ಬಾಲಿವುಡ್ ಭವಿಷ್ಯದ ಆಸೆಗೆ ಬಿದ್ದು ಸಂಭಾವನೆ ಇಳಿಸಿಕೊಂಡ್ರಾ ಶ್ರೀಲೀಲಾ?
ಕನ್ನಡ ನಟಿಯರು ಈಗ ಪರಭಾಷೆ ಸಿನಿಮಾಗಳಲ್ಲಿ ಕೂಡ ಸದ್ದು ಮಾಡುತ್ತಿದ್ದಾರೆ. ಕಾಲಿವುಡ್, ಟಾಲಿವುಡ್ ಮಾತ್ರವಲ್ಲ ಬಾಲಿವುಡ್ ಅಂಗಳದಲ್ಲಿ ಕೂಡ ಕ್ರೇಜ್ ಸೃಷ್ಟಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ ಬಾಲಿವುಡ್ ಅಂಗಳಕ್ಕೆ ಜಿಗಿದಿರುವುದು ಗೊತ್ತೇತಿದೆ. ಈಗಾಗಲೇ 2 ಚಿತ್ರಗಳಲ್ಲಿ ಆಕೆ ನಟಿಸೋದು ಪಕ್ಕಾ ಆಗಿದೆ.
'ಆಶಿಕಿ'- 3 ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜೋಡಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಅನುರಾಗ್ ಬಸು ಈ ರೊಮ್ಯಾಂಟಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಣ್ಣ ಟೀಸರ್ ಸಹ ಹೊರಬಂದಿದೆ. ಇದೆಲ್ಲದರ ನಡುವೆ ಚಿತ್ರಕ್ಕಾಗಿ ಶ್ರೀಲೀಲಾ ಸಂಭಾವನೆ ತಗ್ಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ ಬಾಲಿವುಡ್ನಲ್ಲಿ ಸಂಭಾವನೆ ಹೆಚ್ಚು, ಆದರೆ ಶ್ರೀಲೀಲಾಗೆ ಯಾಕೆ ಕಮ್ಮಿ ಎನ್ನುವ ಚರ್ಚೆ ಶುರುವಾಗಿದೆ.

ಹೇಳಿಕೇಳಿ ಬಾಲಿವುಡ್ ದೊಡ್ಡ ಇಂಡಸ್ಟ್ರಿ. ಅಲ್ಲಿನ ಸಿನಿಮಾ ವ್ಯವಹಾರವೇ ಬೇರೆ ರೀತಿ ಇರುತ್ತದೆ. ಭಾರೀ ಮೊತ್ತದ ಬಂಡವಾಳ ಹಾಕುತ್ತಾರೆ. ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿ ದೇಶ ವಿದೇಶಗಳಲ್ಲಿ ಬಿಡುಗಡೆ ಮಾಡುತ್ತಾರೆ. ಮಾರ್ಕೆಟ್ ದೊಡ್ಡದಾಗಿರುವುದರಿಂದ ಕಲಾವಿದರು, ತಂತ್ರಜ್ಞರ ಸಂಭಾವನೆ ಕೂಡ ಹೆಚ್ಚಾಗಿರುತ್ತದೆ. ಆದರೆ 'ಆಶಿಕಿ'- 3 ಚಿತ್ರದ ನಾಯಕಿ ಶ್ರೀಲೀಲಾ ವಿಚಾರದಲ್ಲಿ ಇದು ಸುಳ್ಳಾಗಿದೆ.
ತೆಲುಗಿನಲ್ಲಿ ಶ್ರೀಲೀಲಾ ಪಡೆಯುತ್ತಿದ್ದ ಸಂಭಾವನೆಗಿಂತ ಕಮ್ಮಿ ಬಾಲಿವುಡ್ ಚಿತ್ರಕ್ಕೆ ಪಡೆದಿದ್ದಾರೆ ಎಂದು ಡೆಕ್ಕನ್ ಕ್ರಾನಿಕಲ್ ವೆಬ್ಸೈಟ್ ವರದಿ ಮಾಡಿದೆ. ಬಾಲಿವುಡ್ ಸೆಲೆಬ್ರೆಟಿ ಮ್ಯಾನೇಜರ್ ಹೇಳಿಕೆ ಆಧರಿಸಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಬಾಲಿವುಡ್ ನಿರ್ಮಾಪಕರು ದಕ್ಷಿಣದ ನಟಿಯರಿಗೆ ಆರಂಭದಲ್ಲಿ ಹೆಚ್ಚು ಸಂಭಾವನೆ ಕೊಡಲ್ಲ. ಒಮ್ಮೆ ಗೆದ್ದರೆ ಖಂಡಿತ ಆ ನಂತರ ಹೆಚ್ಚಿಸುತ್ತಾರೆ. ಅವರು ಹೇಗೆ ಹಿಂದಿ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತಾರೆ ಎನ್ನುವುದನ್ನು ಅದು ಆಧರಿಸಿದೆ ಎಂದು ಸೆಲೆಬ್ರೆಟಿ ಮ್ಯಾನೇಜರ್ ಹೇಳಿದ್ದಾರೆ.
