ಚಿತ್ರರಂಗದಿಂದ ಏಕಾಏಕಿ ದೂರ ಸರಿದ ಖ್ಯಾತ ನೃತ್ಯ ನಿರ್ದೇಶಕಿ, ಅಂತದ್ದೇನಾಯ್ತು?
ಹೊಸ ನೀರು ಬಂದಾಗ ಹಳೆಯ ನೀರು ಕೊಚ್ಚಿಕೊಂಡು ಹೋಗಬೇಕು, ಹೊಸ ಎಲೆ ಬಂದಾಗ ಹಳೆಯ ಎಲೆ ಉದುರಲೇಬೇಕು.. ಇದು ನೈಸರ್ಗಿಕ ಪ್ರಕ್ರಿಯೆ. ಆದರೆ.. ಕೆಲವರು ಈ ಪ್ರಕ್ರಿಯೆಗೆ ವಿರುದ್ಧವಾಗಿ ನಡೆಯುತ್ತಾರೆ. ನಿವೃತ್ತಿ ಪಡೆಯುವ ವಯಸ್ಸಾದರು ಕೂಡ ಕೆಲಸದಲ್ಲಿ ಮುಂದುವರೆಯುವ ಪ್ರಯತ್ನ ಮಾಡುತ್ತಾರೆ. ಈ ಮೂಲಕ ಹೊಸಬರ ಅವಕಾಶವನ್ನು ಕಿತ್ತುಕೊಳ್ಳುತ್ತಾರೆ. ಆ ಕ್ಷೇತ್ರ .. ಈ ಕ್ಷೇತ್ರ .. ಎಂದೇನೂ ಇಲ್ಲ.
ಸರ್ಕಾರಿ ನೌಕರರನ್ನು ಹೊರತು ಪಡಿಸಿದರೆ ಬಹುತೇಕ ಕ್ಷೇತ್ರಗಳಲ್ಲಿ ಬಹುತೇಕರ ಮನಸ್ಥಿತಿ ಇದ್ದೇ ತರಹದ್ದಾಗಿರುತ್ತೆ. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಇಳಿ ವಯಸ್ಸಿನಲ್ಲಿ ಕೂಡ ಹಲವರು ಇಲ್ಲಿ ನಾಯಕನಾಗಿಯೇ ಮುಂದುವರೆಯುವ ಪ್ರಯತ್ನ ಮಾಡುತ್ತಾರೆ. ಹಣ-ಕೀರ್ತಿ ಎಲ್ಲವೂ ಕಾಲಬುಡದಲ್ಲಿ ಬಂದು ಬೀಳುತ್ತಿರುವಾಗ ಹೊಸಬರಿಗೋಸ್ಕರ ನಿವೃತ್ತಿ ಪಡೆದು ಯಾಕೆ ಮೂಲೆ ಗುಂಪಾಗಬೇಕೆಂದೇ ಹಲವರು ಯೋಚನೆ ಮಾಡುತ್ತಾರೆ. ಆದರೆ .. ಗೀತಾ ಕಪೂರ್ ಇದಕ್ಕೆ ತದ್ವಿರುದ್ದ.

ಹೌದು, ಗೀತಾ ಕಪೂರ್.. ಬಾಲಿವುಡ್ನ ಪ್ರಖ್ಯಾತ ನೃತ್ಯ ನಿರ್ದೇಶಕಿ. ಹಿಂದಿಯ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ 'ಗೀತಾ ಮಾ' ಎಂದೇ ಜನಜನಿತರಾದವರು ಇವರು.
ಬಾಲಿವುಡ್ನ ಮತ್ತೊಬ್ಬ ಖ್ಯಾತ ಕೊರಿಯೋಗ್ರಾಫರ್ ಫರ್ಹಾ ಖಾನ್ ಅವರ ಬಳಿ 1998ರಲ್ಲಿ ತನ್ನ 17ರ ಪ್ರಾಯದಲ್ಲಿ ಸಹಾಯಕ ನೃತ್ಯ ನಿರ್ದೇಶಕಿಯಾಗಿ ಸೇರಿಕೊಂಡು ಆ ನಂತರ ಸ್ವತಂತ್ರ್ಯ ನೃತ್ಯ ನಿರ್ದೇಶಕಿಯಾಗಿ ಗುರುತಿಸಿಕೊಂಡ ಗೀತಾ ಕಪೂರ್ ಇಲ್ಲಿಯವರೆಗೆ ಹಲವಾರು ಚಿತ್ರಗಳನ್ನು ಹಾಡುಗಳ ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ.
ಆ ಪೈಕಿ ಫಿಜಾ.. ಅಶೋಕಾ.. ಸಾಥಿಯಾ.. ಹೇ ಬೇಬಿ.. ಪ್ರಮುಖವಾದವು. ಇನ್ನು ಕರೀನಾ ಕಪೂರ್ ಅವರ ಜಗದ್ವಿಖ್ಯಾತ ಹಾಡು ಶೀಲಾ ಕೀ ಜವಾನಿ ಹಾಡನ್ನು ಕೂಡ ಕೊರಿಯೋಗ್ರಾಫ್ ಮಾಡಿದವರು ಕೂಡ ಇದೇ ಗೀತಾ ಕಪೂರ್.
ಇಂಥಾ ಗೀತಾ ಕಪೂರ್ ಕಳೆದ ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ .. ಇಂಡಿಯಾಸ್ ಡ್ಯಾನ್ಸಿಂಗ್ ಸೂಪರ್ ಸ್ಟಾರ್.. ಸೂಪರ್ ಡ್ಯಾನ್ಸರ್.. ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್.. ಹೀಗೆ ಹಲವಾರು ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಲೇ ಬಂದಿದ್ದಾರೆ.

