'ಕೆಜಿಎಫ್-2' ಎದರು ನಿಲ್ಲಬಲ್ಲನೇ ಅಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ'?
ಬಾಲಿವುಡ್ ಮಂದಿಗೆ ಇತ್ತೀಚಿನ ದಿನಗಳಲ್ಲಿ ಸೌತ್ ಸಿನಿಮಾಗಳ ದಿಗಿಲು ಸಿಕ್ಕಾಪಟ್ಟೆ ಹುಟ್ಟಿಕೊಂಡಿದೆ. ಬಾಲಿವುಡ್ ಚಿತ್ರಗಳಿಗೆ ಈಗ ಸೌತ್ ಸಿನಿಮಾಗಳ ಜನಪ್ರಿಯತೆ ಮತ್ತು ಉತ್ತರ ಭಾರತದಲ್ಲಿ ಸೌತ್ ಸಿನಿಮಾಗಳಿಗೆ ದಿನೇ, ದಿನೇ ಹೆಚ್ಚುತ್ತಿರುವ ಮಾರುಕಟ್ಟೆ ನಿಜಕ್ಕೂ ಭಯ ಹುಟ್ಟಿಸುತ್ತಿದೆ. ಬಹುತೇಕ ಈಗ ಬಾಲಿವುಡ್ ಮಂದಿ OTTಲ್ಲಿ ನೇರವಾಗಿ ಚಿತ್ರ ಬಿಡುಗಡೆಗೆ ಒಲವು ತೋರುತ್ತಿದ್ದಾರೆ. ಥಿಯೇಟರ್ಗಳಲ್ಲಿ ಬಾಲಿವುಡ್ ಸಿನಿಮಾಗಳ ಕ್ರೇಜ್ ಸಂಪೂರ್ಣವಾಗಿ ನೆಲಕಚ್ಚಿದೆ. ಅದರಲ್ಲೂ ಬಾಲಿವುಡ್ನ ಪ್ರೇಮ ಕಥೆಗಳು ಈಗ ಥಿಯೇಟರ್ ಪ್ರೇಕ್ಷಕರ ಬರ ಎದುರಿಸುತ್ತಿದೆ. ಸೌತ್ ಶೈಲಿಯ ಮಸಾಲ, ಕಾಮಿಡಿ ಎಂಟರ್ ಟೈನ್ಮೆಂಟ್ ಮಾಡಿದರೆ ಮಾತ್ರ ಜನ ಒಂದಷ್ಟು ಮಂದಿ ಥಿಯೇಟರ್ ಕಡೆ ಬರಬಹುದು. ಅದಕ್ಕೆ ಇತ್ತೀಚಿನ ಸಾಕ್ಷಿ ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಅನಿಸಿಕೊಂಡಿರುವ 'ಸೂರ್ಯವಂಶಿ'.
ಸೌತ್ ಮೇಕಿಂಗ್ ನಲ್ಲಿ ಮುಂದೆ: ಅದ್ದೂರಿ ತಾರಾಗಣದ, ಬಹು ಬಜೆಟಿನ ಚಿತ್ರಗಳ ವಿಷಯಕ್ಕೆ ಬಂದರೆ ಸೌತ್ ಸಿನಿಮಾಗಳ ಎದುರು ಹಿಂದಿ ಚಿತ್ರಗಳು ತೀರಾ ಸಪ್ಪೆ ಎನಿಸಿಕೊಳ್ಳುತ್ತಿದೆ. ಅದರಲ್ಲೂ ಅನಿಮೇಷನ್, ತ್ರೀಡಿ ಎಫೆಕ್ಟ್, ಗ್ರಾಫಿಕ್ಸ್ ವಿಷಯಕ್ಕೆ ಬಂದರೆ ಹಿಂದಿ ಚಿತ್ರರಂಗ ಸೌತ್ ಇಂದ ಸಿಕ್ಕಾಪಟ್ಟೆ ಹಿಂದೆನೇ ಉಳಿದಿದೆ. ಶಂಕರ್ ನಿರ್ದೇಶನದ 'ಜೀನ್ಸ್' ,'ಐ', ರೋಬೋ ಅಂತ ಚಿತ್ರಗಳು, ರಾಜಮೌಳಿ ನಿರ್ದೇಶನದ 'ಈಗ' 'ಬಾಹುಬಲಿ ಸರಣಿ', 'RRR',ಇವುಗಳ ಮೇಕಿಂಗ್ ಮುಂದೆ ಬಾಲಿವುಡ್ ಮಂಡೂರಿದೆ. ಈಗಂತೂ ಬಾಲಿವುಡ್ ಮಂದಿ ಮೇಕಿಂಗ್ ವಿಷಯಕ್ಕೆ ಬಂದರೆ ದಕ್ಷಿಣ ಭಾರತೀಯ ತಂತ್ರಜ್ಞರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