ಆಶಿಷಿ ಟೈಟಲ್ನಲ್ಲಿ ಬಂದಿದ್ದ ಎರಡು ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಹಾಗಾಗಿ 3ನೇ ಸಿನಿಮಾ ಕೂಡ ಗೆದ್ದೇ ಗೆಲ್ಲುತ್ತದೆ ಎನ್ನುವ ಭರವಸೆಯಲ್ಲಿ ಶ್ರೀಲೀಲಾ ಇದ್ದಾರೆ. ಹಾಗಾಗಿ ಸಂಭಾವನೆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಬಾಲಿವುಡ್ ಭವಿಷ್ಯದ ಬಗ್ಗೆ ಆಲೋಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರಂತೆ. ತೆಲುಗಿನ 'ರಾಬಿನ್ ಹುಡ್' ಚಿತ್ರಕ್ಕೆ 3 ಕೋಟಿ ಸಂಭಾವನೆ ಪಡೆದಿದ್ದ ಶ್ರೀಲೀಲಾ 'ಆಶಿಕಿ'- 3 ಚಿತ್ರಕ್ಕೆ 2 ಕೋಟಿ ಪಡೆದಿದ್ದಾರೆ ಎನ್ನಲಾಗ್ತಿದೆ. ಕಾರ್ತಿಕ್ ಆರ್ಯನ್ ಜೊತೆ ಮತ್ತೊಂದು ಚಿತ್ರದಲ್ಲಿ ಕೂಡ ಕಿಸ್ ಬೆಡಗಿ ನಟಿಸುತ್ತಾರೆ ಎನ್ನಲಾಗ್ತಿದೆ.
ಕನ್ನಡದ 'ಕಿಸ್' ಚಿತ್ರದ ಮೂಲಕ ಶ್ರೀಲೀಲಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸಿ ತೆಲುಗು ಚಿತ್ರರಂಗಕ್ಕೆ ಜಿಗಿದಿದ್ದರು. ಆರಂಭದಲ್ಲಿ ಅಲ್ಲಿ ಭರ್ಜರಿ ಕ್ರೇಜ್ ಸೃಷ್ಟಿಸಿಕೊಂಡಿದ್ದರು. ಮಹೇಶ್ ಬಾಬು, ರವಿತೇಜಾ, ಬಾಲಕೃಷ್ಣ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ದರು. ಆದರೆ ದೊಡ್ಡ ಬ್ರೇಕ್ ಮಾತ್ರ ಸಿಗಲಿಲ್ಲ. ಅದೇ ಕಾರಣಕ್ಕೆ ಈಗ ಹಿಂದಿ ಹಾಗೂ ತಮಿಳು ಚಿತ್ರಗಳತ್ತ ಮುಖ ಮಾಡಿದ್ದಾರೆ.
ತೆಲುಗಿನಲ್ಲಿ ಪವನ್ ಕಲ್ಯಾಣ್ ಜೋಡಿಯಾಗಿ ನಟಿಸುತ್ತಿರುವ 'ಉಸ್ತಾದ್ ಭಗತ್ಸಿಂಗ್' ಸಿನಿಮಾ ಚಿತ್ರೀಕರಣ ನಿಂತು ಹೋಗಿದೆ. ಕನ್ನಡದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟನೆಯ ಚಿತ್ರದಲ್ಲಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ 'ಜ್ಯೂನಿಯರ್' ಸಿನಿಮಾ ಬರಲಿದೆ. ಇತ್ತೀಚೆಗೆ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
'ಮಾಸ್ ಜಾತರ' ಹಾಗೂ 'ಲೆನಿನ್' ಎಂಬ ಎರಡು ತೆಲುಗು ಸಿನಿಮಾಗಳು ಶ್ರೀಲೀಲಾ ಕೈಯಲ್ಲಿದೆ. ತಮಿಳಿನ 'ಪರಶಕ್ತಿ' ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











