Kothalavadi Day 3 Boxoffice: ಸಂಕಷ್ಟದಲ್ಲಿ 'ಕೊತ್ತಲವಾಡಿ'; 3 ದಿನಕ್ಕೆ ಚಿತ್ರ ಗಳಿಸಿದ್ದೆಷ್ಟು?
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಹಳ ಅದ್ಧೂರಿಯಾಗಿ 'ಕೊತ್ತಲವಾಡಿ' ಸಿನಿಮಾ ನಿರ್ಮಿಸಿ ಬಿಡುಗಡೆ ಮಾಡಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿದ್ದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಬಾಕ್ಸಾಫೀಸ್ನಲ್ಲಿ ಸಿನಿಮಾ ಕುಂಟುಂತ್ತಾ ಸಾಗಿದೆ. ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿಲ್ಲ.
ಕನ್ನಡದ 'ಸು ಫ್ರಂ ಸೋ', 'ಮಹಾವತಾರ್ ನರಸಿಂಹ' ಹಾಗೂ ಪರಭಾಷಾ ಚಿತ್ರಗಳ ಹಾವಳಿ ನಡುವೆ 'ಕೊತ್ತಲವಾಡಿ' ಸಿನಿಮಾ ಮಂಕಾಗಿರುವುದು ಸುಳ್ಳಲ್ಲ. ಅದೇ ಕಾರಣಕ್ಕೆ ಸಿನಿಮಾ ಗಳಿಕೆಯಲ್ಲಿ ಹಿಂದಿ ಬಿದ್ದಿದೆ. 100ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಸಿನಿಮಾ ತೆರೆಗೆ ಬಂದಿತ್ತು. ನಿಧಾನವಾಗಿ ಶೋಗಳ ಸಂಖ್ಯೆ ತಗ್ಗಿಸುವಂತಾಗಿದೆ. ಇದು ಸಹಜವಾಗಿಯೇ ಸಿನಿಮಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ಪಿಎ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಕೊತ್ತಲವಾಡಿ' ಚಿತ್ರಕ್ಕೆ ಶ್ರೀರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಪೃಥ್ವಿ ಅಂಬರ್ ಹಾಗೂ ಕಾವ್ಯ ಶೈವ ನಾಯಕ- ನಾಯಕಿಯಾಗಿ ಮಿಂಚಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಹಾಗೂ ರಾಜೇಶ್ ನಟರಂಗ ಮತ್ತೆರಡು ಪ್ರಮುಖ ಪಾತ್ರಗಳಲ್ಲಿ ನಟಿಸಿ ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ದೊಡ್ಡದಾಗಿ ಚಿತ್ರಕ್ಕೆ ಪ್ರಚಾರ ಸಹ ಮಾಡಲಾಗಿತ್ತು. ಪ್ರೀಮಿಯರ್ ಶೋಗಳಿಂದ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ವೀಕೆಂಡ್ನಲ್ಲಿ ಸಿನಿಮಾ ಬಾಕ್ಸಾಫೀಸ್ನಲ್ಲಿ ಸಂಕಷ್ಟಕ್ಕೆ ಸಿಲುಕಿದೆ.
'ಕೊತ್ತಲವಾಡಿ' ಎಂಬ ಊರಿನಲ್ಲಿ ಮರಳು ಗಣಿಗಾರಿಕೆ ಸುತ್ತಾ ಸುತ್ತುವ ಕಥೆ ಚಿತ್ರದಲ್ಲಿದೆ. ಹಳ್ಳಿ ಸೊಗಡಿನ ಚಿತ್ರದಲ್ಲಿ ಎಲ್ಲವೂ ಒಳ್ಳೆ ಪರ್ಫಾರ್ಮನ್ಸ್ ನೀಡಿದ್ದಾರೆ. ಅನಾಥ ಯುವಕ ಮೋಹನನಾಗಿ ಪೃಥ್ವಿ ಅಂಬರ್ ಮಿಂಚಿದ್ದಾರೆ. ಗುಜರಿ ಬಾಬು ಆಗಿ ಮೋಹನನ ಜೀವನಕ್ಕೆ ದೊಡ್ಡ ತಿರುವು ಕೊಡುವ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅಭಿನಯ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. ಆದರೆ ಸೀದಾಸಾದಾ ಸಿನಿಮಾ ಪ್ರೇಕ್ಷಕರನ್ನು ದೊಡ್ಡದಾಗಿ ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಸಾಂಗ್ಸ್, ಟ್ರೈಲರ್ನಿಂದ ಸಿನಿಮಾ ಸದ್ದು ಮಾಡಿದರೂ 'ಸು ಫ್ರಂ ಸೋ' ಆರ್ಭಟ ನಡುವೆ ಎಲ್ಲವೂ ಗೌಣವಾಗಿಬಿಟ್ಟಿದೆ.
