ಮೂರನೇ ಬಾರಿ ಯಶ್ ಜೊತೆ ನಟಿಸೋಕೆ ಒಲ್ಲೆ ಎಂದಿದ್ದೇಕೆ ಶ್ರೀನಿಧಿ ಶೆಟ್ಟಿ?
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ನಟ ಯಶ್ ಬಣ್ಣ ಹಚ್ಚಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಆಗುತ್ತಿದೆ.
ಎರಡು ಭಾಗಗಳಾಗಿ ರಾಮಾಯಣ ಕಾವ್ಯವನ್ನು ಸಿನಿಮಾ ಮಾಡುವ ಪ್ರಯತ್ನ ನಡೀತಿದೆ. ಮೊದಲ ಭಾಗ ಮುಂದಿನ ವರ್ಷ ತೆರೆಗೆ ಬಂದರೆ ಎರಡನೇ ಭಾಗ 2027ಕ್ಕೆ ಬಿಡುಗಡೆ ಆಗುವುದು ಖಚಿತವಾಗಿದೆ. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಖ್ಯ ಪಾತ್ರಗಳಿಗೆ ರಣ್ಬೀರ್, ಸಾಯಿ ಪಲ್ಲವಿ ಹಾಗೂ ಯಶ್ ಆಯ್ಕೆ ಚೆನ್ನಾಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ.

ಇತ್ತೀಚೆಗೆ ನಟ ಯಶ್ ಕೂಡ ರಾವಣನ ವೇಷದಲ್ಲಿ ಬಣ್ಣ ಹಚ್ಚಿ ನಟಿಸೋಕೆ ಆರಂಭಿಸಿದ್ದಾರೆ. ಸದ್ಯ ಮುಂಬೈ ಸ್ಟುಡಿಯೋದಲ್ಲಿ ಸಿನಿಮಾ ಚಿತ್ರೀಕರಣ ನಡೀತಿದೆ. ನಿಮಿತ್ ಮಲ್ಹೋತ್ರಾ ಜೊತೆ ಸೇರಿ ನಟ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವತ್ತಿನ ತಂತ್ರಜ್ಞಾನ ಬಳಸಿ ವಾಲ್ಮೀಕಿ ರಾಮಾಯಣ ಕಾವ್ಯವನ್ನು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ.
ಸಾಯಿ ಪಲ್ಲವಿಗೂ ಮುನ್ನ ಕನ್ನಡ ನಟಿ ಸೀತೆ ಪಾತ್ರಕ್ಕೆ ಆಯ್ಕೆ ಆಗಿದ್ದರಂತೆ. ಆಡಿಷನ್ ಕೊಟ್ಟು ಕ್ಯಾಮರಾ ಮುಂದೆ ಕೂಡ ನಿಂತಿದ್ದೆ. ಆದರೆ ನಾನಾಗಿಯೇ ಬಳಿಕ ಮಾಡಲ್ಲ ಎಂದು ಹೇಳಿದ್ದಾಗಿ ಆಕೆ ವಿವರಿಸಿದ್ದಾರೆ. ಅದಕ್ಕೆ ಒಂದರ್ಥದಲ್ಲಿ ಯಶ್ ಕಾರಣ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ದಿಢೀರನೆ ಈ ಬಗ್ಗೆ ಆ ನಟಿ ಮಾತನಾಡಿರುವುದು ಗಮನ ಸೆಳೆದಿದೆ.
ರಾಮಾಯಣ ಚಿತ್ರದ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಜೊತೆಗೆ ಬೇರೆ ನಟಿಯರು ಕೂಡ ಸ್ಕ್ರೀನ್ ಟೆಸ್ಟ್ ಕೊಟ್ಟಿದ್ದರು. ಅದರಲ್ಲಿ ಕನ್ನಡ ನಟಿ ಶ್ರೀನಿಧಿ ಶೆಟ್ಟಿ ಕೂಡ ಒಬ್ಬರೂ ಎನ್ನುವ ವಿಚಾರ ಈಗ ಬಹಿರಂಗವಾಗಿದೆ. ಶ್ರೀನಿಧಿ ತೆಲುಗಿನ 'ಹಿಟ್- 3' ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರದಲ್ಲಿ ಆಕೆ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಹಿಂದಿಗೂ ಡಬ್ ಆಗಿ ರಿಲೀಸ್ ಆಗುತ್ತಿತ್ತು ನಾನಿ, ಶ್ರೀನಿಧಿ ಮುಂಬೈಗೆ ತೆರಳಿ ಸಿನಿಮಾ ಪ್ರಚಾರ ಮಾಡಿದ್ದಾರೆ.