ಹಿಂದಿ ಚಾನಲ್ ಗಳಲ್ಲಿ ತೆಲುಗು ಚಿತ್ರಗಳದ್ದೇ ಅಬ್ಬರ
ಸೌತ್ ಸಿನಿಮಾಗಳು ಅದರಲ್ಲೂ ವಿಶೇಷವಾಗಿ ತೆಲುಗು ಚಿತ್ರಗಳ ಹವಾ ಮೊದಲಿನಿಂದಲೂ ಬಾಲಿವುಡ್ನಲ್ಲಿ ಹೆಚ್ಚಾಗಿಯೇ ಇದೆ. ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡಲಾದ ಸೌತ್ ಚಿತ್ರಗಳ ಪೈಕಿ ತೆಲುಗು ಚಿತ್ರಗಳು ವಿವಿಧ ಚಾನಲ್ಗಳಲ್ಲಿ ಟಾಪ್ TRP ಪಡೆಯುತ್ತಿವೆ. ಯೂಟ್ಯೂಬ್ನಲ್ಲಿ ಕೂಡ ತೆಲುಗು ಚಿತ್ರಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ತೆಲುಗು ಚಿತ್ರಗಳಲ್ಲಿ ಸಾಧಾರಣವಾಗಿ ಕಂಡುಬರುವ ಮಸಾಲ ಎಂಟರ್ಟೈನ್ಮೆಂಟ್ ಉತ್ತರ ಭಾರತೀಯರಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶ, ಬಿಹಾರಿಗಳಿಗೆ ಸಿಕ್ಕಾಪಟ್ಟೆ ಕನೆಕ್ಟ್ ಆಗುತ್ತೆ. ಹೀಗಾಗಿ ಸಹಜವಾಗಿ ಇಲ್ಲೆಲ್ಲ ತೆಲುಗು ಚಿತ್ರಗಳು ಸಿಕ್ಕಾಪಟ್ಟೆ ಡಿಮ್ಯಾಂಡ್.

ಕನ್ನಡ ಚಿತ್ರಗಳಿಗೂ ಇದೆ ಡಿಮ್ಯಾಂಡ್
ತೆಲುಗು ಚಿತ್ರಗಳು ಬಿಟ್ಟರೆ ಇಲ್ಲೆಲ್ಲಾ ಕನ್ನಡ ಚಿತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ. ಹೌದು ತೆಲುಗು ಬಿಟ್ಟರೆ ಈ ಬೆಲ್ಟ್ ನಲ್ಲಿ ಕನ್ನಡ ಚಿತ್ರಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ, ಅದರಲ್ಲೂ ದರ್ಶನ್, ಯಶ್ ಮತ್ತು ಧ್ರುವ ಸರ್ಜಾ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ.
