ತೆಳ್ಳಗಿದ್ದೀಯಾ ಅಂದ್ರು, ಮೂಗು ಬದಲಿಸಿಕೋ ಅಂದ್ರು, ಅದೊಂದು ಗೆಲುವಿನಿಂದ ಎಲ್ಲರ ಬಾಯಿಗೆ ಬೀಗಬಿತ್ತು- ಮಾಧುರಿ ದೀಕ್ಷಿತ್
ಬಣ್ಣದ ಲೋಕದಲ್ಲಿ ಮಿಂಚುವುದು ಅಂದುಕೊಂಡಷ್ಟು ಸುಲಭವಲ್ಲ. ಇಲ್ಲಿ ಪ್ರತಿಭೆಯ ಜೊತೆಗೆ ಬಾಹ್ಯ ಸೌಂದರ್ಯಕ್ಕೂ ಅಷ್ಟೇ ಪ್ರಾಮುಖ್ಯತೆ ನೀಡಲಾಗುತ್ತದೆ. ಅದೆಷ್ಟೋ ನಟಿಯರು ಆರಂಭದ ದಿನಗಳಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಇಂದು ಸ್ಟಾರ್ ಪಟ್ಟದಲ್ಲಿರುವ ಹಲವರು ಅಂದು ಕಷ್ಟದ ಹಾದಿ ಸವೆಸಿ ಬಂದವರೇ ಆಗಿದ್ದಾರೆ.
ಸಿನಿಮಾ ರಂಗದಲ್ಲಿ ಯಶಸ್ಸು ಸಿಗುವ ಮುನ್ನ ಪ್ರತಿಯೊಬ್ಬರಿಗೂ ಒಂದು ಪರೀಕ್ಷೆಯ ಕಾಲವಿರುತ್ತದೆ. ಅಲ್ಲಿನ ವಿಮರ್ಶೆಗಳು ಮತ್ತು ಜನರ ಮಾತುಗಳು ಕೆಲವೊಮ್ಮೆ ಮನಸ್ಸಿಗೆ ನೋವು ನೀಡುತ್ತವೆ. ಇಂತಹ ಸವಾಲುಗಳನ್ನು ಮೀರಿ ನಿಂತವರು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಬಾಲಿವುಡ್ ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ.

ಕನಸಿನ ನಗರಿ ಮುಂಬೈನಲ್ಲಿ ನೆಲೆ ಕಂಡುಕೊಳ್ಳುವುದು ದೊಡ್ಡ ಸಾಹಸ. ಪ್ರತಿಭೆ ಇದ್ದರೂ ಅದನ್ನು ಗುರುತಿಸುವವರು ಬೇಕು. ಆರಂಭದ ದಿನಗಳಲ್ಲಿ ನಟಿಯರ ಉಡುಗೆ, ತೊಡುಗೆ ಮತ್ತು ರೂಪದ ಬಗ್ಗೆ ಕಾಮೆಂಟ್ಗಳು ಬರುವುದು ಸಾಮಾನ್ಯ. ಇದೇ ವಿಚಾರದ ಬಗ್ಗೆ ಮಾಧುರಿ ಮಾತನಾಡಿದ್ದಾರೆ.
ಮೂಗಿನ ಬಗ್ಗೆ ಕಾಮೆಂಟ್ಸ್
ಇಂದು ಮಾಧುರಿ ಅಂದರೆ ಸಾಕಷ್ಟು ಜನರ ಕ್ರಶ್. ಆದರೆ ವೃತ್ತಿಜೀವನದ ಆರಂಭದಲ್ಲಿ ಮಾಧುರಿ ದೀಕ್ಷಿತ್ ಸಾಕಷ್ಟು ಬಾಡಿ ಶೇಮಿಂಗ್ ಎದುರಿಸಿದ್ದರು. ಮುಖ್ಯವಾಗಿ ಅವರ ಮೂಗಿನ ಶೇಪ್ ಸರಿ ಇಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಆಕೆ ತುಂಬಾ ತೆಳ್ಳಗಿದ್ದಾರೆ ಎಂದು ಅನೇಕರು ಟೀಕೆ ಮಾಡಿದ್ದರಂತೆ. ನೀನು ನಾಯಕಿಯಾಗಲು ಲಾಯಕ್ಕಿಲ್ಲ ಎಂಬರ್ಥದಲ್ಲಿ ಕೆಲವರು ಮಾತನಾಡಿದ್ದರು. "ನಿಮ್ಮ ಮೂಗು ಸರಿ ಇಲ್ಲ, ಅದನ್ನು ಬದಲಾಯಿಸಿಕೊಳ್ಳಿ" ಎಂದು ನೇರವಾಗಿಯೇ ಕೆಲವರು ಸಲಹೆ ನೀಡಿದ್ದರು. ಇದನ್ನು ಕೇಳಿ ನನಗೆ ತುಂಬಾ ಬೇಸರವಾಗುತ್ತಿತು ಎಂದು ಸಂದರ್ಶನವೊಂದರಲ್ಲಿ ಮಾಧುರಿ ಹೇಳಿದ್ದಾರೆ.
ತಾಯಿ ಬೆಂಬಲ
ಇಂತಹ ಕಠಿಣ ಸಮಯದಲ್ಲಿ ಮಾಧುರಿ ದೀಕ್ಷಿತ್ ಅವರಿಗೆ ಧೈರ್ಯ ತುಂಬಿದ್ದು ಅವರ ತಾಯಿ ಸ್ನೇಹಲತಾ ದೀಕ್ಷಿತ್. ಜನರು ಟೀಕೆ ಮಾಡುತ್ತಿದ್ದಾಗ ಮಾಧುರಿ ಕುಗ್ಗಿ ಹೋಗಿದ್ದರು. ಆದರೆ ಅವರ ತಾಯಿ ಮಾತ್ರ " ಬೇರೆಯವರು ಏನು ಹೇಳುತ್ತಾರೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಿನ್ನ ಕೆಲಸದ ಮೇಲೆ ನಿನಗೆ ನಂಬಿಕೆ ಇರಲಿ" ಎಂದು ತಾಯಿ ಹುರಿದುಂಬಿಸುತ್ತಿದ್ದರು ಎಂದು ಮಾಧುರಿ ನೆನಪಿಸಿಕೊಂಡಿದ್ದಾರೆ.

