ಜಾಣಮೌನ, ದಿವ್ಯ ನಿರ್ಲಕ್ಷ್ಯ ; ಧುರಂಧರ್ ಬಗ್ಗೆ ಮಾತನಾಡಿಲ್ಲವೇಕೆ ದೀಪಿಕಾ ಪಡುಕೋಣೆ - ಇಲ್ಲಿದೆ ಉತ್ತರ
ಪ್ರೀತಿ ತೋರ್ಪಡಿಕೆಯಲ್ಲ, ಕಾಣದ ಸ್ಪರ್ಶ. ಸವಿದರಷ್ಟೇ ಚೆಂದ. ಆದರೆ ಕಾಲ ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ಪ್ರದರ್ಶನಕ್ಕಿಡಬೇಕು. ಇಲ್ಲದಿದ್ದರೆ ಸಮಾಜ ಅನುಮಾನದ ದೃಷ್ಟಿಯಿಂದ ನೋಡುತ್ತೆ. ನಾನಾ ರೀತಿಯ ಕಥೆ ಹೆಣೆಯುತ್ತೆ.
ಇನ್ನೂ ಚಿತ್ರರಂಗದ ಹಿನ್ನೆಲೆಯುಳ್ಳವರಾಗಿದ್ದರೆ, ಅದರಲ್ಲಿಯೂ ಸ್ಟಾರ್ ಎಂಬ ಸಿಂಹಾಸನದ ಮೇಲೆ ಯಾರಾದರೂ ಕುಂತಿದ್ದರೆ ಮುಗಿದೇ ಹೋಯ್ತು. ವೈಯಕ್ತಿಕ ಬದುಕಿನ ಇಂಚಿಂಚೂ ವಿವರವನ್ನು ಬಹಿರಂಗವಾಗಿ ಹಂಚಿಕೊಳ್ಳಬೇಕೆಂದು ಅನೇಕರು ದುಂಬಾಲು ಬೀಳುತ್ತಾರೆ.

ಹೀಗಾಗಿ ಸೆಲೆಬ್ರೇಟಿಗಳ ಪಾಲಿಗೆ ನೆಮ್ಮದಿ ಎನ್ನೋದು ಕೇವಲ ಒಂದು ಲೈಕ್ ಮತ್ತು ಪೋಸ್ಟ್ ಮೇಲೆ ಅವಲಂಬಿತವಾಗಿರುತ್ತೆ. ತಮ್ಮ ಇಷ್ಟಾನುಸಾರ ಸೆಲೆಬ್ರೇಟಿಗಳು ನಡೆದುಕೊಳ್ಳದೇ ಇದ್ದರೆ ಹಲವರು ಮುಗಿಬೀಳುತ್ತಾರೆ. ದೀಪಿಕಾ ಪಡುಕೋಣೆ ವಿಚಾರದಲ್ಲಿ ಕೂಡ ಇದೇ ಆಗಿತ್ತು.
ಹೌದು. ಎಲ್ಲರಿಗೆ ಗೊತ್ತಿರುವಂತೆ ಮತ್ತೊಮ್ಮೆ ಭಾರತದಲ್ಲಿ ''ಧುರಂಧರ್'' ಅಲೆ ಎದ್ದಿದೆ. ''ಧುರಂಧರ್ 2'' ಚಿತ್ರ ಕಣ್ತುಂಬಿಕೊಂಡು ಒಂದು ವರ್ಗ ರಣಕೇಕೆ ಹಾಕುತ್ತಿದೆ. ಸೋಶಿಯಲ್ ಮೀಡಿಯಾ ತೆರೆದರೆ ಸಾಕು ಅಲ್ಲಿ ''ಧುರಂಧರ್ 2'' ಕುರಿತು ಹತ್ತು ಹಲವು ಚರ್ಚೆಗಳು ಕಣ್ಣಿಗೆ ರಾಚುತ್ತಿವೆ.
ಬಿಡುಗಡೆಯಾಗಿ 20 ದಿನಗಳಾದರೂ ಬಾಕ್ಸಾಫೀಸ್ನಲ್ಲಿ ''ಧುರಂಧರ್ 2'' ಅಬ್ಬರಕ್ಕೆ ಇನ್ನೂ ಹಣದ ಮಳೆಯೇ ಬೀಳುತ್ತಿದೆ. ಆದರೆ, ದೀಪಿಕಾ ಪಡುಕೋಣೆ ಮಾತ್ರ ಇಲ್ಲಿಯವರೆಗೆ ಈ ಚಿತ್ರದ ಕುರಿತು ಮಾತನಾಡಲಿಲ್ಲ. ತಮ್ಮ ಪತಿ ದೈವ ರಣ್ವೀರ್ ಸಿಂಗ್ ಅಭಿನಯವನ್ನು ಕೊಂಡಾಡಿಲ್ಲ.
ಇನ್ನು ''ಧುರಂಧರ್'' ಗೆಲುವು ರಣವೀರ್ ಸಿಂಗ್ ಪಾಲಿಗೆ ಸಾಮಾನ್ಯವಾದ ಗೆಲುವು ಅಲ್ಲ. ಇಂತಹದ್ದೊಂದು ದಿನಕ್ಕೆ ರಣ್ವೀರ್ ಸಿಂಗ್ ಹಲವಾರು ವರ್ಷಗಳಿಂದ ಪರಿತಪಿಸುತ್ತಿದ್ದರು. ಹಲವು ಅವಮಾನಗಳನ್ನು ಬಾಲಿವುಡ್ನಲ್ಲಿ ಎದುರಿಸಿದ ನಂತರ ರಣವೀರ್ ಸಿಂಗ್ಗೆ ಈ ಭವ್ಯವಾದ ಸನ್ಮಾನ ಸಿಕ್ಕಿದೆ.

