ಉಂಡ ಮನೆಗೆ ದ್ರೋಹ, ಪಾಕಿಸ್ತಾನಕ್ಕೆ ತನ್ನನ್ನು ಮಾರಿಕೊಂಡ ಯೂಟ್ಯೂಬರ್ ಜ್ಯೋತಿ ಯಾರು ?
ಕಳೆದ ಕೆಲ ವರ್ಷಗಳಿಂದ ಯೂಟ್ಯೂಬ್ ಹಾವಳಿ ಹೆಚ್ಚಾಗಿದೆ. ಉತ್ತಮವಾದ ಕಂಟೆಂಟ್ಗಳನ್ನು ಕೊಡುವ ಮೂಲಕ ಅನೇಕರು ಬಳಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಿಜಕ್ಕೂ ಗೆಲುವನ್ನು ಸಾಧಿಸಿದ್ದಾರೆ. ಶ್ರಮದಿಂದ ಮಾತ್ರ ಯಶಸ್ಸು ಎನ್ನುವುದನ್ನು ಕೂಡ ಸಾಬೀತು ಮಾಡಿದ್ದಾರೆ. ಆದರೆ, ಇದೇ ಯೂಟ್ಯೂಬ್ ಹೆಸರಿನಲ್ಲಿ ಹಣ ಮಾಡಲು.. ಬೇರೊಬ್ಬರನ್ನು ವಂಚಿಸಲು.. ಬ್ಲಾಕ್ ಮೇಲ್ ಮಾಡಲು ನಿಂತವರು ಕೂಡ ಅಸಂಖ್ಯಾತ ಜನರಿದ್ದಾರೆ.
ಕೇವಲ ಇಷ್ಟೇ ಅಲ್ಲ.. ಹಣದಾಸೆಗೆ ಆತ್ಮವಂಚನೆ ಮಾಡಿಕೊಳ್ಳುವ.. ತಮ್ಮನ್ನು ತಾವೇ ಮಾರಿಕೊಳ್ಳುವ.. ಉಂಡ ಮನೆಗೆ ದ್ರೋಹ ಬಗೆಯುವರು ಕೂಡ ಹಲವಾರು ಜನ ನಮ್ಮ ಸುತ್ತಮುತ್ತವೇ ಇದ್ದಾರೆ. ಉದಾಹರಣೆಗೆ ಜ್ಯೋತಿ ಮಲ್ಹೋತ್ರಾ.

ಹೌದು, ಜ್ಯೋತಿ ಮಲ್ಹೋತ್ರಾ .. ಭಾರತದವಳಾಗಿ, ಭಾರತದ ವಾತಾವರಣದಲ್ಲಿ ಬೆಳೆದು, ಭಾರತದ ಅನ್ನುವನ್ನು ತಿಂದು, ಪಾಪಿ ಪಾಕಿಸ್ತಾನದ ಜೊತೆ ಕೈ ಜೋಡಿಸಿದ್ದ ಮಹಿಳೆ. ಟ್ರಾವೆಲ್ ವಿತ್ ಜೋ ಎಂಬ ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಮಣ್ಣು ತಿನ್ನುವ ಕೆಲಸವನ್ನು ಈಕೆ ಮಾಡಿದ್ದಾಳೆ. ಪಾಕಿಸ್ತಾನದ ಪರವಾಗಿ ಭಾರತದಲ್ಲಿ ಬೇಹುಗಾರಿಕೆ ನಡೆಸಿದ್ದಾಳೆ. ಸದ್ಯ ಜೈಲು ಪಾಲಾಗಿದ್ದಾಳೆ.
ಹೇಗೆ ಶುರುವಾಯ್ತು ಸಂಬಂಧ ?