OTT ಗಳಲ್ಲಿ ಮಲಯಾಳಂ ಸಿನಿಮಾ: ಇನ್ನು OTT ಚಿತ್ರಗಳಿಗೆ ಬಂದರೆ ಇಲ್ಲಿ ಮಲಯಾಳಂಗೆ ಅಗ್ರಸ್ಥಾನ. ಸೆನ್ಸಿಬಲ್ ಸಿನಿಮಾಗಳನ್ನು ಹೆಚ್ಚಾಗಿ ಇಷ್ಟಪಡುವ ಈ ವರ್ಗದ ಪ್ರೇಕ್ಷಕರಿಗೆ ಸೃಜನಾತ್ಮಕವಾದ, ವಾಸ್ತವಕ್ಕೆ ಹತ್ತಿರವೆನಿಸುವ ಕಥಾ ವಸ್ತುಗಳನ್ನು ಹೊಂದಿರುವ ಮಲಯಾಳಂ ಚಿತ್ರಗಳು ಅಚ್ಚುಮೆಚ್ಚು. ಕಡಿಮೆ ವೆಚ್ಚದಲ್ಲಿ ತಯಾರಾಗುವ ಅತಿ ಹೆಚ್ಚಿನ ಚಿತ್ರಗಳು ದೊಡ್ಡ ಮಟ್ಟದಲ್ಲೇ ಲಾಭಗಳನ್ನೇ ಗಳಿಸುತ್ತಿವೆ. ಇನ್ನು OTTನಲ್ಲಿ ಮಲಯಾಳಂ ಬಿಟ್ಟರೆ ಹೆಚ್ಚಿನ ಡಿಮ್ಯಾಂಡ್ ಕಾಣುವುದು ತಮಿಳು ಚಿತ್ರಗಳಿಗೆ. ತಮಿಳು ಚಿತ್ರಗಳು ಕೂಡ ಮಲಯಾಳಂ ಅಂತೆಯೇ ವಾಸ್ತವಕ್ಕೆ ಹತ್ತಿರವಾಗಿರುತ್ತದೆ. ಹೊಸತನ ಮತ್ತು ಪ್ರಯೋಗಾತ್ಮಕ ಚಿತ್ರಗಳಿಗೆ ತಮಿಳು ಸಿನಿಮಾರಂಗ ಕೂಡ ಹೆಚ್ಚಿನ ಒತ್ತು ಕೊಡುತ್ತದೆ. ಹೀಗಾಗಿ ಸಹಜವಾಗಿಯೇ OTT ಪ್ಲಾಟ್ಫಾರ್ಮ್ ಗಳಲ್ಲಿ ತಮಿಳು ಚಿತ್ರಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.

ಸೌತ್ ಬಜೆಟ್ ನೋಡಿ ದಂಗಾಗಿರುವ ಬಾಲಿವುಡ್
ಬಾಲಿವುಡ್ ಅನ್ನು ಮತ್ತಷ್ಟು ಭಯ ಪಡಿಸುತ್ತಿರುವ ಸಂಗತಿ ಸೌತ್ ಸಿನಿಮಾಗಳ ಬಜೆಟ್, ಜೊತೆಗೆ ಆ ಬಜೆಟ್ ಗೆ ತಕ್ಕಂತೆ ಅವರ ಮೇಕಿಂಗ್ ಮತ್ತು ಪಬ್ಲಿಸಿಟಿ. ಇವುಗಳ ಮುಂದೆ ಬಾಲಿವುಡ್ ಸಿಕ್ಕಾಪಟ್ಟೆ ಮಂಕಾಗಿದೆ. ಪ್ರಸ್ತುತ ಬಿಡುಗಡೆಗೆ ಸಿದ್ಧವಾಗಿರುವ 'RRR' ಚಿತ್ರದ ಬಜೆಟ್ 400ಕೋಟಿ. 'ಪುಷ್ಪ' ಬಜೆಟ್ ಸುಮಾರು 200 ಕೋಟಿ, 'ಕೆಜಿಎಫ್-2' 250 ಕೋಟಿ, 'ಸಲಾರ್' 250 ಕೋಟಿ, ಪ್ರಭಾಸ್ ಸಂದೀಪ್ ರೆಡ್ಡಿ ವಂಗಾ ಚಿತ್ರ 500 ಕೋಟಿ, ಪ್ರಭಾಸ್- ನಾಗ್ ಅಶ್ವಿನ್ ಚಿತ್ರ 'ಪ್ರಾಜೆಕ್ಟ್ ಕೆ' ಸುಮಾರು 600 ಕೋಟಿ, ಶಂಕರ್- ರಾಮ್ ಚರಣ್ ತೇಜ ಚಿತ್ರ ಸುಮಾರು 300 ಕೋಟಿ, ಹೀಗೆ ಪ್ರತಿ ಪ್ರಾಜೆಕ್ಟ್ ಕೂಡ ಸುಮಾರು 200 ಕೋಟಿಗೂ ಮೇಲಿದೆ. ಜೊತೆಗೆ ಇವೆಲ್ಲವೂ ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದು ಬಾಲಿವುಡ್ ಮಂದಿಗೆ ಅವರದೇ ಅಡ್ಡಾದಲ್ಲಿ ಸವಾಲು ಹಾಕುತ್ತಿವೆ.

