ಟಾಕ್ಸಿಕ್ VS ಧುರಂಧರ್ 2 ; ಬಾಕ್ಸಾಫೀಸ್ ಕುರುಕ್ಷೇತ್ರ - ಯಶ್, ರಣವೀರ್ಗೆ ಹೆದರಿ ಜಾಗ ಖಾಲಿ ಮಾಡಿದ ಅಡವಿ ಶೇಷ್
ಚಿತ್ರರಂಗದಲ್ಲಿ ಸಮಯಕ್ಕೆ ತುಂಬಾನೇ ಮಹತ್ವ ಇದೆ. ಚಿತ್ರದ ಬಿಡುಗಡೆ ವಿಚಾರದಲ್ಲಿ ಇಲ್ಲಿ ಸಮಯ ನಿರ್ವಹಣೆಯ ಪಾತ್ರ ದೊಡ್ದದು. ಯಾವಾಗ ಮುಂದಡಿ ಇಡಬೇಕು..ಯಾವಾಗ ಹಿಂದಡಿ ಇಡಬೇಕು ಎನ್ನುವ ಜ್ಞಾನ ಇಲ್ಲಿ ತುಂಬಾನೇ ಮುಖ್ಯ. ಯಾಕೆಂದರೆ ಇತಿಹಾಸದಲ್ಲಿ ನಾನು ಎಂದು ಮೆರೆದವರು ಇಲ್ಲಿ ಮಣ್ಣಾಗಿದ್ದಾರೆ. ಸೋತು ಸುಣ್ಣವಾಗಿದ್ದಾರೆ.
ಈ ಹಿನ್ನೆಲೆ ಹಲವರು ಪಕ್ಕದ ಆಂಧ್ರದ ಸ್ಟಾರ್ ಅಡವಿ ಶೇಷ್ ಅವರಿಗೆ ಕಿವಿ ಮಾತನ್ನು ಹೇಳಿದ್ದರು. ಮಾರ್ಚ್ 19ರಂದು ''ಟಾಕ್ಸಿಕ್'' ಮತ್ತು ''ಧುರಂಧರ್'' ಮುಖಾಮುಖಿಯಾಗುತ್ತಿರುವ ಹಿನ್ನೆಲೆ ತಮ್ಮ ''ಡಕೈಟ್'' ಚಿತ್ರದ ಬಿಡುಗಡೆಯನ್ನು ಮುಂದೂಡುವ ಸಲಹೆಯನ್ನು ನೀಡಿದ್ದರು. ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದಂತೆ ಎಂದು ಹೇಳಿದ್ದರು.

ಆದರೆ.. ಅಡವಿ ಶೇಷ್ ಮಾತ್ರ ಕ್ಯಾರೇ ಎಂದಿರಲಿಲ್ಲ. ಬದಲಿಗೆ ''ಲಗಾನ್'' ಮತ್ತು ''ಗದರ್'' ಚಿತ್ರಗಳು ಒಂದೇ ದಿನ ಬಿಡುಗಡೆಯಾಗಿದ್ದವು. ಗೆದ್ದಿದ್ದವು ಎಂದು ಉದಾಹರಣೆಯನ್ನು ನೀಡಿದ್ದರು. ''ಸಾಮ್ರಾಟ್ ಪೃಥ್ವಿರಾಜ್'' ಎದುರು ಬಂದ ನನ್ನ ''ಮೇಜರ್'' ಸಿನಿಮಾ ಗೆಲ್ಲಲಿಲ್ಲವಾ ಎಂದು ಪ್ರಶ್ನೆ ಮಾಡಿದ್ದರು. ''ಜೀರೋ'' ಮತ್ತು ''ಕೆಜಿಎಫ್'' ಮುಖಾಮುಖಿಯಾಗಲಿಲ್ವಾ ಎಂದು ಕೇಳಿದ್ದ ಅಡವಿ ಶೇಷ್ ಒಟ್ಟಿಗೆ ಸಿನಿಮಾಗಳು ಬಿಡುಗಡೆ ಆದರೆ ಸಿನಿಮಾಗಳು ಸೋಲುತ್ತವೆ ಎಂಬುದು ಸುಳ್ಳು ಎಂದು ಹೇಳಿದ್ದರು. . ಸಿನಿಮಾ ಯಾವುದಾದರೇನು ಚೆನ್ನಾಗಿದ್ದರೆ ಗೆದ್ದೇ ಗೆಲ್ಲುತ್ತದೆ ಎನ್ನುವ ವಾದವನ್ನು ಕೂಡ ಮಾಡಿದ್ದರು.
ಆದರೆ ಈಗ ಅಡವಿ ಶೇಷ್ಗೆ ನಿನ್ನೆ (ಫೆಬ್ರವರಿ 3) ''ಧುರಂಧರ್ 2'' ಚಿತ್ರದ ಟೀಸರ್ ಹೊರ ಬಿದ್ದ ಮೇಲೆ ಜ್ಞಾನೋದಯವಾದಂತೆ ಆಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ''ಧುರಂಧರ್-2'' ಮತ್ತು ''ಟಾಕ್ಸಿಕ್'' ಜೊತೆ ಬಂದರೆ ಕೊಚ್ಚಿಕೊಂಡು ಹೋಗುವ ಭೀತಿಯಲ್ಲಿ ಅಡವಿ ಶೇಷ್ ತಮ್ಮ ''ಡಕೈಟ್'' ಚಿತ್ರದ ಬಿಡುಗಡೆಯನ್ನೂ ಕೊನೆಗೂ ಮುಂದೂಡಿದ್ದಾರೆ.
ಹೌದು, ಮಾರ್ಚ್ 19, 2026- ಬಾಕ್ಸಾಫೀಸ್ನ ಕುರುಕ್ಷೇತ್ರ. ''ಟಾಕ್ಸಿಕ್'' ಮತ್ತು ''ಧುರಂಧರ್ 2''ಗೆ ಸಿದ್ಧವಾದ ಈ ಅಖಾಡದಿಂದ ಅಡವಿ ಶೇಷ್ ಸದ್ಯ ಹಿಂದೆ ಸರಿದಿದ್ದಾರೆ. ''ಟಾಕ್ಸಿಕ್'' ಮತ್ತು ''ಧುರಂಧರ್-2'' ಅಬ್ಬರದ ನಡುವೆ ಸಿಲುಕಿ ನಲುಗುವುದಕ್ಕಿಂತ ಮುಂದಕ್ಕೆ ಹೋಗುವುದೇ ಉತ್ತಮ ಎಂದುಕೊಂಡು ಯು ಟರ್ನ್ ತೆಗೆದುಕೊಂಡಿದ್ದಾರೆ. ಕೊಟ್ಟ ಮಾತು ಮುಖ್ಯವಲ್ಲ, ಹಣ ಮುಖ್ಯ. ಸೋತು ಮಕಾಡೆ ಮಲಗುವುದಕ್ಕಿಂತ, ಜಾಣತನದಿಂದ ಹಿಂದೆ ಸರಿದು ಗೆಲ್ಲುವುದೇ ಬುದ್ದಿವಂತನ ಲಕ್ಷಣ ಎಂದುಕೊಂಡು ತಮ್ಮ ಚಿತ್ರವನ್ನು ಮಾರ್ಚ್ 19ರ ಬದಲಿಗೆ ಏಪ್ರಿಲ್ 10ರಂದು ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಅಂದ್ಹಾಗೇ ಎಲ್ಲರಿಗೆ ಗೊತ್ತಿರುವಂತೆ ಮಾರ್ಚ್ 19ಕ್ಕೆ ಈ ಬಾರಿ ''ಈದ್'' ಹಬ್ಬ ಇದೆ. ನಾಲ್ಕು ದಿನದ ವೀಕೆಂಡ್ ಇರಲಿದೆ. ಈ ಹಿನ್ನೆಲೆ ಮಾರ್ಚ್ 19ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಹಲವರು ಅಂದುಕೊಂಡಿದ್ದರು. ಅಜಯ್ ದೇವಗನ್ ತಮ್ಮ ''ಧಮಾಲ್ 4'' ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದರು.