ತನ್ನ ಪಾಡಿಗೆ ಯೂಟ್ಯೂಬ್ನಲ್ಲಿ ವಿಡಿಯೋ ಹಾಕುತ್ತಾ, 3,77,000 ಸಬ್ಸ್ಕ್ರೈಬರ್ಗಳನ್ನು ಹೊಂದಿದ್ದ ಜ್ಯೋತಿ 2023ರಲ್ಲಿ ಪಾಕಿಸ್ತಾನಕ್ಕೆ ಪ್ರವಾಸಕ್ಕೆ ಹೋಗಲು ದೆಹಲಿಯ ಪಾಕಿಸ್ತಾನ ಹೈಕಮಿಷನ್ನಲ್ಲಿರುವ ಎಹ್ಸಾನ್ ಉರ್ ರಹೀಮ್ ಅಲಿಯಾಸ್ ಡ್ಯಾನಿಶ್ನನ್ನು ಸಂಪರ್ಕಿಸಿದ್ದಳು. ಇಲ್ಲಿಂದ ಇಬ್ಬರ ನಡುವೆ ಸ್ನೇಹ ಶುರುವಾಗಿತ್ತು. ಸಲುಗೆ ಬೆಳೆಯಿತು. ಆ ನಂತರ ಇದೇ ಡ್ಯಾನಿಶ್ ಪಾಕಿಸ್ತಾನದ ಗುಪ್ತಚರ ಇಲಾಖೆಗಳಿಗೆ ಜ್ಯೋತಿಯನ್ನು ಪರಿಚಯ ಮಾಡಿಸಿದ್ದ. ಪಾಕಿಸ್ತಾನದಲ್ಲಿ ಜ್ಯೋತಿ ಮಲ್ಹೋತ್ರಾಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೂಡ ನೋಡಿಕೊಂಡಿದ್ದ.
ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿರುವಂತೆ ಪಾಕಿಸ್ತಾನದ ರಾಯಭಾರಿ ಕಚೇರಿಯ ಡ್ಯಾನಿಶ್ ಸಾಂಗತ್ಯ ಬೆಳೆಸಿದ್ದ ಕಾರಣಕ್ಕೆ ಪಾಕಿಸ್ತಾನದಲ್ಲಿ ಜ್ಯೋತಿ ಮಲ್ಹೋತ್ರಾಗೆ ವಿಐಪಿ ಟ್ರೀಟ್ಮೆಂಟ್ನ್ನು ನೀಡಲಾಗುತ್ತಿತ್ತು. ಪಾಕಿಸ್ತಾನದಲ್ಲಿ ಎಲ್ಲಿಗೆ ಹೋದರು ಕೂಡ ಜ್ಯೋತಿಗೆ ಪಾಕಿಸ್ತಾನದ ಪೊಲೀಸರಿಂದ ಭದ್ರತೆ ಸಿಗುತ್ತಿತ್ತು.
ಇದೆಲ್ಲದಕ್ಕೆ ಪೂರಕವಾಗಿ ಜ್ಯೋತಿ ಮಲ್ಹೋತ್ರಾ ಖುದ್ದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪಾಕಿಸ್ತಾನದಲ್ಲಿ ನಡೆದ ಹೈ ಪ್ರೊಪೈಲ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದರು. ಈ ಪಾರ್ಟಿಗಳಲ್ಲಿ ಗುಪ್ತಚರ ಸಂಸ್ಥೆಗಳಲ್ಲದೇ ಪಾಕಿಸ್ತಾನದ ಹಿರಿಯ ಅಧಿಕಾರಿಗಳನ್ನು ಕೂಡ ಜ್ಯೋತಿ ಮಲ್ಹೋತ್ರಾ ಭೇಟಿ ಮಾಡುತ್ತಿದ್ದರು ಎನ್ನಲಾಗಿದೆ.
ಎಫ್ಐಆರ್ನಲ್ಲಿ ಏನಿದೆ ?
