'ರಾಮಾಯಣ' ಮೊದಲ ಭಾಗದಲ್ಲಿ ರಣ್ಬೀರ್ ಜೊತೆ ನಾನು ತೆರೆ ಹಂಚಿಕೊಂಡಿಲ್ಲ; ಸೀಕ್ರೆಟ್ ಲೀಕ್ ಮಾಡಿದ ಯಶ್
ನಟ ಯಶ್ 'ರಾಮಾಯಣ' ಹಾಗೂ 'ಟಾಕ್ಸಿಕ್' ಚಿತ್ರಗಳ ಪ್ರಚಾರ ಆರಂಭಿಸಿದ್ದಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೆ ಸಿನಿಮಾಕಾನ್ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಹಾಲಿವುಡ್ ವೇದಿಕೆಯಲ್ಲಿ 'ರಾಮಾಯಣ' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಹಾಲಿವುಡ್ ಸಿನಿಮಾಗಳ ಜೊತೆ ಭಾರತದ ಸಿನಿಮಾ ಬಗ್ಗೆ ಚರ್ಚೆ ನಡೆದಿದೆ.
ಈಗಾಗಲೇ 'ರಾಮಾಯಣ' ಚಿತ್ರದಲ್ಲಿ ಶ್ರೀರಾಮನಾಗಿ ರಣ್ಬೀರ್ ಕಪೂರ್ ಟೀಸರ್ ರಿಲೀಸ್ ಆಗಿದೆ. ಆ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ರಾವಣನಾಗಿ ಯಶ್ ಲುಕ್ ರಿವೀಲ್ ಆಗಿಲ್ಲ. ಶೀಘ್ರದಲ್ಲೇ ಮತ್ತೊಂದು ಟೀಸರ್ ಮೂಲಕ ಆ ಕುತೂಹಲಕ್ಕೆ ಬ್ರೇಕ್ ಹಾಕಲಿದೆ ಚಿತ್ರತಂಡ. ಇದೆಲ್ಲದರ ನಡುವೆ ರಾಮಾಯಣ ಮೊದಲ ಭಾಗದಲ್ಲಿ ರಣ್ಬೀರ್ ಜೊತೆ ತೆರೆ ಹಂಚಿಕೊಂಡಿಲ್ಲ ಎಂದು ಯಶ್ ಹೇಳಿರುವುದು ವೈರಲ್ ಆಗುತ್ತಿದೆ. ಹಾಲಿವುಡ್ Fandango ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

'ರಾಮಾಯಣ' ಚಿತ್ರಕ್ಕಾಗಿ ಸೆಟ್ನಲ್ಲಿ ರಣ್ಬೀರ್ ಕಪೂರ್ ಜೊತೆ ಒಡನಾಟ ಹೇಗಿತ್ತು ಎನ್ನುವ ಪ್ರಶ್ನೆಗೆ ಯಶ್ ಉತ್ತರಿಸಿದ್ದಾರೆ. "ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ನಾವಿಬ್ಬರು(ರಣ್ಬೀರ್ ಹಾಗೂ ನಾನು) ಈ ಚಿತ್ರದಲ್ಲಿ ಒಟ್ಟಿಗೆ ತೆರೆ ಹಂಚಿಕೊಳ್ಳುವುದಿಲ್ಲ. ಕಾರಣ ನಿಮಗೆಲ್ಲಾ ಗೊತ್ತೇಯಿದೆ. 'ರಾಮಾಯಣ' ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬರ್ತಿದೆ. ಮೊದಲ ಭಾಗದಲ್ಲಿ ರಾವಣನಾಗಿ ನನ್ನ ಸಾಮ್ರಾಜ್ಯ ಬೇರೆ ಇರುತ್ತೆ, ರಾಮನಾಗಿ ಅವರ ಸಾಮ್ರಾಜ್ಯ ಬೇರೆ. ಆದರೂ ಎರಡ್ಮೂರು ಬಾರಿ ರಣ್ಬೀರ್ ಕಪೂರ್ ಭೇಟಿ ಆಗಿದ್ದೀನಿ, ಅವ್ರು ಅದ್ಭುತ ನಟ" ಎಂದು ಯಶ್ ತಿಳಿಸಿದ್ದಾರೆ.