ಆದರೆ.. ಕಳೆದ ಕೆಲ ದಿನಗಳಿಂದ ಗೀತಾ ಕಪೂರ್ ಚಿತ್ರರಂಗದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಯಾವ ಹೊಸ ಚಿತ್ರವನ್ನು ಒಪ್ಪಿಕೊಂಡು ನೃತ್ಯ ನಿರ್ದೇಶನವನ್ನು ಮಾಡುತ್ತಿಲ್ಲ. ಗೀತಾ ಕಪೂರ್ ಅವರ ಈ ನಡೆಯಿಂದ ಸಹಜವಾಗಿ ಅನೇಕರಲ್ಲಿ ಯಾಕೆ ಎನ್ನುವ ಪ್ರಶ್ನೆ ಇತ್ತು. ಇದೀಗ ಈ ಪ್ರಶ್ನೆಗಳಿಗೆ ಉತ್ತರವನ್ನು ಗೀತಾ ಕಪೂರ್ ನೀಡಿದ್ದಾರೆ. ಕಿರುತೆರೆ ಮತ್ತು ಬೆಳ್ಳಿತೆರೆಯಿಂದ ನಿವೃತ್ತಿ ಪಡೆದಿರುವುದಾಗಿ ಹೇಳಿದ್ದಾರೆ.
ಈ ಕುರಿತು 'ಹಿಂದಿ ರಶ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗೀತಾ ಕಪೂರ್ ಚಿತ್ರರಂಗ ನನಗೆ ಬೇಕಿದ್ದನ್ನೆಲ್ಲವನ್ನು ನೀಡಿದೆ.. ಹಣ-ಹೆಸರು ಸಿಕ್ಕಿದೆ.. ಜನರ ಆಶೀರ್ವಾದ ಸಿಕ್ಕಿದೆ.. ಇಷ್ಟೇ ಸಾಕು ಇದಕ್ಕಿಂತ ಹೆಚ್ಚಿನದನ್ನು ನಾನು ಬೇಡಲಾರೆ ಎಂದು ಹೇಳಿದ್ದಾರೆ. ಈಗ ನಾವು ಒಂದು ಹೆಜ್ಜೆ ಹಿಂದೆ ಇಡುವ ಸಮಯ.. ಹೊಸಬರಿಗೆ ದಾರಿ ಬಿಡುವ ಸಮಯ.. ಎಂದು ಹೇಳಿದ್ಧಾರೆ.
ಮುಂದುವರೆದು ನಮ್ಮ ಕಾಲದಲ್ಲಿ ಚಿತ್ರವೊಂದರಲ್ಲಿ 8-10 ಹಾಡುಗಳಿರುತ್ತಿದ್ದವು.. ಹಾಡುಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು.. ನಮಗೂ ಕೂಡ ಕೈ ತುಂಬಾ ಇದರಿಂದ ಕೆಲಸ ಸಿಗುತ್ತಿತ್ತು ಎಂದಿರುವ ಗೀತಾ ಕಪೂರ್ ಈಗ ಕಾಲ ಮೊದಲಿನಂತೆ ಇಲ್ಲ ಎಲ್ಲವೂ ಬದಲಾಗಿದೆ.. ಚಿತ್ರಗಳಲ್ಲಿ ಹಾಡುಗಳಿಗೆ ಅವಕಾಶಗಳಿರುವುದಿಲ್ಲ.. ಇರುವ ಕೆಲ ಅವಕಾಶಗಳನ್ನು ಹೊಸಬರಿಂದ ಕಿತ್ತುಕೊಳ್ಳಲು ನನಗೆ ಮನಸಾಗುವುದಿಲ್ಲ ಎಂದು ಹೇಳಿದ್ದಾರೆ.
ಸದ್ಯ ಉದ್ಯಮದಲ್ಲಿ ಕೆಲಸದ ಕೊರತೆ ಇದೆ ಅರ್ಹವಾದ ಪ್ರತಿಭಾವಂತರಿಗೆ ಇರುವ ಅವಕಾಶಗಳು ಸಿಗುವಂತಾಗಲಿ ಎನ್ನುವುದಷ್ಟೇ ನನ್ನ ಆಶಯ ಹೀಗಾಗಿ ನಾನು ಹಿಂದೆ ಸರಿದಿದ್ದೇನೆ ಎಂದಿರುವ ಗೀತಾ ಕಪೂರ್ ಮುಂಬರುವ ದಿನಗಳಲ್ಲಿ ಯಾವುದಾದರೂ ಒಳ್ಳೆಯ ಅವಕಾಶ ಸಿಕ್ಕರೆ, ಈ ಚಿತ್ರವನ್ನು ನಾನು ಮಾಡಲೇಬೇಕು ಎಂಬ ಭಾವನೆ ನನ್ನಲ್ಲಿ ಬಂದರೆ ಮಾತ್ರ ನಾನು ಚಿತ್ರದ ಹಾಡಿನ ನೃತ್ಯ ನಿರ್ದೇಶನವನ್ನು ಮಾಡುತ್ತೇನೆ ಇಲ್ಲದಿದ್ದರೆ ಇಲ್ಲ ಸದ್ಯ ನಾನು ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಗೀತಾ ಕಪೂರ್ ಅವರ ಈ ನಿರ್ಧಾರ ಹಲವರಿಗೆ ಆಘಾತವನ್ನುಂಟು ಮಾಡಿದರು ಕೂಡ ಸದ್ಯ ಗೀತಾ ಕಪೂರ್ ಅವರ ಈ ನಿರ್ಧಾರವನ್ನು ಅನೇಕರು ಸ್ವಾಗತಿಸುತ್ತಿದ್ದಾರೆ. ಗೀತಾ ಕಪೂರ್ ಅವರಿಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.


Click it and Unblock the Notifications