ಜ್ಯೋತಿ ಮಲ್ಹೋತ್ರಾ ವಿರುದ್ಧ ದಾಖಲಾದ ಎಫ್ಐಆರ್ ಪ್ರಕಾರ ಜ್ಯೋತಿ ಮಲ್ಹೋತ್ರಾ ಎರಡು ಬಾರಿ ಪಾಕಿಸ್ತಾನದ ಪ್ರವಾಸವನ್ನು ಮಾಡಿದ್ದಳು. ಪಾಕಿಸ್ತಾನದ ಈ ಪ್ರವಾಸದ ಸಮಯದಲ್ಲಿ ಅಲಿ ಅಹ್ವಾನ್ ಎಂಬ ವ್ಯಕ್ತಿ ಈಕೆಗೆ ಉಳಿದುಕೊಳ್ಳಲು ಎಲ್ಲ ವ್ಯವಸ್ಥೆ ಮಾಡಿದ್ದ. ಇದೇ ಸಮಯದಲ್ಲಿ ಅಲಿ ಎಹ್ವಾನ್, ಶಕೀರ್ ಮತ್ತು ರಾಣಾ ಶಹಬಾಜ್ ಎಂಬ ಪಾಕಿಸ್ತಾನದ ಮೂವರು ಅಧಿಕಾರಿಗಳನ್ನು ಕೂಡ ಜ್ಯೋತಿ ಮಲ್ಹೋತ್ರಾ ಭೇಟಿ ಮಾಡಿದ್ದು ಯಾರಿಗೂ ಅನುಮಾನ ಬಾರದಿರಲಿ ಎಂದು ರಾಣಾ ಶಹಬಾಜ್ ಮೊಬೈಲ್ ನಂಬರನ್ನು ಜಾಟ್ ರಾಂಧವ್ ಹೆಸರಿನಲ್ಲಿ ಸೇವ್ ಮಾಡಿಕೊಂಡಿದ್ದಳು.
ಹೀಗೆ ಬೇರೆ ಬೇರೆ ಹೆಸರಿನಲ್ಲಿ ಪಾಕಿಸ್ತಾನದ ಅಧಿಕಾರಿಗಳ ನಂಬರ್ ತನ್ನ ಮೊಬೈಲ್ ನಲ್ಲಿ ಸೇವ್ ಮಾಡಿದ್ದ ಜ್ಯೋತಿ ಮಲ್ಹೋತ್ರಾ, ವಾಟ್ಸಾಫ್, ಟೆಲಿಗ್ರಾಮ್, ಸ್ನ್ಯಾಪ್ ಚಾಟ್ನಂತಹ ಎನ್ಕ್ರಿಪ್ಟ್ ಮಾಡಲಾದ ಪ್ಲಾಟ್ಫಾರ್ಮ್ಗಳ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದಳು, ಆಪರೇಷನ್ ಸಿಂಧೂರ್ ಸೇರಿ ಭಾರತಕ್ಕೆ ಸಂಬಂಧಿಸಿದ ಹಲವು ಸೂಕ್ಷ್ಮ ಮಾಹಿತಿಗಳನ್ನು ರವಾನೆ ಮಾಡಿದ್ದಳು ಎನ್ನುವ ಆರೋಪವನ್ನು ಈಕೆಯ ಮೇಲೀಗ ಮಾಡಲಾಗಿದೆ.
ಪಾಕಿಸ್ತಾನದ ಮೇಲಿನ ಪ್ರೇಮ
ಟ್ರಾವೆಲ್ ವ್ಲಾಗರ್ ಎಂದು ಹೇಳಿಕೊಂಡೇ ಪಾಕಿಸ್ತಾನದ ಪ್ರದಕ್ಷಣೆಯನ್ನು ಹಾಕಿ ಬಂದ ಜ್ಯೋತಿ ಮಲ್ಹೋತ್ರಾ, ತನ್ನ ವಿಡಿಯೋಗಳಲ್ಲಿ ಪಾಕಿಸ್ತಾನವನ್ನು ಬಾಯ್ತುಂಬ ಹೊಗಳುವ ಕೆಲಸವನ್ನು ಮಾಡಿದ್ದಾಳೆ. ಲಾಹೋರ್ ಅಂದರೆ ಪ್ರೀತಿ ಎಂಬರ್ಥದ ಬರಹಗಳನ್ನು ಬರೆದುಕೊಂಡಿದ್ದಾಳೆ.
