ನನಗೆ ಜಿಹಾದಿ ಎಂದು ಕರೆಯುತ್ತಾರೆ ಮತ್ತೂ ಕೆಲವರು ಪಾಕಿಸ್ತಾನಕ್ಕೆ ಹೋಗು ಎಂದು ಹೇಳುತ್ತಾರೆ ಎಂದಿರುವ ಜಾವೇದ್ ಅಖ್ತರ್ ಪಾಕಿಸ್ತಾನ ಮತ್ತು ನರಕ ಇವೆರಡೇ ಆಯ್ಕೆಗಳಿದ್ದರೆ ನಾನು ನರಕಕ್ಕೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಮುಂದುವರೆದು ನಾನು ಮುಂಬೈಗೆ ಬಂದಾಗ ನನಗೆ ಕೇವಲ 19ರ ಹರೆಯ, ನಾನು ಏನಾಗಿದ್ದೇನೆಯೋ ಅದು ಈ ನಗರ ಮತ್ತು ಮಹಾರಾಷ್ಟ್ರದಿಂದ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.
ಇನ್ಮು ನಿಷ್ಠೆಯ ಕುರಿತು ಕೂಡ ಮಾತನಾಡಿರುವ ಜಾವೇದ್ ಅಖ್ತರ್ ಕಾಶ್ಮೀರಿಗಳು ಭಾರತಕ್ಕೆ ನಿಷ್ಠರಾಗಿದ್ದಾರೆ, ಪಾಕಿಸ್ತಾನ ಈಗಾಲಾದರೂ ಕಾಶ್ಮೀರ ಮತ್ತು ಕಾಶ್ಮೀರದ ನಿವಾಸಿಗಳನ್ನು ನೆಮ್ಮದಿಯಿಂದ ಇರಲು ಬಿಡಬೇಕು ಎಂದು ಹೇಳಿದ್ದಾರೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ತನ್ನ ಮಾನ ಮರ್ಯಾದೆಯನ್ನು ಹರಾಜು ಹಾಕಿಕೊಂಡಿದೆ ಎಂದು ಕೂಡ ಜಾವೇದ್ ಅಖ್ತರ್ ಕಿಡಿ ಕಾರಿದ್ದಾರೆ.
ಇದೇ ವೇಳೆ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕೂಡ ಖಂಡಿಸಿರುವ ಜಾವೇದ್ ಅಖ್ತರ್, ಪಹಲ್ಗಾಮ್ ಭಯೋತ್ಪಾದಕ ದಾಳಿ ಮಾನವೀಯತೆ ಮೇಲೆ ನಡೆದ ಭೀಕರ ದಾಳಿ ಎಂದು ಹೇಳಿದ್ದಾರೆ.
ಮನುಷ್ಯ ಮನುಷ್ಯನನ್ನು ಕೊಲ್ಲುವ ಈ ಪ್ರವೃತ್ತಿ ಇಡೀ ಮಾನವ ಕುಲದ ನಾಶಕ್ಕೆ ನಾಂದಿ ಹಾಡಲಿದೆ ಎಂದು ಹೇಳಿರುವ ಜಾವೇದ್ ಅಖ್ತರ್ ಅಮಾಯಕ ನಾಗರಿಕರನ್ನು ಭೀಕರವಾಗಿ ಕೊಲ್ಲುವುದು ಜಿಹಾದ್ ಎಂದಾದರೆ, ಅಂತಹ ಜಿಹಾದ್ನ್ನು ನಾನು ಒಂದಲ್ಲ ಬದಲಿಗೆ ಸಾವಿರ ಬಾರಿ ತಿರಸ್ಕರಿಸುತ್ತೇನೆ ಎಂದು ಹೇಳಿದ್ದಾರೆ.ಇಂತಹ ಜಿಹಾದ್ ವಿರುದ್ದ ನಾನು ನಿಲ್ಲುತ್ತೇನೆ ಎಂದಿದ್ದಾರೆ. ಈ ಮೂಲಕ ನಾನು ಭಾರತೀಯ ಎನ್ನುವ ಸಂದೇಶವನ್ನು ಕೂಡ ಜಾವೇದ್ ಅಖ್ತರ್ ರವಾನೆ ಮಾಡಿದ್ದಾರೆ.


Click it and Unblock the Notifications











