ತಮ್ಮ ಜೀವನಾಧಾರಿತ ಸಿನಿಮಾಕ್ಕೆ ನಾಯಕನ್ನಾಗಿ ಯುವರಾಜ್ ಸಿಂಗ್ ಆರಿಸಿದ್ದು ಈ ನಟನನ್ನು
ಬಾಲಿವುಡ್ನಲ್ಲಿ ಈಗ ಜೀವನಾಧಾರಿತ (ಭಯೋಪಿಕ್) ಸಿನಿಮಾಗಳ ಕಾಲ. ಮಿಲ್ಕಾ ಸಿಂಗ್ ಅವರ ಜೀವನಾಧಾರಿತ ಸಿನಿಮಾ ಹಿಟ್ ಆಗಿದ್ದೇ ತಡ ಎಲ್ಲರೂ ಅದರ ಹಿಂದೆಯೇ ಬಿದ್ದಿದ್ದಾರೆ. ಅದರಲ್ಲೂ ಕ್ರೀಡಾ ತಾರೆಗಳ ಸಿನಿಮಾಕ್ಕೆ ಎಲ್ಲಿಲ್ಲದ ಬೇಡಿಕೆ.
ಮಿಲ್ಕಾ ಸಿಂಗ್ ಕುರಿತ ಸಿನಿಮಾ ಕೋಟಿ-ಕೋಟಿ ದೋಚಿದ ನಂತರ ಮಹಮ್ಮದ್ ಅಜರುದ್ದೀನ್ ಕುರಿತ ಸಿನಿಮಾ ಬಂತು, ಎಂ.ಎಸ್.ಧೋನಿ ಕುರಿತ ಸಿನಿಮಾ ಬಂತು. ನಂತರ ಪ್ರಿಯಾಂಕಾ ಚೋಪ್ರಾ ಮೇರಿ ಕೋಮ್ ಬಗ್ಗೆ ಸಿನಿಮಾ ತೆಗೆದರು. ಇದೀಗ ಕಪಿಲ್ ದೇವ್ ಬಗ್ಗೆ ಸಿನಿಮಾ 83 ಬಿಡುಗಡೆಗೆ ತಯಾರಾಗಿದೆ. ಸೈನಾ ನೆವ್ಹಾಲ್ ಬಗ್ಗೆ ಸಿನಿಮಾ ರೆಡಿಯಾಗುತ್ತಿದೆ.
ಹಾಗೆಯೇ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಅವರ ಜೀವನ ಆಧರಿತ ಸಿನಿಮಾ ಸಹ ತಯಾರಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಅವರ ಜೀವನ ಅಷ್ಟು ಹೋರಾಟಮಯವಾದುದು. ಒಂದುವೇಳೆ ಯುವರಾಜ್ ಸಿಂಗ್ ಬಗ್ಗೆ ಸಿನಿಮಾ ಬಂದಲ್ಲಿ ನಾಯಕ ಯಾರಾಗಬೇಕು?

ಸ್ಟಾರ್ ನಟನ ಬದಲು ಹೊಸಬರನ್ನು ಆರಿಸಿದ ಯುವರಾಜ್
ಈ ಪ್ರಶ್ನೆಗೆ ಸ್ವತಃ ಯುವರಾಜ್ ಸಿಂಗ್ ಉತ್ತರ ನೀಡಿದ್ದಾರೆ. ತಮ್ಮ ಜೀವನದ ಬಗ್ಗೆ ಸಿನಿಮಾ ಬಂದರೆ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಯಾರು ನಟಿಸಬೇಕು ಎಂದು ಸ್ವತಃ ಯುವರಾಜ್ ಸಿಂಗ್ ಆಯ್ಕೆ ಮಾಡಿದ್ದಾರೆ. ಪ್ರತಿಭಾವಂತ ನಟನನ್ನೇ ತಮ್ಮ ಪಾತ್ರಕ್ಕೆ ಸೆಲೆಕ್ಟ್ ಮಾಡಿದ್ದಾರೆ ಯುವರಾಜ್ ಸಿಂಗ್.

