ಹೌದು ನಾನು ಸೋತೆ, ತಂದೆ ತುಂಬಾ ದುಃಖದಲ್ಲಿದ್ದಾರೆ ; 'ಏಕ್ ದಿನ್' ಚಿತ್ರದ ಸೋಲೊಪ್ಪಿಕೊಂಡ ಆಮಿರ್ ಖಾನ್ ಮಗ ಜುನೈದ್ ಖಾನ್
ತಂದೆ ತಾಯಿಯ ಜಾಡು ಹಿಡಿದು ಆಯಾ ಕ್ಷೇತ್ರಕ್ಕೆ ಅವರ ಮಕ್ಕಳು ಸುಲಭವಾಗಿ ಬರಬಹುದು. ಆದರೆ.. ಗೆಲ್ಲುವುದು.. ಸೋಲುವುದು.. ಎಲ್ಲವೂ ಆ ನಂತರ ನಿರ್ಧಾರ ಮಾಡುವುದು ಅವರ ಪ್ರತಿಭೆ ಮಾತ್ರ. ಆದರೆ ಇವರ ಪಾಲಿಗೆ ಈ ಪ್ರಯಾಣ ಸುಲಭದ್ದಾಗಿರಲ್ಲ. ಒಂದು ಕಡೆ ತಂದೆ-ತಾಯಿಯ ಹೆಸರಿನ ಭಾರ, ಮತ್ತೊಂದು ಕಡೆ ಸ್ವಜನಪಕ್ಷಪಾತದ ಕೂಸು ಎಂಬ ಟೀಕೆ, ಅಪ್ಪ-ಅಮ್ಮನ ಹೆಸರು ಉಳಿಸಬೇಕೆಂಬ ಒತ್ತಡ.
ಇದೆಲ್ಲದರಿಂದ ಹಲವರು ಇಲ್ಲಿ ಹೈರಾಣಾಗಿದ್ದಾರೆ. ಪ್ರತಿಭೆ ಇದ್ದರೂ ಕೂಡ ಈ ನಿರೀಕ್ಷೆಯ ಭಾರ ಮತ್ತು ಸಮಾಜ ಮಾಡುವ ಲೇವಡಿಯನ್ನು ಸಹಿಸಲಾಗದೇ ಓಡಿ ಹೋಗಿದ್ದಾರೆ. ಸದ್ಯ ಇಂತಹದ್ದೇ ಒಂದು ಪರೀಕ್ಷೆಯಲ್ಲಿ ಸದ್ಯ ಆಮಿರ್ ಖಾನ್ ಮಗ ಜುನೈದ್ ಖಾನ್ ಮತ್ತೊಮ್ಮೆ ಫೇಲ್ ಆಗಿದ್ದಾರೆ.

ಹೌದು. ''ಏಕ್ ದಿನ್''.. ಆಮಿರ್ ಖಾನ್ ಮುದ್ದಿನ ಮಗ ಜುನೈದ್ ಖಾನ್ ಅಭಿನಯದ 3ನೇ ಸಿನಿಮಾ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಇವರ ಎರಡನೇ ಸಿನಿಮಾ. ಸಾಯಿ ಪಲ್ಲವಿ ಈ ಚಿತ್ರದ ನಾಯಕಿ. ಈ ಕಾರಣಕ್ಕೆ ಕುತೂಹಲ ಕೆರಳಿಸಿದ್ದ ಸಿನಿಮಾ ಇದು.
ಇನ್ನೂ ಮಗನ ಸಿನಿಮಾ ಅಂದ ಮೇಲೆ ಆಮಿರ್ ಖಾನ್ ಸುಮ್ಮನೆ ಇರಲು ಹೇಗೆ ಸಾಧ್ಯ..? ಒಂದು ಕಡೆ ಮಗ ಎನ್ನುವ ಮಮತೆ. ಮತ್ತೊಂದು ಕಡೆ ನಿರ್ಮಾಪಕನ ಜವಾಬ್ಧಾರಿ. ಈ ಹಿನ್ನೆಲೆ ಕಾಲಿಗೆ ಚಕ್ರ ಕಟ್ಕೊಂಡು ತಮ್ಮ ಮಗನ ಚಿತ್ರದ ಪ್ರಚಾರವನ್ನು ಅದ್ದೂರಿಯಾಗಿ ಮಾಡಿದ್ದರು ಆಮಿರ್ ಖಾನ್. ಆದರೆ ಹೀಗೆ ಮಾಡಲಾದ ಎಲ್ಲ ಪ್ರಯತ್ನಗಳು ನೀರಿನಲ್ಲಿ ಹುಣಸೆ ಹಣ್ಣು ತೊಳದಂತೆ.