"ನೀನು ಒಬ್ಬ ಒಳ್ಳೆ ನಟಿಯಾಗಿ ಗುರುತಿಸಿಕೊಳ್ಳುತ್ತೀಯಾ, ಒಂದು ಸಕ್ಸಸ್ ಸಿಕ್ಕರೆ ಎಲ್ಲವೂ ಬದಲಾಗುತ್ತದೆ. ಈ ಟೀಕೆಗಳೆಲ್ಲಾ ತಾತ್ಕಾಲಿಕ" ಎಂದು ಅವರ ತಾಯಿ ಹೇಳುತ್ತಿದ್ದರಂತೆ. ತಾಯಿಯ ಈ ಭರವಸೆಯ ಮಾತುಗಳೇ ಮಾಧುರಿ ಅವರಿಗೆ ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಲ್ಲಲು ಶಕ್ತಿ ನೀಡಿತು. ಪ್ರತಿ ಹಂತದಲ್ಲೂ ತಾಯಿ ನೀಡಿದ ಬೆಂಬಲವನ್ನು ಮಾಧುರಿ ಇಂದಿಗೂ ನೆನೆಯುತ್ತಾರೆ.
'ತೇಜಾಬ್' ಗೆಲುವು
ಇಷ್ಟೆಲ್ಲಾ ಟೀಕೆಗಳ ನಡುವೆಯೂ ಮಾಧುರಿ ದೀಕ್ಷಿತ್ ಧೃತಿಗೆಡಲಿಲ್ಲ. ಅವರು ತಮ್ಮ ನಟನೆಯ ಮೇಲೆ ನಂಬಿಕೆ ಇಟ್ಟಿದ್ದರು. ಯಾವಾಗ 'ತೇಜಾಬ್' ಸಿನಿಮಾ ತೆರೆಕಂಡಿತೋ ಅಲ್ಲಿಂದ ಮಾಧುರಿ ಅವರ ಹಣೆಬರಹವೇ ಬದಲಾಯಿತು. ಈ ಚಿತ್ರದ 'ಏಕ್ ದೋ ತೀನ್' ಹಾಡು ದೇಶಾದ್ಯಂತ ಸಂಚಲನ ಮೂಡಿಸಿತು. ಮಾಧುರಿ ರಾತ್ರೋರಾತ್ರಿ ಸ್ಟಾರ್ ಆದರು.
ಜನರು ಅವರ ಮೂಗು ಅಥವಾ ದೇಹಾಕೃತಿ ನೋಡುವುದನ್ನು ಬಿಟ್ಟು ಅವರ ನಟನೆ ಮತ್ತು ನೃತ್ಯಕ್ಕೆ ಮರುಳಾದರು. 'ತೇಜಾಬ್' ಸಿನಿಮಾ ರಿಲೀಸ್ ಆದ ನಂತರ ಜನರು ನನ್ನನ್ನು ನಾನು ಹೇಗಿದ್ದೇನೋ ಹಾಗೆಯೇ ಸ್ವೀಕರಿಸಿದರು ಎಂದು ಮಾಧುರಿ ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಟೀಕೆ ಮಾಡಿದವರೇ ನಂತರ ಅವರ ಅಭಿಮಾನಿಗಳಾದರು.
ಪ್ರತಿಭೆಗೆ ಬೆಲೆ ಹೆಚ್ಚು...
ಸಿನಿಮಾ ಜಗತ್ತಿನಲ್ಲಿ ಬಾಹ್ಯ ಸೌಂದರ್ಯಕ್ಕಿಂತ ಪ್ರತಿಭೆ ದೊಡ್ಡದು ಎಂಬುದಕ್ಕೆ ಮಾಧುರಿ ದೀಕ್ಷಿತ್ ಅವರೇ ಸಾಕ್ಷಿ. ಟೀಕೆ ಮಾಡುವವರು ಎಲ್ಲ ಕಾಲದಲ್ಲೂ ಇರುತ್ತಾರೆ. ಆದರೆ ನಾವು ನಮ್ಮ ಗುರಿಯತ್ತ ಗಮನ ಹರಿಸಬೇಕು. ಮಾಧುರಿ ಅಂದು ಜನರ ಮಾತಿಗೆ ಹೆದರಿ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದರೆ ಇಂದು ನಮಗೆ ಆ ಸಹಜ ಸುಂದರಿ ಸಿಗುತ್ತಿರಲಿಲ್ಲ.
ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಶಿಷ್ಟ ಸೌಂದರ್ಯವಿರುತ್ತದೆ. ಅದನ್ನು ಗೌರವಿಸುವುದು ಮುಖ್ಯ. ಮಾಧುರಿ ಇಂದು ಕೇವಲ ನಟಿಯಲ್ಲ, ಅವರು ಕೋಟ್ಯಂತರ ಹೆಣ್ಣುಮಕ್ಕಳಿಗೆ ಸ್ಫೂರ್ತಿ. ಅವರ ಈ ಹಳೆಯ ನೆನಪುಗಳು ಈಗಿನ ಉದಯೋನ್ಮುಖ ಕಲಾವಿದರಿಗೆ ಧೈರ್ಯ ತುಂಬುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











