109 % ಲಾಭ ; ಅಭಿಮಾನದ ಜಾತ್ರೆ.. ಮೆರವಣಿಗೆ -ಬಾಕ್ಸಾಫೀಸ್ನಲ್ಲಿ ಉದಯಿಸಿದ ಹೊಸ ಸೂಪರ್ ಸ್ಟಾರ್
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿಯೇ ಮನರಂಜನೆ ಇದೆ. ಜಗತ್ತಿನ ಹಲವು ಭಾಷೆಯ ಚಿತ್ರಗಳನ್ನು ಎಲ್ಲಿ ಬೇಕೋ ಅಲ್ಲಿ .. ಯಾವಾಗ ಅಂದ್ರೆ ಅವಾಗ ನೋಡುವ ಸೌಲಭ್ಯ ಇದೆ. ಚಿತ್ರಮಂದಿರಕ್ಕೆ ಈ ಓಟಿಟಿ ತೀವೃ ಸ್ಪರ್ಧೆಯನ್ನೊಡ್ಡುತ್ತಿದೆ. ಇನ್ನು ಮೊದಲಾದರೆ ಕೇವಲ ಒಂದು ಪೋಸ್ಟರ್ ಸಾಕಿತ್ತು. ಚಿತ್ರಮಂದಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಈಗ..
ಎಷ್ಟೇ ಪ್ರಚಾರ ಮಾಡಿದರು ಕೂಡ ಚಿತ್ರಮಂದಿರಕ್ಕೆ ಚಿತ್ರವೊಂದು ಬಂದಿದ್ದು ಹೋಗಿದ್ದು ಕೂಡ ಈಗೀಗ ಹಲವರಿಗೆ ಗೊತ್ತೇ ಆಗುವುದಿಲ್ಲ. ಹೊಸಬರು ಎಷ್ಟೇ ಭಿನ್ನವಾದ ಆಲೋಚನೆ ಮಾಡಿದರು ಕೂಡ ಪ್ರೇಕ್ಷಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರಲು ಕೂಡ ಸಾಧ್ಯವಾಗುತ್ತಿಲ್ಲ.

ಇದು ಕೇವಲ ಹೊಸಬರ ಕಥೆ ಮಾತ್ರ ಅಲ್ಲ. ವರ್ಷಾನುವರ್ಷಗಳಿಂದ ನಾನೇ ಸೂಪರ್ ಸ್ಟಾರ್ ಎಂದುಕೊಂಡು ಓಡಾಡುತ್ತಿರುವ ಹಳೆಯ ಹುಲಿಗಳ ಘರ್ಜನೆಗೆ ಕೂಡ ಪ್ರೇಕ್ಷಕರು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಬೇರೆ ಬೇರೆ ಭಾಷೆಯಲ್ಲಿ ದೊಡ್ಡ ದೊಡ್ಡ ಸ್ಟಾರ್ಗಳ ಚಿತ್ರಗಳು ಕೂಡ ಇತ್ತೀಚೆನ ದಿನಗಳಲ್ಲಿ ಮಕಾಡೆ ಮಲಗಿವೆ. ಅದರಲ್ಲಿಯೂ ಬಾಲಿವುಡ್ನಲ್ಲಂತೂ ಸೂಪರ್ ಸ್ಟಾರ್ಗಳ ಚಿತ್ರಗಳನ್ನೇ ಪ್ರೇಕ್ಷಕರು ರಿಜೆಕ್ಟ್ ಮಾಡುತ್ತಿದ್ದಾರೆ. ಇದಕ್ಕೆ ''ಸಿಕಂದರ್'' .. ''ಕೇಸರಿ 2''..''ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ''.. ''ಪರಮ ಸುಂದರಿ''..''ವಾರ್ 2''.. ''ಬಾಘಿ-4''..''ಸನ್ ಆಫ್ ಸರ್ದಾರ್ 2'' ಸೇರಿ ಈ ವರ್ಷ ತೆರೆಗೆ ಬಂದ ಹಲವು ಚಿತ್ರಗಳು ಉದಾಹರಣೆಯಂತೆ ಕಣ್ಮುಂದೆ ಇವೆ.