ರಾಜಮೌಳಿ ಎದುರು ಸೋತ ಬನ್ಸಾಲಿ
ಪ್ರಸಕ್ತ ಬಾಲಿವುಡ್ ನಲ್ಲಿ ಕೇಳಿಬರುತ್ತಿರುವ ಒಂದೇ ಒಂದು ಮಾತು ಪೋಸ್ಟ್ ಪೋನ್. ಹೌದು ಪ್ರಸ್ತುತ ಬಾಲಿವುಡ್ನಲ್ಲಿ ಯಾವ ಹಿಂದಿ ಚಿತ್ರ ಕೂಡ ಸೌತ್ನ ಫ್ಯಾನ್ ಇಂಡಿಯಾ ಸಿನಿಮಾಗಳ ಮುಂದೆ ಬಿಡುಗಡೆಮಾಡುವ ಸಾಹಸವನ್ನು ಮಾಡುತ್ತಿಲ್ಲ. ಹಿಂದೆ 'ಕೆಜಿಎಫ್' ಚಿತ್ರದ ಮುಂದೆ 'ಜೀರೋ' ಚಿತ್ರ ಜೀರೋ ಆಗಿಯೇ ಉಳಿದು ಹೋಯಿತು. ಬಾಲಿವುಡ್ನ ಬಾದ್ ಶಾಹ ಶಾರೂಖ್ ಖಾನ್ ಅಭಿನಯದ 'ಜೀರೋ' ಚಿತ್ರ ಯಶ್ ಅಭಿನಯದ 'ಕೆಜಿಎಫ್' ಎದುರು ಜೀರೋ ಆಗಿಯೇ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲನ್ನು ಕಂಡಿತು. ಇತ್ತೀಚೆಗೆ ಅಮೀರ್ ಖಾನ್ ತನ್ನ ಬಹುನಿರೀಕ್ಷಿತ 'ಲಾಲ್ ಸಿಂಗ್ ಚಡ್ಡಾ' ಚಿತ್ರವನ್ನು ಡಿಸೆಂಬರ್ 25ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಬಹುನಿರೀಕ್ಷಿತ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಕೂಡ ಅದೇ ಸಮಯಕ್ಕೆ ಬರುವುದಾಗಿ ಘೋಷಣೆ ಮಾಡಿದ್ದೇ ತಡ, ಫೆಬ್ರವರಿ 14 ಕ್ಕೆ ಲಾಲ್ ಸಿಂಗ್ ಚಡ್ಡಾ ಅನ್ನು ಮುಂದೂಡಿದರು ಅಮೀರ್ ಖಾನ್. ಇನ್ನು ಜನವರಿ 6ರಂದು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಆಲಿಯಾ ಭಟ್- ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಗಂಗೂಬಾಯಿ ಕಥೆವಾಡಿಯ' ಬಿಡುಗಡೆಯಾಗಬೇಕಿತ್ತು. ಆದರೆ ಜನವರಿ 7ರಂದು ವಿಶ್ವದಾದ್ಯಂತ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಚಿತ್ರದ ಬಿಡುಗಡೆ ಮಾಡುವ ಘೋಷಣೆಯಾಯಿತು.

