Kantara 1 Day 17 Boxoffice: 3ನೇ ಶನಿವಾರ ಡಬಲ್ ಆಯ್ತು ಕಲೆಕ್ಷನ್; ದೀಪಾವಳಿ ಧಮಾಕ ಗ್ಯಾರಂಟಿ
'ಕಾಂತಾರ'-1 ಕಿಚ್ಚು ಇನ್ನು ಆರಿಲ್ಲ. ಎಲ್ಲೆಲ್ಲೂ ಸಿನಿಮಾ ಬಗ್ಗೆ ಚರ್ಚೆ ನಡೀತಿದೆ. ಪ್ರತಿದೃಶ್ಯದ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ. ಇನ್ನು ಅಭಿಮಾನಿಗಳು ಕಾಯುತ್ತಿದ್ದ ಆ ದೀಪಾವಳಿ ವೀಕೆಂಡ್ ಬಂದೇಬಿಟ್ಟಿದೆ. 3ನೇ ಶನಿವಾರವೇ ಸಿನಿಮಾ ಕಲೆಕ್ಷನ್ ಹೆಚ್ಚಾಗಿದೆ. ಭಾನುವಾರ, ಸೋಮವಾರ, ಮಂಗಳವಾರ ಮತ್ತಷ್ಟು ಗಳಿಕೆ ಗ್ಯಾರಂಟಿ ಎನ್ನಲಾಗ್ತಿದೆ.
ಈ ವೀಕೆಂಡ್ ಮೂರ್ನಾಲ್ಕು ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗಿವೆ. ಆದರೂ ಚಿತ್ರಮಂದಿರಗಳಲ್ಲಿ 3 ವಾರಗಳ ಹಿಂದೆ ಬಿಡುಗಡೆಯಾಗಿದ್ದ 'ಕಾಂತಾರ- 1' ಸಿನಿಮಾ ಕಲೆಕ್ಷನ್ ಜಾಸ್ತಿಯಿದೆ. ದೀಪಾವಳಿ ಸಂಭ್ರಮದಲ್ಲಿ ಮಂಗಳವಾರ(ಅಕ್ಟೋಬರ್ 21) ವೇ ಬಾಲಿವುಡ್ ಸಿನಿಮಾ 'ಥಮ' ಬಿಡುಗಡೆ ಆಗ್ತಿದೆ. ಇನ್ನು 'ಛಾವ' ಸಿನಿಮಾ ದಾಖಲೆ ಮುರಿಯಲು 'ಕಾಂತಾರ- 1' ಚಿತ್ರಕ್ಕೆ ಇದು ಒಳ್ಳೆ ಅವಕಾಶ ಇನ್ನುವ ಚರ್ಚೆ ನಡೀತಿದೆ.

15 ದಿನಗಳ ಕಲೆಕ್ಷನ್ ಲೆಕ್ಕಾಚಾರದಲ್ಲಿ ಈಗಾಗಲೇ ರಿಷಬ್ ಶೆಟ್ಟಿ ಸಿನಿಮಾ ವಿಕ್ಕಿ ಕೌಶಲ್ ಸಿನಿಮಾ ದಾಖಲೆ ಮುರಿದಿದೆ. ಆದರೆ ಒಟ್ಟಾರೆ ಕಲೆಕ್ಷನ್ ವಿಚಾರದಲ್ಲಿ 800 ಕೋಟಿ ರೂ. ಗಳಿಸಿದ್ದ 'ಛಾವ' ಮೊದಲ ಸ್ಥಾನದಲ್ಲಿದೆ. ಇನ್ನು 2 ವಾರಕ್ಕೆ 'ಕಾಂತಾರ- 1' ಸಿನಿಮಾ 717 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೊಂಬಾಳೆ ಸಂಸ್ಥೆ ಘೋಷಿಸಿದೆ. ಇನ್ನು 80 ಕೋಟಿ ರೂ. ಗಳಿಸಿದರೆ 'ಛಾವ' ದಾಖಲೆ ಹಿಂದಿಕ್ಕಿ ವರ್ಷದ ಅತಿಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿಯಲ್ಲಿ ರಿಷಬ್ ಸಿನಿಮಾ ಮೊದಲ ಸ್ಥಾನಕ್ಕೆ ಏರಲಿದೆ.
17ನೇ ದಿನದ ಕಲೆಕ್ಷನ್
ವಾರದ ದಿನಗಳಲ್ಲಿ 8ರಿಂದ 9 ಕೋಟಿ ರೂ. ನೆಟ್ ಕಲೆಕ್ಷನ್ ಮಾಡ್ತಿದ್ದ 'ಕಾಂತಾರ- 1' ಸಿನಿಮಾ 3ನೇ ಶನಿವಾರ 12.5 ಕೋಟಿ ರೂ. ಬಾಚಿಕೊಂಡಿದೆ. ಗ್ರಾಸ್ ಕಲೆಕ್ಷನ್ 20 ಕೋಟಿ ರೂ. ದಾಟಿರುವ ಅಂದಾಜಿದೆ. 3ನೇ ಭಾನುವಾರ ಅಡ್ವಾನ್ಸ್ ಬುಕ್ಕಿಂಗ್ ಜೋರಾಗಿದೆ. ಬೆಂಗಳೂರಿನಲ್ಲಿ ಹಲವು ಶೋಗಳು ಫಾಸ್ಟ್ಫಿಲ್ಲಿಂಗ್ ಆಗುತ್ತಿದೆ. ಸಾಕಷ್ಟು ಶೋಗಳು ಹೌಸ್ಫುಲ್ ಆಗಿದೆ.

