ತುಂಬಾ ಮುದ್ದಾಗಿದ್ದೀಯಾ ; ಕಳಚಿ ಬಿತ್ತು ಯುಜ್ವೇಂದ್ರ ಚಹಾಲ್ ಮುಖವಾಡ-ನಟಿಗೆ ಮೆಸೇಜ್ ಮಾಡಿ ತಗ್ಲಾಕೊಂಡ ಲೆಗ್ ಸ್ಪಿನ್ನರ್
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತಿಯ ಅರ್ಥವೂ ಬದಲಾಗಿದೆ. ಹಿಂದೆ ಪ್ರೀತಿ ಅಂದರೆ ಭಾವನಾತ್ಮಕವಾದ ಬಂಧ ಆಗಿತ್ತು. ಮನದ ಮಾತುಗಳಿಗೆ ಅಕ್ಷರದ ರೂಪ ನೀಡಲಾಗುತ್ತಿತ್ತು. ಪ್ರೇಮ ಪತ್ರವನ್ನು ಬರೆಯಲಾಗುತ್ತಿತ್ತು. ಆದರೆ ಈಗ ನಂಬಿಕೆ .. ಗೌರವ .. ಬದ್ದತೆ .. ಪ್ರೀತಿಯಲ್ಲಿ ಕಣ್ಮರೆಯಾಗಿದೆ. ಲೈಕ್ ಮತ್ತು ಸೋಶಿಯಲ್ ಮೀಡಿಯಾದ ಮೆಸೆಂಜರ್ ನ ಬಾಗಿಲಿಗೆ ಪ್ರೀತಿ ಬಂದು ನಿಂತಿದೆ.
ಅಚ್ಚರಿ ಅಂದರೆ ಇಡೀ ಜಗದೆಲ್ಲೆಡೆ ಹೆಸರು ಮಾಡಿದವರು ಕೂಡ ಆಕರ್ಷಣೆಯ ಸೆಳೆತಕ್ಕೆ ಸಿಲುಕಿ ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿಯ ಬಲೆ ಬೀಸಲು ಶುರು ಮಾಡಿದ್ದಾರೆ. ಸಾಮಾನ್ಯದವರನ್ನು ಈ ಸೋಶಿಯಲ್ ಮೀಡಿಯಾ ಮೂಲಕ ಸೆಳೆಯಲು ಹಂಬಲಿಸುತ್ತಿದ್ದಾರೆ. ಮದುವೆಯಾಗಿರಲಿ.. ಡಿವೋರ್ಸ್ ಆಗಿರಲಿ.. ಹೆಸರು, ಹಣ, ಕೀರ್ತಿ.. ಎಲ್ಲವೂ ಕಾಲ ಬುಡದಲ್ಲಿ ಬಂದು ಬಿದ್ದಿದ್ದರೂ ಕೂಡ, ಹಲವು ಖ್ಯಾತರು ಈ ಡಿಜಿಟಲ್ ಮಾಯಾಜಾಲದ ಮೂಲಕ ಅಪರಿಚಿತರಿಗೆ ಮೆಸೇಜ್ ಮಾಡುತ್ತಿದ್ದಾರೆ. ಈ ಸಾಲಿನಲ್ಲಿ ಭಾರತದ ಖ್ಯಾತ ಸ್ಪಿನರ್ ಯುಜ್ವೇಂದ್ರ ಚಹಾಲ್ ಕೂಡ ಇದ್ದಾರೆ ಎನ್ನುವುದೇ ಈ ಕ್ಷಣದ ಶಾಕಿಂಗ್ ನ್ಯೂಸ್.

ಹೌದು, ಎಲ್ಲರಿಗೆ ಗೊತ್ತಿರುವಂತೆ ಧನಶ್ರೀ ವರ್ಮಾಗೆ ವಿಚ್ಛೇದನ ನೀಡಿದ ನಂತರ ಚಹಾಲ್ ಏಕಾಂಗಿ ಆಗಿದ್ದರು. ಆದರೆ.. ಅಷ್ಟರಲ್ಲಿ ಇವರ ಬದುಕಿನಲ್ಲಿ ಆರ್ಜೆ ಮಹ್ವಾಶ್ ಪ್ರವೇಶವಾಯ್ತು. 2025ರಲ್ಲಿ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಇಬ್ಬರು ಗ್ಯಾಲರಿಯಲ್ಲಿ ಕುಂತು ಮ್ಯಾಚ್ ಕಣ್ತುಂಬಿಕೊಂಡಿದ್ದರು.
