ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ ; ಆಲಿಯಾ ಭಟ್ಗೆ ತಪರಾಕಿ ಹಾಕಿದ ಸತ್ಪ್ರಜೆಗಳು..!
ಹೇಳೋದು ವೇದಾಂತ .. ತಿನ್ನೋದು ಬದನೆಕಾಯಿ ಎಂಬ ಹಿರಿಯರ ಮಾತು ಬಣ್ಣದ ಲೋಕಕ್ಕೆ ಹೆಚ್ಚು ಸೂಕ್ತವಾಗುತ್ತೆ. ಯಾಕೆಂದರೆ.. ಊರಿಗೆಲ್ಲ ಉಪದೇಶ ಮಾಡುವ ಇವರಲ್ಲಿ ಅನೇಕರಿಗೆ ಅವರ ಕರ್ತವ್ಯದ ಅರಿವೇ ಇರುವುದಿಲ್ಲ. ಉದಾಹರಣೆಗೆ ಆಲಿಯಾ ಭಟ್.
ಹೌದು..ಮೊನ್ನೆಯಷ್ಟೇ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಐದು ಹಂತದಲ್ಲಿ ನಡೆದ ಮತದಾನದಲ್ಲಿ ಅನೇಕ ತಾರೆಯರು ಬಂದು ಮತದಾನ ಮಾಡಿದ್ದಾರೆ. ತಮ್ಮ ಹಕ್ಕು ಚಲಾಯಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ತಮ್ಮ ಕರ್ತವ್ಯವನ್ನೂ ಪೂರೈಸಿದ್ದಾರೆ. ಬಾಲಿವುಡ್ನ ಕಿಲಾಡಿ ಅಕ್ಷಯ್ ಕುಮಾರ್ ಕೂಡ ಮೊದಲ ಬಾರಿ ಮತದಾನ ಮಾಡಿ ಸಂಭ್ರಮ ಪಟ್ಟಿದ್ದಾರೆ.

ಆದರೆ.. ಆಲಿಯಾ ಭಟ್ ಮಾತ್ರ ಮತದಾನ ಮಾಡಲಿಲ್ಲ. ಹಾಗಂಥ.. ಮತದಾನ ಮಹತ್ವ ಆಲಿಯಾಗೆ ಗೊತ್ತಿಲ್ಲ ಅಂತಲ್ಲ. ಯಾಕೆಂದರೆ ಆಲಿಯಾ ಭಟ್ಗೆ ಮತದಾನದ ಪ್ರಾಮುಖ್ಯತೆಯ ಅರಿವು ಇದೆ. ಖುದ್ದು.. ಆಲಿಯಾ ಭಟ್ ಹಿಂದೆ ಮತದಾನದ ಕುರಿತು ಜಾಗೃತಿಯನ್ನ ಮೂಡಿಸಿದ ಉದಾಹರಣೆ ಇದೆ. ''ಒಂದು ಮತ ರಾಷ್ಟ್ರದ ಧ್ವನಿಯಾಗಿದೆ. ರಾಷ್ಟ್ರದ ಆಯ್ಕೆ, ನಿಮ್ಮ ಧ್ವನಿ ಬಳಸಿ ನಿಮ್ಮ ಆಯ್ಕೆಯನ್ನು ಮಾಡಿ" ಎಂದು ಮನವಿಯನ್ನ ಮಾಡಿಕೊಂಡಿದ್ದು ಇದೆ.
ಆದರೆ.. ಸಾರ್ವಜನಿಕರಿಗೆ ಮನವಿಯನ್ನ ಮಾಡಿಕೊಂಡ ಆಲಿಯಾ ಹಿಂದೆಯೂ ಮತದಾನ ಮಾಡಿಲ್ಲ. ಈ ಬಾರಿಯೂ ಮಾಡಲಿಲ್ಲ. ಈ ಕಾರಣಕ್ಕೆ ಕೆರಳಿ ಕೆಂಡವಾಗಿರುವ ಅನೇಕರು ಆಲಿಯಾ ಭಟ್ ವಿರುದ್ಧ ಅಭಿಯಾನ ಮಾಡುತ್ತಿದ್ದಾರೆ. ಈ ಕ್ಷಣವೇ ಭಾರತವನ್ನ ಬಿಟ್ಟು ತೊಲಗಿ ಎಂದು ಛೀಮಾರಿಯನ್ನು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕುತ್ತಿದ್ದಾರೆ

ಅಂದ್ಹಾಗೇ ನಿಮಗೆ ಗೊತ್ತಿರಲಿ.. ಆಲಿಯಾ ಭಟ್ ಭಾರತದ ಪ್ರಜೆ ಅಲ್ಲ. ಬದಲಿಗೆ ಬ್ರಿಟೀಷ್ ಪ್ರಜೆ. ಭಾರತದ ಅನ್ನ-ನೀರು-ಗಾಳಿ ಸೇವಿಸಿ, ಇಲ್ಲಿಯೇ ಬದುಕು ಕಟ್ಟಿಕೊಂಡು, ಹನ್ನೆರಡು ವರ್ಷಗಳಿಂದ ನಾಯಕಿಯಾಗಿ ಮೆರೆದಾಡಿದರೂ ಆಲಿಯಾ ಮಾತ್ರ ಇಲ್ಲಿಯವರೆಗೆ ಭಾರತದ ಪೌರತ್ವ ಪಡೆಯುವ ಮನಸು ಮಾಡಿಲ್ಲ. ಅಕ್ಷಯ್ ಕುಮಾರ್ ಅವರಂತೆ ತಮ್ಮ ಬ್ರಿಟನ್ ಪೌರತ್ವ ತ್ಯಜಿಸಿ ತಮ್ಮ ದೇಶಾಭಿಮಾನದ ಪ್ರದರ್ಶನವನ್ನೂ ಮಾಡಲಿಲ್ಲ.
ಬದಲಿಗೆ ನನ್ನ ತಾಯಿ ಬರ್ನಿಂಗ್ಹ್ಯಾಮ್ನವರು. ನಾನು ಭಾರತದಲ್ಲಿ ಹುಟ್ಟಿ ಬೆಳೆದೆ. ನನ್ನ ಅಜ್ಜಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಇಂಗ್ಲೆಂಡ್ನಲ್ಲಿ ಕಳೆದರು. ಅವರಿಗೆ ಇಂಗ್ಲೆಂಡ್ ಇಂಗ್ಲಿಂಷ್ ಆ್ಯಕ್ಸೆಂಟ್ ಬರುತ್ತಿತ್ತು ಎಂದು ಹೇಳ್ತಾನೇ ಬಂದಿದ್ದಾರೆ. ಆಲಿಯಾ ಭಟ್ ವಿರುದ್ಧ ಅನೇಕರ ಅಸಹನೆ-ಅಸಮಾಧಾನ ಕಟ್ಟೆ ಒಡೆಯಲು ಇದು ಕೂಡ ಪ್ರಮುಖ ಕಾರಣ.
ಸದ್ಯಕ್ಕೆ ಆಲಿಯಾ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ಈ ಮಧ್ಯೆ ಆಲಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ನಿಗೂಡಾರ್ಥದ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಭವಿಷ್ಯದಲ್ಲಾದರೂ ಆಲಿಯಾ ಭಾರತದ ಪ್ರಜೆಯಾಗ್ತಾರಾ ಅನ್ನುವುದಕ್ಕೆ ಉತ್ತರ ಕಾಲವೇ ನೀಡಲಿದೆ.


Click it and Unblock the Notifications