ಫಸ್ಟ್ ವೀಕೆಂಡ್ ಕಲೆಕ್ಷನ್
'ಕೊತ್ತಲವಾಡಿ' ಚಿತ್ರತಂಡ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟಿಲ್ಲ. Sacnilk ವೆಬ್ಸೈಟ್ ವರದಿ ಪ್ರಕಾರ ಸಿನಿಮಾ ಮೊದಲ 3 ದಿನಕ್ಕೆ 12 ಲಕ್ಷ ರೂ. ಮಾತ್ರ ಗಳಿಸಿದೆ. ಶುಕ್ರವಾರ 3 ಲಕ್ಷ ರೂ. ಶನಿವಾರ 5 ಲಕ್ಷ ರೂ. ಹಾಗೂ ಭಾನುವಾರ 4 ಲಕ್ಷ ರೂ. ಮಾತ್ರ ಕಲೆ ಹಾಕಿದೆ. ಕಥೆ, ಹಿನ್ನೆಲೆ ಎಲ್ಲವೂ ಚೆನ್ನಾಗಿದೆ. ಆದರೆ ಭಾರೀ ನಿರೀಕ್ಷೆಯೊಂದಿಗೆ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರಿಗೆ ಸಿನಿಮಾ ನಿರಾಸೆ ಮಾಡಿದೆ. ಅದೇ ಈಗ ಗಳಿಕೆ ಮೇಲೆ ಪರಿಣಾಮ ಬೀರುತ್ತಿದೆ.

ಬೇರೆ ಚಿತ್ರಗಳ ಪೈಪೋಟಿ
ಒಮ್ಮೆಲೆ ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿವೆ. ಕನ್ನಡದಲ್ಲಿ 'ಸು ಫ್ರಂ ಸೋ' ಹಾಗೂ 'ಎಕ್ಕ' ಚಿತ್ರಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಇನ್ನು ತೆಲುಗಿನ 'ಹರಿಹರ ವೀರಮಲ್ಲು' ಹಾಗೂ 'ಕಿಂಗ್ಡಮ್' ಸಿನಿಮಾ ತೆರೆಗೆ ಬಂದು ಸದ್ದು ಮಾಡ್ತಿವೆ. ಆನಿಮೇಷನ್ ಸಿನಿಮಾ 'ಮಹಾವತಾರ್ ನರಸಿಂಹ' ಅಚ್ಚರಿ ಎನ್ನುವಂತೆ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಬಾಲಿವುಡ್ ಸಿನಿಮಾ 'ಸಯ್ಯಾರ' ಕೂಡ ಚಿತ್ರಮಂದಿರಗಳಲ್ಲಿ ಕಚ್ಚಿಕೊಂಡಿದೆ. ಈ ಎಲ್ಲಾ ಸಿನಿಮಾಗಳ ನಡುವೆ 'ಕೊತ್ತಲವಾಡಿ' ಸಿನಿಮಾ ಪ್ರೇಕ್ಷಕರ ಗಮನಕ್ಕ ಬರ್ತಿಲ್ಲ. ಬ್ಯಾಕ್ ಟು ಬ್ಯಾಕ್ 'ಎಕ್ಕ', 'ಮಹಾವತಾರ್ ನರಸಿಂಹ', 'ಸು ಫ್ರಂ ಸೋ' ಸಿನಿಮಾಗಳನ್ನು ನೋಡಿದವರು 'ಕೊತ್ತಲವಾಡಿ' ಚಿತ್ರವನ್ನು ನೋಡಲು ಮುಂದಾಗುತ್ತಿಲ್ಲ.
ಸಿನಿಮಾ ಬಜೆಟ್
ಅಂದಾಜು 4ರಿಂದ 5 ಕೋಟಿ ಬಜೆಟ್ನಲ್ಲಿ 'ಕೊತ್ತಲವಾಡಿ' ಸಿನಿಮಾ ನಿರ್ಮಾಣವಾಗಿದೆ. ಯಶ್ ಸಿನಿಮಾ ಪ್ರಚಾರಕ್ಕೆ ಬರಲಿಲ್ಲ. ಪ್ರೇಕ್ಷಕರು ಸಿನಿಮಾ ನೋಡುವುದು ಮುಖ್ಯ ಎಂದು ನಿರ್ಮಾಪಕಿ ಪುಷ್ಪಾ ಅರುಣ್ಕುಮಾರ್ ಹೇಳುತ್ತಾ ಬಂದಿದ್ದರು. ಇದೀಗ ನಿಧಾನವಾಗಿ ಸ್ಕ್ರೀನ್ಗಳ ಸಂಖ್ಯೆ ಕಮ್ಮಿ ಆಗುತ್ತಿದೆ. ಮುಂದಿನ ವಾರ 'ಕೂಲಿ' ಹಾಗೂ 'ವಾರ್-2' ಚಿತ್ರಗಳು ಬರ್ತಿದ್ದು 'ಕೊತ್ತಲವಾಡಿ' ಸಿನಿಮಾ ಲಾಂಗ್ ರನ್ ಕೂಡ ಕಷ್ಟವಾಗಲಿದೆ.


Click it and Unblock the Notifications