ಆದರೆ, ಇದೇ ಸಮಯದಲ್ಲಿ ಇಬ್ಬರನ್ನು ಜೊತೆಯಲ್ಲಿ ಕಣ್ತುಂಬಿಕೊಂಡ ಹಲವರು ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿಯನ್ನು ಹಬ್ಬಿಸಿದರು. ಇದಕ್ಕೆ ಪೂರಕವಾಗಿ ಹಲವು ಬಾರಿ ಆ ನಂತರ ಚಹಾಲ್ ಮತ್ತು ಮಹ್ವಾಶ್ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಲೇ ಬಂದರು. ಇನ್ನೇನು ಈ ಸಂಬಂಧದ ಮೇಲೆ ಅಧಿಕೃತವಾದ ಮುದ್ರೆ ಬೀಳಬೇಕು. ಅಷ್ಟರಲ್ಲಿ ಇವರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹೊರ ಬಂತು. ಇನ್ಸ್ಟಾಗ್ರಾಮ್ನಲ್ಲಿ ಇಬ್ಬರು ಒಬ್ಬರನ್ನೊಬ್ಬರು ಅನ್ಫಾಲೋ ಮಾಡಿರುವ ವಿಚಾರ ಜಗಜ್ಜಾಹೀರಾಯ್ತು.
ಆರ್ ಜೆ ಮಹ್ವಾಶ್ ನಂತರ ''ಬಿಗ್ ಬಾಸ್'' ಸ್ಫರ್ಧಿ ಶೆಫಾಲಿ ಬಗ್ಗಾ ಜೊತೆ ಚಹಾಲ್ ದರ್ಶನ ಆಯ್ತು. ಚಹಾಲ್ ಬದುಕಿನಲ್ಲಿ ಶೆಫಾಲಿ ಬಗ್ಗಾ ಅವರಿಗೆ ಸ್ಥಾನ ಇನ್ನೂ ಇದೆಯಾ..? ಇಲ್ಲವಾ..? ಗೊತ್ತಿಲ್ಲ. ಆದರೆ ಧನಶ್ರೀ ವರ್ಮಾ ಅವರ ಜೊತೆ ವಿಚ್ಚೇದನವಾದಾಗ ಹಲವರು ಧನಶ್ರೀ ವರ್ಮಾ ಅವರನ್ನೇ ಟೀಕೆ ಮಾಡಿದ್ದರು. ಟ್ರೋಲ್ ಮಾಡಿದ್ದರು. ಧನಶ್ರೀ ವರ್ಮಾ ಅವರನ್ನು ಮರೆತು ಹೀಗೆ ಒಬ್ಬರಾದ ಮೇಲೊಬ್ಬರಂತೆ ಸುಂದರಿಯರ ಜೊತೆ ಚಹಾಲ್ ಕಾಣಿಸಿಕೊಂಡರು ಕೂಡ ಹಲವರು ಚಹಾಲ್ ಅವರದ್ದು ತುಂಬಾ ಒಳ್ಳೆಯ ವ್ಯಕ್ತಿತ್ವ ಎಂಬಂತೆಯೇ ಮಾತನಾಡುತ್ತಿದ್ದರು.
ಆದರೆ, ಚಹಾಲ್ ಮುಖವಾಡ ಸದ್ಯ ಕಳಚಿ ಬಿದ್ದಂತೆ ಇದೆ. ಹುಡುಗಿಯರ ಶೋಕಿ ಚಹಾಲ್ಗೆ ಇದ್ದಂತೆ ಇದೆ. ಈ ಮಾತನ್ನು ನಾವಲ್ಲ. ಇಂತಹದ್ದೊಂದು ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ಈಗ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ ತಾನಿಯಾ ಚಟರ್ಜಿ ಎಂಬ ಬೆಂಗಾಲಿ ಚೆಲುವೆ ಸಿಡಿಸಿರುವ ಬಾಂಬು.

ಹೌದು.ತಾನಿಯಾ ಚಟರ್ಜಿ, ಕೋಲ್ಕತ್ತಾದ ಕುವರಿ. ಮಾಡೆಲಿಂಗ್ ಕ್ಷೇತ್ರದಲ್ಲಿ ರ್ಯಾಂಪ್ ವಾಕ್ ಮಾಡುತ್ತಲೇ ಚಿತ್ರರಂಗಕ್ಕೆ ಬಂದ ತಾನಿಯಾ ಎರಡ್ಮೂರು ಬೆಂಗಾಲಿ ಸಿನಿಮಾ ಮಾಡಿದ್ದಾರೆ. ''ಫ್ಲಾಟ್ ಮೆಟ್ಸ್'' ಎಂಬ ಹಿಂದಿ ಚಿತ್ರವನ್ನು ಕೂಡ ಮಾಡಿದ್ದಾರೆ.