ಪ್ರೇಕ್ಷಕರು ಈ ಚಿತ್ರಕ್ಕೆ ಕ್ಯಾರೇ ಎನ್ನಲಿಲ್ಲ. ಆಮಿರ್ ಖಾನ್ ಮಗನ ಸಿನಿಮಾ ಎಂದು ನೋಡಲು ಕೂಡ ಹೋಗಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಈ ಚಿತ್ರ ಬಿಡುಗಡೆಯಾಗಿ ನಿನ್ನೆಗೆ (ಮೇ 12 ) ಹನ್ನೆರಡು ದಿನಗಳಾಗಿವೆ. ಆದರೆ ಗಳಿಕೆ ಮಾತ್ರ ಭಾರತದಲ್ಲಿ ಇನ್ನೂ 5 ಕೋಟಿಯ ಗಡಿಯನ್ನು ಕೂಡ ಪಾರು ಮಾಡಿಲ್ಲ ಎಂದು ''ಸ್ಯಾಕ್ನಿಲ್'' ವರದಿ ಮಾಡಿದೆ.
ಇನ್ನೂ ಸಾಮಾನ್ಯವಾಗಿ ಸಿನಿಮಾ ಗೆಲ್ಲಲಿ ಬಿಡಲಿ, ಆದರೆ ತಮ್ಮ ಚಿತ್ರ ಬಾಕ್ಸಾಫೀಸ್ನಲ್ಲಿ ಗೆದ್ದಿದೆ ಎಂದು ಬಿಲ್ಡಪ್ ತಗೊಳ್ಳೋರ ಸಂಖ್ಯೆ ಚಿತ್ರರಂಗದಲ್ಲಿ ಕಡಿಮೆ ಇಲ್ಲ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಹಲವರು ಇಲ್ಲಿ ತಮ್ಮ ಮೀಸೆ ತಿರವುತ್ತಲೇ ಇರುತ್ತಾರೆ. ತಮ್ಮ ಬೆನ್ನು ತಾವೇ ತಟ್ಟಿಕೊಳ್ತಾರೆ.

ಆದರೆ ಜುನೈದ್ ಖಾನ್ ಇದಕ್ಕೆ ತದ್ವಿರುದ್ದ. ಇದಕ್ಕೆ ಪುರಾವೆ ಎಂಬಂತೆ ತಮ್ಮ ಸೋಲನ್ನು ಜುನೈದ್ ಒಪ್ಪಿಕೊಂಡಿದ್ದಾರೆ. ತಮ್ಮ ಮೂರನೇ ಚಿತ್ರ ''ಏಕ್ ದಿನ್'' ಚಿತ್ರದ ಕಳಪೆ ಪ್ರದರ್ಶನದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ನಾವು ಅಂದುಕೊಂಡಿದ್ದು ಒಂದು ಆಗಿದ್ದು ಮತ್ತೊಂದು ಎಂದು ಹೇಳಿದ್ದಾರೆ. ಈ ಸೋಲಿನಿಂದ ಚಿತ್ರಕ್ಕೆ ಹಣ ಹೂಡಿದ್ದ ತಮ್ಮ ತಂದೆ ಆಮಿರ್ ಖಾನ್ ತೀವ್ರವಾಗಿ ನೊಂದುಕೊಂಡಿದ್ದಾರೆ ಎಂದು ಕೂಡ ಯಾವುದೇ ಮುಚ್ಚುಮರೆಯಿಲ್ಲದೇ ಹೇಳಿದ್ದಾರೆ ಜುನೈದ್ ಖಾನ್.
ಈ ಕುರಿತು ''ವಿಕ್ಕಿ ಲಾಲ್ವಾನಿ'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಜುನೈದ್ ಖಾನ್, ನಿಜಾ ಹೇಳಬೇಕು ಅಂದರೆ ಈ ಚಿತ್ರ ಚೆನ್ನಾಗಿ ಓಡುತ್ತೆ ಎನ್ನುವ ಭರವಸೆ ನಮಗೆ ಇತ್ತು, ಆದರೆ ಸಿನಿಮಾ ಸೋತು ಹೋಯ್ತು ಎಂದು ಹೇಳಿದ್ದಾರೆ.