ಈ ಮೂಲಕ ಪಾಕಿಸ್ತಾನದ ಜನರನ್ನು ಸೆಳೆಯುವ ಪ್ರಯತ್ನ ಮಾಡಿರುವ ಈಕೆಯನ್ನು ವಿದೇಶಿ ಏಜೆಂಟರು ಕೂಡ ಪ್ರಚಾರಕ್ಕೆ ಬಳಸಿಕೊಂಡಿದ್ಧಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಇನ್ನು ಅತ್ತಾರಿ-ವಾಘಾ ಗಡಿಯಿಂದ ಲಾಹೋರ್ನ ಅನಾರ್ಕಲಿ ಬಜಾರ್ ವರೆಗೆ ತಿರುಗಾಡಿಕೊಂಡು ವಿಡಿಯೋ ಮಾಡಿರುವ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದ ಅತಿ ದೊಡ್ಡ ಹಿಂದೂ ದೇವಾಲಯವಾದ ಕಟಾಸ್ ರಾಜ್ ದೇವಾಲಯಕ್ಕೆ ಕೂಡ ಭೇಟಿಯನ್ನು ನೀಡಿದ್ದಾಳೆ. ಪಾಕಿಸ್ತಾನದ ಆಹಾರ ಪದ್ದತಿಯ ಕುರಿತು ಮಾತನಾಡುತ್ತಾ ಎರಡು ದೇಶಗಳ ಸಂಸ್ಕ್ರತಿಯನ್ನು ಹೋಲಿಕೆ ಮಾಡಿದ್ದಾಳೆ.
ಪಾಕ್ ಏಜೆಂಟ್ ಜೊತೆ ಪ್ರೀತಿ ?
ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರಿಗೆ ಸೂಕ್ಷ್ಮ ಮಾಹಿತಿ ನೀಡುತ್ತಿದ್ದ ಜ್ಯೋತಿ ಮಲ್ಹೋತ್ರಾ ಗುಪ್ತಚರ ಕಾರ್ಯಕರ್ತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು ಎನ್ನುವ ವಿಚಾರ ಕೂಡ ತನಿಖೆ ವೇಳೆ ಗೊತ್ತಾಗಿದೆ. ಈ ಕಾರ್ಯಕರ್ತನ ಜೊತೆ ಇಂಡೋನೇಷ್ಯಾದ ಬಾಲಿಗೆ ಕೂಡ ಜ್ಯೋತಿ ಪ್ರಯಾಣ ಬೆಳೆಸಿದ್ದಳು ಎಂದು ತನಿಖಾಧಿಕಾರಿಗಳು ಹೇಳಿದ್ದು ಈ ವಿಚಾರದಲ್ಲಿ ಕೂಡ ಹೆಚ್ಚಿನ ತನಿಖೆಯನ್ನು ಮಾಡಲಾಗುತ್ತಿದೆ.
ಭಾರತ-ಪಾಕಿಸ್ತಾನ್ ಒಂದಾಗಬೇಕು
ಕಳೆದ ಮಾರ್ಚ್ನಲ್ಲಿ ಕೂಡ ಪಾಕಿಸ್ತಾನಕ್ಕೆ ಹೋಗಿದ್ದ ಜ್ಯೋತಿ ಮಲ್ಹೋತ್ರಾ, ವಾಘಾ ಬಾರ್ಡರ್ ಬಳಿ ತಾನು ನಿಂತಿರುವ ಫೋಟೊವನ್ನು ಹಂಚಿಕೊಂಡು 'ಯುದ್ದಕ್ಕಿಂತ ಶಾಂತಿ ದೊಡ್ಡದು, ಭಾರತ ಮತ್ತು ಪಾಕಿಸ್ತಾನ ಮತ್ತೆ ಒಂದಾಗಬೇಕು ಎಂದು ಬರೆದುಕೊಂಡಿದ್ದಳು. ತನ್ನನ್ನು ಭಾರತೀಯಳು ಮತ್ತು ಪಾಕಿಸ್ತಾನದವಳು ಎಂದು ಕೂಡ ಹೇಳಿಕೊಂಡಿದ್ದಳು.