ಆದರೆ, ಗೆಲುವೆನ್ನುವುದು ಇವರಿಗೆ ಸಿಗಲಿಲ್ಲ. ಜನ ಮನ್ನಣೆ ಕೂಡ ಸಿಕ್ಕಿಲ್ಲ. ಗೆಲುವು ಮತ್ತು ಜನರ ಪ್ರೀತಿ ಇವರಿಗೆ ಕರುಣಿಸಿದ್ದು ಉಲ್ಲು ಮತ್ತು ಆಲ್ಟ್ ಬಾಲಾಜಿ ಅಂತಹ ಜನಪ್ರಿಯ ಓಟಿಟಿ ಪ್ಲಾಟ್ಫಾರ್ಮ್ಗಳು. ಈ ಓಟಿಟಿಯಲ್ಲಿ ಪ್ರಸಾರವಾಗುವ ವೆಬ್ ಸರಣಿಗಳು ಹೇಗಿರುತ್ತವೆ ಎಂದು ನಾವಿಲ್ಲಿ ಮತ್ತೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಇಂಥಾ ತಾನಿಯಾ ಚಟರ್ಜಿ ಅವರಿಗೆ ಚಹಾಲ್ ಇನ್ಸ್ಟಾಗ್ರಾಮ್ನಲ್ಲಿ ಮೆಸೇಜ್ ಮಾಡಿದ್ದಾರೆ. ತುಂಬಾ ಮುದ್ದಾಗಿದ್ದೀಯಾ ಎಂದಿದ್ದಾರೆ. ಆದರೆ. ಯುಜ್ವೇಂದ್ರ ಚಹಾಲ್ ದುರಾದೃಷ್ಟ. ಚಹಾಲ್ ತಮಗೆ ಕಳಿಸಿದ ಖಾಸಗಿ ಸಂದೇಶವನ್ನು ತಾನಿಯಾ ಮಾಧ್ಯಮದವರ ಎದುರು ಬಹಿರಂಗ ಪಡಿಸಿದ್ದಾರೆ. ಪಾಪಾರಜಿಗಳ ಕ್ಯಾಮರಾಗಳಿಗೆ ಫೋಸ್ ಕೊಡುವ ಸಮಯದಲ್ಲಿ ಚಹಾಲ್ ತಮಗೆ ಮೆಸೇಜ್ ಮಾಡಿದ್ಧಾರೆ ಎನ್ನುವ ವಿಚಾರ ಹೇಳಿದ್ದಾರೆ. ಸಾಲದಕ್ಕೆ ಆ ಸಂದೇಶಗಳನ್ನು ಕೂಡ ಕ್ಯಾಮರಾಗೆ ತೋರಿಸಿದ್ದಾರೆ.
ಸದ್ಯ ತಾನಿಯಾ ಚಟರ್ಜಿ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಚಹಾಲ್ ಅವರ ಈ ವರ್ತನೆಯಿಂದ ಬೆಚ್ಚಿ ಬಿದ್ದಿದ್ಧಾರೆ. ಫ್ಲರ್ಟ್ ಮಾಡಲು ನಿನಗೆ ಬೇರೆ ಹುಡುಗಿ ಸಿಗಲಿಲ್ವಾ..? ಎಂದು ಕಾಲೆಳೆಯುತ್ತಿರುವ ಹಲವರು ಮಾಧ್ಯಮದ ಮುಂದೆ ತಾನಿಯಾ ಈ ಬಾಂಬ್ ಎಸೆಯುತ್ತಾಳೆ ಎಂದು ಚಹಾಲ್ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಹಾಲ್ ವಿರುದ್ಧ ಹಲವರು ಕಿಡಿ ಕಾರುತ್ತಿದ್ದಾರೆ. ಪ್ರಚಾರಕ್ಕೆ ಚಹಾಲ್ನ ತಾನಿಯಾ ಬಲಿ ಕೊಡಬಾರದಿತ್ತು ಎಂದು ಚರ್ಚೆಯನ್ನು ಕೂಡ ಹಲವರು ಮಾಡುತ್ತಿದ್ಧಾರೆ.


Click it and Unblock the Notifications