'ರಾಮಾಯಣ' ರೀತಿಯ ಅದ್ಭುತ ಸಿನಿಮಾ ಮಾಡುವ ಅಜೆಂಡಾ ಇರುವಾಗ ನಮ್ಮ ತನು, ಮನ ಅರ್ಪಿಸಿಕೊಳ್ಳುತ್ತೇವೆ. ಹಾಗಾಗಿ ಕೆಮೆಸ್ಟ್ರಿ ಚೆನ್ನಾಗಿಯೇ ಇರುತ್ತದೆ. ನಾವು ಅದನ್ನು ಎಂಜಾಯ್ ಮಾಡ್ತಿದ್ದೀವಿ ಎಂದು ಯಶ್ ವಿವರಿಸಿದ್ದಾರೆ. 'ರಾಮಾಯಣ' ಚಿತ್ರದ ಮೊದಲ ಭಾಗ ಈ ವರ್ಷ ದೀಪಾವಳಿಗೆ ತೆರೆಗೆ ಬರಲಿದೆ. ಸೀತಾಪಹರಣದವರೆಗಿನ ಕಥೆಯನ್ನು ಮೊದಲ ಭಾಗದಲ್ಲಿ ಹೇಳುತ್ತಿದ್ದಾರೆ. ಹಾಗಾಗಿ ಶ್ರೀರಾಮ ಹಾಗೂ ರಾವಣ ಅರ್ಥಾತ್ ರಣ್ಬೀರ್ ಹಾಗೂ ಯಶ್ ಒಟ್ಟಿಗೆ ಕಾಣಿಸಿಕೊಳ್ಳುವ ಸನ್ನಿವೇಶಗಳು ಇರುವುದಿಲ್ಲ. ಆದರೆ 2ನೇ ಭಾಗದಲ್ಲಿ ಕೊನೆ ಕೊನೆಗೆ ರಾಮ, ರಾವಣರಾಗಿ ರಣ್ಬೀರ್ ಹಾಗೂ ಯಶ್ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
ಸೀತಾ ಸ್ವಯಂವರಕ್ಕೆ ರಾವಣ ಕೂಡ ಬಂದಿದ್ದ. ಹಾಗಾಗಿ ಅಲ್ಲೇ ರಾಮ ಹಾಗೂ ರಾವಣ ಇಬ್ಬರ ಭೇಟಿ ನಡೆಯುತ್ತದೆ ಅಲ್ಲವೇ ಎಂದು ಕೆಲವರು ಭಾವಿಸಿರಬಹುದು. ಆದರೆ ವಾಲ್ಮೀಕಿ ರಾಮಾಯಣದ ಪ್ರಕಾರ ಸೀತಾ ಸ್ವಯಂವರದಲ್ಲಿ ರಾವಣ ಭಾಗಿ ಆಗಿರಲಿಲ್ಲ. ಜನಕ ಮಹಾರಾಜ ಸ್ವಯಂವರಕ್ಕೆ ರಾವಣನ್ನು ಆಮಂತ್ರಿಸಿರುವುದಿಲ್ಲ. ಆದರೆ ಬಳಿಕ ಕೆಲ ರಾಮಾಯಣ ಕಾವ್ಯ, ನಾಟಕಗಳಲ್ಲಿ ರಾವಣ ಕೂಡ ಸೀತೆ ಸ್ವಯಂವರಕ್ಕೆ ಬಂದು ಶಿವ ಧನುಸ್ಸು ಎತ್ತಲಾಗದೇ ಬಿದ್ದು ಅವಮಾನಗೊಂಡ ಎಂದು ಹೇಳಲಾಗಿದೆ. ವಾಲ್ಮೀಕಿ ರಾಮಾಯಣ ಆಧರಿಸಿ ಈಗ ನಿತೇಶ್ ತಿವಾರಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಹಾಗಾಗಿ ಅಲ್ಲಿರುವ ಉಲ್ಲೇಖಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ.
'ರಾಮಾಯಣ' ಕಥೆಯನ್ನು ಸಿಂಪಲ್ ಆಗಿ ಹೇಳುವಾಗ ಶ್ರೀರಾಮನ ಜನನ.. ಗುರುಕುಲಕ್ಕೆ ತೆರಳಿ ವಿದ್ಯಾಭ್ಯಾಸ ಮಾಡುವುದು, ವಿಶ್ವಾಮಿತ್ರದ ಯಜ್ಞಕ್ಕೆ ರಾಮ, ಲಕ್ಷ್ಮಣ ಸಹಾಯ ಮಾಡುವುದು, ಸೀತೆ ಸ್ವಯಂವರ, ಮದುವೆ ಬಳಿಕ ಪಟ್ಟಾಭಿಷೇಕ, ಆ ಬಳಿಕ ತಂದೆ ಕೊಟ್ಟ ಮಾತಿಗಾಗಿ ರಾಮ ವನವಾಸಕ್ಕೆ ತೆರಳುವುದು, ಅಲ್ಲಿ ರಾವಣ ಬಂದು ಸೀತೆಯನ್ನು ಅಪಹರಿಸುವುದು ಹೀಗೆ ಕಥೆ ಸಾಗುತ್ತದೆ. ಆದರೆ ಇದರ ಸುತ್ತಾ ಮತ್ತಷ್ಟು ಕಥೆ ಇದೆ. ಆ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿಲ್ಲ. 'ರಾಮಾಯಣ' ಚಿತ್ರವನ್ನು ಎರಡು ಭಾಗಗಳಾಗಿ ಕಟ್ಟಿಕೊಡುತ್ತಿವುದರಿಂದ ಇಂತಹ ಬೇರೆ ಬೇರೆ ಉಪಕಥೆಗಳನ್ನು ಸೇರಿಸಲಾಗುತ್ತಿದೆ.
ರಾವಣನ ಹಿನ್ನೆಲೆ, ವಿದ್ಯುಜಿಹ್ವನ ಜೊತೆಗಿನ ಯುದ್ಧ ಹೀಗೆ ಲಂಕಾಸುರನ ಒಂದಷ್ಟು ಬಿಲ್ಡಪ್ ಸನ್ನಿವೇಶಗಳು ಮೊದಲ ಭಾಗದಲ್ಲಿ ಇರಲಿದೆ. ರಾವಣನಾಗಿ ಹೆಚ್ಚು ಕಮ್ಮಿ 15 ನಿಮಿಷಗಳ ಕಾಲ ಯಶ್ ಮೊದಲ ಭಾಗದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ 2ನೇ ಭಾಗದ ಚಿತ್ರೀಕರಣ ಕೂಡ ಆರಂಭವಾಗಿದೆ. ಆದರೆ ಶ್ರೀರಾಮ ಹಾಗೂ ರಾವಣದ ಯುದ್ಧ ಅಂದರೆ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆದಿಲ್ಲ. ಇದೇ ಕಾರಣಕ್ಕೆ ರಣ್ಬೀರ್ ಜೊತೆ ಇನ್ನು ಸೆಟ್ನಲ್ಲಿ ಕಾಣಿಸಿಕೊಂಡಿಲ್ಲ ಎಂದು ಯಶ್ ತಿಳಿಸಿದ್ದಾರೆ.


Click it and Unblock the Notifications