ಹೀಗಿರುವಾಗ ಕೇವಲ 5 ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿರುವ, ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲೇರುತ್ತಿರುವ ಸುರಸುಂದರಾಂಗ ಬಾಲಿವುಡ್ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ತನ್ನನ್ನೂ ನಂಬಿ ಹಣ ಹೂಡಿದ ನಿರ್ಮಾಪಕರಿಗೆ 109% ಲಾಭ ಮಾಡಿ ಕೊಟ್ಟಿದ್ದಾರೆ. ಈ ವರ್ಷ ಬಂದ ರೊಮ್ಯಾಂಟಿಕ್ ಚಿತ್ರಗಳ ದಾಖಲೆಯನ್ನೆಲ್ಲಾ ಪುಡಿ ಪುಡಿ ಮಾಡಿದ್ದಾರೆ. ಬಾಕ್ಸಾಫೀಸ್ನಲ್ಲಿ ಉದಯಿಸಿದ ಈ ಹೊಸ ಸೂಪರ್ ಸ್ಟಾರ್ ಬೇರೆ ಯಾರು ಅಲ್ಲ ಬದಲಿಗೆ ''ಹರ್ಷವರ್ಧನ್ ರಾಣೆ''.
ಹೌದು, ಹರ್ಷವರ್ಧನ್ ರಾಣೆ.. 2016ರಲ್ಲಿ ತೆರೆಗೆ ಬಂದಿದ್ದ ''ಸನಮ್ ತೇರಿ ಕಸಮ್'' ಚಿತ್ರದ ನಾಯಕ. ತಮ್ಮ ಈ ಮೊದಲ ಚಿತ್ರಕ್ಕೆ ಹರ್ಷವರ್ಧನ್ ರಾಣೆ ತನು ಮನ ಅರ್ಪಿಸಿದ್ದರು. ಆದರೆ.. ಚಿತ್ರದ ಕಥೆ ಚೆನ್ನಾಗಿದ್ದರೂ.. ಹಾಡುಗಳು ಇಂಪಾಗಿದ್ದರೂ.. ವಿಮರ್ಷಕರು ಮೆಚ್ಚಿ ಕೊಂಡಾಡಿದ್ದರೂ ಕೂಡ ಈ ಚಿತ್ರ ಬಾಕ್ಸಾಫೀಸ್ನಲ್ಲಿ ಗೆಲ್ಲಲಿಲ್ಲ. ವಿಪರ್ಯಾಸ ಅಂದರೆ ಇದೇ ಚಿತ್ರವನ್ನು ಈ ವರ್ಷದ ಆರಂಭದಲ್ಲಿ ಮರು ಬಿಡುಗಡೆ ಮಾಡಲಾಗಿತ್ತು. ಆಗ ಈ ಚಿತ್ರವನ್ನು ಜನ ಮುಗಿ ಬಿದ್ದು ನೋಡಿದ್ದರು. 50 ಕೋಟಿಯ ಕಾಣಿಕೆಯನ್ನು ಕೂಡ ಚಿತ್ರತಂಡಕ್ಕೆ ನೀಡಿದರು.
ಹೀಗೆ 2016ರಿಂದ ಇಲ್ಲಿಯವರೆಗೆ ಹರ್ಷವರ್ಧನ್ ರಾಣೆ 5 ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದರೆ.. ''ಸನಮ್ ತೇರಿ ಕಸಮ್'' ಹೊರತು ಪಡಿಸಿದರೆ ಬೇರೆ ಯಾವ ಚಿತ್ರ ಕೂಡ ಇವರಿಗೆ ಹೆಸರು ತಂದು ಕೊಡಲಿಲ್ಲ. ಗೆಲುವನ್ನು ನೀಡಲಿಲ್ಲ. ಹಾಗಂಥ ಹರ್ಷವರ್ಧನ್ ರಾಣೆ ಸೋಲು ಒಪ್ಪಿಕೊಳ್ಳಲಿಲ್ಲ. ನಿರಂತರವ ಪ್ರಯತ್ನ ಮಾಡುತ್ತಲೇ ಬಂದರು. ಇವರ ಈ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಇವರ ''ಏಕ್ ದಿವಾನೆ ಕಿ ದೀವಾನಿಯತ್'' ಚಿತ್ರವನ್ನು ನೋಡಿ ಯುವ ಸಮೂಹ ಹುಚ್ಚೆದ್ದು ಹೋಗಿದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಕೇವಲ ₹25 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ''ಏಕ್ ದಿವಾನೆ ಕಿ ದೀವಾನಿಯತ್'' ಈ 8 ದಿನದಲ್ಲಿ ಕೇವಲ ಭಾರತದಲ್ಲಿ ₹ 46.15 ಕೋಟಿಯನ್ನು ಕೊಳ್ಳೆ ಹೊಡೆದಿದೆ ಎಂದು ''ಸ್ನ್ಯಾಕ್ನಿಲ್'' ವರದಿಯನ್ನು ಮಾಡಿದೆ.