ಟಿಕೆಟ್ ಬುಕ್ಕಿಂಗ್
ಬುಕ್ಮೈ ಶೋನಲ್ಲಿ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಲೆಕ್ಕ ಸಿಗುತ್ತಿದೆ. ಶುಕ್ರವಾರ 2 ಲಕ್ಷದ 17 ಸಾವಿರ ಟಿಕೆಟ್ ಬುಕ್ ಆಗಿತ್ತು. ಆದರೆ ಶನಿವಾರ 3 ಲಕ್ಷದ 11 ಸಾವಿರ ಟಿಕೆಟ್ ಬುಕ್ ಆಗಿ ದಾಖಲೆ ಬರೆದಿದೆ. ಸಿನಿಮಾ ತೆರೆಕಂಡು 3 ವಾರ ಕಳೆದರೂ ಕ್ರೇಜ್ ಕಮ್ಮಿ ಆಗಿಲ್ಲ ಎನ್ನುವುದು ಇದರಲ್ಲೇ ಗೊತ್ತಾಗುತ್ತಿದೆ.
ದೀಪಾವಳಿ ದಿಕ್ಸೂಚಿ
3ನೇ ಶನಿವಾರ ಕಲೆಕ್ಷನ್ ಮುಂದಿನ 3 ದಿನಗಳಲ್ಲಿ 'ಕಾಂತಾರ- 1' ಆರ್ಭಟ ಹೇಗಿರುತ್ತದೆ ಎನ್ನುವುದಕ್ಕೆ ದಿಕ್ಸೂಚಿಯಾಗಿದೆ. ಹಬ್ಬದ ಸಂಭ್ರಮದಲ್ಲಿ ಜನ ಫ್ಯಾಮಿಲಿ ಸಮೇತ ಚಿತ್ರಮಂದಿರಗಳಿಗೆ ಹೋಗುವ ನಿರೀಕ್ಷೆಯಿದೆ. ಉತ್ತರ ಭಾರತದಲ್ಲಿ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಮುಂದಾಗಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳದಲ್ಲಿ ಗಳಿಕೆ ಚೆನ್ನಾಗಿದೆ. ಈಗಾಗಲೇ ತಮಿಳುನಾಡಿನಲ್ಲಿ ಸಿನಿಮಾ ಬ್ರೇಕ್ ಈವನ್ ಮಾಡಿದೆ.
'ಕಾಂತಾರ- 1' ವಿಜಯಯಾತ್ರೆ
ನಟ, ನಿರ್ದೇಶಕ ರಿಷಬ್ ಶೆಟ್ಟಿ ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಂಡಿದ್ದಾರೆ. ಅದರ ಮೊದಲ ಭಾಗವಾಗಿ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಅಲ್ಲಿನ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ. ಹಬ್ಬದ ಬಳಿಕ ಇನ್ನು ನಾನಾ ಭಾಗಗಳಿಗೆ ರಿಷಬ್ ವಿಜಯಯಾತ್ರೆ ಮುಂದುವರೆಯಲಿದೆ. ಇತ್ತೀಚೆಗೆ ವಾರಣಾಸಿಯ ಗಂಗಾರತಿಯಲ್ಲಿ ರಿಷಬ್ ಶೆಟ್ಟಿ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋ ಸಖತ್ ವೈರಲ್ ಆಗ್ತಿದೆ.


Click it and Unblock the Notifications