ಯುವರಾಜ್ ಸಿಂಗ್ ಆಯ್ಕೆ ಮಾಡಿದ್ದು ಇದೇ ನಟನನ್ನು
ಯುವರಾಜ್ ಸಿಂಗ್ ತಮ್ಮ ಪಾತ್ರ ನಿರ್ವಹಿಸಲು ಯಾವುದೋ ದೊಡ್ಡ ಸ್ಟಾರ್ ನಟನನ್ನು ಆಯ್ಕೆ ಮಾಡಿಲ್ಲ ಬದಲಿಗೆ ಹೊಸದಾಗಿ ಬಾಲಿವುಡ್ ಗೆ ಬಂದಿರುವ ಸಿದ್ಧಾರ್ಥ್ ಚತುರ್ವೇದಿಯನ್ನು ಆಯ್ಕೆ ಮಾಡಿದ್ದಾರೆ. ಸಿದ್ಧಾರ್ಥ್ ಚತುರ್ವೇದಿ ತಮ್ಮ ಪಾತ್ರ ಮಾಡಿದರೆ ಚೆನ್ನ ಎಂದು ಯುವರಾಜ್ ಹೇಳಿದ್ದಾರೆ.

ಬಾಲಿವುಡ್ನಲ್ಲಿ ಗಮನ ಸೆಳೆಯುತ್ತಿರುವ ನಟ
ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ, ಜೊತೆಗೆ ವಿಮರ್ಶಿಕರಿಂದಲೂ ಹೊಗಳಿಸಿಕೊಂಡ ಗಲ್ಲಿ ಬಾಯ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ಸಿದ್ಧಾರ್ಥ್ ಚತುರ್ವೇದಿ ಈಗಷ್ಟೆ ಬಾಲಿವುಡ್ನಲ್ಲಿ ಬೆಳೆಯುತ್ತಿರುವ ನಟ. ಇವರನ್ನು ಯುವರಾಜ್ ಸಿಂಗ್ ತಮ್ಮ ಪಾತ್ರಕ್ಕಾಗಿ ಆಯ್ಕೆ ಮಾಡಿದ್ದಾರೆ.

ಸಿದ್ಧಾರ್ಥ್ ಚತುರ್ವೇದಿ ಯುವರಾಜ್ ಸಿಂಗ್ ರಂತೆಯೇ ಕಾಣ್ತಾರೆ
ಸಿದ್ಧಾರ್ಥ್ ಚತುರ್ವೇದಿ ನೋಡಲು ಯುವರಾಜ್ ಸಿಂಗ್ ರಂತೆಯೇ ಕಾಣುತ್ತಾರೆ. ಜೊತೆಗೆ ಪ್ರತಿಭಾವಂತ ನಟ. ಯಾವುದೇ ಗಾಡ್ಫಾದರ್ಗಳಿಲ್ಲದೆ ಸಿನಿಮಾಕ್ಕೆ ಬಂದ ಅವರಿಗೆ ಗಲ್ಲಿ ಬಾಯ್ ನಂತರ ಅವಕಾಶಗಳು ಸಿಗಲು ಆರಂಭವಾಗಿವೆ. ಇವರು 2017 ರಲ್ಲಿ ಕ್ರಿಕೆಟ್ ಸಂಬಂಧಿತ ವೆಬ್ ಸೀರೀಸ್ 'ಇನ್ಸೈಡ್ ಎಡ್ಜ್' ಚಿತ್ರದಲ್ಲಿ ನಟಿಸಿದ್ದಾರೆ.

ಯುವರಾಜ್ ಸಿಂಗ್ ಜೀವನ ಸಿನಿಮಾ ತೆಗೆಯಲು ಯೋಗ್ಯವಾಗಿದೆ
ಯುವರಾಜ್ ಸಿಂಗ್ ಅವರ ಕ್ರಿಕೆಟ್ ಮತ್ತು ವೈಯಕ್ತಿಕ ಜೀವನ ಬಹಳ ಹೋರಾಟದಿಂದ ಕೂಡಿತ್ತು. ಶಿಸ್ತಿನ ತಂದೆ ಬಲವಂತದಿಂದ ಕ್ರಿಕೆಟ್ ಆಡಿಸಿದರು. ನಂತರ ಕ್ರಿಕೆಟ್ ಸೇರಿದ ನಂತರ ಭಾರತೀಯ ಕ್ರಿಕೆಟ್ ಗೆ ಹೊಸ ಹೊಳಪು ನೀಡಿದರು. ಆದರೆ ನಂತರ ಮತ್ತೆ ಕ್ಯಾನ್ಸರ್ ಮಾರಿಗೆ ತುತ್ತಾದರು. ನಂತರ ಮತ್ತೆ ಅಂಗಳಕ್ಕೆ ಇಳಿದು ಬ್ಯಾಟ್ ಬೀಸಿದರು. ಹೀಗೆ ಹಲವು ಏರು-ಪೇರುಗಳು ಅವರ ಜೀವನದಲ್ಲಿವೆ.


Click it and Unblock the Notifications