ತಮ್ಮ ಈ ಚಿತ್ರಕ್ಕೆ ಸಿಕ್ಕ ಈ ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಜನರ ಪ್ರೀತಿಯನ್ನು ಕಂಡು ಸದ್ಯ ಮೂಕವಿಸ್ಮಿತರಾಗಿರುವ ಹರ್ಷವರ್ಧನ್ ರಾಣೆ ಮತ್ತು ನಾಯಕಿ ಸೋನಮ್ ಬಜ್ವಾ, ರಸ್ತೆಯ ಮೂಲಕ ಪ್ರಯಾಣ ಮಾಡಿ ಹಲವು ನಗರಗಳಿಗೆ ಭೇಟಿ ನೀಡುತ್ತಿದ್ದಾರೆ. ಚಿತ್ರ ನೋಡಿ ಹರಸಿ ಹಾರೈಸಿದ ಪ್ರೇಕ್ಷಕರಿಗೆ ಧನ್ಯವಾದ ಹೇಳುತ್ತಿದ್ಧಾರೆ.
ವಿಶೇಷ ಅಂದರೆ ಹರ್ಷವರ್ಧನ್ ರಾಣೆ ಹೋದಲೆಲ್ಲಾ ಜನ ಇವರನ್ನು ಇರುವೆ ಮುತ್ತಿಕೊಂಡಂತೆ ಮುತ್ತಿಕೊಳ್ಳುತ್ತಿದ್ದಾರೆ. ಹೊತ್ತು ಮೆರೆಸುತ್ತಿದ್ದಾರೆ. ಇಷ್ಟೇ ಅಲ್ಲ ಹಲವು ಮಹಿಳೆಯರು.. ಯುವತಿಯರು.. ಹರ್ಷವರ್ಧನ್ ರಾಣೆ ಅವರನ್ನು ಹತ್ತಿರದಿಂದ ನೋಡಿ ಭಾವುಕರಾಗುತ್ತಿದ್ಧಾರೆ. ಖುಷಿಯಿಂದ ಕಣ್ಣೀರನ್ನು ಕೂಡ ಹಾಕುತ್ತಿದ್ದಾರೆ.
ಅಂದ್ಹಾಗೇ ಹರ್ಷವರ್ಧನ್ ರಾಣೆಗೆ ಈ ಗೆಲುವು ಏಕಾಏಕಿ ಸಿಕ್ಕಿದ್ದಲ್ಲ. ಈ ದಿನಕ್ಕೋಸ್ಕರ ರಾಣೆ ಹದಿನೈದು ವರ್ಷ ಬೆವರು ಸುರಿಸಿದ್ದಾರೆ. ಚಿತ್ರರಂಗದಲ್ಲಿ ಸೈಕಲ್ ಹೊಡೆದಿದ್ಧಾರೆ. ''ಸನಮ್ ತೇರಿ ಕಸಮ್'' ಚಿತ್ರದ ನಾಯಕನಾಗುವ ಮುನ್ನ ತೆಲುಗಿನಲ್ಲಿ 09 ಚಿತ್ರಗಳಲ್ಲಿ ಹರ್ಷವರ್ಧನ್ ರಾಣೆ ಅಭಿನಯಿಸಿದ್ದಾರೆ. ಕೆಲ ಒಮ್ಮೆ ಖಳನಾಯಕನಾಗಿ ಇನ್ನೂ ಕೆಲ ಒಮ್ಮೆ ಸೈಡ್ ಆರ್ಟಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿಯೂ ಹರ್ಷವರ್ಧನ್ ರಾಣೆ ಕೆಲಸ ಮಾಡಿದ್ದಾರೆ.
ಹೀಗಾಗಿಯೇ ಈ ಗೆಲುವು ಹರ್ಷವರ್ಧನ್ ರಾಣೆ ಪಾಲಿಗೆ ತುಂಬಾನೇ ವಿಶೇಷ. ಸದ್ಯ ಸಿಕ್ಕ ವಿಶೇಷವಾದ ಈ ಗೆಲುವನ್ನು ಹರ್ಷವರ್ಧನ್ ರಾಣೆ ಸಂಭ್ರಮಿಸುತ್ತಿದ್ದಾರೆ. ಬಾಕ್ಸಾಫೀಸ್ನಲ್ಲಿ ಮತ್ತೊಬ್ಬ ಸೂಪರ್ ಸ್ಟಾರ್ನ ಉದಯವಾಗಿದೆ ಎಂದು ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಹರ್ಷವರ್ಧನ್ ರಾಣೆ ಅಭಿನಯಕ್ಕೆ ಮನ ಸೋತು ಹಲವರು ಈಗ ಇವರ ಅಭಿಮಾನಿಗಳಾಗುತ್ತಿದ್ದಾರೆ. ವಿಜಯಯಾತ್ರೆಯಲ್ಲಿರುವ ಹರ್ಷವರ್ಧನ್ ರಾಣೆ ಅವರನ್ನು ತಮ್ಮೂರಿಗೆ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ.


Click it and Unblock the Notifications