ಕೆಲ ಸಂದರ್ಶನಗಳಲ್ಲಿ ಕೂಡ ಜೋಡಿ ಮಾತನಾಡಿದೆ. ಸಿದ್ಧಾರ್ಥ್ ಕಣ್ಣನ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ 'ರಾಮಾಯಣ' ಚಿತ್ರದ ಬಗ್ಗೆ ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿದ್ದಾರೆ. ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಜೊತೆ ಆಲಿಯಾ ಭಟ್ ಹಾಗೂ ನಿಮ್ಮ ಹೆಸರು ಕೇಳಿಬಂದಿತ್ತಂತೆ ನಿಜವೇ ಎಂದು ಕೇಳಿದ ಪ್ರಶ್ನೆಗೆ ಹೌದು ಎಂದು ಶ್ರೀನಿಧಿ ಹೇಳಿದ್ದಾರೆ. ಈಗ ಸಿನಿಮಾ ಚಿತ್ರೀಕರಣ ನಡೀತಿದೆ ಹಾಗಾಗಿ ನಾನು ಹೇಳಬಹುದು ಅನ್ನಿಸ್ತಿದೆ ಎಂದು 'KGF' ರೀನಾ ವಿಷಯ ಪ್ರಸಾಪಿಸಿದ್ದಾರೆ.
"ನಾನು ನಿತೇಶ್ ತಿವಾರಿ ಅವರನ್ನು ಭೇಟಿ ಮಾಡಿ ಸೀತೆ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ಕೂಡ ಕೊಟ್ಟಿದ್ದೆ. ಆ ಅವಕಾಶ ಕಳೆದುಕೊಂಡಿದ್ದಕ್ಕೆ ಬಹಳ ಬೇಸರ ಇದೆ. 3 ಸನ್ನಿವೇಶಗಳಲ್ಲಿ ನಟಿಸೋಕೆ ರಿಹರ್ಸಲ್ ಕೂಡ ಮಾಡಿಕೊಂಡಿದ್ದೆ. ಚಿತ್ರತಂಡಕ್ಕೂ ಇಷ್ಟವಾಗಿತ್ತು. ಅದೇ ಸಮಯದಲ್ಲಿ ಯಶ್ ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡುತ್ತಾರೆ ಎಂದು ಗೊತ್ತಾಯಿತು. ಅದೇ ಸಮಯದಲ್ಲಿ 'KGF-2' ಸಿನಿಮಾ ಬಂದು ಗೆದ್ದಿತ್ತು. ರಾಕಿ- ರೀನಾ ಜೋಡಿ ಮೋಡಿ ಮಾಡಿತ್ತು. ಜನ ಇಷ್ಟಪಟ್ಟಿದ್ದರು. ನಾವಿಬ್ಬರೂ ನಾಯಕ-ನಾಯಕಿಯಾಗಿ ನಟಿಸಿದ್ದೀವಿ ಈಗ ಸೀತೆ-ರಾವಣ ಆಗಿ ನಟಿಸಿದರೆ ಜನ ಒಪ್ಪಲ್ಲ ಎಂದುಕೊಂಡೆ" ಎಂದು ಶ್ರೀನಿಧಿ ಹೇಳಿದ್ದಾರೆ.
ನಮ್ಮಿಬ್ಬರ ಜೋಡಿ ಜನರಿಗೆ ಅಷ್ಟು ಇಷ್ಟವಾಗಿರುವಾಗ ನಾವಿಬ್ಬರು ಎದುರಾಳಿಗಳ ರೀತಿ ನಟಿಸಿದರೆ ಚೆನ್ನಾಗಿರಲ್ಲ ಎನಿಸಿತು. ನನಗೆ ಅವಕಾಶ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಸಾಯಿ ಪಲ್ಲವಿ ಬಹಳ ಚೆನ್ನಾಗಿ ನಟಿಸುತ್ತಿದ್ದಾರೆ. ಅವರನ್ನು ಸೀತೆಯ ಪಾತ್ರದಲ್ಲಿ ತೆರೆಮೇಲೆ ನೋಡಲು ಕಾಯುತ್ತಿದ್ದೇನೆ. ಯಾವುದರೂ ವಿಚಾರ ನಡೆದರೆ ಚೆನ್ನಾಗಿರುತ್ತದೆ, ನಡೆಯದಿದ್ದರೂ ಇನ್ನು ಚೆನ್ನಾಗಿರುತ್ತದೆ. ಯಾಕಂದರೆ ಬೇರೆ ಮಾರ್ಗಗಳು ಓಪನ್ ಆಗುತ್ತದೆ ಎಂದು ಶ್ರೀನಿಧಿ ಶೆಟ್ಟಿ ವಿವರಿಸಿದ್ದಾರೆ.


Click it and Unblock the Notifications











