ರಾವಣನ ಅವತಾರ ತಾಳುವ ಮುನ್ನ ಶಿವನ ಪಾದಕ್ಕೆರಗಿದ ಯಶ್; ನಮ್ಮನೆ ದೇವ್ರು ಎಂದ ನಟ
ನಟ ಯಶ್ ರಾಮಾಯಣ ಚಿತ್ರದಲ್ಲಿ ರಾವಣ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಆರಂಭಿಸುವ ಮುನ್ ಉಜ್ಜನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಯಶ್ ಮಹಾಕಾಳೇಶ್ವರ ಆಲಯಕ್ಕೆ ಭೇಟಿ ನೀಡಿರುವ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಶೀಘ್ರದಲ್ಲೇ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಚಿತ್ರೀಕರಣದಲ್ಲಿ ರಾಕಿಂಗ್ ಸ್ಟಾರ್ ಭಾಹಿ ಆಗಲಿದ್ದಾರೆ.

ಚಿತ್ರದಲ್ಲಿ ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ನಟಿಸುವುದು ಜೊತೆಗೆ ಯಶ್ ಸಹ ನಿರ್ಮಾಪಕರು ಆಗಿದ್ದಾರೆ. ಈಗಾಗಲೇ ರಾಮಾಯಣ ಕಾವ್ಯ ನಾಟಕ, ಧಾರಾವಾಹಿ ಹಾಗೂ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಆದರೆ ಅದೇ ಕಥೆಯನ್ನು ಮತ್ತೊಮ್ಮೆ ಅದ್ಧೂರಿಯಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ.
ಎರಡು ಭಾಗಗಳಾಗಿ ರಾಮಾಯಣ ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ದೀಪಾವಳಿಗೆ ಮೊದಲ ಭಾಗ ಬಿಡುಗಡೆ ಆಗಲಿದೆ. ರಣ್ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಜೊತೆಗೆ ಘಟಾನುಘಟಿ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಾವಣನಾಗಿ ರಾಕಿಂಗ್ ಸ್ಟಾರ್ ಅಬ್ಬರಿಸುವುದನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. 600 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಲಕ್ಷ್ಮಣನಾಗಿ ರವಿ ದುಬೇ, ದಶರಥನಾಗಿ ಅರುಣ್ ಗೋವಿಲ್, ಕೈಕೇಯಿ ಆಗಿ ಲಾರಾ ದತ್ತಾ, ಇಂದ್ರದೇವನಾಗಿ ಕುನಾಲ್ ಕಪೂರ್, ಮಂಥರಾ ಆಗಿ ಶೀಬಾ ಚಡ್ಡಾ ಸೇರಿ ದೊಡ್ಡ ತಾರಾಗಣ 'ರಾಮಾಯಣ' ಚಿತ್ರದಲ್ಲಿದೆ. ರಣ್ಬೀರ್ ಹಾಗೂ ಸಾಯಿ ಪಲ್ಲವಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ ಎನ್ನಲಾಗ್ತಿದೆ. ಮೊದಲ ಭಾಗದಲ್ಲಿ ರಾವಣನ ಪಾತ್ರಕ್ಕೆ ಕಡಿಮೆ ಅವಕಾಶವಿದೆ ಎನ್ನಲಾಗ್ತಿದೆ.
ಸೀತಾಪಹರಣದವರೆಗೆ ಮೊದಲ ಭಾಗದಲ್ಲಿ ಕಥೆ ಹೇಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಹಾಗಾಗಿ ರಾವಣನ ತಪ್ಪಸ್ಸು, ಶಿವನಿಂದ ವರ ಪಡೆಯುವುದು ಹಾಗೂ ಮಾಯಾ ಜಿಂಕೆ ತೋರಿಸಿ ರಾಮನನ್ನು ಬೇರೆಡೆ ಸೆಳೆದು ಸೀತೆಯನ್ನು ರಾವಣ ಅಪಹರಿಸುವ ಸನ್ನಿವೇಶಗಳು ಮಾತ್ರ ಚಿತ್ರದಲ್ಲಿ ಇರುವ ಸಾಧ್ಯತೆಯಿದೆ. ನಟ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇಯಿದೆ. ಇತ್ತೀಚೆಗೆ ಮುಂಬೈನಲ್ಲಿ ಕೂಡ ಒಂದು ಶೆಡ್ಯೂಲ್ ಶೂಟಿಂಗ್ ಮಾಡಿದ್ದರು.
'ಟಾಕ್ಸಿಕ್' ಶೆಡ್ಯೂಲ್ ಮುಗಿಸಿ ಯಶ್ 'ರಾಮಾಯಣ' ತಂಡ ಸೇರಿಕೊಳ್ಳುತ್ತಿದ್ದಾರೆ. ಮುಂಬೈನಲ್ಲೇ ಸೆಟ್ ಹಾಕಿ ಬಹಳ ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಅಧಿಕೃತವಾಗಿ ಚಿತ್ರದ ಪೋಸ್ಟರ್, ಟೀಸರ್ ಹೊರ ಬಂದಿಲ್ಲ. ಆದರೆ ಅಭಿಮಾನಿಗಳು ತಮ್ಮದೇ ಕಲ್ಪನೆಯಲ್ಲಿ ಶ್ರೀರಾಮನಾಗಿ ರಣ್ಬೀರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ಎಐ ಲುಕ್ ಪೋಸ್ಟರ್ಗಳನ್ನು ವೈರಲ್ ಮಾಡುತ್ತಿದ್ದಾರೆ.
ಪ್ರಮುಖ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ, ಯಶ್ ತಮ್ಮ ಬ್ಯಾನರ್ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ನಿಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಜೊತೆಗೆ ರಾಮಾಯಣ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ಸಹಜವಾಗಿಯೇ ಕುತೂಹಲ ಹೆಚ್ಚಿಸಿದೆ. ಕನ್ನಡ ಕಲಾವಿದರು, ತಂತ್ರಜ್ಞರು ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡುವುದೇ ದೊಡ್ಡ ವಿಚಾರ ಎನ್ನುವ ಕಾಲವೊಂದಿತ್ತು. ಇದೀಗ ಯಶ್ 'ರಾಮಾಯಣ' ರೀತಿಯ ಅದ್ಭುತ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಉಜ್ಜಯಿನಿಯಲ್ಲಿರುವ ಪೂಜ್ಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ANI ಮಾಧ್ಯಮಕ್ಕೆ ಯಶ್ ಪ್ರತಿಕ್ರಿಯಿಸಿದ್ದಾರೆ. "ಬಹಳ ಖುಷಿ ಆಗುತ್ತಿದೆ. ಶಿವನ ಆಶೀರ್ವಾದ ಪಡೆಯಲು ಬಂದೆ. ನಾನು ಚಿಕ್ಕಂದಿನಿಂದ ಶಿವನ ದೊಡ್ಡ ಭಕ್ತ. ನಾವು ಮನೆದೇವರು ಎಂದು ಕರೆಯುತ್ತೇನೆ. ಕುಲದೇವರು ಶಿವ. ಇಲ್ಲಿಗೆ ಬಂದಿರುವುದು ಸಂತಸ ತಂದಿದೆ. ದೇವರ ಸನ್ನಿಧಿಯಲ್ಲಿ ಧ್ಯಾನ ಮಾಡುತ್ತಾ ಕುಳಿತಾಗ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ. ಅದ್ಭುತ ಅನುಭವ ಸಿಕ್ಕಿದೆ" ಎಂದು ಯಶ್ ಹೇಳಿದ್ದಾರೆ.


Click it and Unblock the Notifications











