ವಿಕ್ಕಿ ಕೌಶಲ್ಗೆ ತೆಲುಗು ಕಲಿಸಿದಂತೆ ಕನ್ನಡವನ್ನೂ ಕಲಿಸುತ್ತಾರಾ ರಶ್ಮಿಕಾ ಮಂದಣ್ಣ ? ಸಾಧ್ಯನಾ ?
ರಶ್ಮಿಕಾ ಮಂದಣ್ಣ ಕೊಡಗಿನವರು. ಇವರು ಅಭಿನಯಿಸಿದ ಮೊದಲ ಚಿತ್ರ ಕನ್ನಡದ್ದು. ಆದರೆ ಕರುನಾಡಿನಲ್ಲಿ ಜನ್ಮ ಪಡೆದು, ಹೆಸರು, ಹಣ, ಕೀರ್ತಿಯನ್ನು ಆರಂಭದ ದಿನಗಳಲ್ಲಿ ಇಲ್ಲಿ ಗಳಿಸಿದ ರಶ್ಮಿಕಾಗೆ ಕನ್ನಡ ಅಂದರೆ ಅಷ್ಟಕಷ್ಟೇ. ಸಡನ್ನಾಗಿ ಯಾರಾದರೂ ಕನ್ನಡದಲ್ಲಿ ಮಾತನಾಡಿ ಎಂಬ ಮನವಿಯನ್ನು ಮಾಡಿದರೆ ರಶ್ಮಿಕಾ ಮಂದಣ್ಣ ಹೌಹಾರಿ ಬಿಡುತ್ತಾರೆ. ಅಷ್ಟರ ಮಟ್ಟಿಗೆ ರಶ್ಮಿಕಾ ಮಂದಣ್ಣಗೆ ಕನ್ನಡ ಕಬ್ಬಿಣದ ಕಡಲೆಯಾಗಿ ಉಳಿದಿದೆ.
ಕಲಿಯುವ ಇಚ್ಛಾಶಕ್ತಿ ಇದ್ದಿದ್ದರೆ ಯಾವತ್ತೋ ರಶ್ಮಿಕಾ ಕನ್ನಡ ಕಲಿಯಬಹುದಿತ್ತು. ಆದರೆ, ರಶ್ಮಿಕಾಗೆ ಹೆತ್ತ ತಾಯಿಯನ್ನು ಅಮ್ಮ ಎನ್ನುವ ಬದಲು ಪರದೇಶಿ ತಾಯಿಯನ್ನು ಮಮ್ಮಿ ಎಂದು ಕರೆಯುವ ಹುಚ್ಚು. ಇದಕ್ಕೆ ಪುರಾವೆ ಎನ್ನುವಂತೆ ಆಂಧ್ರಕ್ಕೆ ವಲಸೆ ಹೋದ ನಂತರ ಕೇವಲ ಒಂದೇ ವರ್ಷದಲ್ಲಿ ತೆಲುಗು ಮತ್ತು ತಮಿಳು ಭಾಷೆಯನ್ನು ನಿರರ್ಗಳವಾಗಿ ಮಾತನಾಡುವುದನ್ನು ರಶ್ಮಿಕಾ ಮಂದಣ್ಣ ಕಲಿತಿದ್ದಾರೆ. ತಾವು ಕಲಿಯುವುದಲ್ಲದೇ ಬೇರೆಯವರಿಗೆ ಕೂಡ ತೆಲುಗು ತಮಿಳು ಭಾಷೆಯನ್ನು ಕಲಿಸುತ್ತಿದ್ದಾರೆ. ಈ ಮೂಲಕ ತಮ್ಮ ಭಾಷಾಭಿಮಾನದ ಪ್ರದರ್ಶನ ಮಾಡುತ್ತಿದ್ದಾರೆ.

ಹೌದು, ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಎಂಬ ಹೆಸರಿನ ಹಿಂದಿ ಚಿತ್ರವೊಂದು ಈ ಫೆಬ್ರವರಿ 14ರಂದು ತೆರೆಗೆ ಬರಲಿದೆ. ಈ ಹಿನ್ನೆಲೆ ಕಾಲು ಮುರಿದಿದ್ದರೂ ಕೂಡ ವೀಲ್ಚೇರ್ನಲ್ಲಿಯೇ ಕುಳಿತು ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಚಿತ್ರದ ನಾಯಕ ವಿಕ್ಕಿ ಕೌಶಲ್ ಜೊತೆ ಊರೂರು ಸುತ್ತುತ್ತಿದ್ದಾರೆ. ಹೀಗೆ ಸುತ್ತಾಡುತ್ತಾ ಮೊನ್ನೆ ಹೈದರಾಬಾದ್ಗೆ ಬಂದ ರಶ್ಮಿಕಾ ತೆಲುಗು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ತೆಲುಗಿನಲ್ಲಿಯೇ ಉತ್ತರವನ್ನು ನೀಡಿದ್ದಾರೆ.
