ಸೋಲಿನ ಸುಳಿಗೆ ಸಿಲುಕಿದ 'ಹರಿಹರ ವೀರಮಲ್ಲು'; ದಡ ಸೇರಲು ಎಷ್ಟು ಕಲೆಕ್ಷನ್ ಮಾಡ್ಬೇಕು?
ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದೆ. ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡರೂ ಮರುದಿನವೇ ಕಲೆಕ್ಷನ್ ಕುಸಿದಿತ್ತು. ಇದೀಗ ಕುಟುಂತ್ತಾ ಎರಡನೇ ವಾರದತ್ತ ಸಿನಿಮಾ ಸಾಗುತ್ತಿದೆ. ಗೆಲುವಿನ ದಡ ಸೇರಲು ಸಿನಿಮಾ ಬಹಳ ದೂರ ಕ್ರಮಿಸಬೇಕಿದೆ.
ಕ್ರಿಶ್ ಹಾಗೂ ಜ್ಯೋತಿಕೃಷ್ಣ ಈ ಕಾಲ್ಪನಿಕ ಕಥಾಹಂದರದ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಮೆಗಾ ಸೂರ್ಯ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ಹರಿಹರ ವೀರಮಲ್ಲು' ಸಿನಿಮಾ ನಿರ್ಮಾಣವಾಗಿದೆ. ಪವನ್ ನಟಿಸಿರುವ ಕೊನೆಯ ಸಿನಿಮಾಗಳಲ್ಲಿ ಇದು ಒಂದು ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ ಅಭಿಮಾನಿಗಳು ಬಹಳ ದೊಡ್ಡಮಟ್ಟದಲ್ಲಿ ಚಿತ್ರವನ್ನು ಸ್ವಾಗತಿಸಿದ್ದರು. ಸೆಲೆಬ್ರೇಷನ್ ಜೋರಾಗಿತ್ತು. ಒಂದು ದಿನ ಮೊದಲು ನಡೆದ ಪ್ರೀಮಿಯರ್ ಶೋಗಳಿಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

ಕೆಲವರು ಒಂದೊಳ್ಳೆ ಚಿತ್ರವನ್ನು ಚಿತ್ರತಂಡವೇ ಹಾಳುಮಾಡಿಬಿಟ್ಟಿದೆ ಎನ್ನುತ್ತಿದ್ದಾರೆ. ಒಳ್ಳೆ ಕಥೆ, ಚಿತ್ರಕಥೆ ಇದೆ. ಆದರೆ ಅದನ್ನು ಸರಿಯಾಗಿ ತೆರೆಗೆ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಫಿಕ್ಸ್ ಕೈಕೊಟ್ಟಿದೆ. ಕೆಲವು ಕಡೆಗಳಲ್ಲಿ ಪವನ್ ಬದಲು ಡ್ಯೂಪ್ ಬಳಸಿ ಚಿತ್ರೀಕರಣ ನಡೆಸಿದ್ದಾರೆ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. 250 ಕೋಟಿ ರೂ. ಬಜೆಟ್ ಎಂದು ಹೇಳಿದರೂ ಗ್ರಾಫಿಕ್ಸ್ ಕೆಟ್ಟದಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಭಾರೀ ಟೀಕೆ ಬೆನ್ನಲ್ಲೇ ಒಂದಷ್ಟು ದೃಶ್ಯ ಕತ್ತರಿಸಿ 'ಹರಿಹರ ವೀರಮಲ್ಲು' ಸಿನಿಮಾ ಪ್ರದರ್ಶನ ಮಾಡುತ್ತಿದ್ದಾರೆ.
ಪ್ರೀಮಿಯರ್ ಶೋಗಳು ಸೇರಿ ಮೊದಲ 4 ದಿನದಲ್ಲಿ ಸಿನಿಮಾ 102 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎನ್ನಲಾಗ್ತಿದೆ. 'ಹರಿಹರ ವೀರಮಲ್ಲು' ಸಿನಿಮಾ ಈಗಾಗಲೇ 50 ಕೋಟಿ ರೂ. ಶೇರ್ ತಂದುಕೊಟ್ಟಿದೆ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಆದರೆ ಸಿನಿಮಾ ಬ್ರೇಕ್ಇವೆನ್ ದಾಟಲು ಇನ್ನು 75 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಬೇಕಿದೆ. ಅದಕ್ಕಾಗಿ ಇನ್ನು 130 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಬೇಕಾದ ಅನಿವಾರ್ಯತೆಯಿದೆ. ಒಟ್ಟಾರೆ 125 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದರೆ ವಿತರಕರು, ಪ್ರದರ್ಶಕರು ಸೇಫ್ ಆಗುತ್ತಾರೆ ಎಂದು ಕೆಲವರು ಲೆಕ್ಕ ಹಾಕುತ್ತಿದ್ದಾರೆ.
ಶುಕ್ರವಾರ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದ 'ಹರಿಹರ ವೀರಮಲ್ಲು' ಸಿನಿಮಾ ಕಲೆಕ್ಷನ್ ಮರುದಿನವೇ ಒಂದಕಿಗೆ ಇಳಿದಿತ್ತು. ಆದರೆ ಭಾನುವಾರ ಮತ್ತೆ ಚೇತರಿಸಿಕೊಂಡು ಸಿನಿಮಾ ಗೆಲುವಿನತ್ತ ಮುಖ ಮಾಡಿದೆ. ಸೋಮವಾರ(ಜುಲೈ 28) ಕೂಡ ಬುಕ್ಕಿಂಗ್ ಓಕೆ ಓಕೆ ಎನ್ನುವಂತಿದೆ. ಮುಂದಿನ ದಿನಗಳಲ್ಲಿ ಮ್ಯಾಜಿಕ್ ಆಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಒಟ್ಟಾರೆ ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾವೊಂದು ಬಾಕ್ಸಾಫೀಸ್ನಲ್ಲಿ ಸೋಲಿನ ಸುಳಿಗೆ ಸಿಲುಕುವಂತಾಗಿದೆ.
ಮೊದಲ ದಿನವೇ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಫಸ್ಟ್ ಹಾಫ್ ಹೇಗೋ ನೋಡಬಹುದು. ಸೆಕೆಂಡ್ ಹಾಫ್ ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಕೆಲವರು ಪವನ್ ಇನ್ನು ಮುಂದೆ ನಟಿಸದೇ ಇರುವುದೇ ಉತ್ತಮ ಎಂದು ವ್ಯಂಗ್ಯವಾಡಿದ್ದರು. ಅಷ್ಟರಮಟ್ಟಿಗೆ ಚಿತ್ರಕ್ಕೆ ನೆಗೆಟಿವ್ ಟಾಕ್ ಬಂದಿತ್ತು.
'ಹರಿಹರ ವೀರಮಲ್ಲು' ಬಳಿ ಪವನ್ ನಟನೆಯ 'OG' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದು ಇದಕ್ಕಿಂತಲೂ ಭಾರೀ ಬಜೆಟ್ ಸಿನಿಮಾ. ಹಾಗಾಗಿ ನಿರ್ಮಾಪಕರಿಗೆ ಭಯ ಶುರುವಾಗಿದೆ. 'ಉಸ್ತಾದ್ ಭಗತ್ ಸಿಂಗ್' ಎಂಬ ಮತ್ತೊಂದು ಚಿತ್ರದಲ್ಲಿ ಕೂಡ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ.


Click it and Unblock the Notifications











