Vrusshabha Day 1 Boxoffice: ಮೋಹನ್ ಲಾಲ್ ಗೆಲುವಿನ ಓಟಕ್ಕೆ 'ವೃಷಭ' ಬ್ರೇಕ್; ಮತ್ತೆ ಸೋತ ನಂದಕಿಶೋರ್
ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟ ಮೋಹನ್ ಲಾಲ್ಗೆ ಭಾರೀ ಆಘಾತ ಎದುರಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿರುವ 'ವೃಷಭ' ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಕನ್ನಡ ನಿರ್ದೇಶಕ ನಂದಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಸಮರ್ಜಿತ್ ಲಂಕೇಶ್, ರಾಗಿಣಿ ದ್ವಿವೇದಿ, ರಘು, ಗರುಡ ರಾಮ್ ಸೇರಿ ಹಲವು ಕನ್ನಡ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿತ್ತು. ಮೊದಲಿನಿಂದಲೂ ಅಷ್ಟೇನು ನಿರೀಕ್ಷೆ ಮೂಡಿಸದ 'ವೃಷಭ' ಸಿನಿಮಾ ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದೆ. ಮೋಹನ್ ಲಾಲ್ ನಟಿಸಿದ ಯಾವುದೇ ಸಿನಿಮಾ ಇತ್ತೀಚೆಗೆ ಈ ಮಟ್ಟಿಗೆ ನಿರಾಸೆ ಮೂಡಿಸಿರಲಿಲ್ಲ. ಮೊದಲ ಶೋನಿಂದಲೇ ಚಿತ್ರದ ಬಗ್ಗೆ ನೆಗೆಟಿವ್ ಟಾಕ್ ಶುರುವಾಗಿತ್ತು. ಹಾಗಾಗಿ ಸಹಜವಾಗಿಯೇ ಸಿನಿಮಾ ಪ್ರೇಕ್ಷಕರ ಬರ ಎದುರಿಸುವಂತಾಗಿದೆ.

ಎರಡು ಬೇರೆ ಬೇರೆ ಕಾಲಘಟ್ಟಗಳಲ್ಲಿ ನಡೆಯುವ ಕಥೆ 'ವೃಷಭ' ಚಿತ್ರದಲ್ಲಿದೆ. ಜನ್ಮಜನ್ಮಾಂತರದ ಕಥೆಯನ್ನು ನಂದ ಕಿಶೋರ್ ಹೇಳಿದ್ದಾರೆ. ಮೋಹನ್ ಲಾಲ್ ಹಾಗೂ ಸಮರ್ಜಿತ್ ಲಂಕೇಶ್ ತಂದೆ-ಮಗನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಕ್ರಿಸ್ಮಸ್ ಸಂಭ್ರಮದಲ್ಲಿ ಬಿಡುಗಡೆಯಾದ ಚಿತ್ರಕ್ಕೆ ಮೊದಲ ದಿನವೇ ಶಾಕ್ ಎದುರಾಗಿದೆ. ಒಂದು ಕೋಟಿ ನೆಟ್ ಕಲೆಕ್ಷನ್ ಮಾಡಲಾಗದೇ ಸಿನಿಮಾ ಸೋಲಿನ ಸುಳಿಗೆ ಸಿಲುಕಿದೆ.
ಈ ವರ್ಷ 'ಎಂಪುರಾನ್', 'ಥುಡರುಂ', 'ಹೃದಯಪೂರ್ವಂ' ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿ ಮೋಹನ್ ಲಾಲ್ ಗೆದ್ದಿದ್ದಾರೆ. ಆದರೆ ವರ್ಷದ ಕೊನೆಗೆ ಬಂದ 'ವೃಷಭ' ಚಿತ್ರ ಕೈ ಕೊಟ್ಟಿದೆ. ಮೊದಲ ದಿನ 1 ಕೋಟಿ ಕಲೆಕ್ಷನ್ ಮಾಡಲು ಸಾಧ್ಯವಾಗಲಿಲ್ಲ ಎಂದು ಬಾಕ್ಸಾಫೀಸ್ ಪಂಡಿತರು ಅಂದಾಜಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರೆಕಂಡ ಸಿನಿಮಾ ಮೊದಲ ದಿನ 60ರಿಂದ 70 ಲಕ್ಷ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk.com ವರದಿ ಮಾಡಿದೆ. ಒಟ್ಟಾರೆ 1.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿರುವ ಸಾಧ್ಯತೆಯಿದೆ.

