ಟೀಂ ಇಂಡಿಯಾ ಜರ್ಸಿ ತೊಟ್ಟು ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗಲು ಅಹಮದಾಬಾದ್ನಲ್ಲಿ ಬೀಡುಬಿಟ್ಟ ಬಾಲಿವುಡ್ ಸೆಲಬ್ರಿಟಿಗಳು!
ಭಾರತೀಯರಿಗೆ ನವೆಂಬರ್ 19ರ ಭಾನುವಾರ ಐತಿಹಾಸಿಕ ದಿನವೇ ಆಗಿದೆ. ವಿಶ್ವಕಪ್ ಆರಂಭವಾದಾಗಿನಿಂದ ಈ ದಿನಕ್ಕಾಗಿ ಉಸಿರು ಬಿಗಿಹಿಡಿದು ಕಾಯುತ್ತಿದ್ದರು. ಈ ರೋಮಾಂಚನಕಾರಿ ವರ್ಲ್ಡ್ ಕಪ್ 2023 ರ ಕ್ಲೈಮ್ಯಾಕ್ಸ್ ಹತ್ತಿರ ಬಂದಿದ್ದು, ಬಾಲಿವುಡ್ ಸೆಲಬ್ರಿಟಿಗಳು ಅಹಮದಾಬಾದ್ ಸ್ಟೇಡಿಯಂನಲ್ಲಿ ಬೀಡು ಬಿಡುತಿದ್ದಾರೆ.
ಇಡೀ ರಾಷ್ಟ್ರವೇ ಕ್ರಿಕೆಟ್ ಫಿವರ್ನಲ್ಲಿದ್ದು, ನವೆಂಬರ್ 19ರಂದು ಅಹಮದಾಬಾದ್ ನಗರದಲ್ಲಿ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಮುಖಾಮುಖಿಯಾಗಲು ಸಜ್ಜಾಗುತ್ತಿದೆ. ಇದಕ್ಕಾಗಿ ಇಡೀ ದೇಶ ಕಾಯುತ್ತಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈಗಾಗಲೇ ನಟಿ ಅನುಷ್ಕಾ ಶರ್ಮಾ ಈಗಾಗಲೇ ತಮ್ಮ ಮಗಳು ವಾಮಿಕಾ ಅವರೊಂದಿಗೆ ಅಹಮದಾಬಾದ್ ತಲುಪಿದ್ದಾರೆ. ಬಾಲಿವುಡ್ ಕ್ಯೂಟ್ ಕಪಲ್ ಆದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮುಂಬೈನಿಂದ ಹೊರಟು, ಅಹಮದಾಬಾದ್ ಬಂದಿದ್ದಾರೆ. ನಟ ಆಯುಷ್ಮಾನ್ ಖುರಾನಾ ಕೂಡ ಇದಕ್ಕೆ ಹೊರತಲ್ಲ.
ಅಹಮದಾಬಾದ್ನಲ್ಲಿ ಅನುಷ್ಕಾ ಶರ್ಮಾ ಮತ್ತು ವಾಮಿಕಾ
ವಿಶ್ವಕಪ್ ಫೈನಲ್ನಲ್ಲಿ ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾವನ್ನು ಬೆಂಬಲಿಸಲು ಅನುಷ್ಕಾ ಶರ್ಮಾ ತಮ್ಮ ಮುದ್ದು ಮಗಳು ವಾಮಿಕಾ ಅವರೊಂದಿಗೆ ಅಹಮದಾಬಾದ್ಗೆ ಆಗಮಿಸಿದ್ದಾರೆ. ಅಭಿಮಾನಿಯೊಬ್ಬರು ಹಂಚಿಕೊಂಡ ವೀಡಿಯೊದಲ್ಲಿ, ಅನುಷ್ಕಾ ಶರ್ಮಾ ಅವರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇರುವುದನ್ನು ಹಂಚಿಕೊಂಡಿದ್ದಾರೆ.
ನಟಿ ಅನುಷ್ಕಾ ಜೊತೆಗೆ ಮಗಳು ವಾಮಿಕಾ ಇದ್ದರು. ಇನ್ನು, ಪ್ರತಿ ಮ್ಯಾಚ್ನಲ್ಲಿಯೂ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗೆ ಸಾಥ್ ನೀಡುತ್ತಾರೆ. ಇತ್ತೀಚೆಗೆ ನಡೆದ ವಿಶ್ವಕಪ್ ಸೆಮಿಫೈನಲ್ನಲ್ಲಿಯೂ ಅವರು ಇದ್ದರು. ಈಗಾಗಲೇ ಮ್ಯಾಚ್ ನೋಡಲು ಸೀಟ್ಗಳನ್ನು ಸಿದ್ಧ ಮಾಡಿಕೊಳ್ಳುತ್ತಿರುವ ಫೋಟೋ ವೈರಲ್ ಆಗಿದೆ.