ನೇಪಾಳ- ಚೈನಾದಲ್ಲಿ ಐಶಾರಾಮಿ ಜೀವನ
ಪಾಕಿಸ್ತಾನದ ಜೊತೆ ನಿಕಟ ಸಂಪರ್ಕ ಹೊಂದಿದ್ದ ಜ್ಯೋತಿ ಮಲ್ಹೋತ್ರಾ, ನೇಪಾಳಕ್ಕೆ ಕೂಡ ಹೋಗಿದ್ದಳು. ಇಷ್ಟೇ ಅಲ್ಲ ಚೀನಾಗೆ ಕೂಡ ಹೋಗಿದ್ದಳು. ವಿಶೇಷ ಅಂದರೆ ಇಲ್ಲಿ ತುಂಬಾ ಸರಳವಾದ ಜೀವನ ನಡೆಸುತ್ತಿದ್ದ ಜ್ಯೋತಿ ಮಲ್ಹೋತ್ರಾ ಹೊರ ದೇಶಕ್ಕೆ ಹೋದಾಗ ಐಶಾರಾಮಿ ಜೀವನ ನಡೆಸುತ್ತಿದ್ದಳು ಎಂದು ವರದಿಯಾಗಿದೆ. ಇನ್ನು ಇದೆಲ್ಲದಕ್ಕೂ ಕಾರಣವಾದ ಡ್ಯಾನಿಶ್ ಪಾಕಿಸ್ತಾನದಲ್ಲಿ ತನ್ನ ಪತ್ನಿಯನ್ನು ಕೂಡ ಜ್ಯೋತಿ ಮಲ್ಹೋತ್ರಾಗೆ ಪರಿಚಯ ಮಾಡಿಸಿದ್ದ ಎಂದು ಕೂಡ ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ.
ಯಾವೆಲ್ಲಾ ಪ್ರಕರಣ ?
ಜ್ಯೋತಿ ಮಲ್ಹೋತ್ರಾಳನ್ನು ಹರಿಯಾಣಾದ ಹಿಸಾರ್ ಪೊಲೀಸರು ಬಂಧಿಸಿದ್ದು, 1923ರ ಅಧಿಕೃತ ರಹಸ್ಯ ಕಾಯ್ದೆ { ಅಫಿಶಿಯಲ್ ಸೀಕ್ರೇಟ್ಸ್ ಆಕ್ಟ್ } ಸೆಕ್ಷನ್ 3, 4 ಮತ್ತು 5 ಮತ್ತು ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 152ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಒಂಬತ್ತು ಜನರ ಬಂಧನ
ಕೇವಲ ಜ್ಯೋತಿ ಮಲ್ಹೋತ್ರಾ ಮಾತ್ರವಲ್ಲ ದೇಶದ್ರೋಹದ ಆರೋಪದಡಿ ಹರಿಯಾಣ ಮತ್ತು ಪಂಜಾಬ್ನೆಲ್ಲೆಡೆ ಐಎಸ್ಐ { ಪಾಕಿಸ್ತಾನದ ಇಂಟರ್ ಸರ್ವಿಸ್ ಇಂಟಿಲಿಜೆನ್ಸ್ } ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಡಿ ಎರಡು ವಾರಗಳಲ್ಲಿ ಒಂಬತ್ತು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಹಿಸಾರ್ ಪೊಲೀಸ್ ವಕ್ತಾರ ವಿಕಾಸ್ ಕುಮಾರ್ ಜ್ಯೋತಿ ಮಲ್ಹೋತ್ರಾ ಬಂಧನವನ್ನು ಖಚಿತ ಪಡಿಸಿದ್ದು ಹೆಚ್ಚಿನ ಮಾಹಿತಿಗಾಗಿ ಜ್ಯೋತಿ ಮಲ್ಹೋತ್ರಾ ಅವರ ವಿಚಾರಣೆಯನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ತಪ್ಪೊಪ್ಪಿಕೊಂಡಿರುವ ಜ್ಯೋತಿ
ಸ್ಥಳೀಯ ನ್ಯಾಯಾಲಯಕ್ಕೆ ಜ್ಯೋತಿಯನ್ನು ಹಾಜರು ಪಡಿಸಲಾಗಿದ್ದು ತಾನು ಮಾಡಿರುವ ತಪ್ಪುಗಳನ್ನೆಲ್ಲ ಜ್ಯೋತಿ ಮಲ್ಹೋತ್ರಾ ಸದ್ಯ ಒಪ್ಪಿಕೊಂಡಿದ್ದಾಳೆ. ನ್ಯಾಯಾಲಯ 5 ದಿನಗಳವರೆಗೆ ಜ್ಯೋತಿ ಮಲ್ಹೋತ್ರಾಳನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದು, ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ ಹಸ್ತಾಂತರ ಕೂಡ ಮಾಡಲಾಗಿದೆ.


Click it and Unblock the Notifications