ದೀಪಿಕಾ ಪಡುಕೋಣೆ ಅವರಿಗಿಂತ ಈ ಎಲ್ಲ ವಿಷಯವನ್ನು ಚೆನ್ನಾಗಿ ಬಲ್ಲ ವ್ಯಕ್ತಿ ಯಾರಿದ್ದಾರೆ..? ರಣವೀರ್ ಸಿಂಗ್ ಬದುಕಿನ ಏರಿಳಿತವನ್ನು ಹತ್ತಿರದಿಂದ ಕಂಡವರು ದೀಪಿಕಾ ಪಡುಕೋಣೆ. ಹೀಗಿದ್ದೂ ಕೂಡ ದೀಪಿಕಾ ಮಾತನಾಡದಿರುವುದನ್ನು ಕಂಡ ಹಲವರು ದೀಪಿಕಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಶುರು ಮಾಡಿದ್ದರು. ಟ್ರೋಲ್ ಮಾಡತೊಡಗಿದರು. ದೀಪಿಕಾ ಪಡುಕೋಣೆಗೆ ತಮ್ಮ ಗಂಡನ ಗೆಲುವಿಗಿಂತ ತಮ್ಮ ರಾಜಕೀಯ ಸಿದ್ದಾಂತವೇ ಹೆಚ್ಚಾಯ್ತು ಎಂದು ಕಿಡಿ ಕಾರಲು ಶುರು ಮಾಡಿದ್ದರು. ಸದ್ಯ ದೀಪಿಕಾ ಪಡುಕೋಣೆ ಈ ಚರ್ಚೆಗೆ ಪೂರ್ಣ ವಿರಾಮ ಇಟ್ಟಿದ್ದಾರೆ. ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.
ಹೌದು, ಕಲ್ಚರ್ ಸರ್ಕಲ್ ಎಂಬ ಖಾತೆಯಲ್ಲಿ ದೀಪಿಕಾ ಪಡುಕೋಣೆ ಅವರು ₹500 ಕೋಟಿ ಬಜೆಟ್ನ ಸಿನಿಮಾ ಕೊಂಡಾಡುತ್ತಾರೆ. ''ಧುರಂಧರ್ 2'' ವಿಶ್ವದಾಖಲೆ ಬರೆಯುತ್ತಿದ್ದರೆ, ದೀಪಿಕಾ ಮಾತ್ರ ಪ್ರೀಮಿಯರ್ ಶೋ ಬಿಟ್ಟು ತಮ್ಮ ಅತ್ತೆ-ಮಾವನ ಜೊತೆ ಸಿತಾರ್ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಯಾವುದೇ ಪೋಸ್ಟ್ ಇಲ್ಲ, ಹೊಗಳಿಕೆಯೂ ಇಲ್ಲ, ಬರೀ ಮೌನ. ಅವರು ನಿರ್ದೇಶಕರ ವಿರುದ್ಧ ಹೀಗೆ ಮಾಡುತ್ತಿದ್ದಾರಾ..? ಅಥವಾ ಅಂತರ್ಜಾಲದ ಡ್ರಾಮಾದಿಂದ ದೂರ ಇರಲು ಪ್ರಯತ್ನಿಸುತ್ತಿದ್ದಾರಾ..? ಎಂದು ಪೋಸ್ಟ್ ಮಾಡಲಾಗಿತ್ತು. ಇಷ್ಟೇ ಅಲ್ಲ ಅತಿಯಾದ ವಿಶ್ಲೇಷಣೆ, ಲೆಕ್ಕಾಚಾರದ ನಿರ್ಲಕ್ಷ್ಯ ಎಂದು ಆಯ್ಕೆ ನೀಡಿ ಜನರ ಅಭಿಪ್ರಾಯವನ್ನು ಕೂಡ ಕೇಳಲಾಗಿತ್ತು.
ಈ ಪೋಸ್ಟ್ಗೆ ದೀಪಿಕಾ ಪಡುಕೋಣೆ ಸದ್ಯ ಖಂಡ ತುಂಡ ಉತ್ತರ ನೀಡಿದ್ದಾರೆ. ನಿಮ್ಮೆಲ್ಲರಿಗಿಂತ ಮೊದಲು ನಾನು ಈ ಸಿನಿಮಾ ನೋಡಿದ್ದೇನೆ ಎನ್ನುವುದು ನೆನಪಿರಲಿ ಎಂದು ಹೇಳಿರುವ ದೀಪಿಕಾ ಇಂಟರ್ನೆಟ್ನಲ್ಲಿ ನಡೆಯುತ್ತಿರುವ ಚರ್ಚೆಗಳಿಂದ ದೂರ ಇರಲು ಸುಮ್ಮನಾಗಿರುವುದಾಗಿ ಹೇಳಿದ್ದಾರೆ.ಈ ಜೋಕ್ ಈಗ ಯಾರ ಮೇಲೆ ಎನ್ನುವುದನ್ನು ಹೇಳಿ ಎಂದು ತಿರುಗೇಟು ನೀಡಿದ್ಧಾರೆ.ಈ ಮೂಲಕ ಕಾಲೆಳೆಯುವರ ಬಾಯಿ ಮುಚ್ಚಿಸುವ ಪ್ರಯತ್ನವನ್ನು ದೀಪಿಕಾ ಪಡುಕೋಣೆ ಮಾಡಿದ್ದಾರೆ.



Click it and Unblock the Notifications