ನಾನು ನಿಜಕ್ಕೂ ತುಂಬಾನೇ ಇಷ್ಟಪಟ್ಟು, ಕಷ್ಟಪಟ್ಟು ಮಾಡಿದ್ದ ಸಿನಿಮಾ ಇದು ಎಂದು ಹೇಳಿರುವ ಜುನೈದ್ ಖಾನ್, ಚಿತ್ರ ನೋಡಿದವರಲ್ಲಿ ಕೆಲವು ಪ್ರೇಕ್ಷಕರಿಗೆ ಚಿತ್ರ ಇಷ್ಟವಾಯ್ತು, ಆದರೆ ಹಲವರಿಗೆ ನಮ್ಮ ಸಿನಿಮಾ ಹಿಡಿಸಲಿಲ್ಲ ಎಂದು ಹೇಳಿದ್ದಾರೆ. ಕೆಲ ಒಮ್ಮೆ ಹೀಗೆ ಆಗುತ್ತೆ ಎಂದಿದ್ದಾರೆ.
ಇನ್ನು ಈ ಸೋಲಿಗೆ ಆಮಿರ್ ಖಾನ್ ಅವರ ಪ್ರತಿಕ್ರಿಯೆ ಹೇಗಿತ್ತು ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಜುನೈದ್, ನನ್ನ ತಂದೆ ಇನ್ನೂ ಈ ಸೋಲಿನ ಗುಂಗಿನಿಂದ ಹೊರ ಬಂದಿಲ್ಲ ಎಂದಿದ್ದಾರೆ. ಅವರು ತಮ್ಮ ಪ್ರತಿಯೊಂದು ಚಿತ್ರದ ಸೋಲನ್ನು ತುಂಬಾನೇ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿರುವ ಜುನೈದ್, ಅವರಿಗೆ ಇಷ್ಟವಾದ ಸಿನಿಮಾ ಬಾಕ್ಸಾಫೀಸ್ನಲ್ಲಿ ಸೋತಾಗ ಅವರಿಗೆ ತುಂಬಾ ಬೇಸರವಾಗುತ್ತೆ ಎಂದು ಹೇಳಿದ್ದಾರೆ. ಸೋಲಿನ ಆ ನೋವು ಅವರಿಗೆ ತುಂಬಾನೇ ಕಾಡುತ್ತೆ ಎಂದಿದ್ಧಾರೆ.
ಚಿತ್ರರಂಗದಲ್ಲಿ ಅವರಿಗೆ ಹಲವು ದಶಕಗಳ ಅನುಭವ ಇದೆ. ಆದರೂ ಕೂಡ ಚಿತ್ರ ಸೋತಾಗ ಸಹಜವಾಗಿ ಅವರಿಗೆ ನೋವಾಗುತ್ತೆ ಎಂದು ಹೇಳಿರುವ ಜುನೈದ್, ಸೋತರೂ ಕೂಡ ಅವರು ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದ್ದಾರೆ. ಸದ್ಯ ಅವರು ಬೇಸರದಲ್ಲಿದ್ದಾರೆ ಎಂದಿದ್ದಾರೆ.
ಅಂದ್ಹಾಗೇ ''ಏಕ್ ದಿನ್'' ಚಿತ್ರಕ್ಕೆ ಆಮಿರ್ ಖಾನ್ 15-16 ಕೋಟಿ ಹಣ ಹೂಡಿದ್ದಾರೆ ಎನ್ನುವ ಸುದ್ದಿ ಮುಂಬೈನಲ್ಲಿ ಕೇಳಿ ಬರುತ್ತಿದೆ. ಹೇಗೆ ಕೂಡಿ ಕಳೆದರು ಕೂಡ ಚಿತ್ರಮಂದಿರದ ಮೂಲಕ ಆಮಿರ್ ಖಾನ್ಗೆ ಹಾಕಿದ ಬಂಡವಾಳ ಮರಳಿ ಬರುವುದು ಅನುಮಾನ. ಓಟಿಟಿಯಲ್ಲಿ ಈ ಚಿತ್ರ ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎನ್ನುವುದರ ಮೇಲೆ ಲಾಭ-ನಷ್ಟದ ಲೆಕ್ಕಾಚಾರ ನಿಂತಿದೆ.


Click it and Unblock the Notifications