ಇನ್ನು ಈದ್ ಮತ್ತು ಸಲ್ಮಾನ್ ಖಾನ್ ನಡುವೆ ವಿಶೇಷವಾದ ಸಂಬಂಧ ಇದೆ. ಈದ್ ಹಬ್ಬದಂದು ಸಲ್ಮಾನ್ ಖಾನ್ ತಮ್ಮ ''ಬ್ಯಾಟಲ್ ಆಫ್ ಗಲ್ವಾನ್'' ಚಿತ್ರವನ್ನು ಬಿಡುಗಡೆ ಮಾಡಬಹುದು ಎಂದು ಹಲವರು ಅಂದುಕೊಂಡಿದ್ದರು. ಆದರೆ. ಅಜಯ್ ದೇವಗನ್ ''ಧುರಂಧರ್'' ಅಲೆ ಮತ್ತು '' ಟಾಕ್ಸಿಕ್'' ಜ್ವರ ಎರಡನ್ನೂ ಗಮನಿಸಿ ತಮ್ಮ ಚಿತ್ರದ ಬಿಡುಗಡೆಯನ್ನು ಜೂನ್ಗೆ ಮುಂದೂಡಿದರು. ಸಲ್ಮಾನ್ ಖಾನ್ ಅವರ ''ಬ್ಯಾಟಲ್ ಆಫ್ ಗಲ್ವಾನ್'' ಚಿತ್ರದ ಚಿತ್ರೀಕರಣ ತಡವಾದ ಹಿನ್ನೆಲೆ ತಮ್ಮ ಈದ್ ಸ್ಲಾಟ್ನ್ನು ಬಿಟ್ಟು ಕೊಟ್ಟರು. ಈಗ ಅಡವಿ ಶೇಷ್ ಕೂಡ ಜಾಗ ಖಾಲಿ ಮಾಡಿದ್ದಾರೆ.
ಈ ಹಿನ್ನೆಲೆ ಈಗ ಮಾರ್ಚ್ 19ರಂದು ಕೇವಲ ''ಧುರಂಧರ್ 2'' ಮತ್ತು ''ಟಾಕ್ಸಿಕ್'' ಮುಖಾಮುಖಿಯಾಗಲಿವೆ. ಇಬ್ಬರಲ್ಲಿ ಒಬ್ಬರಾದರೂ ತಮ್ಮ ನಿರ್ಧಾರವನ್ನು ಬದಲಿಸಿ ಎಂದು ಹಲವರು ಹೇಳಿದರು ಕೂಡ ಇಬ್ಬರಲ್ಲಿ ಒಬ್ಬರು ಕೂಡ ಹಿಂದೆ ಸರಿಯುತ್ತಿಲ್ಲ. ಹೀಗಾಗಿ ಈ ಬಾಕ್ಸಾಫೀಸ್ ಸಮರ ಕುತೂಹಲ ಕೆರಳಿಸಿದೆ.


Click it and Unblock the Notifications











