67ನೇ ವಯಸ್ಸಲ್ಲಿ ಮದುವೆಗೆ ರೆಡಿ ಎಂದ 'ಶಕ್ತಿಮಾನ್' ; ಮನದ ಬಯಕೆ ಹಂಚಿಕೊಂಡ ಮುಖೇಶ್ ಖನ್ನಾ
ಪ್ರೀತಿಗೆ ವಯಸ್ಸಿಲ್ಲ ಅನ್ನೋದು ಲೋಕಾರೂಢಿ ಮಾತು. ಯಾವ ವಯಸ್ಸಿನಲ್ಲಾದರೂ ಕೂಡ ಈ ಪ್ರೀತಿ ಮೊಳಕೆಯೊಡೆಯಬಹುದು. ಮುಂದುವರೆಯಬಹುದು. ಮನದ ಮೂಲೆಯಲ್ಲೆಲ್ಲೋ ಗಟ್ಟಿಯಾಗಿ ಬೇರೂರಬಹುದು. ಹೀಗೆ ಬೇರೂರಿದ ಪ್ರೀತಿ ಆ ನಂತರ ದಾಂಪತ್ಯ ಜೀವನಕ್ಕೆ ಮುನ್ನುಡಿಯನ್ನು ಕೂಡ ಬರೆಯಬಹುದು. ಇನ್ನೂ.. ಹಿಂದೆ ಆದರೆ ಮದುವೆಯಲ್ಲಿ ವಯಸ್ಸು ಬಹುಮುಖ್ಯವಾದ ಪಾತ್ರ ಕೂಡ ವಹಿಸುತ್ತಿತ್ತು. ಆದರೆ ಈಗ ಹಾಗಿಲ್ಲ.
ಬದಲಾದ ಈ ಕಾಲದಲ್ಲಿ ಬದುಕಿನ ಲವಲವಿಕೆಗೆ, ಪತಿ- ಪತ್ನಿ ನಡುವಿನ ಅನ್ಯೋನ್ಯತೆಗೆ, ಅವರ ನಡುವಿನ ಆತ್ಮೀಯತೆಗೆ ಯಾವ ಕೋನದಲ್ಲೂ ಕೂಡ ವಯಸ್ಸಿನ ಹಂಗಿಲ್ಲ. ಒಂದೊಳ್ಳೆ ಮನಸ್ಸು ಮತ್ತು ದಾಂಪತ್ಯದ ಕಲೆಯನ್ನು ಅರಿತಿರುವ ನೈಪುಣ್ಯತೆಯನ್ನು ಹೊಂದಿದ್ದರೆ ಯಾವಾಗ ಮದುವೆಯಾದರೂ ಕೂಡ ಸುಖವಾಗಿ ಸಂಸಾರ ನಡೆಸಬಹುದು. ಬದುಕಿ ಬಾಳಬಹುದು ಎನ್ನುವ ವಾದವನ್ನು ಹಲವರು ಮಾಡುತ್ತಾರೆ. ಉದಾಹರಣೆಗೆ ಮುಖೇಶ್ ಖನ್ನಾ.

ಹೌದು, ಮುಖೇಶ್ ಖನ್ನಾ.. ಒಂದ್ಕಾಲದ ಕಿರುತೆರೆಯ ''ಭೀಷ್ಮ'' ಹಾಗೂ ''ಶಕ್ತಿಮಾನ್''. ಈ ಎರಡೇ ಪಾತ್ರಗಳ ಮೂಲಕ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ ಮುಖೇಶ್ ಖನ್ನಾ, ಇವತ್ತು ಕೂಡ ''ಶಕ್ತಿಮಾನ್'' ಗುಂಗಿನಿಂದ ಹೊರ ಬಂದಿಲ್ಲ.
ಬದಲಿಗೆ ಬದಲಾದ ಈ ಕಾಲಕ್ಕೆ ಅನುಗುಣವಾಗಿ ''ಶಕ್ತಿಮಾನ್''ನ ಮತ್ತೆ ನಿಮ್ಮೆದುರು ತರುತ್ತೇನೆ ಎಂದು ಶಪಥ ಮಾಡಿದ್ದಾರೆ. ''ಶಕ್ತಿಮಾನ್'' ನೆಪದಲ್ಲಿ ರಣವೀರ್ ಸಿಂಗ್ ವಿರುದ್ಧ ಆಗಾಗ ಕಿಡಿ ಕಾರುತ್ತಿರುತ್ತಾರೆ.
ಇಂಥಾ ಮುಖೇಶ್ ಖನ್ನಾಗೆ ಈಗ 67 ವರ್ಷ. ಆದರೆ ಇನ್ನೂ ಮದುವೆಯಾಗಿಲ್ಲ. ಹೀಗಾಗಿ ಮುಖೇಶ್ ಖನ್ನಾ ವೈಯಕ್ತಿಕ ಬದುಕಿನ ಕುರಿತು ಹಲವರಲ್ಲಿ ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೆ ಮುಖೇಶ್ ಖನ್ನಾ ಈಗ ಉತ್ತರ ನೀಡಿದ್ದಾರೆ.
ಈ ಕುರಿತು ''ದಿ ಫಿಲ್ಮಿ ಚರ್ಚಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮುಖೇಶ್ ಖನ್ನಾ, ಮದುವೆಯಾಗದೇ ಇದ್ದರೆ ಮದುವೆಯಲ್ಲಿ ನಂಬಿಕೆ ಇಲ್ಲ ಎಂದು ಹಲವರು ಅಂದುಕೊಳ್ಳುತ್ತಾರೆ ಆದರೆ ಅದು ತಪ್ಪು ಎಂದು ಹೇಳಿದ್ಧಾರೆ.