ಗಂಗೂಬಾಯಿ ಕಾಠಿಯವಾಡಿ ಫೆಬ್ರವರಿ 18 ರಂದು ಬಿಡುಗಡೆ
ಆದರೂ ಚಿತ್ರದ ಬಿಡುಗಡೆಯಿಂದ ಹಿಂದೆ ಸರಿಯುವುದಿಲ್ಲ ಅಂತ ಬನ್ಸಾಲಿ ಹಠ ಹಿಡಿದು ಕೂತಿದ್ದರು. ಬಾಲಿವುಡ್ನ ನಂಬರ್ ಒನ್ ನಿರ್ದೇಶಕನ ಚಿತ್ರ ಗಂಗೂಬಾಯಿ ಕಾಠಿಯವಾಡಿ. ಬನ್ಸಾಲಿ ಹಿಂದೆ ಸರಿದರೆ ಇಡೀ ಬಾಲಿವುಡ್ ಹಿಂದೆ ಸರಿದಂತೆ ಎಂಬ ಭಾವನೆ ಕೂಡ ಮುಂಬೈ ಗಲ್ಲಿಗಳಲ್ಲಿ. ಬಹುತೇಕ ಸಿನಿ ಪಂಡಿತರು ಎರಡು ಚಿತ್ರಗಳ ಮಧ್ಯೆ ದೊಡ್ಡ ಪೈಪೋಟಿ ಆಗಬಹುದು ಅಂತಲೇ ಭಾವಿಸಿದ್ದರು. ಆದರೆ ಯಾವಾಗ 'RRR'ಚಿತ್ರದ 45 ಸೆಕೆಂಡ್ ಗಳ ಟೀಸರ್ ಮತ್ತು ನಾಟು...ನಾಟು ಬಿಡುಗಡೆಯಾಯ್ತು, ಬನ್ಸಾಲಿಗೆ ಆಗಲೇ ಅರ್ಥವಾಗಿದ್ದು ರಾಜಮೌಳಿ ಚಿತ್ರ ಮುಂದೆ ತನ್ನ ಚಿತ್ರ ನಿಲ್ಲುವುದಿಲ್ಲ ಅಂತ. ಈಗ ಕೊನೆಗೂ ತನ್ನ ಚಿತ್ರದ ಬಿಡುಗಡೆಯನ್ನು ಬನ್ಸಾಲಿ ಮುಂದೂಡಿದ್ದಾರೆ. ಗಂಗೂಬಾಯಿ ಕಾಠಿಯವಾಡಿ ಫೆಬ್ರವರಿ 18 ರಂದು ಬಿಡುಗಡೆಯಾಗುತ್ತಿದೆ.

ಉಭಯ ಸಂಕಟದಲ್ಲಿ ಅಮೀರ್ ಖಾನ್ ಚಿತ್ರ
ಸಂಜಯ್ ಲೀಲಾ ಬನ್ಸಾಲಿ ಚಿತ್ರ ಫೆಬ್ರವರಿ 18ಕ್ಕೆ ಬರುವುದಾಗಿ ಹೇಳುತ್ತಿದ್ದಂತೆ ಅಮೀರ್ ಖಾನ್ ಗೆ ಮತ್ತೆ ನಡುಕ ಆರಂಭ. ಕಳೆದ ಕೆಲವು ವರ್ಷಗಳಿಂದ ಯಾವುದೇ ದೊಡ್ಡ ಮಟ್ಟದ ಯಶಸ್ಸು ಕಾಣದಿರುವ ಅಮೀರ್ ಖಾನ್ ತನ್ನ ಮುಂಬರುವ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಮೇಲೆ ಅಪಾರವಾದ ನಿರೀಕ್ಷೆಯನ್ನು ಹೊತ್ತುಕೊಂಡಿದ್ದಾರೆ. 'ಪುಷ್ಪ' ಎದುರು ದೊಡ್ಡಮಟ್ಟದ ಓಪನಿಂಗ್ ಪಡೆಯಲು ಸಾಧ್ಯವಿಲ್ಲ ಅಂತ ಹೇಳಿ ಫೆಬ್ರವರಿ 14ಕ್ಕೆ ಹೋದರೆ, ಫೆಬ್ರವರಿ 11ಕ್ಕೆ ಮತ್ತೊಂದು ಫ್ಯಾನ್ ಇಂಡಿಯಾ ಚಿತ್ರ 'ಮೇಜರ್', ಮಾಸ್ ಮಹಾರಾಜ ರವಿತೇಜ 'ಕಿಲಾಡಿ' ಚಿತ್ರಗಳ ಬಿಡುಗಡೆ ಅನೌನ್ಸ್ ಮಾಡಿದ್ದಾರೆ. ಸೌತ್ ನಲ್ಲಿ ಈ ಚಿತ್ರಗಳ ಕಾರಣದಿಂದ ನಿರೀಕ್ಷಿತ ಹಣಗಳಿಸಲು ಲಾಲ್ ಸಿಂಗ್ ಗೆ ಸಾಧ್ಯವಿಲ್ಲ. ಇನ್ನು ಬನ್ಸಾಲಿ ಕೂಡ ಇದೇ ಸಮಯಕ್ಕೆ ಬರುತ್ತಿರುವುದರಿಂದ, ನಾರ್ಥ್ ಇಂಡಿಯಾದಲ್ಲಿ ಬನ್ಸಾಲಿ ಚಿತ್ರ ದೊಡ್ಡ ಹೊಡೆತವೇ ನೀಡುತ್ತದೆ. ಹೀಗಾಗಿಯೇ ಉಭಯ ಸಂಕಟಕ್ಕೆ ಬಿದ್ದ ಅಮೀರ್ ಖಾನ್ ಕೊನೆಗೆ ಚಿತ್ರವನ್ನು ಮುಂದೂಡಿದ್ದಾರೆ.