ಸಾಲದಕ್ಕೆ ವಿಕ್ಕಿ ಕೌಶಲ್ ಗೆ ಎಲ್ಲರಿಗೂ ನಮಸ್ಕಾರ, ಎಲ್ಲರೂ ಚೆನ್ನಾಗಿದ್ದೀರಾ ? ಹೈದರಾಬಾದ್ಗೆ ಬರುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂಬ ಸಾಲುಗಳನ್ನು ಹೇಳಿ ಕೊಟ್ಟಿದ್ದಾರೆ. ಜಬರದಸ್ತ್ ಎಂಬ ಶಬ್ದವನ್ನು ತೆಲುಗಿನಲ್ಲಿ ಹೇಗೆ ಹೇಳ್ತೀರಾ ಎಂದು ವಿಕ್ಕಿ ಕೇಳಿದಾಗ ಕಿರಾಕ್ ಎಂಬ ಉತ್ತರವನ್ನು ರಶ್ಮಿಕಾ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಈ ತೆಲುಗು ಅಭಿಮಾನ ಕಂಡು ಅನೇಕರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಯಾಕೆಂದರೆ ರಶ್ಮಿಕಾ ಈ ಹಿಂದೆ ತಮ್ಮ ಚಿತ್ರಗಳ ಪ್ರಚಾರಕ್ಕೆ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಆದರೆ ಯಾವತ್ತು ಇಷ್ಟೇ ಶ್ರದ್ಧೆಯಿಂದ ತಮ್ಮ ಚಿತ್ರದ ನಾಯಕನಿಗೆ ರಶ್ಮಿಕಾ ಕನ್ನಡದಲ್ಲಿ ಒಂದೆರಡು ಸಾಲನ್ನು ಹೇಳಿ ಕೊಟ್ಟಿಲ್ಲ. ಹೀಗಾಗಿಯೇ ಕೆರಳಿರುವ ಅನೇಕರು ರಶ್ಮಿಕಾ ಭಾಷಾಭಿಮಾನದ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ರಶ್ಮಿಕಾ ಕನ್ನಡತಿ ಎಂದು ಹೆಮ್ಮೆ ಪಡುತ್ತಿದ್ದ ಇನ್ನು ಕೆಲವರು ವಿಷಾದದಲ್ಲಿ ಕುಂತಿದ್ದಾರೆ. ಮತ್ತು ಕೆಲವರು ಛಾವಾ ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಹೇಗೂ ರಶ್ಮಿಕಾ ಬರಲೇಬೇಕು ಆಗ ಏನ್ಮಾಡ್ತಾರೆ ನೋಡೋಣ ಎಂದು ಕಾಯುತ್ತಿದ್ದಾರೆ.
ಇನ್ನುಳಿದಂತೆ ರಶ್ಮಿಕಾ ಮಂದಣ್ಣ ಛಾವಾ ಚಿತ್ರದಲ್ಲಿ ಐತಿಹಾಸಿಕ ಪಾತ್ರ ನಿರ್ವಹಿಸಿದ್ದಾರೆ. ಛತ್ರಪತಿ ಸಂಭಾಜಿ ಮಹಾರಾಜನ ಮಹಾರಾಣಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಮೇಲೆ ಅಪಾರವಾದ ನಿರೀಕ್ಷೆಯನ್ನು ಇಟ್ಟುಕೊಂಡಿರುವ ರಶ್ಮಿಕಾ ಮಂದಣ್ಣ ಸಲ್ಮಾನ್ ಖಾನ್ ಜೊತೆ ಸಿಕಂದರ್ ಚಿತ್ರದಲ್ಲಿ ಕೂಡ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆಯುಶ್ಮಾನ್ ಖುರಾನ ಜೊತೆ ಕೂಡ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಥಾಮಾ ಎಂದು ಹೆಸರಿಡಲಾಗಿದೆ. ಒಟ್ನಲ್ಲಿ ಸದ್ಯ ವಿಕ್ಕಿ ಕೌಶಲ್ ಅವರಿಗೆ ರಶ್ಮಿಕಾ ತೆಲುಗು ಪಾಠವನ್ನು ಮಾಡಿ ತಮ್ಮ ತೆಲುಗು ಮೇಲಿನ ಅಭಿಮಾನದ ಪ್ರದರ್ಶನ ಮಾಡಿದ್ದಾರೆ. ಬೆಂಗಳೂರಿಗೆ ಬಂದಾಗ ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್ ಅವರಿಗೆ ಕನ್ನಡ ಹೇಳಿ ಕೊಡ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