ನಾನು ಮದುವೆಯಾಗಿಲ್ಲ ಎಂದ ಮಾತ್ರಕ್ಕೆ ನನಗೆ ಮದುವೆಯ ಮೇಲೆ ನಂಬಿಕೆ ಇಲ್ಲ ಎಂಬ ಅರ್ಥ ಅಲ್ಲ ಎಂದು ಹೇಳಿರುವ ಮುಖೇಶ್ ಖನ್ನಾ ಹಾಗೇ ನೋಡಿದರೆ ಎಲ್ಲರಿಗಿಂತ ಹೆಚ್ಚು ಮದುವೆಯ ಸಂಬಂಧದಲ್ಲಿ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಪತ್ನಿಯಾಗಿ ನಮ್ಮ ಬದುಕಿನಲ್ಲಿ ಬರುವವಳು ಸುಮ್ಮನೆ ಬರುವುದಿಲ್ಲ ಎಂದು ಹೇಳಿರುವ ಮುಖೇಶ್ ಖನ್ನಾ ಎಲ್ಲವೂ ವಿಧಿ ಲಿಖಿತ ಎಂದು ಹೇಳಿದ್ಧಾರೆ. ಹಣೆಯಲ್ಲಿ ಬರದಿದ್ದರೆ ನನ್ನ ಮದುವೆ ಈಗಾಗಲೇ ಆಗಬೇಕಿತ್ತು ಎಂದು ಹೇಳಿರುವ ಮುಖೇಶ್ ಖನ್ನಾ ಯಾರಿಗೆ ಗೊತ್ತು ನಾನು ಮದುವೆಯಾಗುವ ಮಹಿಳೆ ಎಲ್ಲೋ ಇರಬಹುದು, ವಿಧಿ ನಮ್ಮನ್ನು ಒಟ್ಟುಗೂಡಿಸಿದಾಗ ಖಂಡಿತ ಮದುವೆ ಆಗುತ್ತೆ ಎಂದು ಹೇಳಿದ್ಧಾರೆ.
ಮದುವೆ ಎನ್ನುವುದು ಕೇವಲ ಸಂಬಂಧ ಮಾತ್ರ ಅಲ್ಲ ಎಂದು ಹೇಳಿರುವ ಮುಖೇಶ್ ಖನ್ನಾ ಅದು ಕರ್ಮ ಬಂಧ ಎಂದಿದ್ದಾರೆ. ಶಾಸ್ತ್ರಗಳ ಪ್ರಕಾರ ಪತ್ನಿ ಎನ್ನುವವಳು ಹಿಂದಿನ ಜನ್ಮದ ಪ್ರಾರಬ್ಧ ಕರ್ಮ ಎಂದು ತಮ್ಮ ಆಧ್ಯಾತ್ಮಿಕ ದೃಷ್ಟಿಕೋನ ಹಂಚಿಕೊಂಡಿರುವ ಮುಖೇಶ್ ಖನ್ನಾ ನಿಮ್ಮ ಕರ್ಮಗಳನ್ನು ಸರಿಪಡಿಸಲು ಅವಳು ನಿಮ್ಮ ಜೀವನಕ್ಕೆ ಬರುತ್ತಾಳೆ ಎಂದು ಹೇಳಿದ್ದಾರೆ.
ಮುಂದುವರೆದು ಜೀವನದಲ್ಲಿ ಸಂಬಂಧಗಳು ಹಲವು ಇರಬಹುದು, ಆದರೆ ಪತ್ನಿ ಮಾತ್ರ ಒಬ್ಬಳೇ, ಮದುವೆ ಎನ್ನುವುದು ಎರಡು ಆತ್ಮಗಳ ಪವಿತ್ರ ಮಿಲನ ಎಂದಿದ್ದಾರೆ.
ಇಷ್ಟೇ ಅಲ್ಲ ಪ್ರೀತಿಯನ್ನು ಕೂಡ ವ್ಯಾಖ್ಯಾನಿಸಿರುವ ಮುಖೇಶ್ ಖನ್ನಾ, ಪ್ರೀತಿ ನನ್ನ ಪ್ರಕಾರ ಕೇವಲ ಒಮ್ಮೆ ಮಾತ್ರ ಆಗುತ್ತೆ ಎಂದು ಹೇಳಿದ್ದಾರೆ. ಉಳಿದೆಲ್ಲವೂ ಕೇವಲ ಆಕರ್ಷಣೆ ಅಥವಾ ಬಯಕೆ ಅಷ್ಟೆ ಎಂದು ಹೇಳಿರುವ ಮುಖೇಶ್ ಖನ್ನಾ ಒಬ್ಬರಿಗೆ ಐ ಲವ್ ಯೂ ಹೇಳಿ ಆ ನಂತರ ಮತ್ತೊಬ್ಬರ ಬಳಿ ಹೋದರೆ ಅದು ವಂಚನೆ ಆಗುತ್ತದೆ ಎಂದಿದ್ದಾರೆ.
ಗಂಡಸ್ತನ ಸಾಬೀತು ಮಾಡಲು ಹತ್ತಾರು ಸಂಬಂಧಗಳ ಅವಶ್ಯಕತೆಯಿಲ್ಲ. ಅದಕ್ಕೆ ಬೇರೆ ಅರ್ಥಪೂರ್ಣ ದಾರಿಗಳಿವೆ ಎಂದು ಹೇಳಿರುವ ಮುಖೇಶ್ ಖನ್ನಾ ಮಹಿಳೆಯರ ಮೇಲೆ ನನಗೆ ಅಪಾರ ಗೌರವವಿದೆ ಎಂದು ಕೂಡ ಹೇಳಿದ್ದಾರೆ. ಸದ್ಯ ಮುಖೇಶ್ ಖನ್ನಾ ಅವರ ಈ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Click it and Unblock the Notifications