2ನೇ ದಿನವೂ ಚಿತ್ರಕ್ಕೆ ರೆಸ್ಪಾನ್ಸ್ ಚೆನ್ನಾಗಿಲ್ಲ. ಬುಕ್ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ನಡೀತಿಲ್ಲ. ಹಾಗಾಗಿ ಸಾಕಷ್ಟು ಕಡೆಗಳಲ್ಲಿ ಶೋ ತೆಗೆಯಲಾಗ್ತಿದೆ. ಮೋಹನ್ ಲಾಲ್ ರೀತಿಯ ಸೂಪರ್ ಸ್ಟಾರ್ ಚಿತ್ರಕ್ಕೆ ಇಂತಹ ರೆಸ್ಪಾನ್ಸ್ ಯಾರೂ ನಿರೀಕ್ಷಿರಲಿಲ್ಲ. ಕ್ರಿಸ್ಮಸ್ ಸಂಭ್ರಮದಲ್ಲಿ ಮಲಯಾಳಂನಲ್ಲಿ ಬೇರೆ ಸಿನಿಮಾಗಳು ಕೂಡ ಬಿಡುಗಡೆ ಆಗಿಲ್ಲ. ಆದರೂ 'ವೃಷಭ' ಚಿತ್ರ ಹಿನ್ನಡೆ ಅನುಭವಿಸುವಂತಾಗಿದೆ.
'ವೃಷಭ' ಸಿನಿಮಾ ಸೆಟ್ಟೇರಿದ ದಿನದಿಂದ ಸಾಕಷ್ಟು ವಿಘ್ನಗಳನ್ನು ಎದುರಿಸಿತ್ತು. ಮೋಹನ್ ಲಾಲ್ ಮಗನಾಗಿ ತೆಲುಗು ನಟ ರೋಷನ್ ನಟಿಸಿದ್ದರು. ಕಾರಣಾಂತರಗಳಿಂದ ಅವ್ರು ಸಿನಿಮಾ ಬಿಟ್ಟು ಹೊರ ಬಂದರು. ಹಾಗಾಗಿ ಸಮರ್ಜಿತ್ ಆ ಪಾತ್ರ ಮಾಡುವಂತಾಗಿತ್ತು. ಹಾಗಾಗಿ ಕೆಲ ದೃಶ್ಯಗಳನ್ನು ರೀ-ಶೂಟ್ ಮಾಡಿದ್ದರು. ಹಾಗಾಗಿ ಸಿನಿಮಾ ರಿಲೀಸ್ ತಡವಾಗಿತ್ತು. ಸದ್ಯ ಬಿಗ್ಬಾಸ್ ಮನೆಯಲ್ಲಿರುವ ರಘು ಕೂಡ ಚಿತ್ರದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ ನನಗೆ ಸಂಭಾವನೆ ಕೊಟ್ಟಿಲ್ಲ ಎಂದು ಅವರು ಆರೋಪಿಸಿದ್ದರು.
ನಂದಕಿಶೋರ್ ವಿರುದ್ಧ 22 ಲಕ್ಷ ರೂ. ವಂಚನೆ ಆರೋಪ ಕೂಡ ಕೇಳಿಬಂದಿತ್ತು. ಅದೆಲ್ಲದರ ಹೊರತಾಗಿ 'ವೃಷಭ' ಸಿನಿಮಾ ಮಾಡಿ ಮುಗಿಸಿದ್ದರು. ಆದರೆ ಸಿನಿಮಾ ಕೂಡ ನಿರಾಸೆ ಮೂಡಿಸಿದ್ದು ಬಾಕ್ಸಾಫೀಸ್ನಲ್ಲಿ ಚೇತರಿಸಿಕೊಳ್ಳುವ ಸುಳಿವು ಸಿಗುತ್ತಿಲ್ಲ. ಕನ್ನಡದಲ್ಲಿ 'ಪೊಗರು', 'ರಾಣಾ' ಸಿನಿಮಾಗಳ ಸೋಲಿನ ಬಳಿಕ ಇದೀಗ ಮಲಯಾಳಂನಲ್ಲಿ 'ವೃಷಭ' ಸಿನಿಮಾ ಮಾಡಿ ನಂದಕಿಶೋರ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು ಬೇರೆ ಮೂಲಗಳು, https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











