ರಣಹದ್ದುಗಳ ರಾಜನ ಜೊತೆ ಫೈಟ್; ಅಯ್ಯೋ.. 'ರಾಮಾಯಣ' ಕ್ಲೈಮ್ಯಾಕ್ಸ್ ಸೀಕ್ರೆಟ್ ಹೇಳಿಬಿಟ್ಟ ಯಶ್
'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಿರುವುದು ಗೊತ್ತೇಯಿದೆ. ಇತ್ತೀಚೆಗೆ ಲಾಸ್ ವೇಗಾಸ್ನಲ್ಲಿ ನಡೆದ ಸಿನಿಮಾಕಾನ್ ಸಮಾವೇಶದಲ್ಲಿ ಭಾಗಿ ಆಗಿ ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದರು. ಹಾಲಿವುಡ್ ಮಟ್ಟದಲ್ಲಿ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಸಿನಿಮಾ ಮೇಕಿಂಗ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಯಶ್ ಹಂಚಿಕೊಂಡಿದ್ದಾರೆ.
ವಾಲ್ಮೀಕಿ ಬರೆದ 'ರಾಮಾಯಣ' ಕಾವ್ಯವನ್ನು ಆಧರಿಸಿ ನಿತೇಶ್ ತಿವಾರಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದೆ. ಮೊದಲ ಭಾಗ ದೀಪಾವಳಿ ಸಂಭ್ರಮದಲ್ಲಿ ಅಕ್ಟೋಬರ್ ಕೊನೆ ವಾರ ತೆರೆಗಪ್ಪಳಿಸಲಿದೆ. 2ನೇ ಭಾಗ ಮುಂದಿನ ವರ್ಷ ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸಲಿದೆ. ಸೀತಾಪಹರಣದವರೆಗೆ ಮೊದಲ ಭಾಗದಲ್ಲಿ ಕಥೆ ಹೇಳಲಾಗುತ್ತಿದೆ.

'ರಾಮಾಯಣ' ಎಲ್ಲರಿಗೂ ಗೊತ್ತಿರುವ ಕಥೆ. ಹಲವು ಕಾವ್ಯಗಳು, ನಾಟಕಗಳು, ಸಿನಿಮಾ ಹಾಗೂ ಕಿರುತೆರೆ ಧಾರಾವಾಹಿಯಾಗಿ ಮರ್ಯಾದ ಪರುಷ ಶ್ರೀರಾಮನ ಚರಿತ್ರೆಯನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಪಾಶ್ಚಿಮಾತ್ಯ ದೇಶದವರಿಗೆ ಮುಖ್ಯವಾಗಿ ಹಾಲಿವುಡ್ ಪ್ರೇಕ್ಷಕರಿಗೆ ನಮ್ಮ 'ರಾಮಾಯಣ' ಕಥೆಯನ್ನು ಈ ಸಿನಿಮಾ ಮೂಲಕ ಹೇಳುವ ಪ್ರಯತ್ನ ನಡೀತಿದೆ. ಇಂಗ್ಲೀಷ್ ಭಾಷೆಗೂ ಸಿನಿಮಾ ಡಬ್ ಆಗಿ ಬರಲಿದೆ.
ಹಾಲಿವುಡ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ 'ರಾಮಾಯಣ' ಮೊದಲ ಭಾಗದ ಬಗ್ಗೆ ಮಾತನಾಡುತ್ತಾ ಯಶ್ ಒಂದು ಸೀಕ್ರೆಟ್ ಬಿಟ್ಟುಕೊಟ್ಟಿದ್ದರು. ನಾನು- ರಣ್ಬೀರ್ ಕಪೂರ್ ಈವೆರೆಗೆ ತೆರೆ ಹಂಚಿಕೊಂಡು ನಟಿಸಿಲ್ಲ. ಅಂದರೆ ಮೊದಲ ಭಾಗದಲ್ಲಿ ನಾವಿಬ್ಬರು ಒಟ್ಟಿಗೆ ನಟಿಸುವ ಸನ್ನಿವೇಶಗಳು ಇಲ್ಲ. ಹಾಗಾಗಿ ಅವರನ್ನು ಸೆಟ್ನಲ್ಲಿ ಭೇಟಿ ಆಗಿಲ್ಲ. ಇನ್ನುಳಿದಂತೆ ಒಂದೆರಡು ಭಾರಿ ಅವರನ್ನು ಭೇಟಿ ಆಗಿ ಮಾತನಾಡಿದ್ದೀನಿ. ಅವರು ಅದ್ಭುತ ನಟ ಎಂದಿದ್ದರು.