ಕೆಜಿಎಫ್ -2 ಎದುರು ನಿಲ್ಲುವನೇ ಲಾಲ್ ಸಿಂಗ್ ಚಡ್ಡಾ?
ಡಿಸೆಂಬರ್ 25 ರಿಂದ ಫೆಬ್ರವರಿ 14ಕ್ಕೆ ಬಂದ ಲಾಲ್ ಸಿಂಗ್ ಚಡ್ಡಾ ಈಗ ಕೊನೆಗೆ ಏಪ್ರಿಲ್ 14ಕ್ಕೆ ಬರುತ್ತಿರುವುದಾಗಿ ಘೋಷಿಸಿದೆ. ಆದರೆ ಅದೇ ದಿನ ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಬಹುನಿರೀಕ್ಷಿತ 'ಕೆಜಿಎಫ್-2' ಚಿತ್ರ ಕೂಡ ಬಿಡುಗಡೆಯಾಗುತ್ತಿದೆ. 'ಕೆಜಿಎಫ್ 2' ಚಿತ್ರದ ನಿರೀಕ್ಷೆ ಇಡೀ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿದೆ, ಇಂತಹ ಚಿತ್ರದ ಎದುರು ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಗುದ್ದಾಡಿ ಗೆಲ್ಲಬಹುದೇ? ಸಾಧ್ಯವೇ ಇಲ್ಲ ಅನ್ನುತ್ತಿದ್ದಾರೆ ಸಿನಿಮಾ ಪಂಡಿತರು. ಹೀಗಾಗಿ ಅಮೀರ್ ಖಾನ್ ತನ್ನ ಚಿತ್ರವನ್ನು ಮತ್ತಷ್ಟು ದಿನ ಮುಂದೂಡಬಹುದು ಅಂತ ಅವರು ವಿಶ್ಲೇಷಿಸುತ್ತಿದ್ದಾರೆ. ಒಂದು ವೇಳೆ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಓಪನಿಂಗ್ ಮೇಲೆ ಎರಡು ಚಿತ್ರಗಳಿಗೂ ಪ್ರಭಾವ ಬೀರುತ್ತದೆ. 'ಜೀರೋ' ಚಿತ್ರದ ರಿಸಲ್ಟ್ ಕೂಡ ಅಮೀರ್ ಖಾನ್ ಎದುರಿನಲ್ಲಿದೆ. ಚಿತ್ರ ಗೆದ್ದರೆ ಹೀರೋ, ಸೋತರೆ ಜೀರೋ ಎಂಬ ಭಯ ಕೂಡ ಅಮೀರ್ ಖಾನ್ ಗೆ ಕಾಡುತ್ತಿದೆ. ಒಟ್ಟಾರೆ ಈಗಿರುವ ಪ್ರಶ್ನೆ ಬನ್ಸಾಲಿಯಂತೆ ಅಮೀರ್ ಖಾನ್ ಕೂಡ ಕೊನೆಕ್ಷಣದಲ್ಲಿ ಮತ್ತೆ ತನ್ನ ಚಿತ್ರ ಮುಂದೂಡಬಹುದೇ? ಅಥವಾ ಎರಡು ಮದಗಜಗಳ ನಡುವೆ ದೊಡ್ಡ ಹಣಾಹಣಿ ನಡೆಯಬಹುದೇ?


Click it and Unblock the Notifications