ವಿಶ್ವಕಪ್ ಫೈನಲ್ಗೆ ಸಾಕ್ಷಿಯಾಗಲಿದ್ದಾರೆ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ
ಇನ್ನು, ಸೆಲಬ್ರಿಟಿ ಕಪಲ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೂಡ ಬಹು ನಿರೀಕ್ಷಿತ ಕ್ರಿಕೆಟ್ ಫೈನಲ್ಗಾಗಿ ಅಹಮದಾಬಾದ್ಗೆ ತಲುಪಿದ್ದಾರೆ. ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿದ ರಣವೀರ್, ದೀಪಿಕಾ ಇಬ್ಬರು ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ದೀಪಿಕಾ ಪಡುಕೋಣೆ, ಅವರ ತಂದೆ ಪ್ರಕಾಶ್ ಪಡುಕೋಣೆ ಮತ್ತು ಸಹೋದರಿ ಅನಿಶಾ ಪಡುಕೋಣೆ ಅವರು ಇಂಡಿಯಾದ ಜೆರ್ಸಿಯಲ್ಲಿ ಗಮನ ಸೆಳೆದಿದ್ದಾರೆ.
ಟೀಂ ಇಂಡಿಯಾ ಜೆರ್ಸಿಯಲ್ಲಿ ಆಯುಷ್ಮಾನ್ ಖುರಾನಾ
ಪ್ರತಿಭಾನ್ವಿತ ನಟ ಆಯುಷ್ಮಾನ್ ಖುರಾನಾ ಕೂಡ ಭಾನುವಾರ ಮುಂಜಾನೆಯೇ ವಿಮಾನ ಏರಿದ್ದು, ಅಹಮದಾಬಾದ್ ತಲುಪಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಉತ್ಸಾಹಭರಿತ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ಬೆಳಗ್ಗೆ 4 ಗಂಟೆಗೆ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಯನ್ನು ಹೆಮ್ಮೆಯಿಂದ ಧರಿಸಿ, ಖುಷಿಪಟ್ಟಿದ್ದಾರೆ.
ಈ ಮಧ್ಯೆ ಅಮಿತಾಬ್ ಬಚ್ಚನ್ ಟೀಂ ಇಂಡಿಯಾಗೆ ಮನಮುಟ್ಟುವ ಸಂದೇಶವನ್ನು ನೀಡಿದ್ದಾರೆ. ಅವರು ತಮ್ಮ ಕೌನ್ ಬನೇಗಾ ಕರೋಡ್ಪತಿ ರಸಪ್ರಶ್ನೆ ಕಾರ್ಯಕ್ರಮದ ಸೆಟ್ನಿಂದ ಸಂದೇಶ ಕಳುಹಿಸಿದ್ದಾರೆ. ವಿಡಿಯೋದಲ್ಲಿ ಅಮಿತಾಭ್ ಹಿಂದಿಯಲ್ಲಿ, "ಆತ್ಮೀಯ ರೋಹಿತ್ ಮತ್ತು ಟೀಮ್ ಇಂಡಿಯಾ. ಇಂದು ನೀವು ಮತ್ತು ನಿಮ್ಮ ತಂಡವು ಹಲವಾರು ವರ್ಷಗಳಿಂದ ಶ್ರಮಿಸಿದ ದಿನವಾಗಿದ್ದು, ಅದಕ್ಕೆ ನೀವು ಸಿದ್ಧರಾಗಿರುವಿರಿ. ನಿಮ್ಮ ಜೊತೆಗೆ ಇಡೀ ದೇಶವೇ ಈ ದಿನಕ್ಕಾಗಿ ಕಾಯುತ್ತಿದೆ. ನೀವು ಇಂದು ಮೈದಾನದಲ್ಲಿ ಇರುವಾಗ ನಾವು 140 ಕೋಟಿ ಭಾರತೀಯರು ಸಹ ನಿಮ್ಮೊಂದಿಗೆ ಇರುತ್ತೇವೆ. ಇಂದು ಇಡೀ ದೇಶದ ಉಸಿರು ಈ 11 ಆಟಗಾರರ ಉಸಿರಿನೊಂದಿಗೆ ಇರಲಿದೆ. "ಆಲ್ ದಿ ಬೆಸ್ಟ್ ಟೀಮ್ ಇಂಡಿಯಾ" ಎಂದಿದ್ದಾರೆ.


Click it and Unblock the Notifications