ರಣ್ಬೀರ್ ಹಾಗೂ ಯಶ್ ಅವರನ್ನು ಒಟ್ಟಿಗೆ ತೆರೆಮೇಲೆ ನೋಡಲು ಬಯಸುತ್ತಿದ್ದವರಿಗೆ ಇದು ನಿರಾಸೆ ಮೂಡಿಸಿದೆ. ವಾಲ್ಮೀಕಿ ರಾಮಾಯಣದ ಪ್ರಕಾರ ವಾನರರ ಸಹಾಯದಿಂದ ಸೇತುವೆ ನಿರ್ಮಿಸಿ ಶ್ರೀರಾಮ ಲಂಕೆಗೆ ಹೋಗುವವರೆಗೆ ದಶಕಂಠನ ಭೇಟಿ ಆಗಿರುವುದಿಲ್ಲ. ಈ ವಿಚಾರ ಗೊತ್ತೇಯಿದೆ. ಹಾಗಾಗಿ ಮೊದಲ ಭಾಗದಲ್ಲಿ ನಾನು, ರಣ್ಬೀರ್ ನಟಿಸುವ ಸನ್ನಿವೇಶಗಳು ಇಲ್ಲ ಎಂದು ಯಶ್ ಹೇಳಿದ್ದಾರೆ. ಇದೀಗ ಜಟಾಯು ಜೊತೆಗಿನ ಫೈಟ್ ಸೀಕ್ವೆನ್ಸ್ ಬಗ್ಗೆ ಕೂಡ ಯಶ್ ಮಾತನಾಡಿದ್ದಾರೆ. ಇದು 'ರಾಮಾಯಣ' ಮೊದಲ ಭಾಗದ ಪ್ರಮುಖ ಸನ್ನಿವೇಶ ಎಂದು ವಿವರಿಸಿದ್ದಾರೆ.
ಹಾಲಿವುಡ್ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಯಶ್ ಮಾತನಾಡಿದ್ದಾರೆ. ಚಿತ್ರದ ಸ್ಟಂಟ್ಸ್ ಬಗ್ಗೆ ಹೇಳಿ ಎಂದಾಗ "ಚಿತ್ರದಲ್ಲಿ ಸಾಕಷ್ಟು ಆಕ್ಷನ್ ಸನ್ನಿವೇಶಗಳಿವೆ. ನಾನು ಜಟಾಯು ಪಕ್ಷಿ ಜೊತೆ ಫೈಟ್ ಮಾಡುವ ಸೀಕ್ವೆನ್ಸ್ ಇದೆ. ಅದು ಪಕ್ಷಿಗಳ ರಾಜ.. ಬಹಳ ದೊಡ್ಡ ಪಕ್ಷಿ.. ರಾವಣ ಹಾಗೂ ಜಟಾಯು ನಡುವೆ ಆಕ್ಷನ್ ಸಖತ್ ಮಜಾ ಕೊಡಲಿದೆ. ವಿಎಫ್ಎಕ್ಸ್ ಸಹಾಯದಿಂದ ಆ ಪಕ್ಷಿಯನ್ನು ತೋರಿಸಲಾಗಿದೆ. ಆದ್ರೆ ತೆರೆಮೇಲೆ ನೋಡಿ ದಾಗ ಸೊಗಸಾಗಿ ಇರುತ್ತದೆ. ಕಣ್ಣಿಗೆ ಕಟ್ಟಿದಂತೆ ತೋರಿಸಲಾಗ್ತಿದೆ. ಪುಷ್ಪಕ ವಿಮಾನದ ಮೇಲೆ ನಿಂತು ಜಟಾಯು ಪಕ್ಷಿ ಜೊತೆ ಫೈಟ್ ಕಮರ್ಷಿಯಲ್ ಸಿನಿಮಾ ರೀತಿ ಇರುತ್ತದೆ" ಎಂದಿದ್ದಾರೆ.
ಯಶ್ ಮಾತು ಕೇಳಿದ್ರೆ 'ರಾಮಾಯಣ' ಚಿತ್ರದ ಮೊದಲ ಭಾಗದ ಕ್ಲೈಮ್ಯಾಕ್ಸ್ ಇದೆ ಎನ್ನುವುದು ಗೊತ್ತಾಗ್ತಿದೆ. ಗ್ರಾಫಿಕ್ಸ್ ಬಳಸಿ ಜಟಾಯು ಪಕ್ಷಿಯನ್ನು ತೋರಿಸುತ್ತಿದ್ದಾರೆ. ಆ ಪಕ್ಷಿಗೆ ಅಮಿತಾಬ್ ಬಚ್ಚನ್ ವಾಯ್ಸ್ ಕೊಡುತ್ತಾರೆ ಎನ್ನಲಾಗ್ತಿದೆ. ಹಾಗಾಗಿ ಸೀಕ್ವೆನ್ಸ್ ಹೈಲೆಟ್ ಆಗಲಿದೆ. ಇನ್ನು ರಾವಣನಾಗಿ ಯಶ್ ಎಂಟ್ರಿ ಬಿಲ್ಡಪ್, ವಿದ್ಯುಜ್ಜಿಹ್ವನ ಜೊತೆ ರಾವಣ ಯುದ್ಧ ಮಾಡುವ ಸನ್ನಿವೇಶ ಕೂಡ ಇರುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications